Advertisement

ಕಾಯಕ ತತ್ವದಿಂದ ನೆಮ್ಮದಿ ಜೀವನ ಸಾಧ್ಯ

03:56 PM May 08, 2019 | Naveen |

ಯಾದಗಿರಿ: ಜಗಜ್ಯೋತಿ ಬಸವೇಶ್ವರರ ಕಾಯಕ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ ಕರೆ ನೀಡಿದರು.

Advertisement

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನೆಂದರೆ ನ್ಯಾಯ, ಸರಳತೆ, ಪಾರದರ್ಶಕತೆ, ಸಮಭಾವ, ಸಮಬಾಳು, ಪರಿಶುದ್ಧತೆ, ಹಿರಿತನ, ಸಮೃದ್ಧಿ, ಸಂತೃಪ್ತಿ, ಅರಿವು, ಆಚರಣೆ, ನೀತಿ ಮುಂತಾದ ಶಬ್ದಗಳಿಂದ ಹೆಸರಿಸಬಹುದು. ಆದರೆ, ಬಸವೇಶ್ವರರನ್ನು ಎಷ್ಟು ವರ್ಣಿಸಿದರೂ ಅವರ ಸರಳ ಜೀವನಕ್ಕೆ ಸಾಟಿಯಾಗಲಾರದು ಎಂದು ಹೇಳಿದರು.

ಬಸವಣ್ಣನವರದ್ದು ಯಾವುದೇ ಒಂದು ವಿಷಯ ಅಥವಾ ಜಾತಿಗೆ ಸೀಮಿತಗೊಳಿಸಿ ಮಾತನಾಡುವಂತಹ ವ್ಯಕ್ತಿತ್ವ ಅಲ್ಲ. 12ನೇ ಶತಮಾನದಲ್ಲೇ ಮಹಿಳೆಯರಿಗೆ ಸಮಾನತೆ ಕಲ್ಪಿಸಿದ ಮಹಾನ್‌ ಮಾನವತಾವಾದಿ. ಕಾಯಕವೇ ಕೈಲಾಸ ಎಂದು ಸಾರಿ ಆರ್ಥಿಕ ತಜ್ಞರಾಗಿ, ಸಾಮಾಜಿಕ ಚಿಂತಕರಾಗಿ, ಅಧ್ಯಾತ್ಮ ಗುರುವಾಗಿ ಸಕಲರನ್ನೂ ಉದ್ಧರಿಸಿದ್ದಾರೆ. ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾಯಕ ಮಾಡಿದ್ದಾರೆ ಎಂದು ತಿಳಿಸಿದರು.

ಉಪನ್ಯಾಸಕಿ ಡಾ| ಜ್ಯೋತಿಲತಾ ತಡಿಬಿಡಿಮಠ ಉಪನ್ಯಾಸ ನೀಡಿ, ಜಗಜ್ಯೋತಿ ಬಸವಣ್ಣನವರು ಬಸವನಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗೆ 1134ರಲ್ಲಿ ಜನಿಸಿದರು. 12ನೇ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾನ್‌ ವ್ಯಕ್ತಿ ಜಗಜ್ಯೋತಿ ಶ್ರೀ ಬಸವೇಶ್ವರರು. ಅವರು ಅನೇಕ ವಚನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಅತ್ಯಂತ ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

Advertisement

ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ವೀರಶೈವ ಸಮಾಜದ ನಗರ ಘಟಕ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ ಉಪಸ್ಥಿತರಿದ್ದರು. ಸಮಾಜದ ಮುಖಂಡರಾದ ಮಹಾದೇವಪ್ಪ ಆರ್‌. ಅಬ್ಬೆತುಮಕೂರು, ಸಿದ್ದಪ್ಪ ಹೊಟ್ಟಿ, ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ, ಚನ್ನಪ್ಪ ಠಾಣಗುಂದಿ, ಸಾಹಿತಿ ನೂರಂದಪ್ಪ ಲೇವಡಿ, ಚನ್ನಾರೆಡ್ಡಿ ಬಿಳಾØರ, ಶಶಿಕಾಂತ ಕಶೆಟ್ಟಿ, ಶರಣಗೌಡ ಬಾಡಿಯಾಳ, ನೀಲಕಂಠ ಶೀಲವಂತ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಲಿಂಗೇರಿ ಸ್ಟೇಷನ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಸುಬಮ್‌ ಪದವಿ ಕಾಲೇಜಿನ ಉಪನ್ಯಾಸಕ ಗುರುಪ್ರಸಾದ ವೈದ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next