Advertisement

ಬರೆಯುವ ಬೆರಗು

03:45 AM Mar 12, 2017 | Harsha Rao |

ಹತ್ತೂಂಬತ್ತನೆಯ ಶತಮಾನದ ಇಂಗ್ಲಿಷ್‌ ಪ್ರಬಂಧಕಾರ ವಿಲಿಯಂ ಹ್ಯಾಝಿÉಟ್‌ (Willam Hazlitt) ಒಂದೆಡೆ ಹೇಳುತ್ತಾನೆ: The greatest pleasure in life is that of reading, while we are young. I have had as much of this pleasure, perhaps, as anyone, As I grow older, it fades; or elase the stronger stimulus or writing takes off the edge of it. ಹ್ಯಾಝಿÉಟ್‌ ಹೀಗೆ ಹೇಳಿದ ಮೇಲೆ ನಾವಿದನ್ನು ನಂಬಲೇಬೇಕಾಗುತ್ತದೆ. ಯಾಕೆಂದರೆ, ಓದುವುದರಲ್ಲಿ ಹೇಗೋ ಬರೆಯುವುದರಲ್ಲೂ ಅವನು ಅಪ್ರತಿಮನಾಗಿದ್ದವ. ಆದರೆ, ಮುಂದುವರಿದು ಅವನು ಹೇಳುವುದು, ಈಗ ತನಗೆ ಓದುವುದಕ್ಕೆ ವೇಳೆಯಾಗಲಿ ಮನಸ್ಸಾಗಲಿ ಇಲ್ಲ ಎಂದು. ಹಾಗಿದ್ದರೂ ಒಂದು ಇಡೀ ವರ್ಷವನ್ನು ಇಂಗ್ಲಿಷ್‌ ಕಾದಂಬರಿಕಾರರನ್ನು ಓದುವುದಕ್ಕೆಂದೇ ಮೀಸಲಿರಿಸಲು ಬಯಸುವೆ, ನನ್ನ ಲಿಸ್ಟಿನ ಕೊನೆಯಲ್ಲಿ ಸರ್‌ ವಾಲ್ಟರ್‌ ಸ್ಕಾಟನ್ನೂ ಸೇರಿಸುವೆ, ಎನ್ನುತ್ತಾನೆ. ಸ್ಥಿರವಾದ ನೆಲೆಯಾಗಲಿ, ಆದಾಯವಾಗಲಿ ಇರದೆ, ಒಂದೆಡೆಯಿಂದ ಇನ್ನೊಂದೆಡೆಗೆ ಮನೆ ಬದಲಿಸುತ್ತ ಕೇವಲ ತನ್ನ ಬರಹದ ಬಲದಿಂದಲೇ ಜೀವಿಸುತ್ತಿದ್ದ ಈ ವ್ಯಕ್ತಿ ತನ್ನ ಅಲ್ಪಾಯುಸ್ಸಿನಲ್ಲಿ (52 ವರ್ಷ) ಓದಿದುದೆಷ್ಟು, ಬರೆದುದೆಷ್ಟು (ಇವೆರಡನ್ನೂ ಅವನು ಸಮತೋಲ ಮಾಡಿಕೊಳ್ಳಬೇಕಿತ್ತು) ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಅವನ ಒಟ್ಟು ಪ್ರಬಂಧ ಸಾಹಿತ್ಯ ಹತ್ತು ಹನ್ನೆರಡು ಸಂಪುಟಗಳಾಗುತ್ತವೆ, ಇದರ ಮೇಲೆ ತನ್ನ ಹೀರೋ ಆಗಿದ್ದ ನೆಪೋಲಿಯನ್‌ ಕುರಿತು ನಾಲ್ಕು ಸಂಪುಟಗಳ ಜೀವನಚರಿತ್ರೆ! ಪ್ರತಿ ಲೇಖನದಲ್ಲೂ ಕಾಣಿಸುವ ಸಾಹಿತ್ಯ ಕೃತಿಗಳ ಉÇÉೇಖ, ಉದ್ಧರಣೆಗಳು ಅಪಾರ. ಒಂದೆಡೆ ಅನ್ನುತ್ತಾನೆ: “ಒಮ್ಮೆ ನಾನು ಫಾರ್ನ್ಹ್ಯಾಮ್‌ ಮತ್ತು ಆಲ್ಟನ್‌ ನಡುವೆ ನಡೆದಾಡಿ ದಣಿದು ಒಂದು ವಸತಿಗೃಹ (inn) ತಲಪಿದೆ; ಅಲ್ಲಿ ವೈಟರ್‌ ನನಗೊಂದು ಹಳೆಕಾಲದ ಕೋಣೆ ನೀಡಿದ; ಬಹುಶಃ ನೂರು ವರ್ಷ ಹಳೆಯ ಕೋಣೆ ಅದು; ಒಂದು ಹಳೆ ಮಾದರಿಯ ಉದ್ಯಾನಕ್ಕೆ ತೆರೆದುಕೊಂಡಿತ್ತು. ವೈಟರ್‌ ನನಗೋಸ್ಕರ ಕಾಫಿ, ಕ್ರೀಮ್‌, ಬ್ರೆಡ್‌ ಮತ್ತು ಬೆಣ್ಣೆ ತಂದಿತ್ತ. ಎಲ್ಲವೂ ಚೆನ್ನಾಗಿತ್ತು. ಚಿಮಿಣಿ ಪಕ್ಕ ಎರಡನೇ ಜಾರ್ಜ್‌ನ ಚಿತ್ರ ತೂಗಿ ಹಾಕಿತ್ತು. ನಾನು ನನ್ನ ಜೇಬಿನಿಂದ “ಪ್ರೀತಿಗಾಗಿ ಪ್ರೀತಿ’ (Love for Love) ತೆಗೆದು ಓದಲು ಕುಳಿತೆ’. ಈ “ಪ್ರೀತಿಗಾಗಿ ಪ್ರೀತಿ’ ಹದಿನೇಳನೆಯ ಶತಮಾನದ ಇಂಗ್ಲಿಷ್‌ ನಾಟಕಕಾರ ವಿಲಿಯಂ ಕಾಂಗ್ರೀವ್‌ ಬರೆದ ನಾಟಕ. ಸಾಕಷ್ಟು ಓದುವವರ ಜತೆ ಇಂಥದೊಂದು ಪುಸ್ತಕ ಯಾವಾಗಲೂ ಇರುತ್ತದೆ! ಕೋಣೆಗೆ ಬಂದೊಡನೆ ಸ್ವಿಚ್‌ ಆನ್‌ ಮಾಡುವುದಕ್ಕೆ ಅಲ್ಲಿ ಟೀವಿ ಇರುವುದಿಲ್ಲ, ಮೊಬೈಲ್‌ ಇರುವುದಿಲ್ಲ, ಇಂಟರ್‌ನೆಟ್‌ ಇರುವುದಿಲ್ಲ! ಆದರೆ ಕೂತು ಓದುವುದಕ್ಕೆ ಜೇಬಿನÇÉೊಂದು ಪುಸ್ತಕವಿರುತ್ತದೆ!

Advertisement

    ನನಗೀ ಹಿಂದಣ ಕಾಲದವರ ಓದು-ಬರಹದ ಸಾಧನೆಯನ್ನು ಕಂಡು ಆಶ್ಚರ್ಯವಾಗುತ್ತದೆ. ಹ್ಯಾಝಿÉಟ್‌ ತನ್ನ ಓದಿನ ಪಟ್ಟಿಯಲ್ಲಿ ಸೇರಿಸಬಯಸುವ ಸ್ಕಾಟನ್ನೇ ನೋಡಿ; ಹದಿನೆಂಟು-ಹತ್ತೂಂಬತ್ತನೆ ಶತಮಾನದ ಈ ಸ್ಕಾಟಿಶ್‌ ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ ಸರ್‌ ವಾಲ್ಟರ್‌ ಸ್ಕಾಟನ ಎಲ್ಲ ಪುಸ್ತಕಗಳನ್ನು ಓದಬೇಕಾದರೆ ಒಂದು ಜೀವಮಾನ ಬೇಕಾಗುತ್ತದೆ! ಅವನೊಬ್ಬ ಐತಿಹಾಸಿಕ ಕಾದಂಬರಿಕಾರನೆಂದೇ ಪ್ರಸಿದ್ಧ, ಒಬ್ಬ ಸ್ಟೈಲಿಸ್ಟ್‌ ಕೂಡ. ಇಂಥ ಕಾದಂಬರಿಗಳನ್ನು ಸುಮ್ಮಗೆ ಕೂತು ಬರೆಯುವುದಕ್ಕಾಗುವುದಿಲ್ಲ, ಸಾಕಷ್ಟು ಅಧ್ಯಯನ ಬೇಕಾಗುತ್ತದೆ. ಇನ್ನು ಶೇಕ್ಸ್‌ಪಿಯರ್‌ನನ್ನು ತೆಗೆದುಕೊಂಡರೆ, ಅವನ ವೃತ್ತಿಜೀವನ ಸುಮಾರು ಇಪ್ಪತ್ತು ವರ್ಷಕ್ಕೆ ಸೀಮಿತವಾದುದು; ಈ ಅವಧಿಯಲ್ಲಿ ಅವನು ಮಾಡಿದ ಸಾಧನೆ ಎಷ್ಟು ದೊಡ್ಡದು! ಮೂವತ್ತೇಳು ನಾಟಕಗಳು, ಅದೆಷ್ಟೋ ಸಣ್ಣ ದೊಡ್ಡ ಕವಿತೆಗಳು, ಇದು ಒಬ್ಬ ಮನುಷ್ಯನಿಂದ ಸಾಧ್ಯವೇ ಎಂದು ಬೆರಗಾಗುತ್ತದೆ. 

ಇದನ್ನೆಲ್ಲ ಈ ಮಂದಿ ಹೇಗೆ ಸಾಧಿಸಿದರು? ಯಾವ ರೀತಿಯಲ್ಲೂ ನಮ್ಮಷ್ಟು ಅನುಕೂಲತೆಗಳು ಇರದಿದ್ದ ಕಾಲ ಅದು. ವಿದ್ಯುತ್ತು ಇರಲಿಲ್ಲ. ರಾತ್ರಿ ಓದುವುದು ಬರೆಯುವುದು ಕಷ್ಟವೇ ಸರಿ. ಬೇಕಾದ ಪುಸ್ತಕಗಳು ಥಟ್ಟನೆ ದೊರಕುತ್ತಿರಲಿಲ್ಲ. ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸುವುದೂ ಸುಲಭದ ಮಾತಾಗಿರಲಿಲ್ಲ. ಸಂಪರ್ಕ ವ್ಯವಸ್ಥೆ ತೀರಾ ಕಡಿಮೆ. ಅದೆಲ್ಲ ಒಂದು ತೊಡಕಾಗಿ ಅವರಿಗೆ ಅನಿಸಿರಲಾರದು; ಯಾಕೆಂದರೆ ಅವರ ಪರ್ಯಾವರಣವೇ ಹಾಗಿತ್ತು. ಯುರೋಪಿನಲ್ಲಿ ಹೀಗೆ ಬೃಹತ್‌ ಪ್ರಮಾಣದಲ್ಲಿ ಬರೆದ ಅದೆಷ್ಟೋ ಲೇಖಕರಿ¨ªಾರೆ- ಪುರಾತನ ಗ್ರೀಕರಿಂದ ಹಿಡಿದು ಆಧುನಿಕರ ವರೆಗೆ.  

    ಈ ನನ್ನ ಬೆರಗು ಇಂಗ್ಲಿಷ್‌ ಸಾಹಿತ್ಯಕ್ಕಷ್ಟೇ ಸೀಮಿತವಾಗಿಲ್ಲ. ಹಳೆಯ ಕನ್ನಡ ಸಾಹಿತ್ಯವನ್ನೂ ಒಳಗೊಂಡಿದೆ. ನಾವು ಹಿಂದಕ್ಕೆ ಹೋದಂತೆ ಅಂದಿನ ಜೀವನಕ್ರಮವಾಗಲಿ ಕವಿಗಳ ಜೀವನಚರಿತ್ರೆಯಾಗಲಿ ಸ್ಪಷ್ಟವಾಗುವುದಿಲ್ಲ. ಕಾವ್ಯಗಳು ಮಾತ್ರವೇ ನಮ್ಮ ಮುಂದಿರುವುದು. ಅದೇ ಒಂದು ಅದೃಷ್ಟ ಎನ್ನೋಣ. ಪಂಪನ ವಿಕ್ರಮಾರ್ಜುನ ವಿಜಯ ಕನ್ನಡದ ಮೊದಲ ಮಹಾ ಕಾವ್ಯ. ಪಂಪ ಅದನ್ನು ಹೇಗೆ ಬರೆದ? ಅವನು ಎದುರಿಸಿದ ಸಮಸ್ಯೆಗಳೇನು? ಅರ್ಜುನನನ್ನು ಅವನು ಬನವಾಸಿಗೆ ಕರೆತರಲು ಮಾದರಿಯೇನು? ಕಾಳಿದಾಸನ ಮೇಘದೂತ ಇರಬಹುದೇ? ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ಎಂದು ಕವಿ ಕಾವ್ಯದ ಮಧ್ಯಭಾಗದಲ್ಲಿ ತಾನೇ ಮುಂದೆ ಬರುತ್ತಾನಲ್ಲ! ಇದನ್ನೊಂದು ಆಭಾಸವೆಂದು ಪಂಡಿತರು ಅಂದುಕೊಳ್ಳಬಹುದು ಎಂಬ ಅಳುಕೇ ಅವನಿಗೆ ಇರಲಿಲ್ಲ! ನಂತರ ಬಿ.ಎಂ.ಶ್ರೀ ದ್ರೋಣ ಮತ್ತು ಅಶ್ವತ್ಥಾಮರನ್ನು ತಮ್ಮ ನಾಟಕದಲ್ಲಿ ಕನ್ನಡ ಮೂಲದವರನ್ನಾಗಿ ಮಾಡುತ್ತಾರೆ! 

ಕುಮಾರವ್ಯಾಸ ಇನ್ನೊಂದು ಬೆರಗು. ಅವನ ಕುರಿತಾಗಿ ಕೆಲವು ದಂತಕತೆಗಳು ಮಾತ್ರ ನಮಗೆ ಲಭ್ಯ. ದಿನವೂ ಕೆರೆಯಲ್ಲಿ ಮಿಂದು ಗದುಗಿನ ವೀರನಾರಾಯಣ ದೇಗುಲದ ಮಂಟಪದಲ್ಲಿ ಕುಳಿತು ಉಟ್ಟ ಬಟ್ಟೆ ಆರುವ ವರೆಗೆ ತನ್ನ ಮಹಾ ಕಾವ್ಯವನ್ನು ಬರೆಯುತ್ತಿದ್ದ ಎಂಬುದಾಗಿ. ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಎಂದು ಮುಂತಾಗಿ ಅವನು ತನ್ನ ಬಗ್ಗೆ ತಾನೇ ಹೇಳಿಕೊಂಡುದಿದೆ. ಎಂದರೆ ಯಾವತ್ತೂ ಕರಡು ಪ್ರತಿ ಬರೆಯುತ್ತಿರಲಿಲ್ಲ ಎಂದೇ? ನೇರವಾಗಿ ತಾಳೆಯೋಲೆಯಲ್ಲಿ ಬರೆಯುತ್ತಿದ್ದನೇ? ಬಳಸಿ ಬರೆಯಲು ಕಂಠಪತ್ರದ ವುಲುಹು ಕೆಡದಗ್ಗಳಿಕೆ ಎಂದೂ ಹೇಳಿಕೊಳ್ಳುತ್ತಾನೆ. ಇದು ನಿಜವೇ ಆಗಿದ್ದರೆ ಒಂದು ಪವಾಡವೇ ಸರಿ. ಹಾಗಿರಲಾರದು ಎನ್ನುತ್ತದೆ ನಮ್ಮ ಇಂದಿನ ವೈಚಾರಿಕ ಮನಸ್ಸು. ನಾರಣಪ್ಪನ ನಿಜವಾದ ಕವಿಜೀವನ ಹೇಗಿತ್ತು, ಅವನು ಅಷ್ಟೊಂದು ವಿದ್ವತ್ತನ್ನು ಎಲ್ಲಿ ಹೇಗೆ ಗಳಿಸಿದ ಎಂದು ತಿಳಿಯಲು ನಾವು ಹಾತೊರೆಯುತ್ತೇವೆ. ಭಾರತವನ್ನು ಬರೆಯುವ ಪೂರ್ವದಲ್ಲಿ ಅವನ ಮನಸ್ಸಿನಲ್ಲಿ ಅದರ ಶಿಲ್ಪದ ಕುರಿತು ಒಂದು ಯೋಜನೆ ಇದ್ದಿರಬೇಕಲ್ಲವೇ? ವ್ಯಾಸಭಾರತ ಅವನ ಮುಂದೆ ಇತ್ತು ನಿಜ, ಆದರೆ ಅದನ್ನೇನೂ ಅವನು ಮಕ್ಕಾಮಕ್ಕಿಯಾಗಿ ಅನುಸರಿಸಲಿಲ್ಲ. ಉದಾಹರಣೆಗೆ ಆರಂಭದ ವಂಶಾವಳಿಯ ಕತೆಯನ್ನೆಲ್ಲ ಅವನು ಬೇಗನೆ ಮುಗಿಸಿಬಿಟ್ಟು ನೇರ ಕೌರವ-ಪಾಂಡವರ ಮುಖ್ಯ ಕತೆಗೆ ಬರುತ್ತಾನೆ. ದ್ರೌಪದಿ ವಸ್ತ್ರಾಪಹರಣವನ್ನು ಎರಡೆರಡು ಸಂಧಿಯಷ್ಟು ವಿಸ್ತರಿಸುತ್ತಾನೆ. ಅಲ್ಲದೆ ಇಡೀ ಕತೆ ತನ್ನದೇ ಕಾಲದಲ್ಲಿ ನಡೆಯಿತು ಎಂಬಂತೆ ಅದನ್ನು ಸಮಕಾಲೀನಗೊಳಿಸುತ್ತಾನೆ. ಶಿಸ್ತು, ನಿರಂತರ ಅಧ್ಯಯನ, ಸಹಚಿಂತಕರ ಜತೆ ಸಮಾಲೋಚನೆ, ಪೂರ್ವಸಿದ್ಧತೆ, ಟಿಪ್ಪಣಿ, ಕರಡು ಪ್ರತಿ, ತಿದ್ದುವಿಕೆ ಇಲ್ಲದೆ ಇಂಥ ಮಹಾಕಾವ್ಯ ಅಸಾಧ್ಯ. ಮಹಾಭಾರತದಲ್ಲಿ ಬರುವ ಹೆಸರುಗಳಿಗೇ ಲೆಕ್ಕವಿಲ್ಲ! ಇನ್ನು ಶಾಸ್ತ್ರಾದಿ ವಿಷಯ-ವಿವರಗಳನ್ನು ಕೇಳುವುದೇ ಬೇಡ. ಕುಮಾರವ್ಯಾಸನ ಈ ಅದ್ಭುತ ಸಾಧನೆಯನ್ನು ಮೆಚ್ಚುವುದಕ್ಕೆ ದಂತಕತೆಗಳ ಅಗತ್ಯವಿಲ್ಲ. ಸತತಾಭ್ಯಾಸವನ್ನು ಊಹಿಸಿಕೊಳ್ಳುವುದು ಅಗತ್ಯವಾಗುತ್ತದೆ.  

Advertisement

ಪುರಂದರ ದಾಸರು ತಮ್ಮ ಜೀವಿತಾವಧಿಯಲ್ಲಿ ಅದೆಷ್ಟೋ ಲಕ್ಷ ಕೀರ್ತನೆಗಳನ್ನು ಬರೆಯುವ ಯೋಜನೆ ಹಾಕಿಕೊಂಡಿದ್ದರಂತೆ. ಅದು ಕೈಗೂಡದಿದ್ದರೂ ಅವರು ಬರೆದ ಕೀರ್ತನೆಗಳ ಸಂಖ್ಯೆ ಬಹಳ ದೊಡ್ಡದು ಎನ್ನುತ್ತಾರೆ ವಿದ್ವಾಂಸರು. ಅವು ಪೂರ್ತಿ ಇಂದು ಸಿಕ್ಕಿಲ್ಲ. ಆದರೆ ಪುರಂದರ ದಾಸರು ಪ್ರತಿದಿನವೂ ಹತ್ತಾರು ಕೀರ್ತನೆಗಳನ್ನು ಬರೆಯುತ್ತಿದ್ದಿರಬೇಕು. ಈ ಕೀರ್ತನೆಗಳ ಸಾಹಿತ್ಯದ ಸೊಗಸನ್ನು ನೋಡಿದರೆ ಅವುಗಳ ಹಿಂದೆ ಇರುವುದು ಭಕ್ತಿಯೊಂದೇ ಅಲ್ಲ, ಬಹುಶಃ ಅದಕ್ಕಿಂತಲೂ ಹೆಚ್ಚು ಕಲೆಗಾರಿಕೆ (ಪ್ರಾಸ, ಅನುಪ್ರಾಸ, ಶ್ಲೇಷೆ, ರೂಪಕ, ಉಪಮೆ, ಪದಲಾಲಿತ್ಯ, ಲಯ ಇತ್ಯಾದಿ) ಅನಿಸುತ್ತದೆ. ಭಕ್ತಿ ಎನ್ನುವುದು ಒಂದು ಮಾತಿನಲ್ಲಿ ಮುಗಿಯುತ್ತದೆ; ಅದು ದೇವರು ಮತ್ತು ಭಕ್ತನ ನಡುವಣ ಖಾಸಗಿ ಒಪ್ಪಂದ. ಆದರೆ ಕಲೆಗಾರಿಕೆ ಇಡೀ ಜನಪದವನ್ನು, ನುಡಿಯನ್ನು ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಇದು ಪುರಂದರ ದಾಸರ ಮಾನುಷ ಮುಖ. ಅಷ್ಟಕ್ಕೆ ನಮ್ಮ ಬೆರಗು ಹೆಚ್ಚುತ್ತದೆಯೇ ವಿನಾ ಕಡಿಮೆಯಾಗುವುದಿಲ್ಲ; ಯಾಕೆಂದರೆ ಎಲ್ಲವೂ ದೈವಕೃಪೆ ಎಂದಾದರೆ ಅದರಲ್ಲಿ ಅಚ್ಚರಿಪಡುವುದಕ್ಕೆ ಏನೂ ಇರುವುದಿಲ್ಲ. ಮನುಷ್ಯರಿಂದ ಇದು ಸಾಧ್ಯವಾಯಿತು ಎನ್ನುವುದೇ ನಮ್ಮ ಅಚ್ಚರಿಗೆ ಕಾರಣ.

ಆಧುನಿಕ ಕನ್ನಡದಲ್ಲೂ ನಮ್ಮ ಬೆರಗಿಗೆ ಕಾರಣವಾಗುವಂತೆ ಬರೆದ, ಬರೆಯುತ್ತಿರುವ ಸಾಹಿತಿಗಳಿ¨ªಾರೆ: ಕಾರಂತ, ಅನಕೃ, ತರಾಸು, ಕುವೆಂಪು, ಗೋಕಾಕ, ಡಿವಿಜಿ ವಿಪುಲವಾಗಿ ಬರೆದರು; ಇಂದು ಹಿರಿಯರಾದ ಭೈರಪ್ಪ, ಚಂದ್ರಶೇಖರ ಕಂಬಾರ, ಕಾರ್ನಾಡ, ನಿಸಾರ್‌ ಅಹಮ್ಮದ್‌ ಮತ್ತು ಅವರ ಮುಂದಿನ ಎಚ್‌. ಎಸ್‌. ವಿ., ದೊಡ್ಡರಂಗೇ ಗೌಡ, ಮೊಗಸಾಲೆ, ಕುಂವೀ, ಬೊಳುವಾರು, ವಾಲೀಕಾರ, ಲತಾ ರಾಜಶೇಖರ್‌, ವೀರಪ್ಪ ಮೊಯಿಲಿ  ಮುಂತಾದವರು ಹಾಗೆ ಬರೆಯುತ್ತಿ¨ªಾರೆ. ಆದರೂ ಇಂದಿನ ಯುಗ ಸುದೀರ್ಘ‌ ಮತ್ತು ವಿಪುಲ ಬರಹಗಳ ಬರವಣಿಗೆಗೆ ಅನುಕೂಲಕರವಾಗಿಲ್ಲ ಅನಿಸುತ್ತದೆ; ಒಂದು ವೇಳೆ ಲೇಖಕರು ಬರೆದರೂ ಓದುವವರಿಗೆ ವೇಳೆಯಿಲ್ಲದಾಗಿದೆ. 

– ಕೆ. ವಿ. ತಿರುಮಲೇಶ್‌

Advertisement

Udayavani is now on Telegram. Click here to join our channel and stay updated with the latest news.

Next