Advertisement

ಪರ್ವತಮುಖೀ ಬಳಿ ಬರೆ ಕುಸಿತ: ಆತಂಕ

12:19 AM Sep 09, 2019 | Sriram |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ- ಮಂಜೇಶ್ವರ ಸಂಪರ್ಕ ರಸ್ತೆಯ ಸುಬ್ರಹ್ಮಣ್ಯ ಸಮೀಪದ ಪರ್ವತಮುಖೀ ಬಳಿ ಅಪಾಯ ಸ್ಥಿತಿಯಲ್ಲಿದ್ದ ಗುಡ್ಡ ಶನಿವಾರ ರಾತ್ರಿ ಸುರಿದ ಮಳೆಗೆ ಜರಿದಿದೆ. ಜರಿದ ಗುಡ್ಡದ ಆಸುಪಾಸಿನಲ್ಲಿ ಕುಟುಂಬವೊಂದು ವಾಸ್ತವ್ಯವಿದ್ದು, ಇನ್ನಷ್ಟು ಕುಸಿದರೆ ಕುಟುಂಬ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ.

Advertisement

ಬರೆ ಜರಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಗುಡ್ಡದ ಮೇಲ್ಭಾಗ ಗಿರಿಜಾ ಅವರ ಮನೆಯಿದ್ದು, ಇಬ್ಬರು ಹೆಣ್ಣುಮಕ್ಕಳ ಜತೆ ಅವರು ವಾಸ್ತವ್ಯವಿದ್ದಾರೆ. ಮನೆಯ ಮುಂಭಾಗದಲ್ಲೇ ಗುಡ್ಡ ಕುಸಿದಿದೆ. ಈ ಕುಸಿತದಿಂದ ಮನೆಗೆ ಹಾನಿ ಆಗಿಲ್ಲವಾದರೂ ಮಳೆ ಹೆಚ್ಚಾಗಿ ಇನ್ನಷ್ಟು ಕುಸಿತ ಸಂಭವಿಸಿದರೆ ಸಮಸ್ಯೆ ಸೃಷ್ಟಿಯಾಗಲಿದೆ. ಮಹಿಳೆ ಮತ್ತು ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇರುವ ಕುಟುಂಬ ಈಗ ಆತಂಕಕ್ಕೆ ಒಳಗಾಗಿದೆ.

“ಸುದಿನ’ ವರದಿ ಪ್ರಕಟಿಸಿ ಎಚ್ಚರಿಸಿತ್ತು
ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಸುಬ್ರಹ್ಮಣ್ಯ -ಮಂಜೇಶ್ವರ ರಸ್ತೆ ಪರ್ವತಮುಖೀ ಬಳಿ ಹಾದು ಹೋಗುತ್ತಿದೆ. ಗುಡ್ಡದ ಮೇಲಿರುವ ಮರಗಳ ಬುಡದಲ್ಲಿ ಮಣ್ಣಿನ ಸವಕಳಿಯಾಗಿ ಉರುಳಲು ಸಿದ್ಧವಾಗಿವೆ. ರಸ್ತೆ ಬದಿ ಗುಡ್ಡ ಜರಿದು ಅಪಾಯವಾಗುತ್ತಿದೆ. ಈ ಕುರಿತು ಆ. 25ರಂದು ಸುದಿನದಲ್ಲಿ ವರದಿ ಪ್ರಕಟಗೊಂಡಿತ್ತು. ಆದರೂ ಗುಡ್ಡ, ಮರಗಳಿಂದ ಆಗುವ ಅಪಾಯ ನಿವಾರಿಸಲು ಅಧಿಕಾರಿಗಳು ಪ್ರಯತ್ನಿಸಿಲ್ಲ. ಈಗ ಇಲ್ಲೇ ಗುಡ್ಡ ಜರಿಯಲಾರಂಭಿಸಿದೆ. ಇನ್ನಾದರೂ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪರ್ಯಾಯ ವ್ಯವಸ್ಥೆಗೆ ಮನವಿ
ಮಳೆಗೆ ಮತ್ತಷ್ಟೂ ಈ ಗುಡ್ಡ ಜರಿದಲ್ಲಿ ಪ್ರಮುಖ ರಸ್ತೆ ಸಂಪರ್ಕ ಕಡಿತಗೊಳ್ಳುವುದಲ್ಲದೆ ಗುಡ್ಡದ ಮೇಲೆ ವಾಸವಿರುವ ಕುಟುಂಬ ತೊಂದರೆಗೆ ಒಳಗಾಗಲಿದೆ. ಈ ಬಡ ಕುಟುಂಬವನ್ನು ಸ್ಥಳಾಂತರಿಸಿ ಪರ್ಯಾಯ ಮನೆ ವ್ಯವಸ್ಥೆ ಕಲ್ಪಿಸಬೇಕಿದೆ. ಮನೆಗೆ ಹಕ್ಕುಪತ್ರ ಇಲ್ಲದೆ ಎಲ್ಲ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ನಮಗೆ ಬೇರೆಡೆ ಮನೆ ಒದಗಿಸುವಂತೆ ನೊಂದ ಮಹಿಳೆ ಗಿರಿಜಾ ಅವರು ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next