Advertisement

ಬರವಣಿಗೆಗೆ ದಿಗ್ಬಂಧನ ಹಾಕಲಾಗದು

02:50 PM May 14, 2019 | pallavi |

ಹಾನಗಲ್ಲ: ಈಗ ಮಹಿಳಾ ಸಾಹಿತ್ಯವೇ ಕನ್ನಡ ಸಾಹಿತ್ಯವನ್ನು ಆಳುತ್ತಿದೆ ಎನ್ನುವಷ್ಟರ ಮಟ್ಟಿಗೆ ಮಹಿಳಾ ಸಾಹಿತಿಗಳು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿದ್ದಾರೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

Advertisement

ಸೋಮವಾರ ಹಾಗನಲ್ಲಿನಲ್ಲಿ ಕವಿವೃಕ್ಷ ಬಳಗ, ಸೃಜನಶೀಲ ಕನ್ನಡ ಸಾಹಿತ್ಯ ಬಳಗ, ಸ್ಪಂದನ ಮಹಿಳಾ ಮಂಡಳ, ಸ್ನೇಹಾ ಮಹಿಳಾ ಮಂಡಳ ಸರಸ್ವತಿ ಮಹಿಳಾ ಮಂಡಳಗಳ ಆಶ್ರಯದಲ್ಲಿ ಪಾರ್ವತಿಬಾಯಿ ಕಾಶೀಕರ ಅವರ ‘ಅಂತರಂಗದ ಅಲೆ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕವಿಗೆ ತನ್ನ ಬರವಣಿಗೆ ಮೇಲೆ ನಂಬಿಕೆ ಇರಬೇಕು. ಸಂವೇದನೆಗಳನ್ನು ಅಭಿವ್ಯಕ್ತಿಸುವ ಸೃಜನಶೀಲತೆ ಬೇಕು. ಬರವಣಿಗೆಗೆ ಯಾರೂ ದಿಗ್ಬಂಧನ ಹಾಕಲು ಸಾಧ್ಯವಿಲ್ಲ. ಸದಾ ಬರಹಕ್ಕೆ ಮನಸ್ಸನ್ನು ಒಡ್ಡಿಕೊಳ್ಳಬೇಕು ಎಂದ ಅವರು, ಹಾನಗಲ್ಲು ಪುಸ್ತಕ ಸಾಹಿತ್ಯ ಸಂಸ್ಕೃತಿಯನ್ನು ಜೀವಂತವಾಗಿರಿಸಿದ ಸೃಜನಶೀಲ ಸಾಹಿತ್ಯದ ನಾಡಾಗಿದೆ ಎಂದರು.

ಸಾಹಿತಿ ಪ್ರೊ| ಮಾರುತಿ ಶಿಡ್ಲಾಪುರ ‘ಅಂತರಂಗದ ಅಲೆ’ ಕೃತಿ ವಿಮರ್ಶಿಸಿ ಮಾತನಾಡಿ, ಪಾರ್ವತಿಬಾಯಿ ಕಾಶೀಕರ ಅವರ ಕಾವ್ಯ ಹಿತಮಿತ ಮೃದುವಚನವಿದ್ದಂತೆ. ವಾಸ್ತವಕ್ಕೆ ಹತ್ತಿರವಾಗಿ ತೆರೆದುಕೊಂಡ ಬೋಧಪ್ರದ ಪದ್ಯಗಳಾಗಿವೆ. ಕಾವ್ಯದಲ್ಲೆಲ್ಲೂ ಅಹಂಭಾವ, ಆಕ್ರೋಶಗಳಿಲ್ಲ. ಸಂಪ್ರದಾಯಸ್ಥ ಧಾರ್ಮಿಕ ಆಚಾರದ ಕುಟುಂಬದಲ್ಲಿ ಬೆಳೆದ ಇವರು ಮಾನವೀಯ ನೆಲೆಯಲ್ಲಿ ಎಲ್ಲವನ್ನು ಕಾಣಬಯಸಿದ ಭರವಸೆಯ ಲೇಖಕಿ ಎಂದರು.

ಹಿರಿಯ ಕವಿ ಗಂಗಾಧರ ನಂದಿ ಮಾತನಾಡಿ, ಸಾಹಿತಿಗಳ ಕೃತಿಗಳು ವಿಮರ್ಶೆಗೊಳಗಾಗಬೇಕು. ಕವಿತೆ ಜಾಳವಾದರೆ ಧ್ವನಿ ಕ್ಷೀಣಗೊಳ್ಳುತ್ತದೆ. ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳಲು ಮೊದಲು ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಬೇಕಾಗಿದೆ. ಇದು ಯಾರೊಬ್ಬರ ಪ್ರಯತ್ನವಲ್ಲ. ಸಾಮೂಹಿಕ ಜವಾಬ್ದಾರಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಉದಯ ನಾಸಿಕ, ಹಾನಗಲ್ಲಿನ ಸಾಂಸ್ಕೃತಿಕ ವೈಭವ ಪುನರುತ್ಥಾನವಾಗಬೇಕು. ಇಲ್ಲಿನ ಸಾಹಿತ್ಯ ಸಂಸ್ಕೃತಿಗೆ ಹೊಸ ಚೇತನ ನೀಡಬೇಕು. ಪಾರ್ವತಿಬಾಯಿ ಕಾಶೀಕರ ಅವರ ಕಾವ್ಯದಲ್ಲಿ ಪಂಡಿತ ಕುಟುಂಬದೊಳಗಿಂದ ಹತ್ತು ಹಲವು ಸಾಮಾಜಿಕ ನ್ಯಾಯಗಳನ್ನು ಕಟ್ಟಿಟ್ಟಿದ್ದಾರೆ. ಸಮಾಜವನ್ನು ಮುಕ್ತವಾಗಿ ನೋಡಿದ ಅವರಿಗೆ ಇದು ಸಾಧ್ಯವಾಗಿದೆ ಎಂದರು.

Advertisement

ಕವಯತ್ರಿ ಪಾರ್ವತಿಬಾಯಿ ಕಾಶೀಕರ ವೇದಿಕೆಯಲ್ಲಿದ್ದರು. ಸರಸ್ವತಿ ಮಹಿಳಾ ಮಂಡಳದ ಗೌರವಾಧ್ಯಕ್ಷೆ ನೀಲಮ್ಮತಾಯಿ ಉದಾಸಿ, ಕವಿವೃಕ್ಷ ಬಳಗದ ರಾಜ್ಯಾಧ್ಯಕ್ಷ ಪ್ರೊ| ವೀರೇಶ ಹಿತ್ತಲಮನಿ, ಶಂಕರಶಾಸ್ತ್ರಿ ಕಾಶಿಕರ, ಸೃಜನಶೀಲ ಬಳಗದ ಜಿಲ್ಲಾಧ್ಯಕ್ಷ ಸಂತೋಷ ಬಿದರಗಡ್ಡಿ, ವಿಶ್ರಾಂತ ಪ್ರಾಚಾರ್ಯ ಎಲ್.ಎಂ.ದೇಸಾಯಿ, ಮುಖ್ಯೋಪಾಧ್ಯಾಯ ಕೆ.ಕೆ. ರೂಪಶ್ರೀ, ಮಧುಮತಿ ಪೂಜಾರ, ಸುಧಾಬಾಯಿ ದೇಶಪಾಂಡೆ, ನಂದೀಶ ಲಮಾಣಿ, ದಾವಲ್ಮಲಿಕ್‌ ಇಂಗಳಕಿ ಅತಿಥಿಗಳಾಗಿದ್ದರು.

ಗಣ್ಯರಾದ ಪ್ರಾಚಾರ್ಯ ಅನಿತಾ ಹೊಸಮನಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಭು ಗುರಪ್ಪನವರ, ಪ್ರೊ| ನಾಗರಾಜ ಧಾರೇಶ್ವರ, ಕೆ.ಎಲ್.ದೇಶಪಾಂಡೆ, ಘನಶ್ಯಾಮ ದೆಶಪಾಂಡೆ, ಗಂಗಾಧರಶಾಸ್ತ್ರೀ ಕಾಶೀಕರ, ವಿ.ಜಿ.ಶಾಂತಪೂರಮಠ, ಬದರಿನಾಥ ಕುಲಕರ್ಣಿ, ಮಹೇಶ ಕಾಗಿನೆಲ್ಲಿ, ಶಾರದಾ ಉದಾಶಿ, ವಿಜಯಕ್ಕ ಗುಡಗುಡಿ, ಪುಷ್ಪಾ ಬಸ್ತಿ, ಸುಶಿಲಕ್ಕ ಕುಲಕರ್ಣಿ, ಬನುತಾಯಿ ಚಿನ್ನಮುಳಗುಂದ, ವಾರುಣಿ ದೇಶಪಾಂಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪಾರ್ವತಿಬಾಯಿ ಕಾಶೀಕರ ಅವರ ಪದ್ಯಗಳನ್ನು ಕಲಾವಿದರಾದ ಅಕ್ಕಮ್ಮ ಸುಗಾವಿ, ಛಾಯಾ ದೇಶಪಾಂಡೆ, ದಮಯಂತಿ ದೇಶಪಾಂಡೆ, ಲೀಲಾ ಭಟ್ ವಿದ್ಯಾ ಕಾಶೀಕರ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next