Advertisement

ಹೆಜಮಾಡಿ ಟೋಲ್‌ನಲ್ಲಿ  ಟ್ಯಾಕ್ಸಿಗಳಿಗೆ ಬರೆ !

08:15 AM Feb 10, 2018 | Team Udayavani |

ಪಡುಬಿದ್ರಿ: ಹೆಜಮಾಡಿ ಟೋಲ್‌ಗೇಟಿನ 5 ಕಿ.ಮೀ. ವ್ಯಾಪ್ತಿಯ ಹೊರಗಿನ ಎಲ್ಲ ಕೆಎ20 ನೋಂದಣಿಯ ಟ್ಯಾಕ್ಸಿಗಳಿಗೆ ಶುಕ್ರವಾರದಿಂದ ಸುಂಕ ವಸೂಲಿ ಆರಂಭಗೊಂಡಿದ್ದು, ಟ್ಯಾಕ್ಸಿ ಚಾಲಕ – ಮಾಲಕರ ಅಸಮಾಧಾನಕ್ಕೆ ಕಾರಣವಾಗಿದೆ. ಟೋಲ್‌ಗೇಟ್‌ ಸಿಬಂದಿ ಮತ್ತು ಟ್ಯಾಕ್ಸಿ ಚಾಲಕರ ನಡುವೆ ಹಲವು ಬಾರಿ ಮಾತಿನ ಚಕಮಕಿಯೂ ನಡೆಯಿತು. ಟ್ಯಾಕ್ಸಿ ಚಾಲಕ-ಮಾಲಕರ ಆಗ್ರಹಕ್ಕೆ ಮಣಿದು ಸಂಜೆ ವೇಳೆಗೆ ಸುಂಕ ಸಂಗ್ರಹವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ.

Advertisement

ಈ ಕುರಿತು ಉದಯವಾಣಿ ಪ್ರತಿನಿಧಿ ಉಡುಪಿ ಜಿಲ್ಲಾಧಿಕಾರಿಯವರ ಬಳಿ ವಿಚಾರಿಸಿದಾಗ “ವಿಚಾರ ನನ್ನ ಗಮನಕ್ಕೆ ಬಂದಿಲ್ಲ; ವಿಚಾರಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್‌ ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ರಮೇಶ್‌ ಕೋಟ್ಯಾನ್‌ ಅವರನ್ನು ಸಂಪರ್ಕಿಸಿದಾಗ, “ನಾನು ಈ ಕುರಿತು ಟೋಲ್‌ಗೇಟ್‌ ಅಧಿಕಾರಿಗಳ ಬಳಿ ಮಾತಾಡಿದ್ದೆ. ಬೆಳಗ್ಗೆ ಕೇವಲ ಟ್ಯಾಕ್ಸಿಗಳ ಸರ್ವೇಯನ್ನಷ್ಟೇ ನಡೆಸುತ್ತಿದ್ದೇವೆ ಎಂದು ದೂರವಾಣಿ ಮೂಲಕ ತಿಳಿಸಿದ್ದ ನವಯುಗ ಅಧಿಕಾರಿ ಸಂಜೆಯ ವೇಳೆ ಮಾತಿನ ವರಸೆ ಬದಲಿಸಿದ್ದು, ಮೇಲಧಿಕಾರಿಗಳ ಸೂಚನೆಯಂತೆ ಸುಂಕ ವಸೂಲಿ ಮಾಡುತ್ತಿದ್ದೇವೆ’ ಎಂದು ಉತ್ತರಿಸಿದ್ದಾರೆ ಎಂದರು.

ಹೆಜಮಾಡಿ, ಸುರತ್ಕಲ್‌ ಸೇರಿದಂತೆ ಜಿಲ್ಲೆಯ ಎಲ್ಲ ಟೋಲ್‌ಗೇಟ್‌ಗಳಲ್ಲಿ ಸುಂಕ ಪಾವತಿ ಮಾಡಲು ನಮ್ಮಿಂದ ಅಸಾಧ್ಯ; ಒಂದೋ ಸುರತ್ಕಲ್‌ ಟೋಲ್‌ಗೇಟನ್ನು ಮುಚ್ಚಬೇಕು. ಇಲ್ಲವೇ ಜಿಲ್ಲೆಯೊಳಗೆ ಹೆದ್ದಾರಿ ಚತುಷ್ಪಥ ಕಾಮಗಾರಿಯನ್ನು ಸಂಪೂರ್ಣ ಮುಗಿಸಿದ ಬಳಿಕಷ್ಟೇ ಸುಂಕ ವಸೂಲಿ ಮಾಡಬೇಕು ಎಂದು ಆಗ್ರಹಿಸಿರುವ ರಮೇಶ್‌ ಕೋಟ್ಯಾನ್‌, ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿಯವರ ಬಳಿಗೆ ನಿಯೋಗದೊಂದಿಗೆ ತೆರಳಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ತಾತ್ಕಾಲಿಕ ಸ್ಥಗಿತ: ಸಂಜೆ 7 ಗಂಟೆ ವೇಳೆಗೆ ಟ್ಯಾಕ್ಸಿ ಚಾಲಕ-ಮಾಲಕರು ಟೋಲ್‌ ಗೇಟ್‌ ಬಳಿ ಜಮಾಯಿಸಿದ್ದು, ಪ್ರತಿಭಟನೆ ನಡೆಸುವ ಸುಳಿವು ಸಿಕ್ಕಿದ ನವಯುಗ ಅಧಿಕಾರಿಯು ಟ್ಯಾಕ್ಸಿಮೆನ್‌ ಅಸೋಸಿಯೇಶನ್‌ ಮುಖ್ಯಸ್ಥರ ಜತೆ ದೂರವಾಣಿ ಮೂಲಕ ಮಾತನಾಡಿ, ಸೋಮವಾರದ ವರೆಗೆ ಸುಂಕ ಸಂಗ್ರಹಿಸುವುದಿಲ್ಲ; ಬಳಿಕ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next