Advertisement

World Tourism Day 2024: “ಕರ್ನಾಟಕ ಒಂದು ರಾಜ್ಯ…ಇಲ್ಲಿದೆ ವಿಸ್ಮಯದ ಹಲವು ಜಗತ್ತು”

12:44 PM Sep 27, 2024 | Team Udayavani |

ಕರ್ನಾಟಕ ಸ್ಥಾನ,ಗಾತ್ರ,ವಿಸ್ತೀರ್ಣ:-

Advertisement

ಕರ್ನಾಟಕ ಭಾರತದಲ್ಲೇ ವಿಸ್ತೀರ್ಣದಲ್ಲಿ ಆರನೇ ಅತಿದೊಡ್ಡ ರಾಜ್ಯವಾಗಿದ್ದು,ಇದು ಯುರೋಪಿನ ಹಂಗೇರಿ ಅಥವಾ ಬೆಲ್ಜಿಯಂ ದೇಶಗಳಿಗಿಂತ ದೊಡ್ಡದು. ಜನಸಂಖ್ಯಾ ಗಾತ್ರದಲ್ಲಿ ರಾಜ್ಯವು ದೇಶದಲ್ಲಿ ಎಂಟನೇ ಸ್ಥಾನದಲ್ಲಿದೆ. ರಾಜ್ಯವು ಪ್ರಸ್ತುತ 31 ಜಿಲ್ಲೆಗಳಿಂದ ಕೂಡಿದ್ದು, ಕರ್ನಾಟಕದ ಒಟ್ಟು ಭೌಗೋಳಿಕ ಕ್ಷೇತ್ರ 1,91,791 ಚ.ಕಿ.ಮೀ. ಇದು ಭಾರತದ ವಿಸ್ತೀರ್ಣದ 5.84 ರಷ್ಟಿದೆ. ಕರ್ನಾಟಕವು ದಖ್ಖನ್ ಪ್ರಸ್ಥಭೂಮಿಯ ದಕ್ಷಿಣ ಭಾಗದಲ್ಲಿದ್ದು ಇದು ಬಹುತೇಕ ಮೈಸೂರು ಪ್ರಸ್ಥಭೂಮಿಯನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯವು ಭೂ ಮತ್ತು ಜಲಮೇರೆಗಳೆರಡನ್ನು ಸಹ ಒಳಗೊಂಡಿರುವುದು. ಭಾರತದ ಪಶ್ಚಿಮ ಕರಾವಳಿಯ ರಾಜ್ಯಗಳಲ್ಲಿ ಕರ್ನಾಟಕವು ಉತ್ತರದಲ್ಲಿ ಗೋವಾ, ಮಹಾರಾಷ್ಟ್ರ ಹಾಗೂ ದಕ್ಷಿಣದಲ್ಲಿ ಕೇರಳ ರಾಜ್ಯಗಳ ನಡುವೆ ಇರುವುದು. ರಾಜ್ಯವು ಉತ್ತರದಲ್ಲಿ ಮಹಾರಾಷ್ಟ್ರ ,ವಾಯುವ್ಯದಲ್ಲಿ ಗೋವಾ, ಪೂರ್ವದಲ್ಲಿ ತೆಲಂಗಾಣ & ಆಂಧ್ರಪ್ರದೇಶ, ದಕ್ಷಿಣ ಮತ್ತು ಆಗ್ನೇಯದಲ್ಲಿ ತಮಿಳುನಾಡು, ನೈರುತ್ಯದಲ್ಲಿ ಕೇರಳ ರಾಜ್ಯಗಳನ್ನು ಹೊಂದಿದೆ. ಹೀಗೆ ಕರ್ನಾಟಕವು ಆರು ರಾಜ್ಯಗಳೊಡನೆ ಗಡಿರೇಖೆಗಳನ್ನು ಹೊಂದಿದ್ದು.ಪಶ್ಚಿಮದಲ್ಲಿ ಅರಬ್ಬೀ ಸಮುದ್ರದ ಕರಾವಳಿಯ ಶ್ರೀಮಂತಿಕೆ. ಹೀಗಾಗಿ ಕರ್ನಾಟಕವು “ಪಾರ್ಶ್ವ ತೀರ ಭೌಗೋಳಿಕ ಸ್ಥಾನ” (littoral) ಹೊಂದಿದೆ.

ಕರ್ನಾಟಕ ರಾಜ್ಯ ಪ್ರಸ್ತುತ 31 ಜಿಲ್ಲೆ ,240 ತಾಲೂಕಗಳು, 5958 ಗ್ರಾಮ ಪಂಚಾಯಿತಿಗಳನ್ನು ಹೊಂದಿದ್ದು 23 ಮೆಟ್ರೋ ಪೊಲಿಟಿಯನ್ ನಗರಗಳನ್ನು ಹೊಂದಿದೆ. ಕರ್ನಾಟಕದ ಅಸೀಮ ಭೌಗೋಳಿಕ ವ್ಯಾಪ್ತಿಯಲ್ಲಿ 50 ನದಿಗಳು ,7 ನದಿ ವ್ಯವಸ್ಥೆ ಒಂದು ಜೈವಿಕ ಬಿಸಿ ತಾಣ (Bio hot spot) 20,668 ಚ.ಕಿ.ಮೀ ಯ ಪಶ್ಚಿಮ ಘಟ್ಟದ ವ್ಯಾಪ್ತಿ, 320 ಕಿ.ಮೀ ಕರಾವಳಿ ತೀರ ಹಾಗೂ 5 ಹುಲಿ ತಾಣಗಳ ಜೊತೆ 30 ಕ್ಕೂ ಅಧಿಕ ವನ್ಯಜೀವಿ ತಾಣಗಳನ್ನೊಳಗೊಂಡಿದ್ದು 3 ವಿಶ್ವ ಪಾರಂಪರಿಕ ತಾಣಗಳನ್ನೊಳಗೊಂಡು ನೈಸರ್ಗಿಕವಾಗಿ, ಆರ್ಥಿಕವಾಗಿ ಭಾರತದ ಅತಿ ಶ್ರೀಮಂತ ರಾಜ್ಯವಾಗಿ ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ.

ಇಲ್ಲಿ ಏನಿಲ್ಲ..?  “ಒಂದು ರಾಜ್ಯ ಹಲವು ಜಗತ್ತು” ಎನ್ನುವ ಅಭಿಧಾನ ಕರ್ನಾಟಕಕ್ಕೇ ಸುಮ್ಮನೆ ಸಿಕ್ಕಿದ್ದಲ್ಲಾ. ಆತಿಥ್ಯಕ್ಕೆ ಹೆಸರುವಾಸಿಯಾಗಿರುವ ಕನ್ನಡದ ನೆಲ ಭಾರತದ ,ವಿಶ್ವದ ಯಾವುದೇ ಮೂಲೆಯಿಂದ ಇಲ್ಲಿಗೆ ಬಂದರೆ ಭಾಷೆ, ವರ್ಣ, ತಾರತಮ್ಯ ಮಾಡದೇ ಅವರಲ್ಲಿ ಭೇಧ ಕಾಣದೇ ನಮ್ಮೊಳಗೊಂದಾಗಿ ಆತಿಥ್ಯ ನೀಡುವ ಸಹಿಷ್ಣುಗಳು ಕನ್ನಡಿಗರು. ಸೋಲಿಗರ ಅರಣ್ಯ ಜ್ಞಾನ, ಕೊಡವರ ಹುತ್ತರಿ ಹಬ್ಬ, ಕುಂಡೆ ಹಬ್ಬ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಯಕ್ಷಗಾನ ತೆಂಕುತಿಟ್ಟು , ಬಡಗುತಿಟ್ಟು ಶೈಲಿಗೆ ಮನಸೋಲದವರು ಯಾರು..? ಉತ್ತರ ಕರ್ನಾಟಕದ ಹಿಂದೂ-ಮುಸ್ಲಿಂ ಭಾವೈಕ್ಯದ “ಮೊಹರಂ” ಹಬ್ಬ ನಮ್ಮೊಳಗಿನ ಅಹಂ ಅಳಿಸಿ ಮಾನವೀಯತೆಯ ಒರತೆ ದೀಪವೊಂದನ್ನು ಹಚ್ಚಿಬಿಡುವ ಸೊಗಸಿಗೆ, ಪರಂಪರೆಗೆ ಹಲವು ಶತಮಾನಗಳ ಇತಿಹಾಸವಿದೆ.

ಲಂಬಾಣಿ, ಕರೆ ಒಕ್ಕಲಿಗ, ಸಿದ್ದಿ, ಗೌಳಿ, ಜೇನು ಕುರುಬ, ಕುಣುಬಿ ಬುಡುಕಟ್ಟುಗಳ ಆಚರಣೆ, ವಿಶಿಷ್ಠ ದೈವರಾಧನೆಯ ಪದ್ದತಿಗಳು ಕರ್ನಾಟವೊಂದರಲ್ಲೇ ಅಸಂಖ್ಯ ಸಂಸ್ಕೃತಿ ನಂಬಿಕೆಗಳ ಪರಿಚಯವಾಗಿ ಕರ್ನಾಟಕವನ್ನ ಭಾರತದಲ್ಲೇ ವಿಶಿಷ್ಠ ರಾಜ್ಯವಾಗಿ ಗುರುತಿಸಿಕೊಂಡಿರುವುದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ಸಂಗತಿ.

Advertisement

ಕರ್ನಾಟಕದಲ್ಲಿ ಬೆಳಕಿಗೆ ಬಾರದ ಅಸಂಖ್ಯ ಪ್ರವಾಸಿ ತಾಣಗಳಿವೆ ಅದರಲ್ಲಿ ಹೊನ್ನಾವರ ಬಳಿಯ “ಕಾಳು ಮೆಣಸಿನ ರಾಣಿ ” ಗೇರುಸೊಪ್ಪೆಯ ಚೆನ್ನಾಭೈರಾದೇವಿಯ ಚತುರ್ಮುಖ ಬಸದಿ, ಮಧ್ಯ ಶಿಲಾಯುಗದ ಮಧ್ಯ ಕರ್ನಾಟಕದ ಕೊಪ್ಪಳದ ಕುಬ್ಜ ಮಾನವರ ಹೀರೆಬೆಣಕಲ್ಲಿನ ಕಲ್ಲಿನ ಸಮಾಧಿಗಳು, ನೇತ್ರಾಣಿಯ ಪಾರಿವಾಳ ದ್ವೀಪ (pigeon island) ಸಮುದ್ರ ಮಟ್ಟದಿಂದ ಕರ್ನಾಟಕದ ಅತ್ಯಂತ ತಗ್ಗಾದ ಪ್ರದೇಶ ಸಾಗರದ ಭೀಮೇಶ್ವರ ಕಣಿವೆ. ಜೋಗದ ನಡತ್ತಿಯ ಮೇಲಿನ ಶರಾವತಿ ಕಣಿವೆ, ಅಂಕೋಲಾದ ಕಡಲ ತೀರಗಳು, ಭಾರತದ ಅತಿ ಎತ್ತರದ ಜಲಪಾತ ಜನ ಮಾನಸಕ್ಕೆ ಕಾಣದೇ ಕಗ್ಗಾಡಿನ ನಡುವೆ ಧುಮ್ಮಿಕ್ಕುವ “ಕುಂಚಿಕಲ್” ಸವಣೂರಿನ ಬಾವೋಬಾಬ್ ದೈತ್ಯ ವೃಕ್ಷಗಳು,ವಿಶ್ವ ಪಾರಂಪರಿಕ ತಾಣ ದೇವನಹಳ್ಳಿಯ ಹುಣಸೆ ತೋಪು, ಅಣ್ಣಿಗೇರಿಯ ಚಾಲುಕ್ಯ ಶೈಲಿಯ ಅಮೃತೇಶ್ವರ ದೇವಾಸ್ಥಾನ, ಲಕ್ಕುಂಡಿ, ಹಂಪಿ, ಪಟ್ಟದಕಲ್ಲು ಕರ್ನಾಟಕವನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದೆ.

ಮೇಲೆ ತಿಳಿಸಿದ ಪ್ರವಾಸಿ ತಾಣಗಳು ಜೈವಿಕವಾಗಿ,ಆರ್ಥಿಕವಾಗಿ ಭವಿಷ್ಯದ ದೃಷ್ಠಿಯಿಂದ ಒಂದು ಜನಾಂಗವನ್ನ ಪೊರೆಯುವ ವೈವಿಧ್ಯತೆಯನ್ನು ಜಗತ್ತಿಗೆ ಪರಿಚಯಿಸುವ ಉದಾಹರಣೆಗಳಾಗಿರುವುದರಿಂದ ಸ್ಥಳಿಯ ಆಡಳಿತ,ಸರ್ಕಾರಗಳು ಭವಿಷ್ಯದ ದೃಷ್ಠಿಯಿಂದ ಇವನ್ನು ಕಾಪಾಡಿಕೊಳ್ಳಬೇಕು. ಮುಂದಿನ ಫೀಳಿಗಗೆ ನಮ್ಮ ಇತಿಹಾಸ ಕಳೆದು ಹೋಗದಂತೆ ಸರ್ಕಾರ ನಮಗಮ ಪರಂಪರೆ ಉಳಿಸುವಲ್ಲಿ ಪ್ರತ್ಯೇಕ ನೀತಿ ನಿಯಮಗಳನಗನ ತಂದಿದ್ದೇ ಆದಲ್ಲಿ ಪ್ರತಿವರ್ಷ ವಿಶ್ವ ಪ್ರವಾಸೋದ್ಯಮ ದಿನ ಅರ್ಥಪೂರ್ಣವಾಗುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಕರ್ನಾಟಕದ ಕೆಲವು ವಿಶಿಷ್ಠ ಪ್ರವಾಸಿ ತಾಣಗಳು:-

1) ಕಾಸರಕೋಡು ಬೀಚ್ :-


ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿರುವ ಕಾಸರಕೋಡು ಬೀಚ್ ಕರ್ನಾಟಕದ ಅತ್ಯುತ್ತಮ ಬೀಚ್‌ಗಳಲ್ಲಿ ಒಂದಾಗಿದೆ. ಅತ್ಯುತ್ತಮ ತ್ಯಾಜ್ಯ ನಿರ್ವಹಣೆಯೊಂದಿಗೆ ಕಾಸರಕೋಡು ಮಾದರಿಯಾಗಿದೆ. ಇಲ್ಲಿ ಕಡಲತೀರದಲ್ಲಿ, ನೀವು ಪ್ರಭಾವಶಾಲಿ ಗ್ರೇವಾಟರ್ ಸಂಸ್ಕರಣಾ ಘಟಕಗಳು, ಘನ ತ್ಯಾಜ್ಯ ನಿರ್ವಹಣಾ ಘಟಕಗಳು, ಶುದ್ಧ ಕುಡಿಯುವ ನೀರಿನ ಸೌಲಭ್ಯಗಳು, ಕ್ಲೀನ್ ವಾಶ್ ರೂಂಗಳು ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳನ್ನು ಕಾಣಬಹುದು.

2) ಪಡುಬಿದ್ರಿ ಬೀಚ್ :-
ಪಡುಬಿದ್ರಿ ಬೀಚ್ ಉಡುಪಿ ಜಿಲ್ಲೆಯಲ್ಲಿದೆ ಮತ್ತು ಇದು ಭಾರತದ ಅತ್ಯಂತ ಸುಂದರವಾದ ಬೀಚ್‌ಗಳಲ್ಲಿ ಒಂದಾಗಿದೆ. ಬೀಚ್ ಮ್ಯಾನೇಜ್‌ಮೆಂಟ್ ಸಂದರ್ಶಕರಿಗೆ ಹೆಚ್ಚು ಕಾಳಜಿ ವಹಿಸುತ್ತದೆ, ಅದಕ್ಕಾಗಿಯೇ ಸಂದರ್ಶಕರು ಬೀಚ್ ಪ್ರದೇಶದ ಸುತ್ತಲೂ ನಡೆಯಲು ಬಳಸಬಹುದಾದ ಸರಿಯಾದ ಕಾಲುದಾರಿಗಳು ಇವೆ. ಇದು ಕಸ ರಹಿತ ಬೀಚ್ ಕೂಡ ಆಗಿದೆ.

3) ಹೀರೆಬೆಣಕಲ್ ಗ್ರಾಮ :- 


ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ಹಿನ್ನೆಲೆ ಹೊಂದಿರುವ ‘ಹಿರೇಬೆಣಕಲ್‌ ಶಿಲಾ ಸಮಾಧಿ’ಗಳ ತಾಣ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಅಧಿಕೃತ ಮಾನ್ಯತೆ ಹೊಂದಿದೆ. ಹಿರೇಬೆಣಕಲ್‌ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್‌ ತಾಣವಾಗಿದೆ.

4)ಸೇಂಟ್ ಮೇರಿಸ್ ದ್ವೀಪ:- 


ಸೇಂಟ್ ಮೇರಿಸ್ ದ್ವೀಪ ಅಲ್ಲಿ ನೀವು ಸ್ತಂಭಾಕಾರದ ಬಸಾಲ್ಟಿಕ್ ಲಾವಾ ರಚನೆಗಳನ್ನು ನೋಡಬಹುದು, ಇದು ಆಕಾರದಲ್ಲಿ ಷಡ್ಭುಜವಾಗಿದೆ ಮತ್ತು ಗಾತ್ರ ಮತ್ತು ಎತ್ತರದಲ್ಲಿ ಭಿನ್ನವಾಗಿರುತ್ತದೆ. ಈ ರಚನೆಗಳು 88 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ ಎಂದು ಅಂದಾಜಿಸಲಾಗಿದೆ. ಸೇಂಟ್ ಮೇರಿಸ್ ದ್ವೀಪವು ಉಷ್ಣವಲಯದ ಸ್ವರ್ಗವಾಗಿದ್ದು, ಬಿಳಿ ಮರಳಿನ ಕಡಲತೀರಗಳು, ಸ್ಪಷ್ಟವಾದ ನೀಲಿ ನೀರು ಮತ್ತು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ. ನೀವು ದ್ವೀಪದ ರಮಣೀಯ ಸೌಂದರ್ಯವನ್ನು ಆನಂದಿಸಬಹುದು,

5) ಸಂಡೂರು :-
19ನೇ ಶತಮಾನದ ಉತ್ತರಾರ್ಧದಿಂದ ಭೂವಿಜ್ಞಾನಿಗಳು ಹಾಗೂ ನಿಸರ್ಗ ಪ್ರೇಮಿಗಳು ಸಂಡೂರಿನ ಕಾಡುಗಳಲ್ಲಿ ಅನೇಕ ವಿಸ್ಮಯಗಳ ಶೋಧನೆಯಲ್ಲಿ ತೊಡಗಿದ್ದಾರೆ. ಅವರ ಶೋಧನಾ ಯಾನವು ಈ ಪ್ರದೇಶದ ಜೀವ ವೈವಿಧ್ಯತೆ ಹಾಗೂ ಭೂವೈಜ್ಞಾನಿಕ ಇತಿಹಾಸ ಹಾಗೂ ಆರ್ಥಿಕ ಸಂಭಾವ್ಯಗಳನ್ನು ಅನಾವರಣ ಮಾಡುವುದರಲ್ಲಿ ಕೇಂದ್ರೀಕರಿಸಿತ್ತು. ಸಂಶೋಧನೆಗಳಿಂದಾಗಿ ಇಡೀ ದಕ್ಷಿಣ ಭಾರತದಲ್ಲೇ ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ದೊರೆತ ಆದಿಮಾನವನ ನೆಲೆ ಇದು ಎಂದು ತಿಳಿದುಬಂದಿದೆ.

ಇಂತಹ ಗುಹೆಗಳು ಶ್ರೀಲಂಕಾದಲ್ಲಿ (ಸಮುದ್ರ ಮಟ್ಟಕ್ಕಿಂತ 450 ಮೀಟರ್ ಎತ್ತರ)ದಲ್ಲಿ ಕಂಡು ಬಂದಿದ್ದು, ಅವು 50,000 ವರ್ಷಗಳಷ್ಟು ಹಿಂದೆಯೇ ಆದಿಮಾನವನ ನೆಲೆಯಾಗಿದ್ದು, ಮಳೆಗಾಡುಗಳ ಪರಿಸರದಲ್ಲಿ ಮಾನವ ತನ್ನ ನೆಲೆಯನ್ನು ಸ್ಥಾಪಿಸಿದ ಜಾಣ್ಮೆಯನ್ನು ಸೂಚಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

– ಗಿರಿ ವಾಲ್ಮೀಕಿ, ಅರಣ್ಯ ಮೌಲ್ಯ ಮಾಪನ ವರದಿಗಾರ 

  ಹೂವಿನ ಹಡಗಲಿ

Advertisement

Udayavani is now on Telegram. Click here to join our channel and stay updated with the latest news.

Next