Advertisement

ಮೆದುಳಿನ ಆಘಾತ: ತತ್‌ಕ್ಷಣ  ಚಿಕಿತ್ಸೆ ಪಡೆಯುವುದೇ ಜಾಣತನ

03:33 PM Oct 30, 2021 | Team Udayavani |

ಪ್ರತೀ ವರ್ಷ ವಿಶ್ವದಾದ್ಯಂತ ಅಕ್ಟೋಬರ್‌ 29 ರಂದು ವಿಶ್ವ ಸ್ಟ್ರೋಕ್‌ ದಿನ ಅಥವಾ ವಿಶ್ವ ಪಾರ್ಶ್ವವಾಯು ದಿನ ಎಂದು ಆಚರಿಸಲಾಗುತ್ತದೆ. ಆ ಮೂಲಕ ಮೆದುಳಿನ ಆಘಾತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಆಘಾತ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಸ್ಟ್ರೋಕ್‌ ಎನ್ನುವುದು ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ, ಯಾವುದೇ ಹೊತ್ತಿನಲ್ಲಿ ಸಂಭವಿಸಬಹುದು. ಪ್ರತೀ ನಾಲ್ಕು ಮಂದಿ ವಯಸ್ಕರಲ್ಲಿ ಒಬ್ಬರಿಗೆ ಜೀವನದಲ್ಲಿ ಒಮ್ಮೆಯಾದರೂ ಸ್ಟ್ರೋಕ್‌ ಆಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

Advertisement

ಕಾಯಿಲೆಗಳ ಲೆಕ್ಕಾಚಾರದಲ್ಲಿ ಜಾಗತಿಕವಾಗಿ ತೀವ್ರ ಹೃದಯಾಘಾತ ಹೆಚ್ಚಿನ ಸಂಖ್ಯೆಯಲ್ಲಿ ಮಾನವನ ಸಾವಿಗೆ ಕಾರಣವಾಗುತ್ತಿದ್ದರೆ ಆ ಬಳಿಕದ ಸ್ಥಾನ ಮೆದುಳಿನ ಆಘಾತದ್ದಾಗಿದೆ. ಆದರೆ ಸಮಾಧಾನಕರ ಅಂಶ ಎಂದರೆ ಬಹುತೇಕ ಆಘಾತಗಳಿಗೆ ಚಿಕಿತ್ಸೆ ಇದೆ ಇಲ್ಲವೇ ತಡೆಗಟ್ಟಬಹುದಾಗಿದೆ.

ವಿಶ್ವ ಸ್ಟ್ರೋಕ್‌ ಸಂಸ್ಥೆ( ಡಬ್ಲ್ಯುಎಸ್‌ಒ) 2006ರಲ್ಲಿ ಪ್ರತೀ ವರ್ಷ ಅಕ್ಟೋಬರ್‌ 29ರಂದು ವಿಶ್ವ ಸ್ಟ್ರೋಕ್‌ ದಿನ ಆಚರಿಸುವ ನಿರ್ಧಾರ ಕೈಗೊಂಡಿತು. ಇದಾದ ಬಳಿಕ 2010ರಲ್ಲಿ ಮೆದುಳಿನ ಆಘಾತವನ್ನು “ಜಾಗತಿಕ ಆರೋಗ್ಯ ತುರ್ತು ಸಮಸ್ಯೆ’ ಎಂದು ಡಬ್ಲ್ಯುಎಸ್‌ಒ ಘೋಷಿಸಿದೆ. ಮೆದುಳಿನ ಆಘಾತಕ್ಕೊಳಗಾದ ವ್ಯಕ್ತಿಗೆ ತತ್‌ಕ್ಷಣ ಸೂಕ್ತ ಚಿಕಿತ್ಸೆ ಸಿಗದಿದ್ದಲ್ಲಿ ಆ ವ್ಯಕ್ತಿ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗುತ್ತಾನೆ. ಈ ಕಾರಣದಿಂದಾಗಿ ಶಾಶ್ವತ ಅಂಗವೈಕಲ್ಯ ಉಂಟಾಗುವ ಕಾರಣಗಳಲ್ಲಿ ಮೆದುಳಿನ ಆಘಾತ ಮೊದಲ ಸ್ಥಾನದಲ್ಲಿದೆ.

ಪ್ರತಿ ವರ್ಷ 15 ಮಿಲಿಯನ್‌ ಮಂದಿ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗುತ್ತಾರೆ. ಇವರಲ್ಲಿ ಮೂರನೇ ಒಂದಂಶದಷ್ಟು ಜನರು ಸಾವನ್ನಪ್ಪಿದರೆ ಮೂರನೇ ಒಂದಂಶದಷ್ಟು ಜನರು ಶಾಶ್ವತವಾಗಿ ಅಂಗ ವೈಕಲ್ಯಕ್ಕೆ ತುತ್ತಾಗುತ್ತಾರೆ. ಉಳಿದ ಮೂರನೇ ಒಂದಂಶದಷ್ಟು ಜನರಿಗೆ ಮಾತ್ರ ಸೂಕ್ತ ಚಿಕಿತ್ಸೆ ದೊರಕಿ ಮೊದಲಿನಂತಾಗುವ ಸಾಧ್ಯತೆ ಇರುತ್ತದೆ. ಯಾವುದೇ ವಯಸ್ಸಿನಲ್ಲಿ ಈ ಕಾಯಿಲೆ ಕಾಣಸಿಕೊಳ್ಳಬಹುದಾದರೂ ಸಾಮಾನ್ಯವಾಗಿ 60 ವರ್ಷಗಳ ಅನಂತರವೇ ಹೆಚ್ಚಾಗಿ ಕಾಣಸಿಗುತ್ತದೆ. ಮೆದುಳಿಗೆ ಯಾವುದಾದರೊಂದು ಭಾಗಕ್ಕೆ ರಕ್ತಸಂಚಾರ ನಿಂತು ಹೋಗಿ ಆ ಭಾಗದ ಮೆದುಳು ನಿರ್ಜೀವವಾಗುತ್ತದೆ ಮತ್ತು ಆ ಭಾಗದಿಂದ ನಿಯಂತ್ರಿಸಲ್ಪಡುವ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಇದನ್ನೇ ಮೆದುಳಿನ ಆಘಾತ ಅಥವಾ ಸ್ಟ್ರೋಕ್‌ ಎನ್ನುತ್ತಾರೆ. ಎರಡು ರೀತಿಯ ಸ್ಟ್ರೋಕ್‌ ಇದ್ದು ಮೆದುಳಿನ ರಕ್ತನಾಳಗಳು ಒಡೆದು ಮೆದುಳಿನ ಜೀವಕೋಶಗಳು ನಿರ್ಜೀವವಾಗುವುದನ್ನು “ಹಿಮೋರೇಜಿಕ್‌ ಸ್ಟ್ರೋಕ್‌’ ಎಂದು ಕರೆದರೆ ರಕ್ತ¤ನಾಳಗಳ ಒಳಗೆ ರಕ್ತ ಹೆಪ್ಪುಗಟ್ಟಿ ರಕ್ತ ಪರಿಚಲನೆಗೆ ಅಡ್ಡಿಯಾಗಿ, ಆ ಭಾಗದ ಮೆದುಳಿನ ಜೀವಕೋಶಗಳು ಸಾಯುತ್ತವೆ. ಇದಕ್ಕೆ “ಇಷೆRಮಿಕ್‌ ಸ್ಟ್ರೋಕ್‌’ ಎನ್ನಲಾಗುತ್ತದೆ. ಇದು ಅತೀ ಸಾಮಾನ್ಯ ಮತ್ತು ಹೆಚ್ಚಾಗಿ ಕಾಣಸಿಗುವ ರೋಗವಾಗಿರುತ್ತದೆ.

ಸ್ಟ್ರೋಕ್‌ಗೆ ಕಾರಣಗಳು:

Advertisement

ಆಲ್ಕೋಹಾಲ್‌, ಸಿಗರೆಟ್‌, ಮಾದಕದ್ರವ್ಯ ಸೇವನೆ, ಮಧುಮೇಹ, ರಕ್ತದಲ್ಲಿ ಕೊಬ್ಬಿನ ಅಂಶ ಜಾಸ್ತಿ ಇರುವವರಿಗೆ, ಅಧಿಕ ರಕ್ತದೊತ್ತಡ ಇರುವವರಿಗೆ, ವಂಶ ಪಾರಂಪರ್ಯವಾಗಿ ವಂಶವಾಹಿನಿಗಳಲ್ಲಿಯೂ ಬರುವ ಸಾಧ್ಯತೆ ಇರುತ್ತದೆ. ಇನ್ನು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪೆಡಸುಗೊಂಡ ರಕ್ತನಾಳ ಇರುವವರು, ಸ್ಥೂಲಕಾಯ, ಬೊಜ್ಜು  ಜಾಸ್ತಿ ಇರುವವರಿಗೆ ಮತ್ತು ವಿಲಾಸಿ ಜೀವನಶೈಲಿ ಹೊಂದಿರುವವರು, ದುಡಿಮೆರಹಿತ, ದೈಹಿಕ ಶ್ರಮವಿಲ್ಲದ ಜೀವನಕ್ರಮ, ಅತಿಯಾದ ಮಾನಸಿಕ ಒತ್ತಡ, ಮಾನಸಿಕ ವ್ಯಥೆ ಮತ್ತು ಮಾನಸಿಕ ವ್ಯಾಧಿ, ಕುಡುಗೋಲು ಕಣ ಕಾಯಿಲೆ ಇರುವವರು, ಅತಿಯಾದ ನೋವು ನಿವಾರಕಗಳ ಸೇವನೆ ಹಾಗೂ ಸಮತೋಲಿತ ಆಹಾರ ಸೇವನೆ ಮಾಡದಿರುವುದು ಮತ್ತು ಅತಿಯಾದ ಜಂಕ್‌ ಫ‌ುಡ್‌, ಕರಿದ ಪದಾರ್ಥಗಳ ಸೇವನೆಯ ಚಟವುಳ್ಳವರು ಮೆದುಳಿನ ಆಘಾತಕ್ಕೀಡಾಗುವ ಸಾಧ್ಯತೆಗಳು ಅಧಿಕ.

ಸ್ಟ್ರೋಕ್‌ನ ಲಕ್ಷಣಗಳು :

  1. ಮುಖದ ಒಂದು ಭಾಗದಲ್ಲಿ ನೋವು, ಕೈ, ಕಾಲು, ಎದೆ ಭಾಗದಲ್ಲಿ ನೋವು.
  2. ಕಣ್ಣು ಮಂಜಾಗುವುದು, ವಸ್ತುಗಳು ಎರಡೆರಡಾಗಿ ಕಾಣುವುದು.
  3. ಉಸಿರಾಡಲು ಕಷ್ಟವಾಗುವುದು, ನುಂಗಲು ಕಷ್ಟವಾಗುವುದು.
  4. ವಾಂತಿ, ವಾಕರಿಕೆ ಬಂದಂತಾಗುವುದು, ತಲೆ ತಿರುಗಿದಂತೆ ಭಾಸವಾಗುವುದು.
  5. ಮೈಯಲ್ಲಿ ನಡುಕ.
  6. ದೇಹದ ಸಮತೋಲನ ತಪ್ಪುವುದು, ಕೈಕಾಲುಗಳಲ್ಲಿ ಹೊಂದಾಣಿಕೆ ಇಲ್ಲದಿರುವುದು, ಕಣ್ಣು ಕತ್ತಲು ಬರುವುದು.
  7. ನಡೆದಾಡಲು ಕಷ್ಟವಾಗುವುದು, ಕೈಕಾಲುಗಳು ಮರಗಟ್ಟಿದಂತೆ ಭಾಸವಾಗಬಹುದು.

8 ಮುಖ ಸೊಟ್ಟಗಾಗುವುದು, ಮುಖದಲ್ಲಿನ ಸ್ನಾಯುಗಳ ಮೇಲಿನ ನಿಯಂತ್ರಣ ತಪ್ಪುವುದು, ಒಂದು ಭಾಗದ ಮುಖದಲ್ಲಿ ಸ್ನಾಯುಗಳ ನಿಯಂತ್ರಣ ಕಳೆದುಕೊಂಡು ಸೊಟ್ಟಗಾಗುತ್ತದೆ. ಕೈಕಾಲುಗಳ ನಿಯಂತ್ರಣವೂ ತಪ್ಪುತ್ತದೆ. ಎರಡು ಕೈಗಳನ್ನು ಮೇಲೆತ್ತಲು ಕಷ್ಟವಾಗಬಹುದು. ಅದೇ ರೀತಿ ನಗಲು ಸಾಧ್ಯವಾಗುವುದಿಲ್ಲ.

  1. ತಲೆನೋವು, ಕೆಲವೊಮ್ಮೆ ಕಾರಣವಿಲ್ಲದೆ ಅತಿಯಾದ ತಲೆನೋವು ಕಾಣಿಸಿಕೊಳ್ಳಬಹುದು.
  2. ಏನಾದರೂ ಕೆಲಸದ ಮಧ್ಯದಲ್ಲಿರುವಾಗ ಎಲ್ಲ ಆಲೋಚನೆಗಳು ನಿಷ್ಕ್ರಿಯವಾಗಿ ಏನೂ ತೋಚದಂತಾಗುವುದು, ಯೋಚನಾಶಕ್ತಿ ಕಳೆದುಕೊಳ್ಳುವುದು.
  3. ಮಾತಾನಾಡಲು ಕಷ್ಟವಾಗುವುದು, ತೊದಲುವುದು ಇತ್ಯಾದಿ.
  4. ಅತಿಯಾದ ಸುಸ್ತು ಆಯಾಸ ಮತ್ತು ಭ್ರಾಂತಿಗಳಾಗುವುದು.

ಗುರುತಿಸುವುದು ಹೇಗೆ? :

FAST ಎಂಬ ಶಬ್ದದ ಮುಖಾಂತರ ಸ್ಟ್ರೋಕ್‌ನ್ನು ಗುರುತಿಸಲಾಗುತ್ತದೆ ಮತ್ತು ತತ್‌ಕ್ಷಣವೇ ಸ್ಪಂದಿಸಲಾಗುತ್ತದೆ. F(FACE) ಅಂದರೆ ಮುಖದಲ್ಲಿನ ನಗಲು ಸಾಧ್ಯವಾಗದಿರುವುದು. A(ARMS) ಅಂದರೆ ಎರಡೂ ಕೈಗಳನ್ನು ಮೇಲೆತ್ತಲು ಸಾಧ್ಯವಾಗದಿರುವುದು. S (SPEECH) ಅಂದರೆ ಮಾತನಾಡಲು ಕಷ್ಟವಾಗಿ ತೊದಲುವುದು. T(TIME) ಅಂದರೆ ಕಾಲಹರಣ ಮಾಡದೇ ಕೂಡಲೇ ಆಸ್ಪತ್ರೆಗೆ ಧಾವಿಸುವುದು.

ತಡೆಗಟ್ಟುವುದು ಹೇಗೆ?:

ಶೇ. 80ರಷ್ಟು ಮೆದುಳಿನ ಅಘಾತವನ್ನು ಸಾಕಷ್ಟು ಮುಂಜಾಗೂರುಕತೆ ವಹಿಸಿ ತಡೆಗಟ್ಟಬಹುದು.

  • ಜೀವನ ಶೈಲಿ ಬದಲಾಯಿಸಿಕೊಳ್ಳುವುದು. ಮದ್ಯಪಾನ, ಧೂಮಪಾನ, ಮಾದಕ ದ್ರವ್ಯವನ್ನು ತ್ಯಜಿಸಬೇಕು.
  • ಸೋಮಾರಿ ಜೀವನಶೈಲಿ ಬಿಡಿ. ವಿಲಾಸಿ ಜೀವನಕ್ರಮಕ್ಕೆ ತಿಲಾಂಜಲಿ ಇಡಬೇಕು.ವ್ಯಾಯಾಮ, ದೈಹಿಕ ಕಸರತ್ತು ಇರುವ ಜೀವನಶೈಲಿ ಅಳವಡಿಸಿಕೊಳ್ಳಬೇಕು.
  • ಕರಿದ ಪದಾರ್ಥಗಳನ್ನು ತ್ಯಜಿಸಿ, ಕೊಬ್ಬು ರಹಿತ ಆಹಾರ, ಕಾಳು ಧಾನ್ಯಗಳಿರುವ ಹಸಿ ತರಕಾರಿ, ಹಣ್ಣು ಹಂಪಲು ಜಾಸ್ತಿ ತಿನ್ನಬೇಕು.
  • ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬೇಕು.
  • ಅತಿಯಾದ ಬೊಜ್ಜು, ಸ್ಥೂಲಕಾಯ ಇರಲೇಬಾರದು. BMI ಅಂದರೆ ದೇಹದ ತೂಕದ ಮಾಪನ 25ಕ್ಕಿಂತ ಕಡಿಮೆ ಇರಬೇಕು.
  • ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು.
  • ದಿನಕ್ಕೆ ಅರ್ಧ ಘಂಟೆ ಬಿರುಸು ನಡಿಗೆ ಮತ್ತು ದೈಹಿಕ ಕಸರತ್ತು ಮಾಡಬೇಕು.

ಮೆದುಳಿನ ಆಘಾತ ಬಹಳ ಸುಲಭವಾಗಿ ಗುರುತಿಸ ಬಹುದಾದ ಕಾಯಿಲೆ. ಯಾವತ್ತೂ ಮುನ್ಸೂಚನೆ ಇಲ್ಲದೆ ಈ ರೋಗ ಬರುವುದೇ ಇಲ್ಲ. ತತ್‌ಕ್ಷಣವೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಶೇ. 80 ಮಂದಿಗೆ ಮೊದಲಿನಂತೆ ಜೀವನ ನಡೆಸಬಹುದು. ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುವ ರೋಗ ಇದಾಗಿರುವುದರಿಂದ ತತ್‌ಕ್ಷಣವೇ ಗುರುತಿಸಿ ಚಿಕಿತ್ಸೆ ಪಡೆಯುವುದರಲ್ಲಿಯೇ ಜಾಣತನ ಅಡಗಿದೆ.

-ಡಾ| ಮುರಲೀ ಮೋಹನ್‌ ಚೂಂತಾರು

Advertisement

Udayavani is now on Telegram. Click here to join our channel and stay updated with the latest news.

Next