Advertisement

ವಿಶ್ವ ಜಾಂಬೂರಿ ಸಾಂಸ್ಕೃತಿಕ ಸಿರಿ ಸಂಭ್ರಮದ ಗರಿ; ವಿಶಿಷ್ಟ ಉತ್ಸವಕ್ಕೆ ಸೊಗಸಿನ ಸಮಾಪನ

02:16 AM Dec 27, 2022 | Team Udayavani |

ಮೂಡುಬಿದಿರೆ: ಸಾಂಸ್ಕೃತಿಕ ಕಾರ್ಯಕಲಾಪ, ಸಾಹಸ- ವಿನೋದಾವಳಿಯ ಸಂಗಮ  ವಾಗಿ ಆರು ದಿನಗಳಿಂದ ಆಳ್ವಾಸ್‌ ಆವರಣದ 150 ಎಕ್ರೆ ಪ್ರದೇಶದಲ್ಲಿ ಮೂಡಿಬಂದ “ವಿಶ್ವ ಜಾಂಬೂರಿ’ಯು ವಿಶ್ವದ “ಸಾಂಸ್ಕೃತಿಕ ಚಳವಳಿ’ಗೆ ರಾಜ್ಯದ ಕರಾವಳಿ ಭಾಗದ ಹೊಸ ಅಧ್ಯಾಯ ಸೇರಿದಂತಾಗಿದೆ.

Advertisement

ದೇಶೀಯ ಮಟ್ಟದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿ -ಸಂಭ್ರಮಿಸಿದ ಮೊದಲ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಾಂಬೂರಿ ಇದಾಗಿದೆ. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಆಟೋಟ-ಚಟುವಟಿಕೆಗಳ ವಿಧ್ಯುಕ್ತ ಕಾರ್ಯಕ್ರಮಗಳಿಗೆ ಸೋಮವಾರ ಅಂತಿಮ ತೆರೆ ಎಳೆಯಲಾಯಿತು. ಆದರೆ ಪಂಚ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಂಗಳವಾರ ರಾತ್ರಿಯವರೆಗೂ ನಡೆಯಲಿವೆ. ಚಿಕ್ಕಮಗಳೂರಿನ ವಿದ್ಯಾರ್ಥಿ ಕಿಶೋರ್‌ರ ಪ್ರಕಾರ “ಬಹು ಕನಸು ಗಳೊಂದಿಗೆ ಇಲ್ಲಿಗೆ ಆಗಮಿಸಿದ್ದೆವು. ಆದರೆ ನಮ್ಮ ನಿರೀಕ್ಷೆಗಿಂತ ಹೆಚ್ಚು ಕನಸುಗಳನ್ನು ಇಲ್ಲಿ ಬಿತ್ತಿತು. ಎಲ್ಲವೂ ವಿನೂತನ ಅನುಭವ. ವಿಸ್ಮಯವೆನಿಸಿತು’ ಎನ್ನುತ್ತಾರೆ.

ಎಲ್ಲವೂ ದಾಖಲೆ!
ಆವರಣದಲ್ಲಿ ಸೃಷ್ಟಿಸಲಾಗಿದ್ದ “ಅರಣ್ಯ’ದಲ್ಲಿ ನಿತ್ಯವೂ 25 ಸಾವಿರ ಮಂದಿ ಸಂಚರಿಸಿದ್ದಾರೆ. ಸುಮಾರು 2 ಕೋ.ರೂ ವೆಚ್ಚದಲ್ಲಿ ನಿರ್ಮಿಸಲಾದ “ಪುಷ್ಪ ಪ್ರದರ್ಶನ’ ಎಲ್ಲರ ಮೆಚ್ಚುಗೆ ಗಳಿಸಿತು. 3.5 ಎಕ್ರೆಯ ಕೃಷಿ ಮೇಳದಲ್ಲಿ 84 ವಿಧದ ತರಕಾರಿಗಳು, ಸಿರಿಧಾನ್ಯ, 550 ವಿಧದ ಭತ್ತದ ತಳಿಗಳ ಪ್ರದರ್ಶನ, 450 ಕೃಷಿ ಮಳಿಗೆಗಳು ಗಮನಸೆಳೆದವು. ಸರಾಸರಿ 15 ಸಾವಿ ರಕ್ಕೂ ಹೆಚ್ಚು ಜನರು ನಿತ್ಯವೂ ವಿಜ್ಞಾನ ಮೇಳಕ್ಕೆ ಆಗಮಿಸಿದ್ದರು. ಆಂಧ್ರ, ಕೇರಳ ಸಹಿತ ವಿವಿಧ ರಾಜ್ಯಗಳ 1 ಸಾವಿರಕ್ಕೂ ಅಧಿಕ ವಿಜ್ಞಾನ ಮಾದರಿಗಳು ಪ್ರದರ್ಶಿತವಾದವು. ಆಳ್ವಾಸ್‌ನ 12 ಕಿ.ಮೀ. ವ್ಯಾಪ್ತಿಯಲ್ಲಿ ವಿದ್ಯುದ್ದೀಪಗಳನ್ನು ಅಳವಡಿಸಿ ಜೈನಕಾಶಿಗೆ ಮೆರುಗು ನೀಡಲಾಗಿತ್ತು.

8 ಆ್ಯಂಬುಲೆನ್ಸ್‌, 3 ಆರೋಗ್ಯ ಕೇಂದ್ರಗಳು, 5 ತುರ್ತು ಚಿಕಿತ್ಸಾ ಘಟಕಗಳಲ್ಲಿ ಉಚಿತ ಚಿಕಿತ್ಸೆ ಹಾಗೂ ಔಷಧದ ವ್ಯವಸ್ಥೆ ಮಾಡಲಾಗಿತ್ತು. ಚಿತ್ರಸಂತೆಯಲ್ಲಿ 400ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ ನಡೆಯಿತು.

ದೇಶ ವಿದೇಶದ 10 ಮಂದಿ
ಛಾಯಾಚಿತ್ರಗ್ರಾಹಕರು ಭಾಗವಹಿಸಿ ದ್ದರು. 50ಕ್ಕೂ ಅಧಿಕ ಪುಸ್ತಕ ಮಳಿಗೆಯಲ್ಲಿ 50 ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದವು. 150 ಆಹಾರ ಮಳಿಗೆ, 100 ಸ್ವದೇಶಿ ಮಳಿಗೆಗಳಿದ್ದವು. 2 ಸಾವಿರ ಆಳ್ವಾಸ್‌ನ ಹಾಗೂ 2 ಸಾವಿರ ಸ್ಕೌಟ್ಸ್‌, ಗೈಡ್ಸ್‌ನ ಸ್ವಯಂಸೇವಕರು ಪಾಲ್ಗೊಂಡಿದ್ದರು. 10 ವೇದಿಕೆಗಳಿದ್ದವು. 2400 ಜನರು ಕುಳಿತುಕೊಳ್ಳಬಹುದಾದ ಗ್ಯಾಲರಿ (ಮುಖ್ಯ ವೇದಿಕೆ) ಹಾಗೂ 60 ಸಾವಿರ ಕುರ್ಚಿಗಳು ಬಳಕೆಯಾಗಿವೆ. ಎಲ್ಲವೂ ಹೊಸ ದಾಖಲೆ!

Advertisement

ವಸತಿ ಬಹುವಿಧ!
48,570 ವಿದ್ಯಾರ್ಥಿಗಳಿಗೆ 27 ವಸತಿ ನಿಲಯಗಳಲ್ಲಿ ವಸತಿ ವ್ಯವಸ್ಥೆಮಾಡಲಾಗಿತ್ತು. ಕಲಾವಿದರಿಗೆ ಸ್ಥಳೀಯವಾಗಿ 380 ರೂಂ ವ್ಯವಸ್ಥೆ, 2 ಸಾವಿರ ಸಿಬಂದಿಗೆ ಜಿ.ವಿ. ಪೈ ಹಾಸ್ಟೆಲ್‌ನಲ್ಲಿ ಹಾಗೂ 6 ಪಿಜಿ, 10 ಗೆಸ್ಟ್‌ ಹೌಸ್‌ಗಳಲ್ಲಿ ವಸತಿ ಹಾಗೂ ಹೊರದೇಶದ ಪ್ರತಿನಿಧಿಗಳಿಗೆ ಗೆಸ್ಟ್‌ಹೌಸ್‌ ಹಾಗೂ ಆಳ್ವಾಸ್‌ ಶೋಭಾವನದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.

ಎಲ್ಲವೂ ಸ್ವತ್ಛ-ಸುಂದರ!
ಆಳ್ವಾಸ್‌ ಕ್ಯಾಂಪಸ್‌ನಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಸ್ವತ್ಛತೆ, ಶಿಸ್ತು ಹಾಗೂ ಸಮಯ ಪಾಲನೆಗೆ ಆದ್ಯತೆ. ಈ ಮೂರು ಅಂಶಗಳ ಮೂಲಕವೇ ಡಾ| ಎಂ. ಮೋಹನ ಆಳ್ವ ಅವರು ಗುರುತಿಸಿಕೊಂಡಿದ್ದಾರೆ. ವಿಶ್ವ ಜಾಂಬೂರಿಗೆ ವಿಶೇಷ ಮಾರ್ಗದರ್ಶನ ನೀಡಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಡಾ| ಆಳ್ವ ಅವರು. ದೇಶ-ವಿದೇಶದ ಜನ ಭಾಗವಹಿಸಿದ್ದರೂ ಎಲ್ಲೂ ಈ ಮೂರು ಅಂಶಗಳಿಗೆ ಕೊರತೆಯಾಗಲಿಲ್ಲ. ಇದರಲ್ಲಿ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಪದಾಧಿಕಾರಿಗಳ-ವಿದ್ಯಾರ್ಥಿಗಳ ಹಲವು ತಿಂಗಳ ಶ್ರಮ ಉಲ್ಲೇಖನೀಯ. ಆಳ್ವಾಸ್‌ ಸಹಿತ ವಿವಿಧ ಶಾಲೆ-ಕಾಲೇಜಿನ, ಸಂಘ ಸಂಸ್ಥೆಗಳ ಪಾತ್ರ ಕೂಡ ಹಿರಿದು.

 

Advertisement

Udayavani is now on Telegram. Click here to join our channel and stay updated with the latest news.

Next