Advertisement

ಇಂದು ವಿಶ್ವ ಗುಲಾಬಿ ದಿನ; ಕ್ಯಾನ್ಸರ್‌ ರೋಗಿಗಳಿಗಿರಲಿ  ನಮ್ಮೆಲ್ಲರ ಪ್ರೀತಿಯ ಹಾರೈಕೆ

01:29 PM Sep 22, 2021 | Team Udayavani |

ಮನುಕುಲ ವನ್ನು ಕಾಡುವ ಮಾರಣಾಂತಿಕ ಕಾಯಿಲೆಯಾಗಿರುವ ಕ್ಯಾನ್ಸರ್‌ಗೆ ತುತ್ತಾಗಿರುವವರು ಪಡುವ ಬವಣೆ ಅಷ್ಟಿಷ್ಟಲ್ಲ. ಅವರನ್ನು ಅತೀವವಾಗಿ ಕಾಡುವ ನೋವು, ಅವರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅನುಸರಿಸಲಾಗುವ ಬಲು ಕಠಿನ ವಿಧಾನಗಳು, ನೀಡಲಾಗುವ ಔಷಧಗಳು..ಇವೆಲ್ಲವೂ ಕ್ಯಾನ್ಸರ್‌ ಪೀಡಿತರ ಬದುಕನ್ನು ಜರ್ಝರಿತಗೊಳಿಸುತ್ತವೆ. ಇಂಥವರ ಜೀವನದಲ್ಲಿ ಉಲ್ಲಾಸ, ಭರವಸೆಯನ್ನು ಮೂಡಿಸಲು ಪ್ರತೀ ವರ್ಷ ಸೆ. 22ರಂದು ವಿಶ್ವ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ.

Advertisement

ಗುಲಾಬಿ ಬಳಕೆ ಸಾಂಕೇತಿಕ :

ಗುಲಾಬಿ ಅರಳಿದಾಗ ಅದು ಎಷ್ಟೊಂದು ಸುಮಧರ, ಸುಂದರವಾಗಿ ಕಾಣಿಸುತ್ತದೆ. ಆದರೆ ಇಂಥ ಹೂವು ಅರಳುವುದು ಮುಳ್ಳುಗಳಿಂದ ಕೂಡಿದ ಗಿಡದಲ್ಲಿ. ಗುಲಾಬಿ ಹೂವನ್ನು ಕಂಡಾಗ ಯಾರ ಮನಸ್ಸು ಅರಳದೇ ಇರಲಾರದು. ಈ ಕಾರಣದಿಂದಾಗಿಯೇ ಗುಲಾಬಿ ಪ್ರೀತಿಯ ಸಂಕೇತ. ನಮ್ಮ ಪ್ರೀತಿಪಾತ್ರರಿಗೆ ನಮ್ಮ ಪ್ರೀತಿ, ಕಾಳಜಿಯನ್ನು ತೋರಿಸಲು ನಾವು ಕಂಡುಕೊಂಡಿರುವ ಅತ್ಯಂತ ಸುಲಭ ಆದರೆ ಅಷ್ಟೇ ಶಕ್ತಿಯುತ ಮಾರ್ಗವೆಂದರೆ ಅವರಿಗೊಂದು ಗುಲಾಬಿ ಹೂ ನೀಡುವುದು. ಇದು ತೀರಾ ಸರಳ ಎಂದೆನಿಸಿದರೂ ಈ ಕೊಡುಗೆಯ ಹಿಂದೆ ಅಪಾರ ಪ್ರೀತಿ, ಕಾಳಜಿ ಅಡಗಿರುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಈ ಕಾರಣಕ್ಕಾಗಿಯೇ ಕ್ಯಾನ್ಸರ್‌ ರೋಗಿಗಳ ಬಾಳಲ್ಲಿ ನವೋಲ್ಲಾಸ ಮೂಡಿಸುವ ಮತ್ತು ಕ್ಯಾನ್ಸರ್‌ ಕಾಯಿಲೆಯ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವಾಗಿ “ವಿಶ್ವ ಗುಲಾಬಿ ದಿನ’ವನ್ನು ಆಚರಿಸಲಾಗುತ್ತದೆ.

ಆಚರಣೆ ಹೇಗೆ? :

ಈ ದಿನದಂದು ಕ್ಯಾನ್ಸರ್‌ ರೋಗಿಗಳಿಗೆ ಗುಲಾಬಿ ಹೂವನ್ನಿತ್ತು ಅವರ ಬಗೆಗೆ ಕಾಳಜಿ, ಪ್ರೀತಿ ತೋರಿಸುವ ಮೂಲಕ ಅವರಲ್ಲಿ ಜೀವನೋಲ್ಲಾಸ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಇದರ ಜತೆಯಲ್ಲಿ ಮಾರಕ ಕ್ಯಾನ್ಸರ್‌ ಕಾಯಿಲೆಯ ಬಗೆಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಈ ದಿನದಂದು ಕ್ಯಾನ್ಸರ್‌ ರೋಗಿಗಳೊಂದಿಗೆ ಒಂದಿಷ್ಟು ಹೊತ್ತು ಬೆರೆಯುವ ಮೂಲಕ  ರೋಗದ ವಿರುದ್ಧ ಹೋರಾಡಲು ಅವರಲ್ಲಿ ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಧೈರ್ಯ, ಸ್ಥೈರ್ಯ ತುಂಬಲಾಗುತ್ತದೆ. ಈ ಎಲ್ಲ ಚಟುವಟಿಕೆಗಳು ಸಹಜವಾಗಿ ರೋಗದಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಕ್ಯಾನ್ಸರ್‌ ಪೀಡಿತರ ಮನಸ್ಸಿನಲ್ಲಿ ಶಾಂತಿ, ನೆಮ್ಮದಿಯನ್ನು ಮೂಡಿಸುತ್ತದೆ. ಸಹಜವಾಗಿಯೇ ಇದು ಅವರ ಜೀವಿತಾವಧಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.

Advertisement

ಹಿನ್ನೋಟ :

ಕೆನಡಾದ 12 ವರ್ಷದ ಬಾಲಕಿ ಮೆಲಿಂಡಾ ರೋಸ್‌ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಳು. ಕಾಯಿಲೆಯ ಅಂತಿಮ ಹಂತದಲ್ಲಿದ್ದ ಆಕೆ ಇನ್ನು ಹೆಚ್ಚು ದಿನ ಬದುಕುಳಿಯಲಾರಳು ಎಂದು ಆಕೆಯನ್ನು ಪರೀಕ್ಷಿಸಿದ ವೈದ್ಯರು ಕೈಚೆಲ್ಲಿದ್ದರು. ಇದರ ಹೊರತಾಗಿಯೂ ಎದೆಗುಂದದ ಮೆಲಿಂಡಾ ಆರು ತಿಂಗಳುಗಳ ಕಾಲ ಅತ್ಯಂತ  ಸಂತಸದಿಂದ ತನ್ನ ಜೀವನವನ್ನು ಕಳೆದಳು. ಈ ಅವಧಿಯಲ್ಲಿ ಆಕೆ ಸಾವಿರಾರು ಕ್ಯಾನ್ಸರ್‌ ರೋಗಿಗಳನ್ನು ಭೇಟಿಯಾಗಿ ಅವರಲ್ಲಿ ಹೊಸ ಆಶಾವಾದ ಮತ್ತು ಸಂತಸವನ್ನು ಮೂಡಿಸುವಲ್ಲಿ ಯಶಸ್ವಿಯಾದಳು. ಇಂಥ ದಿಟ್ಟ ಬಾಲಕಿ ಮೆಲಿಂಡಾ ರೋಸ್‌ಳ ಸ್ಮರಣಾರ್ಥ ಪ್ರತೀ ವರ್ಷ ಸೆ. 22ರಂದು ವಿಶ್ವ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ.

ಜನಜಾಗೃತಿ ಅವಶ್ಯ :

ಕ್ಯಾನ್ಸರ್‌ ಕಾಯಿಲೆ ಬಗ್ಗೆ ಜನರಿಗೆ ಇನ್ನೂ ಸೂಕ್ತ ಅರಿವು ಮೂಡಿಲ್ಲ. ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್‌ ಅನ್ನು ಪತ್ತೆ ಹಚ್ಚಿ ಸಮರ್ಪಕ ಚಿಕಿತ್ಸೆ ಪಡೆದುಕೊಂಡದ್ದೇ ಆದಲ್ಲಿ ಪ್ರಾಣಹಾನಿಯನ್ನು ತಪ್ಪಿಸಬಹುದಾಗಿದೆ. ಸೂಕ್ತ ಔಷಧ ಮತ್ತು ಚಿಕಿತ್ಸಾ ವಿಧಾನದಿಂದ ಕ್ಯಾನ್ಸರ್‌ ಪೀಡಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಇದನ್ನು ಜನರಿಗೆ ತಿಳಿಹೇಳುವ ಕೆಲಸವಾಗಬೇಕಿದೆ. ಕ್ಯಾನ್ಸರ್‌ ಎಂದಾಕ್ಷಣ ಭಯಭೀತರಾಗದೇ ಲಭ್ಯವಿರುವ ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಂಡು ಅದರ ವಿರುದ್ಧ ಹೋರಾಡುವ ಛಲವನ್ನು ಬೆಳೆಸಿಕೊಳ್ಳುವಂತೆ ಕ್ಯಾನ್ಸರ್‌ ಪೀಡಿತರಿಗೆ ಮನವರಿಕೆ ಮಾಡಿಕೊಡಬೇಕಿದೆ. ಅಷ್ಟು ಮಾತ್ರವಲ್ಲದೆ ಕ್ಯಾನ್ಸರ್‌ ಪೀಡಿತರ ಕುಟುಂಬಗಳಲ್ಲಿಯೂ ಧೈರ್ಯ ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುವ ಕೆಲಸ ಸಮಾಜದಿಂದಾಗಬೇಕಿದೆ. ಇವೆಲ್ಲವೂ ಸಾಧ್ಯವಾದಲ್ಲಿ ಕ್ಯಾನ್ಸರ್‌ ರೋಗಿಗಳು ಮತ್ತವರ ಕುಟುಂಬ ಮಾನಸಿಕ ಮತ್ತು ಭಾವನಾತ್ಮಕ ತುಮುಲದಿಂದ ಹೊರಬಂದು ಸಹಜ ಜೀವನ ನಡೆಸಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next