Advertisement

ಮಾನವೀಯತೆಯಿಂದ ಶಾಂತಿ ಕಡೆಗೆ

12:28 AM May 08, 2021 | Team Udayavani |

ವಿಶ್ವ ರೆಡ್‌ ಕ್ರಾಸ್‌ ಸಂಸ್ಥೆಯನ್ನು ಹುಟ್ಟು ಹಾಕಿದ ಮಹಾನ್‌ ವ್ಯಕ್ತಿ ಹೆನ್ರಿ ಡ್ಯೂನಾಂಟ್‌ ಅವರ ಜನ್ಮ ದಿನವಾದ ಮೇ 8ರಂದು ಜಗತ್ತಿನಾದ್ಯಂತ “ವಿಶ್ವ ರೆಡ್‌ ಕ್ರಾಸ್‌ ದಿನ’ ಎಂದು ಆಚರಿಸಲಾಗುತ್ತದೆ. ರೆಡ್‌ ಕ್ರಾಸ್‌ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಸೇವಾ ಸಂಘಟನೆಯಾಗಿ ಯುದ್ಧ ಮತ್ತು ಶಾಂತಿಕಾಲದಲ್ಲಿ ನಿರಂತರವಾಗಿ ಶಾಂತಿ ಪ್ರಕ್ರಿಯೆಗಳು, ಆರೋಗ್ಯ ಸೇವೆ ಹಾಗೂ ಇನ್ನಿತರ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.

Advertisement

ಭಾರತದಲ್ಲಿ 1920ರಲ್ಲಿ ಮತ್ತು ಕರ್ನಾಟಕದಲ್ಲಿ 1921ರಲ್ಲಿ ರೆಡ್‌ ಕ್ರಾಸ್‌ ಸಂಸ್ಥೆ ಹುಟ್ಟಿಕೊಂಡಿತು. ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯು ಅತ್ಯಂತ ಬೃಹತ್‌ ಹಾಗೂ ಮಾನವೀಯ ಸೇವಾ ಸಂಘಟನೆಯಾಗಿದೆ. ಈ ಸಂಸ್ಥೆಯು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗುವುದರ ಜತೆಯಲ್ಲಿ ಆರೋಗ್ಯ ಸೇವೆ, ರಕ್ತದಾನ ಮತ್ತಿತರ ಸೇವಾ ಕಾರ್ಯಗಳನ್ನು ನಡೆಸುವುದರ ಮೂಲಕ ಸಮಾಜಸೇವೆಯಲ್ಲಿ ತನ್ನದೇ ಆದ ಮಹತ್ತರ ಪಾತ್ರವನ್ನು ನಿರ್ವಹಿಸುತ್ತ ಬಂದಿದೆ.

ರೆಡ್‌ ಕ್ರಾಸ್‌ ಸಂಸ್ಥೆಯ ಉಗಮ :

ರೆಡ್‌ ಕ್ರಾಸ್‌ ಸಂಸ್ಥೆಯ ಉಗಮ ಮಾನವನ ಇತಿಹಾಸದಲ್ಲಿ ಒಂದು ಕುತೂಹಲಕಾರಿ ಅಧ್ಯಾಯ. ಜೂನ್‌ 1859ರ 24 ರಂದು ನಡೆದ ಅಮಾನ ವೀಯ, ಭೀಕರ ಯುದ್ಧ ರೆಡ್‌ ಕ್ರಾಸ್‌ ಉದಯಕ್ಕೆ ಕಾರಣವಾಯಿತು. ಒಂದೆಡೆ ಫ್ರಾನ್ಸ್‌ ಮತ್ತು ಇಟಲಿಯ ಸಂಯುಕ್ತ ಸೈನ್ಯ, ಇನ್ನೊಂದೆಡೆ ಆಸ್ಟ್ರಿಯಾ ಸೈನ್ಯ ಹೀಗೆ ಮೂರು ಲಕ್ಷಕ್ಕೂ ಅಧಿಕ ಸೈನಿಕರು ಈ ಘೋರ ಕದನದಲ್ಲಿ ಪರಸ್ಪರ ಕಾದಾಟ ನಡೆಸುತ್ತಿದ್ದರು. 1859ರ ಜೂನ್‌ 24 ರಂದು “ಸಲ್ಫರಿನೊ’ದಲ್ಲಿ ಈ ಯುದ್ಧ 15 ಗಂಟೆಗಳ ಕಾಲ ನಡೆದಿತ್ತು. ಯುದ್ಧ ಮುಗಿದಾಗ ರಣರಂಗದ ತುಂಬಾ ಸತ್ತ ಹಾಗೂ ಗಾಯಗೊಂಡ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆ ದಿನಗಳಲ್ಲಿ ಆಸ್ಪತ್ರೆಗಳು ಹಾಗೂ ವೈದ್ಯರ ಸಂಖ್ಯೆ ಬಹಳ ವಿರಳವಾಗಿತ್ತು. ಸ್ವಿಟ್ಸರ್ಲೆಂಡ್‌ ದೇಶದ ವ್ಯಾಪಾರಿ ಹೆನ್ರಿಡ್ಯೂನಾಂಟ್‌ ಯುದ್ಧರಂಗದ ಬಳಿ ಹಾದು ಹೋಗುತ್ತಿದ್ದಾಗ ಈ ಭಯಾನಕ ರಣರಂಗದ ರಕ್ತದೋಕುಳಿ, ಯೋಧರ ನೋವು, ಕಿರುಚಾಟ ಕಂಡು ಮಮ್ಮಲ ಮರುಗಿದನು. ಸೂರ್ಯ ಮುಳುಗುವ ಹೊತ್ತಲ್ಲಿ ಅಲ್ಲಿ ಬಂದಿದ್ದ ಡ್ನೂನಾಂಟ್‌ ಮರುದಿನ ಸೂರ್ಯ ಉದಯಿಸುವವರೆಗೆ “ಸ್ಥಳೀಯ ಗ್ರಾಮ ಸ್ಥರ ಸಹಕಾರ ಪಡೆದು ಗಾಯಾಳುಗಳನ್ನು ಎತ್ತಿನ ಗಾಡಿಗಳಲ್ಲಿ ಕ್ರಾಸ್ಟೆಗ್ಲಿಯನ್‌ ಪ್ರದೇಶಕ್ಕೆ ಸಾಗಿಸಿದನು. ಇವರನ್ನು ಸ್ಥಳೀಯ ನಿವಾಸಿಗಳ ಮನೆ, ಚರ್ಚ್‌ ಗಳು, ಆಶ್ರಮಗಳು, ಮಸೀದಿಗಳು ಮತ್ತು ಸೇನಾ ಸ್ಥಳಗಳಲ್ಲಿ ಇರಿಸಿ ಉಪಚರಿಸಿದನು.

ಹೆನ್ರಿ ಡ್ನೂನಾಂಟ್‌ ಒಬ್ಬ ಪಕ್ಕಾ ವ್ಯಾಪಾರಿ. ಆದರೆ ಮಾನವೀಯತೆಯ ಮುಂದೆ ಆತನ ವ್ಯಾಪಾರ ಬುದ್ಧಿ ಮಂಕಾಗಿತ್ತು. ಅಲ್ಜೀರಿಯಾದಲ್ಲಿ ಕಾರ್ನ್ ಮಿಲ್‌ಗ‌ಳನ್ನು ಪ್ರಾರಂಭಿಸಲು ಅನುಮತಿ ಪಡೆಯಲು ನೆಪೋಲಿಯನ್‌ ದೊರೆಯನ್ನು ಕಾಣಲು ಬಂದಿದ್ದನು. ತಾನು ನಡೆಯುತ್ತಾ ಇದ್ದ ದಾರಿಯಲ್ಲಿನ ರಣರಂಗದ ಮರಣಾಂತಿಕ ದೃಶ್ಯವನ್ನು ಕಂಡು ಅರೆಕ್ಷಣ ಸ್ತಬ್ಧನಾದನು. ಆ ಸೈನಿಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಪೂರಕವಾಗಿ ಸ್ವಯಂಸೇವಕ ತಂಡವನ್ನು ರಚಿಸಿ ಎಲ್ಲ ದೇಶಗಳ ಗಾಯಾಳುಗಳನ್ನು ಉಪಚರಿಸಿ ಮಾನವೀಯತೆಯನ್ನು ಮೆರೆದನು.

Advertisement

ಕಾಲಚಕ್ರ ಉರುಳುತ್ತಿತ್ತು, ಜನ ಎಲ್ಲವನ್ನೂ ಮರೆತರೂ ಹೆನ್ರಿ ಡ್ಯೂನಾಂಟ್‌ ಕನಸಲ್ಲೂ ಯುದ್ಧದ ದೃಶ್ಯಗಳನ್ನು ಕಂಡು ಬೆಚ್ಚಿ ಬೀಳುತ್ತಿದ್ದ. ಯುದ್ಧದ ಭೀಕರತೆ ಹೆನ್ರಿಯ ಮನದಲ್ಲಿ ಆಳವಾಗಿ ಬೇರೂರಿತ್ತು. ಇದಕ್ಕೊಂದು ಶಾಶ್ವತ ಪರಿಹಾರ ಪಡೆಯಲೇಬೇಕೆಂಬ ದೃಢ ಚಿತ್ತದಿಂದ ಕಾರ್ಯಪ್ರವೃತ್ತನಾದ. ಯುದ್ಧಕಾಲದಲ್ಲಿ ಮನುಕುಲ ಎದುರಿಸುವ ಭಯಂಕರ ಯಾತನೆಯನ್ನು ತಪ್ಪಿಸಲು ಹೆನ್ರಿ ಡ್ನೂನಾಂಟ್‌ “ದಿ ಮೆಮರಿ ಆಫ್ ಸಲ್ಫರಿನೊ’ಎಂಬ ಪುಸ್ತಕವನ್ನು ಪ್ರಕಟಿಸಿ, ಅದರ ಪ್ರತಿಗಳನ್ನು ವಿಶ್ವಾದ್ಯಂತ ಹಂಚಿದ. ಆ ಪುಸ್ತಕದಲ್ಲಿ ಯುದ್ಧ ಕಾಲದಲ್ಲಿ ಮಾನವೀಯತೆಯನ್ನು ಮೆರೆಯಲು ಎರಡು ಕಾರ್ಯಸೂಚಿಯನ್ನು ಜಾರಿಗೆ ತರಬೇಕೆಂದು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಕರೆ ನೀಡಿದ. ಆ ಎರಡು ಅಂಶಗಳೆಂದರೆ; ಮೊದಲನೆಯದು ಅಂತಾರಾಷ್ಟ್ರೀಯ ಸ್ವಯಂಸೇವಕರ ಸಂಘಟನೆಯನ್ನು ಎಲ್ಲ ರಾಷ್ಟ್ರಗಳಲ್ಲೂ ಸ್ಥಾಪಿಸಬೇಕು. ಈ ತಂಡವು ಯುದ್ಧ ಮುಕ್ತಾಯವಾದ ಬಳಿಕ ಅಲ್ಲಿನ ಗಾಯಾಳುಗಳನ್ನು ಅವರ ಜಾತಿ, ಮತ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಗಮನಿಸದೇ ಉಪಚರಿಸಬೇಕು ಹಾಗೂ ಎರಡನೆಯದು ಗಾಯಾಳು ಸೈನಿಕರನ್ನು ಉಪಚರಿಸಲು ಸಾಧ್ಯವಾಗಿಸಲು ರಾಷ್ಟ್ರಗಳು ಗಾಯಾಳು ಸೈನಿಕರನ್ನು, ವೈದ್ಯರನ್ನು ಹಾಗೂ ಇತರ ಸಹಾಯಕರನ್ನು ತಟಸ್ಥರೆಂದು, ಯಾವ ಪಕ್ಷಕ್ಕೂ ಸೇರದವರೆಂದು ಘೋಷಿಸಿ, ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಬೇಕು ಎಂಬುದಾಗಿತ್ತು.

ಈ ಪುಸ್ತಕವನ್ನು ಓದಿದ ಬಳಿಕ ಜಿನೇವಾದ ಸಮಾಜಕಲ್ಯಾಣ ಸಂಸ್ಥೆಯೊಂದು 5 ಮಂದಿಯ ಒಂದು ಸಮಿತಿಯನ್ನು ರಚಿಸಿ, ಹೆನ್ರಿ ಡ್ಯೂನಾಂಟ್‌ ಅವರನ್ನು ಸಮಿತಿಯ ಕಾರ್ಯದರ್ಶಿಯಾಗಿ ನೇಮಕ ಮಾಡಿತು. 1863ರ ಅಕ್ಟೋಬರ್‌ 26 ರಂದು ಜಿನೆವಾದಲ್ಲಿ ನಡೆದ 16 ರಾಷ್ಟ್ರಗಳ ವಿವಿಧ ಆಮಂತ್ರಿತರು ಪಾಲ್ಗೊಂಡಿದ್ದ ಅಂತಾರಾಷ್ಟೀಯ ಸಮ್ಮೇಳನದಲ್ಲಿ “ಗಾಯಗೊಂಡ ಸೈನಿಕರ ಸಹಕಾರ ಸಂಸ್ಥೆ’ ಎಂಬ ಹೆಸರಿನ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲು ತೀರ್ಮಾನಿಸಲಾಯಿತು. ಮುಂದೆ ಇದೇ ಸಂಸ್ಥೆ “ರೆಡ್‌ ಕ್ರಾಸ್‌ ಸಂಸ್ಥೆ’ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. 1901ರಲ್ಲಿ ಹೆನ್ರಿ ಡ್ನೂನಾಂಟ್‌ಗೆ ವಿಶ್ವದ ಅತ್ಯುನ್ನತ ಗೌರವವಾದ “ನೊಬೆಲ್‌ ಶಾಂತಿ ಪುರಸ್ಕಾರ’ ಲಭಿಸಿತು. ತನ್ನ ಜೀವನದ ಕೊನೇಕ್ಷಣದಲ್ಲಿ ಕೂಡ ಹೆನ್ರಿ ಡ್ಯೂನಾಂಟ್‌ ಬಡರೋಗಿಗಳ ಸೇವೆ ಮಾಡುತ್ತಾ ಆಸ್ಪತ್ರೆಯಲ್ಲಿಯೇ ಇದ್ದರು. 1910ರ ಅಕ್ಟೋಬರ್‌ 30ರಂದು ಹೆನ್ರಿಡ್ಯೂನಾಂಟ್‌ ಹ್ರೆಡನ್‌ ನಗರದಲ್ಲಿ ನಿಧನ ಹೊಂದಿದರು.

ರೆಡ್‌ ಕ್ರಾಸ್‌ ಸಂಸ್ಥೆ  ಮೂಲತಣ್ತೀಗಳು :

“ಮಾನವೀಯತೆಯಿಂದ ಶಾಂತಿಯ ಕಡೆಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಣೆ ನಡೆಸುವ ರೆಡ್‌ ಕ್ರಾಸ್‌ ಸಂಸ್ಥೆಯ ಮೂಲತಣ್ತೀಗಳು ಮಾನವೀ ಯತೆ, ನಿಷ್ಪಕ್ಷಪಾತ, ತಟಸ್ಥ, ಸ್ವಾತಂತ್ರ್ಯ, ಸ್ವಯಂಸೇವೆ, ಏಕತೆ, ಮತ್ತು ವಿಶ್ವ ಸಮಗ್ರತೆಯಾಗಿವೆ.

ರೆಡ್‌ ಕ್ರಾಸ್‌ ಲಾಂಛನ :

ಬಿಳಿ ಹಿನ್ನಲೆಯಲ್ಲಿ ಕೆಂಪು ಕ್ರಾಸ್‌ ಹೊಂದಿದ ಲಾಂಛನ ರೆಡ್‌ ಕ್ರಾಸ್‌ ಸಂಸ್ಥೆಯ ಸಂಕೇತ ಚಿಹ್ನೆ. ಕ್ರಾಸ್‌ನ ಎಲ್ಲ ಬಾಹುಗಳೂ ಪರಸ್ಪರ ಸಮವಾಗಿವೆ. ಈ ಚಿಹ್ನೆಯನ್ನು ಯುದ್ಧ ತಟಸ್ಥ ಸಂಕೇತವೆಂದು ಸಾರ್ವತ್ರಿ ಕವಾಗಿ ಗುರುತಿಸಲಾಗುತ್ತದೆ. ವೈದ್ಯಕೀಯ ಸೇವೆಗಾಗಿ ಬಳಸುವ ಉಪಕರಣಗಳ ಮೇಲೆ ಮತ್ತು ಧ್ವಜದ ಮೇಲೆ ಈ ಲಾಂಛನವನ್ನು ಬಳಸಬಹುದಾಗಿದೆ.

“ಜನತೆಯಿಂದ ಜನತೆಗೆ ನೆರವು’ ಎಂಬ ಧ್ಯೇಯದೊಂದಿಗೆ “ರೆಡ್‌ ಕ್ರಾಸ್‌’ ಸಂಸ್ಥೆ ತನ್ನ ಸೇವಾ ಕಾರ್ಯಗಳಿಂದ ಜಾಗತಿಕ ಆಶಾಕಿರಣವಾಗಿ ಹೊರಹೊಮ್ಮಿದೆ. ರೆಡ್‌ ಕ್ರಾಸ್‌ ಸಂಸ್ಥೆ ನಿರಂತರವಾಗಿ ಶಾಂತಿ ಪ್ರಕ್ರಿಯೆ ಮತ್ತು ಸೇವಾ ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದ್ದು ವಿಶ್ವಶಾಂತಿಗೆ ಮುನ್ನುಡಿ ಬರೆಯುತ್ತಿದೆ. ವಿಶ್ವ ರೆಡ್‌ ಕ್ರಾಸ್‌ ದಿನದಂದು ನಾವೆಲ್ಲ ವಿಶ್ವ ಭಾತೃತ್ವ ಮತ್ತು ವಿಶ್ವ ಶಾಂತಿಯ  ಸಂದೇಶವನ್ನು ಜಗತ್ತಿಗೆ ಸಾರಿದಲ್ಲಿ ಅದುವೇ ನಾವು ಹೆನ್ರಿ ಡ್ನೂನಾಂಟ್‌ ಎಂಬ ಆ ಮಹಾನ್‌ ಜೇತನಕ್ಕೆ ನೀಡುವ ಬಹುದೊಡ್ಡ ಗೌರವ.

ಪ್ರತಿಯೊಬ್ಬ ನಾಗರಿಕನೂ ತನ್ನ ಜೀವನ ಶೈಲಿಯನ್ನು ಪುನರ್‌ ವಿಮರ್ಶಿಸಿ, ಸಮಾಜದಲ್ಲಿ ನೊಂದವರ, ರೋಗಿಗಳ, ದುರ್ಬಲ ವರ್ಗದವರ ಮತ್ತು ಶೋಷಿತರ ಸೇವೆಗೆ ಸಮರ್ಪಿಸಿಕೊಳ್ಳುವ ಒಂದು ಸುದಿನ ಎಂದರೂ ತಪ್ಪಲ್ಲ.

 

ಡಾ| ಮುರಲಿ ಮೋಹನ್‌ ಚೂಂತಾರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next