Advertisement

ಅಮ್ಮ ಬಂದರೆ,ಏನೋ ಹರುಷವು

09:09 AM May 12, 2019 | Vishnu Das |

ಅಮ್ಮ ಎಂದರೆ ಮೈಮನವೆಲ್ಲ ಹೂವಾಗುವುದಮ್ಮಾ… ಎನ್ನುವ ಹಾಡಿದೆ. ಹುಟ್ಟೂರನ್ನು ತೊರೆದು, ಬೆಂಗಳೂರು ಗೂಡು ಸೇರಿದ ಮಕ್ಕಳು, ಅಮ್ಮ ಇಲ್ಲಿಗೆ ಬಂದಾಗ ಅಕ್ಷರಶಃ ಹೂವಾಗುತ್ತಾರೆ. ಹಾಗೆ ಘಮಗುಟ್ಟಿದ ಹೂಗಳೇ ಇಲ್ಲಿ ನಿಮ್ಮ ಮುಂದೆ ಅರಳಿನಿಂತಿವೆ. “ಎಂದು ಬರುವಳು ಅಮ್ಮ?’- ಎನ್ನುವ ಇವರ ಕಾತರಿಕೆ ತಣಿದಾಗ ಆಗುವ ಅಪಾರ ಖುಷಿ, ಅಮ್ಮ ಜತೆಗಿದ್ದಷ್ಟೂ ದಿನ ಮೈಮನ ಹೊಕ್ಕಿ ಕೂರುವ ವಿಸ್ಮಯದ ನಲಿವು ಇಲ್ಲಿ ಕಾಣುತಿದೆ. ನಾಳೆ ವಿಶ್ವ ಅಮ್ಮಂದಿರ ದಿನ. ದೂರದಿಂದಲೇ ಅಮ್ಮನ ನೆನೆವ ಸಿಹಿಧ್ಯಾನ…

Advertisement

ಮೆಟ್ರೋ ಅವಳ ಪಾಲಿಗೆ ಪುಷ್ಪಕ ವಿಮಾನ


ಮೊದಲಿಗೆ ಎಸ್ಕಲೇಟರ್‌ ಹತ್ತಲು ತಯಾರಾಗದೆ ಮೆಟ್ಟಿಲುಗಳ ಹುಡುಕಿದ್ದ ಅಮ್ಮ, “ಒಮ್ಮೆ ಹತ್ತಿದ ನಂತರ ಮಜಾ ಆಗು¤’ ಅಂದಿದ್ದಳು. ಇನ್ನು ಅತ್ತೆ ಬಂದಾಗಲಂತೂ ಅಮ್ಮ ಅತ್ತೆ ಇಬ್ಬರೂ ಎಸ್ಕಲೇಟರನ್ನು ಹತ್ತಿ ಇಳಿದು ಸಂಭ್ರಮಿಸಿದ್ದನ್ನು ಮರೆಯಲಾರೆ. ಮೆಟ್ರೋ ಅಂತೂ ಅವಳಿಗೆ ಯಾವತ್ತೂ ಅಚ್ಚರಿ! ಅದು ಎಲ್ಲಿ ಹೋಗಿ ಎಲ್ಲಿ ಬರುತ್ತೆ ಅನ್ನೋದೇ ಅವಳಿಗೆ ಗೊಂದಲವಂತೆ. ಟಿಕೇಟಿನ ಬಿಲ್ಲೆ ಕಳೆದರೆ ಎಕ್ಸಿಟ್‌ ಗೇಟ್‌ ಓಪನ್‌ ಆಗೋದಿಲ್ಲ ಎಂಬ ಭಯಕ್ಕೆ ಟ್ರೇನ್‌ ಇಳಿಯುವವರೆಗೂ ಆ ಬಿಲ್ಲೆ ಇದೆಯೋ ಇಲ್ಲವೋ ಅಂತ ನೋಡುತ್ತಲೇ ಕೂತಿದ್ದಿದೆ ಅವಳು. ಕೈ ಚಾಚಿದರೆ ಸಾಕು ನೀರು ಬರುವ ನಲ್ಲಿ, ಕೈ ಒಣಗಿಸುವ ಮಷೀನು, ಸರಿಯಾಗಿ ಮನೆ ಮುಟ್ಟಿಸುವ ಕ್ಯಾಬುಗಳು, ಮನೆ ಬಾಗಿಲಿಗೆ ಪಾನಿಪುರಿ ತಂದುಕೊಡುವ ಹುಡುಗ- ಒಟ್ಟಿನಲ್ಲಿ ಈ ಅಚ್ಚರಿಯ ಮಾಯಾನಗರಿಗೆ ಎಷ್ಟೇಸಲ ಬಂದರೂ ಪ್ರತಿಸಲವೂ ಹೊಸದೇನೋ ಇರುತ್ತದೆ ಅಂತಾಳೆ.
– ಚೈತ್ರಿಕಾ ಹೆಗಡೆ ಕಂಚೀಮನೆ
ಅಮ್ಮ: ಅಂಬಿಕಾ ಹೆಗಡೆ ಕಂಚೀಮನೆ
ಸ್ಪಾಟ್‌: ಲಾಲ್‌ಬಾಗ್‌

ಅಮ್ಮ ಬದಳಂದ್ರೆ, ಊರೇ ಬಂತು..!

ಅಮ್ಮ ಬೆಂಗಳೂರಿಗೆ ಬಂದಳು ಅಂದ್ರೆ, ಊರೇ ಬಂದಾಗೆ ಆಗುತ್ತೆ. ಪತ್ರೊಡೆ, ಹಲಸಿನ ಕಾಯಿ, ಹಪ್ಪಳ, ಸಂಡಿಗೆ ಎಲ್ಲವೂ ಅವಳ ಜತೆಗೇ ಬಂದು, ಅಡುಗೆ ಮನೇಲಿ ಹೋಗಿ ಕೂರುತ್ತೆ. ಅವಳು ಇಲ್ಲಿಗೆ ಬಂದಾಗ ಮೊದಲು ನೋಡೋದೇ ನನ್ನನ್ನು… “ದಪ್ಪಗಾಗಿದ್ದೀನಾ, ಸಪೂರ ಆಗಿದ್ದೀನಾ’ ಅಂತ. ಅಪ್ಪಿತಪ್ಪಿ ಸಪೂರ ಆಗಿದ್ರೆ, ಈ ಬೆಂಗ್ಳೂರಿನ ಹವಾನೇ ಹೀಗೆ ಅನ್ನೋ ಡೈಲಾಗ್‌ ಬರುತ್ತೆ. ಅಮ್ಮನ ಜತೆಗೆ ಬೆಂಗಳೂರು ನೋಡೋ ಸೊಬಗೇ ಬೇರೆ. ವಿಧಾನಸೌಧದ ಮುಂದೆ ಅವಳ ಕಿರುಬೆರಳು ಹಿಡಿದು ನಿಂತಾಗ, ಈ ಸುಖಕ್ಕಿಂತ ಬೇರೇನೂ ಬೇಕಿಲ್ಲ ಅನ್ನೋ ಫೀಲು. ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ಅವಳೂರಿನ ಕಾಡುಗಳಿಗೆ ಹೋಲಿಕೆ ಅಲ್ಲದಿದ್ದರೂ, ಈ ಬೆಂಗಳೂರಿನಲ್ಲಿ ಇದಿರೋದೇ ಹೆಚ್ಚು ಅನ್ನೋದೂ ಅವಳಿಗೆ ಗೊತ್ತು. ಮತ್ತೆ ಬಾ ಅಮ್ಮ…

Advertisement

– ಅಶ್ವಿ‌ತಾ ಸಂತೋಷ್‌
ಅಮ್ಮ: ಬೇಬಿ
ಸ್ಪಾಟ್‌: ವಿಧಾನಸೌಧ

ಯಾವನೇ ಅವ್ನು ಪುಣ್ಯಾತ್ಮ ಹಿಂಗ್‌ ಕಟ್ಸವ್ನೇ!


ಜಗತ್ತಿನ ಬೆರಗಿಗಿಂತ ಅವ್ಳು ಜಗವ ನೋಡಿ ಬೆರಗಾಗುವ ಪರಿಯೇ ಬೆರಗು! ಓರಿಯನ್‌ ಮಾಲ್‌ಗೆ ಎಂಟ್ರಿ ಆದ್‌ ತಕ್ಷಣ ಮೊದಲನೇ ಪ್ರಶ್ನೆ “ಉಯ್ಯು ಉಯ್ಯು… ಯಾವನೇ ಅವ್ನು ಪುಣ್ಯಾತ್ಮ ಹಿಂಗ್‌ ಕಟ್ಸವ್ನೇ ! ಹ್ಮ್ ನ್ಯಾಯ್ವಾ ಗಿರೋ ದುಡ್ಡಲ್ಲಿ ಹಿಂಗೆಲ್ಲ ಕಟ್ಟಕ್‌ ಆಗಲ್ಲ ಬುಡು’ ಅಂದ್ರು ಅಮ್ಮ. ನಮ್‌ ಕಡೆನೇ ನೋಡಿದ ಸೆಕ್ಯೂರಿಟಿ! “ಮೋವ್‌ ಸುಮ್ನೆ ಬಾರಮ್ಮ ನೀನು’ ಅಂತ ಒಳ್ಗ್‌ ಕರ್ಕೊಂಡ್‌ ಹೋದೆ. “ಅಲ್ಲ ಕಣೇ, ಇಲ್‌ ಇಷ್ಟ್‌ ಅಂಗಡಿ ಇಟ್ಟೋರಲ್ಲ ವ್ಯಾಪಾರ ಆಗುತ್ತ? ಎಲ್ಲಿ ಅಂತ ತಗೋತಾರೆ, ಎಲ್ಲಿ ಅಂತ ಬಿಡ್ತಾರೆ? ಬೆಂಗ್ಳೂರ್‌ ಜನ ಎಲ್ಲ ಇಲ್ಲೇ ಅವ್ರ ಲ್ಲೇ ‘ ಅಂದಳು. “ಸ್ವಲ್ಪ ಮುಂದೆ ಹೋದ್ರೆ ಎಲಿವೇಟರ್‌! ಹೆಜ್ಜೆ ಇಡಲೂ ನಡುಕ! ಕೊನೆಗೆ ಲಿಫ್ಟ್ನ ಆಸರೆ! ಒಳ್ಗಡೆ ಪಿವಿಆರ್‌ಗೆ ಹತ್ತು ನಿಮ್ಗೆ ಬೇಗ ಹೋದ್ವಿ! ಖಾಲಿ ಇರೋ ಹಿಂದಿನ ಸೀಟ್‌ ನೋಡಿ, “ಬಾರೆ ಅಲ್‌ ಖಾಲಿ ಅದೆ… ಅಲ್‌ ಹೋಗೋಣಾ! ದೂರಕ್‌ ಚೆನ್ನಾಗ್‌ ಕಾಣುತ್ತೆ’ ಅಂದ್ರು! ನಾಲ್ಕ… ಜನ ಹಿಂದೆ ತಿರುಗಲು ಅಮ್ಮನಿಗ್‌ ಅರ್ಥ ಆಯ್ತು, ಏನೋ ಎಡ್ವಟ್‌ ಮಾಡೆª ಅಂತ!
– ನಂದಿನಿ ನಂಜಪ್ಪ
ಅಮ್ಮ: ಶೈಲಜಾ
ಸ್ಪಾಟ್‌: ಒರಿಯನ್‌ ಮಾಲ್‌

50 ಕೊಡ ನೀರೆತ್ತುವ ಅಮ್ಮನಿಗೆ, ನಲ್ಲಿ ಬಿಡಲಾಗಲಿಲ್ಲ…


ಆಗ ತಾನೇ ಡಿಗ್ರಿ ಮುಗಿಸಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿಗೆ ಹೆಚ್ಚಿನ ಓದಿಗೆ ಸೇರಿ¨ªೆ. ಪಿ.ಜಿ. ಹುಡುಕಲು ಅಮ್ಮ ಊರಿಂದ ಬಂದು ಜೊತೆಗೂಡಿದ್ದಳು. ಶಿವಾನಂದ ವೃತ್ತದಿಂದ ಹುಡುಕಾಟ ಪ್ರಾರಂಭಿಸಿದ ನಮಗೆ ಮಲ್ಲೇಶ್ವರಂ ಮುಟ್ಟುವಷ್ಟರಲ್ಲಿ ಸಾಕೋ ಬೇಕಾಗಿತ್ತು. ಬೆಂಗಳೂರಿಗೆ ಹೊಸದಾಗಿ ಬಂದವರಿಗೆ ಲಾಲ್‌ಬಾಗ್‌, ಮ್ಯೂಸಿಯಮ…, ಇಸ್ಕಾನ್‌ ತೋರಿಸೋ ಕಾಲ ಮುಗಿದು ಮಾಲ್‌ಗ‌ಳನ್ನು ಸುತ್ತಿಸಿ ಊರಿಗೆ ಕಳುಹಿಸುವ ಪದ್ಧತಿ ಬಂದಾಗಿತ್ತು. ನಾವೂ ಅಲ್ಲೇ ಬಳಿಯ ಮಂತ್ರಿ ಮಾಲ್‌ ಹೊಕ್ಕೆವು. ಊಟದ ಹೊತ್ತಾಗಿದ್ದರೂ ಅಲ್ಲಿನ ದುಬಾರಿ ಬೆಲೆಗೆ ಹೆದರಿ ಚೂರುಪಾರು ತಿಂದ ಶಾಸ್ತ್ರ ಮುಗಿಸಿದೆವು. ಕೈ ತೊಳೆಯಲು ಹೋದಾಗ ಅಲ್ಲಿನ ನಲ್ಲಿಯ ರೂಪಕ್ಕೆ ನನ್ನಮ್ಮ ಬೇಸ್ತು ಬಿದ್ದಿದ್ದಳು. ನೀರು ಬರಲು ನಲ್ಲಿ ತಿರುಗಿಸುವ ಭಾಗವೇ ಇಲ್ಲ! ಇದ್ಯಾವ ಸೀಮೆ ನೀರುಬಾರದ ನಲ್ಲಿ ಎಂದುಕೊಂಡ ಅಮ್ಮ, ಅದನ್ನೇ ಅತ್ತಿತ್ತ ತಿರುಪಿಯೂ ನೋಡಿದಳು. ಊಹೂ, ನೀರು ಮಾತ್ರ ಬರುತ್ತಿಲ್ಲ. ನನ್ನ ಕರೆದು, “ಇದೆಂಥದೇ ಇದು, ಅರಮನೆಯಂಥ ಅಂಗಡಿಯಲ್ಲಿ ನೀರಿನ ನಲ್ಲಿಯೇ ಕೆಟ್ಟು ಹೋಯ್ದು’ ಎಂದಳು. ಸ್ವಯಂಚಾಲಿತ ನಲ್ಲಿಯ ಸ್ವರೂಪ ಅಮ್ಮನಿಗೆ ಗೊತ್ತಿರಲಿಲ್ಲ. ಆಮೇಲೆ ನಾನು ಕೈತೊಳೆದು ತೋರಿಸಿದ ಮೇಲೆಯೇ ಆಕೆಗೆ ತಿಳಿದಿದ್ದು. ಊರಲ್ಲಿ ಬಾವಿಯಿಂದ ದಿನಕ್ಕೆ 40-50 ಕೊಡಪಾನ ನೀರೆತ್ತುವ ಅಮ್ಮನಿಗೆ ಒಂದು ನಲ್ಲಿಯಲ್ಲಿ ನೀರು ಬಿಡಲಾಗದೆ ಹೋಯಿತಲ್ಲ ಎಂದು ದಿನವಿಡೀ ನಕ್ಕೆವು!
– ಶ್ವೇತಾ ಆಡುಕಳ
ಅಮ್ಮ:ಶೈಲಾ
ಸ್ಪಾಟ್‌: ಕಬ್ಬನ್‌ ಪಾರ್ಕ್‌

ಈ ಜನ ಅರಮನೇಲೂ ಮದ್ವೆ ಇಟ್ಕೋತಾರಾ?

ನಾನು ಮತ್ತು ಅಣ್ಣ, ಇಬ್ಬರೂ ಇಲ್ಲಿರುವುದರಿಂದ ಯಾವಾಗಲಾದರೊಮ್ಮೆ ನಮ್ಮನ್ನು ನೋಡೋಕೆ ಅಂತ ಅಮ್ಮ ಊರಿಂದ ಬರುತ್ತಾಳೆ. ಬಂದ ಎರಡೇ ದಿನದಲ್ಲಿ ಅವರಿಗೆ ಏನೋ ಚಡಪಡಿಕೆ, ಭಯಂಕರ ಒಂಟಿತನ ಶುರು. ಮನೆಯಿಂದ ಹೊರಗೆ ಕಾಲಿಡಲೂ ಭಯ. ಇಲ್ಲಿನವರ ಭಾಷೆ, ವೇಷ-ಭೂಷಣವೂ ಅಮ್ಮನಿಗೆ ವಿಚಿತ್ರ ಅನ್ನಿಸುತ್ತದಂತೆ. “ಅದೆಂಥ ಆ ಥರ ಬಟ್ಟೆ ಹಾಕ್ಕೊಂಡು ಹೊರಗೆಲ್ಲ ತಿರುಗಾಡ್ತಾರೆ?’ ಅಂತ ಹೇಳಿದ್ದು ಈಗಲೂ ನೆನಪಿದೆ.

ಒಮ್ಮೆ ಅಪ್ಪ-ಅಮ್ಮ ಬಂದಾಗ, ಬೆಂಗಳೂರು ಅರಮನೆ ತೋರಿಸೋಕೆ ಕರಕೊಂಡು ಹೋಗಿದ್ದೆ. ಅವತ್ತು ಅಲ್ಲಿ ಯಾವುದೋ ವಿಐಪಿ ಮದುವೆ ನಡೆಯುತ್ತಿದೆ ಎಂಬ ಕಾರಣಕ್ಕೆ ನಮ್ಮನ್ನು ಒಳಗೆ ಬಿಡಲಿಲ್ಲ. “ಜನ ಅರಮನೆಯೊಳಗೂ ಮದುವೆ ಇಟ್ಕೊàತಾರಾ?’- ಅಮ್ಮನಿಗೆ ಮತ್ತೂಂದು ಅಚ್ಚರಿ. ಕೊನೆಗೆ ನಾವೆಲ್ಲಾ ಅರಮನೆಗೆ ಹೊರಭಾಗ ನಿಂತು ಫೋಟೊ ತೆಗೆಸಿಕೊಂಡು, ಮೆಟ್ರೋ, ವಿಧಾನಸೌಧ ಅಂತೆಲ್ಲ ಸುತ್ತಾಡಿ, ರಾತ್ರಿ ಊಟಕ್ಕೆ “ಜಲಪಾನ್‌’ ಹೋಟೆಲ್‌ಗೆ ಹೋದೆವು. ಭರ್ಜರಿ ಊಟವಾದ ನಂತರ ಬಂದ ಬಿಲ್‌ 5 ಸಾವಿರ ರೂ. ಮುಟ್ಟಿತ್ತು. ಅಮ್ಮನಿಗೆ ಫ‌ುಲ್‌ ಗಾಬರಿ. ಲೆಕ್ಕ ಸರಿಯಿದೆಯಾ ಅಂತ ಎರಡೆರಡು ಬಾರಿ ಕೇಳಿ, ಖಾತ್ರಿಮಾಡಿಕೊಂಡಳು. “ಮನೆಯ ರೇಷನ್ನೇ ತಿಂಗಳಿಗೆ 5 ಸಾವಿರ ದಾಟೋಲ್ಲ. ಇಲ್ಲಿ ಒಂದು ಹೊತ್ತಿಗೇ ಅಷ್ಟು ಖರ್ಚು ಮಾಡಿದೆವಲ್ಲಾ’ ಅಂತ ಆಕೆಗೆ ಸಂಕಟ. “ಅಲ್ಲಿ ತಿಂದಿದ್ದರಲ್ಲಿ ಅಂಥ ಸ್ಪೆಷಲ್‌ ಏನಿತ್ತು?’ ಅಂತ ಇವತ್ತಿಗೂ ಕೇಳ್ತಿರ್ತಾಳೆ.

– ನಟರಾಜ ವಿ.ಎಸ್‌.,
ಅಮ್ಮ: ಗಾಯತ್ರಿ ಮೂರ್ತಿ

ಚಪ್ಪಲಿ ಕಳಚಿ, ವಿಧಾನಸೌಧಕ್ಕೆ ಕೈಮುಗಿದಳು!


ಕೆಲಸಕ್ಕೆ ಸೇರಿ ಒಂದು ವರ್ಷದ ನಂತರ ಮೊದಲ ಬಾರಿಗೆ ಅಮ್ಮನ್ನು ಬೆಂಗಳೂರಿಗೆ ಕರಕೊಂಡು ಬಂದಿದ್ದೆ. ಇಲ್ಲಿನ ಗಜಿಬಿಜಿ ಜೀವನ, ಮೆಜೆಸ್ಟಿಕ್‌ ಎಂಬ ಸಂತೆ, ಬಿಎಂಟಿಸಿ ಬಸ್ಸಿನ ಪ್ರಯಾಣ- ಅಮ್ಮನಿಗೆ ಯಾವುದೋ ಹೊಸ ಪ್ರಪಂಚಕ್ಕೆ ಒಯ್ದಿದ್ದವು. “ಇಲ್ಲಿನ ಜೀವನ ನಮ್ಮೂರಿನಷ್ಟು ಸುಲಭ ಅಲ್ಲ ಅಲ್ವಾ?’ ಅಂತ ಮತ್ತೆ ಮತ್ತೆ ನನ್ನ ಮುಖವನ್ನೇ ನೋಡುತ್ತಿದ್ದಳು. ಬೆಂಗಳೂರಿನ ದರ್ಶನ ಮಾಡಿಸಲು ಅಮ್ಮನನ್ನು ಮೊದಲ ಬಾರಿಗೆ ವಿಧಾನಸೌಧಕ್ಕೆ ಕರಕೊಂಡು ಹೋಗಿ¨ªೆ. ಅಮ್ಮನದು ಮಗುವಿನ ಮುಗ್ಧತೆ. ಅಷ್ಟು ದೊಡ್ಡ ಕಟ್ಟಡವನ್ನು ನೋಡಿ, ಮೂಗಿನ ಮೇಲೆ ಬೆರಳಿಟ್ಟರು. ಕಾಲಿಗೆ ಹಾಕಿದ ಚಪ್ಪಲಿಯನ್ನು ಕಳಚಿ, ವಿಧಾನಸೌಧಕ್ಕೆ ಕೈ ಮುಗಿದು ನಮಸ್ಕರಿಸಿದರು. “ಕಲ್ಲು- ಮಣ್ಣು- ಕಟ್ಟಡಗಳಲ್ಲೂ ಜೀವವಿದೆ’ ಎಂದು ನಂಬಿದವರು ನನ್ನಮ್ಮ. ಇಲ್ಲಿಯ ಜೀವನ ಶೈಲಿಯನ್ನೊಂದು ಬಿಟ್ಟು ಅಮ್ಮನಿಗೆ ಬೆಂಗಳೂರು ಇಷ್ಟವಾಗಿತ್ತು.
– ದೊಡ್ಡಮನಿ ಎಂ. ಮಂಜು
ಅಮ್ಮ: ಡಿ. ಜಯಮ್ಮ
ಸ್ಪಾಟ್‌: ವಿಧಾನಸೌಧ

ಈ ಚಿಟ್ಟೇನಾ ಗುಲಾಬಿ ಹೂವಿನಿಂದ್ಲೇ ಮಾಡಿದ್ದಾ?


ಮನೆಯ ಹಿತ್ತಲಿನ ಹೂವುಗಳೇ ದೊಡ್ಡ ಉದ್ಯಾನವೆಂದು ತಿಳಿದಿದ್ದ ನನ್ನಮ್ಮನಿಗೆ ಲಾಲ್‌ಬಾಗ್‌, ಸ್ವರ್ಗದಂತೆ ಕಂಡಿತ್ತು. ಗಾಜಿನ ಮನೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಫ‌ಲಪುಷ್ಪ ಪ್ರದರ್ಶನದ ರಂಗುಗಳು ಅವಳ ಕಣ್ಣೊಳಗೆ ಇನ್ನೂ ಇವೆ. “ಮಗಾ, ಈ ಚಿಟ್ಟೇನಾ ನಿಜವಾಗ್ಲೂ ಗುಲಾಬಿ ಹೂವಿನಿಂದ್ಲೇ ಮಾಡಿದ್ದಾ?’ ಅಂತ ಕೇಳ್ಳೋವಾಗ, ನಾನು ಭಾವುಕಳಾಗಿದ್ದೆ. “ಹೂ ಅಂದರೂ ಆಕೆಗೆ ನಂಬಿಕೆ ಬರಲಿಲ್ಲ. ಕೊನೆಗೆ ಅದನ್ನು ಮುಟ್ಟಿ ನೋಡಿ, ನಿಜವಾದ ಹೂವೇ ಅಂತ ಖಚಿತಪಡಿಸಿಕೊಂಡಳು. ಅದೇ ಸಸ್ಯಕಾಶಿಯಲ್ಲಿ ನಿರ್ಮಿಸಿದ್ದ, ಸಿಯಾಚಿನ್‌ ಪ್ರದೇಶದ ಪ್ರತಿರೂಪ ಅವಳಿಗೆ ಒಂದು ಅಚ್ಚರಿ. ಭತ್ತದಲ್ಲೇ ಮಾಡಿದ್ದ ಸೈನಿಕರ ಫೋಟೊ, ಹೂವಲ್ಲಿ ಮಾಡಿದ್ದ ಹೆಲಿಕಾಪ್ಟರ್‌, ಕ್ಯಾಮೆರಾ… ಒಂದಾ, ಎರಡಾ? ನಮ್ಮಮ್ಮನ್ನು ಈ ಮಾಯಾನಗರಿ ಮೋಡಿ ಮಾಡೋಕೆ.
– ಆಶಾ ವಿ.ಎಂ.
ಅಮ್ಮ: ನಂಜಮ್ಮ
ಸ್ಪಾಟ್‌: ಲಾಲ್‌ಬಾಗ್‌

ಟ್ರಾಫಿಕ್‌ನಲ್ಲೇ ತರಕಾರಿ ಕತ್ತರಿಸಬಹುದಲ್ವೇ?


ನನಗೆ ಕೆಲಸ ಸಿಕ್ಕಿದ ಖುಷಿಯಲ್ಲಿ ಅಮ್ಮ, ಬೆಂಗಳೂರಿಗೆ ಓಡೋಡಿ ಬಂದಿದ್ದರು. ಅವತ್ತು 2014ರ ಏಪ್ರಿಲ್‌ 14. ಆಫೀಸ್‌ನಲ್ಲಿ ನನ್ನ ಮೊದಲ ದಿನ. ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಅಡುಗೆ ಮನೆಯಿಂದ ಘಮಘಮ ಪರಿಮಳ. ಅಮ್ಮ ಅವತ್ತು ನನಗೋಸ್ಕರ ಜಾಮೂನು ಮಾಡಿದ್ದರು. ಅವಳಿದ್ದಾ ಟಿಫಿನ್‌ ಬಾಕ್ಸ್‌ನ ತಲೆನೋವೇ ಇರುತ್ತಿರಲಿಲ್ಲ.
ನಾನು, ಅಮ್ಮ- ಅಪ್ಪ, ಯಲಹಂಕದಲ್ಲಿ ನಡೆದ ಏರ್‌ಶೋಗೆ ಹೋಗಿದ್ವಿ. ಬೆಳಗ್ಗೆ 6.30ಕ್ಕೆ ಕ್ಯಾಬ್‌ ಬುಕ್‌ ಮಾಡಿ ಮನೆಯಿಂದ ಹೊರಟರೂ, ಅಲ್ಲಿಗೆ ಹೋಗಿ ತಲುಪಿದ್ದು 9.30ಕ್ಕೆ! ಆ ಟ್ರಾಫಿಕ್‌ ನೋಡಿ, ಅಮ್ಮನಿಗೆ ಮಂಡೆ ಬಿಸಿ ಆಗಿತ್ತು. “ಸಂಜೆ ಕೆಲಸ ಮುಗಿಸಿ ಮನೆಗೆ ಬರೋವಾಗ ಬಸ್ಸಿನಲ್ಲೇ ತರಕಾರಿ ಕ್ಲೀನ್‌ ಮಾಡಿ, ಕತ್ತರಿಸಿ, ಆರಾಮಾಗಿ ಮನೆ ತಲುಪಬಹುದು. ಮನೆಗೆ ಹೋಗಿ ಅಡುಗೆ ಮಾಡಿದರಾಯ್ತು. ಟ್ರಾಫಿಕ್‌ ಅನ್ನೂ ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು’ ಅಂತ ತಮಾಷೆ ಮಾಡಿದ್ದಳು.
– ಕಾವ್ಯಶ್ರೀ ಮಂಜುನಾಥ್‌
ಅಮ್ಮ: ಸುಧಾಬಾಯಿ
ಸ್ಪಾಟ್‌: ಏರ್‌ಶೋ ಫೀಲ್ಡ್‌, ಎಚ್‌ಎಎಲ್‌

ಅಮ್ಮನ ಚಿಟ್ಟೆ ಹಿಡಿವ ಸಾಹಸ

ನನ್ನ ಅಮ್ಮ, ಮಲೆನಾಡ ಸೊಬಗನ್ನೆಲ್ಲಾ ಕಣ್ತುಂಬಿಕೊಂಡ ಜೀವ. ಆದರೆ, ಇಲ್ಲಿ ಹಸಿರೆಂದರೆ ಬರೀ ಪಾರ್ಕುಗಳಷ್ಟೇ. ಅಮ್ಮ ಬೆಂಗಳೂರಿಗೆ ಬಂದಾಗ ಕಬ್ಬನ್‌ ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದೆ. ಅವಳಿಗೆ ಮೊದಲ ಬಾರಿ ಮೊಮ್ಮಗಳ ಜೊತೆ ಪಿಕ್ನಿಕ್‌ಗೆ ಬಂದಷ್ಟೆ ಖುಷಿ.. ಅಮ್ಮನ ಸಂತಸ ಸಂಭ್ರಮ ನೋಡಿ ನನಗೂ ಹೃದಯ ತುಂಬಿ ಬಂದಿತ್ತು. ಮಗಳು ಮಹತಿ ಚಿಟ್ಟೆ ಹಿಡಿಯಲು ಹಾತೊರೆಯುತ್ತಿದ್ದರೆ, ಅಮ್ಮನೂ ಅವಳಿಗೆ ಸಾಥ್‌ ನೀಡುವುದಾ?! ಇಬ್ಬರೂ ಪಾತರಗಿತ್ತಿಯ ಬೆನ್ನತ್ತಿ ಖುಷಿ ಪಟ್ಟಿದ್ದೇ ಪಟ್ಟಿದ್ದು. ಅಮ್ಮನೂ ಪಾತರಗಿತ್ತಿಯ ಹಾಗೆ. ನಮ್ಮ ಬದುಕನ್ನು ಹಸನಾಗಿಸುವಲ್ಲಿ ತನ್ನ ಬಣ್ಣವನ್ನೆಲ್ಲಾ ಕಳೆದುಕೊಂಡವಳು. ಕೊಡುವುದರಲ್ಲೇ ಅವಳ ಬಾಳು…
– ಅರ್ಚನಾ ಎಚ್‌.
ಅಮ್ಮ: ಮಂಜುಳಾ, ಸಕಲೇಶಪುರ
ಸ್ಪಾಟ್‌: ಕಬ್ಬನ್‌ ಪಾರ್ಕ್‌

ಊಟ ಮಾಡೋಕೂ ಲಿಫ್ಟಲ್ಲೇ ಹೋಗ್ಬೇಕಾ?


ಅಮ್ಮ ಬೆಂಗಳೂರಿಗೆ ಬಂದಿದ್ದಾಗ ಒಮ್ಮೆ ಬನಶಂಕರಿ ಮೋನೋಟೈಪ್‌ ಬಳಿ ಇರುವ ಕೃಷ್ಣ ಗ್ರ್ಯಾಂಡ್‌ ಹೋಟೆಲ್‌ಗೆ ಹೋಗಿದ್ವಿ. ಅಲ್ಲಿಯ ತನಕ ಊರಲ್ಲಿ ಚಿಕ್ಕಪುಟ್ಟ ಹೋಟೆಲ್‌ಗ‌ಳನ್ನಷ್ಟೇ ನೋಡಿದ್ದ ಅಮ್ಮ ನಿಜಕ್ಕೂ ಗ್ರ್ಯಾಂಡ್‌ ಆಗಿದ್ದ ಈ ಹೋಟೆಲ್‌ ನೋಡಿ ಅಚ್ಚರಿಪಟ್ಟಿದ್ದಳು. ಅಲ್ಲಿ ಏಕಕಾಲಕ್ಕೆ ಅಷ್ಟು ಮಂದಿ ಊಟ ಮಾಡೋದನ್ನೂ ಕಂಡು ಬೆರಗಾಗಿದ್ದಳು. ಅದಕ್ಕಿಂತ ಹೆಚ್ಚಾಗಿ ಅಮ್ಮನನ್ನು ದಂಗುಬಡಿಸಿದ್ದು ಒಳಗ‚ಡೆ ಇದ್ದ ಲಿಫ‌ುr! ದೊಡ್ಡ ದೊಡ್ಡ ಕಟ್ಟಡಗಳಲ್ಲಿ, ಕೇಂದ್ರ ಕಚೇರಿಗಳಲ್ಲಿ ಅದನ್ನು ನೋಡಿದ್ದರಷ್ಟೇ. ಆದರೆ, ಬೆಂಗಳೂರಿನಲ್ಲಿ ಊಟ ಒದಗಿಸುವ ಸ್ಥಳ ಕೂಡಾ ಲಿಫ್ಟನ್ನು ಹೊಂದಿದ್ದು ಅವರ ಅಚ್ಚರಿಗೆ ಕಾರಣವಾಗಿತ್ತು.
– ಭರತ್‌ ಸಿ.
ಅಮ್ಮ: ಶಾರದಾ ಎಚ್‌.ಕೆ.
ಸ್ಪಾಟ್‌: ಕೃಷ್ಣ ಗ್ರ್ಯಾಂಡ್‌ ಹೋಟೆಲ್‌, ಮೋನೋಟೈಪ್‌

ಅಯ್ಯೋ, ಇಷ್ಟೇನಾ ರೆಸಾರ್ಟ್‌ ಅಂದ್ರೆ!


ನಮ್ಮಮ್ಮ ಊರ ಗೌಡರ ಮಗಳು, ಗೌಡತಿ. ಆಗಿನ ಕಾಲದಲ್ಲೇ ಮುಂಬೈನಂಥ ದೊಡ್ಡ ದೊಡ್ಡ ಪಟ್ಟಣಗಳನ್ನೆಲ್ಲಾ ತಿರುಗಾಡಿ ಬಂದಿದ್ದಳು. ಅವಳು ಒಮ್ಮೆಯೂ ರೆಸಾರ್ಟ್‌ಗೆ ಹೋದವಳಲ್ಲ. ಆದರೆ ಕುತೂಹಲವಂತೂ ಇತ್ತು. ಅದಕ್ಕೇ ಅವರು ಬೆಂಗಳೂರಿಗೆ ಬಂದಿದ್ದಾಗ ಜೈನ್‌ ಫಾರ್ಮ್ಸ್‌ & ರೆಸಾರ್ಟ್‌ಗೆ ಹೋಗುವ ಪ್ಲಾನ್‌ ಮಾಡಿದ್ವಿ. ಅಲ್ಲಿ ಹೋದ ಮೇಲೆ ಆಗಿದ್ದೇ ಬೇರೆ. ಅಮ್ಮ ಅದನ್ನ ನೋಡಿ “ಅಯ್ಯೋ ಇಷ್ಟೇನಾ ರೆಸಾರ್ಟ್‌ ಅಂದ್ರೆ? ನಮ್ಮ ಫಾರ್ಮ್ ಹೌಸ್‌ ಕೂಡ ಇದೇ ಥರ ಇದೆ ಅಲ್ವಾ?’ ಅಂದುಬಿಡೋದಾ? ಅವತ್ತು ಅಲ್ಲಿ “ಬ್ರಹ್ಮಗಂಟು’ ಸೀರಿಯಲ್‌ ನಾಯಕ ನಟ ರೆಸಾರ್ಟ್‌ಗೆ ಬಂದಿದ್ದರು. ಅಮ್ಮ ದಿನವೂ ನೋಡೋ ಸೀರಿಯಲ್‌ ಆಗಿದ್ರಿಂದ ಅವರ ಜೊತೆ ಮಾತಾಡಿ ಫೋಟೋ ತೆಗೆಸಿಕೊಂಡರು. ಅವಾಗ ನಾವು ಬಚಾವ್‌ ಆದ್ವಿ. ಇಲ್ಲದಿದ್ದರೆ ಆ ರೆಸಾರ್ಟ್‌ನಲ್ಲೇನಿದೆ ಅಂತ ಕರ್ಕೊಂಡ್‌ ಹೋದ್ರಿ ಅಂತ ಜೀವನಪೂರ್ತಿ ನಗಾಡಿರೋರು!
– ಅನುಪಮಾ
ಅಮ್ಮ: ಶಾಂತಲಾ ಹುಕ್ಕೇರಿ
ಸ್ಪಾಟ್‌: ಜೈನ್‌ ಫಾರ್ಮ್ಸ್‌

ಅಮ್ಮನ ಮಡಿಲಿಗೆ ಮೊದಲ ಸಂಬಳ ಸೀರೆ


ಬಾಲ್ಯದಲ್ಲಿ ನಮ್ಮನ್ನು ಬಟ್ಟೆ ಶಾಪಿಂಗಿಗೆ ಅಮ್ಮನೇ ಕರೆದೊಯ್ಯುತ್ತಿದ್ದಳು. ಪ್ರತೀಸಲ ರಾಶಿ ರಾಶಿ ಬಟ್ಟೆಗಳನ್ನೆಲ್ಲಾ ತಡಕಾಡಿ, ಹುಡುಕಾಡಿ ಕಡೆಗೆ ಎರಡು ಬಟ್ಟೆಗಳಲ್ಲಿ ಒಂದನ್ನು ಆರಿಸಬೇಕಾದ ಸಂದಿಗ್ಧತೆ ಎದುರಾಗುತ್ತಿತ್ತು. ಆಗಲೆಲ್ಲಾ ಎರಡನ್ನೂ ಕೊಡಿಸುತ್ತಿದ್ದಳು ನಮ್ಮಮ್ಮ. ನಾನು ಊರು ಬಿಟ್ಟು ಕೆಲಸಕ್ಕೆ ಸೇರಿದಾಗ ನನಗಿದ್ದ ಕನಸು ಒಂದೇ… ಮೊದಲ ಸಂಬಳದಲ್ಲಿ ಅಮ್ಮನನ್ನು ಬಟ್ಟೆ ಶಾಪಿಂಗಿಗೆ ಕರೆದೊಯ್ಯಬೇಕು ಅನ್ನೋದು. ಕೊನೆಯಲ್ಲಿ ಅಮ್ಮನಿಗೆ ಎರಡು ಸೀರೆಗಳಲ್ಲಿ ಯಾವುದನ್ನು ಆರಿಸೋದು ಅನ್ನೋ ಗೊಂದಲ ಆಯಿತು. ಅವೆರಡನ್ನೂ ಕೊಡಿಸಿಬಿಟ್ಟೆ. ನನ್ನ ಈ ಕನಸು ನನಸಾಗಿದ್ದು ಒರಾಯನ್‌ ಮಾಲ್‌ನಲ್ಲಿ. ಶಾಪಿಂಗ್‌ ಮುಗಿದರೂ, ಅಮ್ಮನೂ, ತಂಗಿ ನಿಶಿತಾಳೂ ಮಾಲ್‌ನ ವೈಭವವನ್ನು ಬೆರಗುಗಣ್ಣಿಂದ ನೋಡೋದು ನಿಂತೇ ಇರಲಿಲ್ಲ.
– ಶರಧಿ
ಅಮ್ಮ: ರೇಖಾ ಹೆಬ್ರಿ
ಸ್ಪಾಟ್‌: ಒರಾಯನ್‌ ಮಾಲ್‌

ಅವಳ ಕಣ್ಣಲ್ಲಿ ದಿಗಿಲುಗಳ ದಿಬ್ಬಣ


ಏನೇ ಇದು ಜನ!?- ಬೆಂಗಳೂರು ಎಂಬ ಮಾಯಾನಗರಿಗೆ ನನ್ನ ತಾಯಿಯನ್ನು ಕರೆತಂದಾಗ, ಮೆಜೆಸ್ಟಿಕ್‌ ಕಂಡು ಅವಳು ಹೀಗಂದಿದ್ದಳು. ಬಿಎಂಟಿಸಿ ಬಸ್‌ಸ್ಟಾಪ್‌ನಲ್ಲಿ ಬಿಡುವಿಲ್ಲದ ಬಸ್‌ಗಳ ಸಂಚಾರ ನೋಡಿದಾಗ, ಅವಳ ಕಣ್ಣಲ್ಲಿ ದಿಗಿಲುಗಳು ದಿಬ್ಬಣ ಹೊರಟಿದ್ದವು. “ಹೇಗೆ ಇಲ್ಲಿ ಜೀವನ ಮಾಡ್ತೀಯಾ?’ ಅಂತ ನನ್ನ ಮುಖ ನೋಡಿ, ಕೇಳುತ್ತಲೇ ಇದ್ದಳು. ಆದರೆ, ನಾನು ಅವಳಿಗೆ ಪ್ರೀತಿ ಹುಟ್ಟಿಸುವಂಥ ಕೆಲಸ ಮಾಡಿದೆ. ನನ್ನ ಕೆಲಸಕ್ಕೆ ರಜೆ ಹಾಕಿ, ವಿಧಾನಸೌಧ, ಲಾಲ್‌ಬಾಗ್‌ಗಳಿಗೆ ಅವಳನ್ನು ಕರಕೊಂಡು ಹೋದೆ. ಒಳ್ಳೆಯ ಸಿನಿಮಾ ತೋರಿಸಿದೆ. ಕೊನೆಗೆ ಹೋಗುವಾಗ ಅವಳಿಗೇ ಅನ್ನಿಸಿತು… “ಓಹ್‌ ಪರ್ವಾಗಿಲ್ಲ, ಈ ಬೆಂಗಳೂರಿಗೆ ತನ್ನದೇ ಒಂದು ನಿಸರ್ಗ ಇದೆ, ಸೌಂದರ್ಯ ಇದೆ. ನನ್ನ ಮಗಳು ಇಲ್ಲಿ ಬದುಕಬಹುದು’ ಎನ್ನುವ ವಿಶ್ವಾಸ ಹುಟ್ಟಿತು.
– ಸಾಯಿಗೀತಾ ಭರತ್‌
ಅಮ್ಮ: ಪ್ರಶಾಂತ ಕುಮಾರಿ
ಸ್ಪಾಟ್‌: ಲಾಲ್‌ಬಾಗ್‌

Advertisement

Udayavani is now on Telegram. Click here to join our channel and stay updated with the latest news.

Next