Advertisement

ಕನ್ನಡ ಕಲಿತರಷ್ಟೇ ಸವಲತ್ತು ನೀಡಿ

01:38 PM Oct 28, 2020 | Suhan S |

ರಾಮನಗರ: ಕರ್ನಾಟಕದಲ್ಲಿ ಕನ್ನಡ ಭಾಷೆ ಕಲಿಯದ ಅನ್ಯ ಭಾಷಿಕರಿಗೆ ಯಾವ ಸೌಲಭ್ಯವೂ ದೊರೆಯುವುದಿಲ್ಲ ಎಂಬ ವಾತಾವರಣ ಸೃಷ್ಟಿಯಾಗಬೇಕು ಎಂದು ಹಿರಿಯ ನಟ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

Advertisement

ತಾಲೂಕಿನ ಕೈಲಾಂಚ ಹೋಬಳಿ ಕೆರೆಮೇಗಳ ದೊಡ್ಡಿಯ ಮುದ್ದುಶ್ರೀ ದಿಬ್ಬ (ಜಾನಪದ ಸಾಹಿತಿ ಡಾ.ಎಂ.ಬೈರೇಗೌಡರ ಮಾಲೀಕತ್ವದ) ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಎಚ್‌.ಎನ್‌.ಬಿ.ಸಿ. ಲಂಡನ್‌ ಟಿ.ವಿ.ವಾಹಿನಿ ಸಹ ಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ವಿಶ್ವ ಕನ್ನಡ ಸಾಂಸ್ಕೃತಿಕ ಹಬ್ಬ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜಕೀಯ ಬೇಡ: ರಾಜ್ಯಕ್ಕೆ ಅನ್ಯ ಭಾಷಿಕರಿಗೆ ಸ್ವಾಗತ. ಆದರೆ ಅವರು ಕನ್ನಡ ಭಾಷೆ ಕಲಿತು, ಕನ್ನಡದಲ್ಲೇ ವ್ಯವಹರಿಸಬೇಕು. ಆಗ ಕನ್ನಡ ಭಾಷೆ ಬೆಳೆಯುತ್ತದೆ ಎಂದ ಅವರು, ನಾಡು ನುಡಿ ಏಳ್ಗೆಗೆ ಶ್ರಮಿಸಿದ ಸರ್ವರ ಸೇವೆಯನ್ನು ಸ್ಮರಿಸಿದರು.

ಸ್ವಾತಂತ್ರ್ಯ ಬಂದ ಮೇಲೂ ರಾಜ್ಯಕ್ಕೆ ವಂಚನೆ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಮತ್ತು ಸಂಸ್ಕೃತ ಚಿಂತಕ ಡಾ.ಬೈರಮಂಗಲ ರಾಮೇಗೌಡ, ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕಪಕ್ಷಗಳು ಅಧಿಕಾರಕ್ಕೆ ಬಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ತಮಗೆ ಬೇಕಾದಂತಹ ಅನು ಕೂಲಗಳನ್ನು ಕಲ್ಪಿಸಿಕೊಂಡಿವೆ. ಆದರೆ ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ರಾಜ್ಯ ವಂಚನೆಗೆ ಒಳಗಾಗುತ್ತಲೇ ಇದೆ. ಇನ್ನಾದರೂ ನಾಡಿನ ಒಳಿತಿಗಾಗಿ ಎಲ್ಲರೂ ಒಗ್ಗೂಡಿ ಶ್ರಮಿಸ ಬೇಕಾದ ಅಗತ್ಯ ವಿದೆ ಎಂದರು.

ನಾಡಿನ ಹಿರಿಮೆ ಬೆಳಗಿಸಲಿ: ಟಿ.ಶಿವಕುಮಾರ್‌ ಮಾತನಾಡಿ, ನಿಸರ್ಗದ ಮಧ್ಯೆ ಬಯಲು ಆಲಯದಲ್ಲಿ ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿಯಾದ ವಿವಿಧ ಜಾನಪದ ಕಲೆ ಪ್ರದರ್ಶನ ನಡೆಯುತ್ತಿರುವ ಈ ಸುಂದರ ಕಾರ್ಯಕ್ರಮ ಜಗತ್ತಿನಾದ್ಯಂತ ನಮ್ಮ ನಾಡಿನ ಹಿರಿಮೆಯನ್ನು ಬೆಳಗಿಸಲಿ ಎಂದು ಆಶಿಸಿದರು. ಕಸಾಪ ಬೆಂಗಳೂರು ಜಿಲ್ಲಾ ಗೌರವಾಧ್ಯಕ್ಷ ತಿಮ್ಮಯ್ಯ, ಜಿಲ್ಲಾಧ್ಯಕ್ಷ ಮಾಯಣ್ಣ, ಜಾನಪದ ಲೋಕದ ಅಧ್ಯಕ್ಷ ಟಿ.ತಿಮ್ಮೇಗೌಡ, ಜಾನಪದ ವಿದ್ವಾಂಸ ಡಾ.ಎಂ.ಭೈರೇಗೌಡ, ಕರ್ನಾಟಕ ಪ್ರಸ್‌ ಕ್ಲಬ್‌ ಕೌನ್ಸಿಲ್ ರಾಜ್ಯಾಧ್ಯಕ್ಷ ಶಿವಕುಮಾರ್‌ ನಾಗರ ನವಿಲೆ, ಕಾಳಯ್ಯ, ಜಯರಾಜ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಚಿತ್ರನಟ ಡಾಲಿ ಧನಂಜಯ ಅವರು ಇಡೀ ದಿನದ ಕಾರ್ಯಕ್ರಮವನ್ನು ತಮ್ಮದೇ ಶೈಲಿಯಲ್ಲಿ ಅದ್ಭುತವಾಗಿ ನಿರೂಪಿಸಿದರು.

Advertisement

ನ.1ರಂದು 48 ದೇಶಗಳಲ್ಲಿ ಪ್ರಸಾರ :  ಪ್ರತಿ ವರ್ಷವೂ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದೊಂದಿಗೆ ಎಚ್‌.ಎನ್‌.ಬಿ.ಸಿ. ಲಂಡನ್‌ ಟೀವಿ ವಾಹಿನಿಯವರು ಕರ್ನಾಟಕದಿಂದ ನುರಿತ ಕಲಾವಿದರನ್ನು ಕರೆಯಿಸಿ ಲಂಡನ್‌ ಪ್ರಾಂತ್ಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಯೋಜಿಸುತ್ತಿದ್ದರು. ಕೋವಿಡ್‌-19 ಕಾರಣದಿಂದ ಈ ಬಾರಿ ವಿವಿಧೆಡೆ ವಿಶ್ವ ಸಾಸ್ಕೃತಿಕ ಹಬ್ಬ ಆಯೋಜಿಸಿ ಸದರಿ ಕಾರ್ಯಕ್ರಮ ಚಿತ್ರೀಕರಿಸಿಕೊಂಡು ನ.1 ರಂದು ತಮ್ಮ ವಾಹಿನಿ

ಮೂಲಕ ಜಗತ್ತಿನ 48 ದೇಶಗಳಲ್ಲಿ ಪ್ರಸಾರ ಮಾಡುವ ಮೂಲಕ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನುವಿಶಿಷ್ಟ ರೀತಿಯಲ್ಲಿ ಆಚರಿಸುವ ಯೋಜನೆ ರೂಪಿಸಿರುವುದು ಈ ಬಾರಿಯ ವಿಶೇಷತೆಯಾಗಿದೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ವಿವರಿಸಿದರು.

ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ :  ವಿಶ್ವ ಕನ್ನಡ ಸಾಂಸ್ಕೃತಿಕ ಹಬ್ಬದ ನೆನಪಿನ ಅಂಗವಾಗಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹಿರಿಯ ನಟ ಮುಖ್ಯ ಮುಖ್ಯಮಂತ್ರಿ ಚಂದ್ರು, ಡಾ.ಎಂ.ಭೈರೇಗೌಡ, ಸಿಂ.ಲಿಂ.ನಾಗರಾಜ್, ಡಾ.ಆಂತೋನಿ ಜೋಸೆಫ್, ವಿದ್ವಾನ್‌ ಹರಳೂರು ಶಿವಕುಮಾರ್‌, ಸಾಹಿತಿ ಮಣ್ಣೆ ಮೋಹನ್‌, ಮಲ್ಲಿಕಾರ್ಜುನ್‌ ಮೈಲನಹಳ್ಳಿ, ಸಿ.ಆರ್‌.ಪಿ ನರಸಿಂಹರಾಜು, ಮು.ಶಿ.ಹೊನ್ನಹನುಮಯ್ಯ ಸೇರಿದಂತೆ ಹಲವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲಾ ಪ್ರದರ್ಶನ :  ಮುದ್ದುಶ್ರೀ ದಿಬ್ಬದಲ್ಲಿ ನಡೆದ ವಿಶ್ವ ಸಾಂಸ್ಕೃತಿಕ ಹಬ್ಬದಲ್ಲಿ ನುರಿತ ಕಲಾವಿದ ಚಂದ್ರುರವರ ನೇತೃತ್ವದಲ್ಲಿ ಭಾಗವಹಿಸಿದ್ದ ವಿವಿಧ ಜಾನಪದ ಕಲಾತಂಡಗಳು ವೇದಿಕೆಯ ಮೇಲೆ ಮನೋಜ್ಞವಾಗಿ ಕಲಾ ಪ್ರದರ್ಶನ ನೀಡಿದವು.

ಕವಿಗೋಷ್ಠಿಗೆ ಮೆಚ್ಚುಗೆ :  ವಿಶ್ವ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಸಾಹಿತಿ, ಕವಿ ಮಣ್ಣೆ ಮೋಹನ್‌ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ವಿದ್ವಾನ್‌ ಹರಳೂರು ಶಿವಕುಮಾರ್‌, ಡಾ.ಕೆ.ಬಿ. ಸದಾ ನಂದಾರಾಧ್ಯ, ಮಲ್ಲಿಕಾರ್ಜುನ್‌ ಮೈಲನಹಳ್ಳಿ, ಸಿ.ಆರ್‌.ಪಿ ನರಸಿಂಹರಾಜು, ಸಂಜೀವ ಕುಲಕರ್ಣಿ, ಭಾರತಿ ವೈ. ಖೋಕಲೆ, ಆದಿತ್ಯ ಮೈಸೂರು ಮುಂತಾದವರು ಭಾಗವಹಿಸಿ ಸ್ವರಚಿತ ಕವನ ವಾಚಿಸಿ ಸಭಿಕರ ಮೆಚ್ಚುಗೆ ಗಳಿಸಿದರು.

ಕನ್ನಡ ಬೆಳಗಲಿ :  ನಮ್ಮ ನಾಡಿನ ಸಂಸ್ಕೃತಿ, ಗತಕಾಲದ ಇತಿಹಾಸ, ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ವಿವಿಧ ರಾಜ ಮನೆತನಗಳ ಕೊಡುಗೆ ಸ್ಮರಣೀಯ. ಪ್ರತಿಯೊಬ್ಬರ ಮನೆ ಮನಗಳಲ್ಲೂ ಕನ್ನಡ ಭಾಷೆ ಬೆಳಗಬೇಕು ಎಂದು ವಿಚಾರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಪೊ›.ನಾರಾ ಯಣಘಟ್ಟ ಸಲಹೆ ನೀಡಿದರು.

ಗಡಿ ಭಾಗ, ಜಲ ಸಮಸ್ಯೆ ಸೇರಿದಂತೆ ನಾಡಿನ ಏಳ್ಗೆಗೆ ಜಾತಿ, ಪಕ್ಷ ಅಡ್ಡಿಯಾಗದಿರಲಿ. ನಾಡು ನುಡಿ ಸಂರಕ್ಷಣೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಬೆರೆಸದೆ ಸರ್ವರೂ ಶ್ರಮಿಸಬೇಕು. ಮುಖ್ಯಮಂತ್ರಿ ಚಂದ್ರು , ಹಿರಿಯ ನಟ

ಕನ್ನಡ ನಾಡಿನ ಕುಲಗೌರವ ಆಂಜನೇಯ ಪ್ರಪ್ರಥಮ ವೀರಕನ್ನಡಿಗ, ಸಾಧಕ ಕನ್ನಡಿಗ. ಕರ್ನಾಟಕದ ಅಸ್ತಿತ್ವ ಅವನ ಕಾಲದಿಂದಲೇ ಆರಂಭವಾಗುತ್ತದೆ. ಕನ್ನಡಿಗರು ಸುಸಂಸ್ಕೃತರು, ವೀರರು ಕೂಡ. ನಾವೆಲ್ಲ ಸೇರಿ ಕನ್ನಡವನ್ನು ಉಳಿಸೋಣ, ಬೆಳೆಸೋಣ ಬೆಳಗಿಸೋಣ. ಮಾಯಣ್ಣ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next