Advertisement

World Human Rights Day:ಸಮಾನತೆ, ಸಹಜ ನ್ಯಾಯ ನಾಗರಿಕ ಸಮಾಜದ ಹೊಣೆಗಾರಿಕೆ

11:02 PM Dec 09, 2023 | Team Udayavani |

ಜಗತ್ತಿನಲ್ಲಿರುವ  ಪ್ರತಿಯೊಬ್ಬ  ಮನುಷ್ಯನಿಗೂ ಆತ್ಮಗೌರವ,ಸ್ವಾಭಿಮಾನ, ಸ್ವಾತಂತ್ರ್ಯ ಹಾಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ. ವೈಯಕ್ತಿಕ ಹಕ್ಕಿನ ಪ್ರತಿಪಾದನೆಯ ಜತೆಜತೆಯಲ್ಲಿ  ಇತರರ ಹಕ್ಕನ್ನು ಗೌರವಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ಇವೆರಡನ್ನೂ ಒಟ್ಟಾಗಿ ಮಾನವ ಹಕ್ಕುಗಳೆಂದು ಕರೆಯಲಾಗುತ್ತದೆ. ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು ಮತ್ತು ಜನರಲ್ಲಿ ಮಾನವ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಡಿ.10ರಂದು ವಿಶ್ವ  ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.

Advertisement

ಸಮಾನತೆಯ ಸಂದೇಶ

ಯಾವುದೇ ವರ್ಗ, ಲಿಂಗ, ಮತ, ಧರ್ಮ, ಶ್ರೀಮಂತ, ಬಡವ ಎನ್ನುವ ಭೇದಭಾವ ಇಲ್ಲದೇ  ಭೂಮಿಯ ಮೇಲಿನ ಎಲ್ಲ ಮಾನವರು ಸಮಾನರು ಮತ್ತು ಎಲ್ಲರಿಗೂ ಮೂಲಭೂತ ಹಕ್ಕುಗಳಿವೆ ಎಂಬುದನ್ನು ಸಾರಿ ಹೇಳುವುದೇ ವಿಶ್ವ ಮಾನವ ಹಕ್ಕುಗಳ ದಿನಾ ಚರಣೆಯ ಪ್ರಮುಖ ಉದ್ದೇಶ. 1948ರಲ್ಲಿ ವಿಶ್ವಸಂಸ್ಥೆ  ಈ ದಿನವನ್ನು  ಅಂಗೀಕರಿಸಿತು.1950ರ ಡಿಸೆಂಬರ್‌ 10ರಂದು ಪ್ಯಾರಿಸ್‌ನಲ್ಲಿ  ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾನವ ಹಕ್ಕು ಗಳ ಬಗ್ಗೆ ಅಧಿಕೃತ ಉಲ್ಲೇಖ ಮಾಡಲಾಯಿತು. ಈ ಬಾರಿ  75ನೇ ವರ್ಷದ ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ.

ಈ ಬಾರಿಯ ಘೋಷಣೆ

“ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ, ನ್ಯಾಯ’ ಈ ಬಾರಿಯ ಮಾನವ ಹಕ್ಕುಗಳ ದಿನದ ಪ್ರಮುಖ ಘೋಷಣೆಯಾಗಿದೆ. ಪ್ರತಿಯೊಬ್ಬನಿಗೂ ಜೀವಿಸುವಸ್ವಾತಂತ್ರ್ಯ , ವಾಕ್‌ ಸ್ವಾತಂತ್ರ್ಯ , ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಸಂಘಟನೆ, ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ, ಘನತೆ, ಗೌರವ, ಧಾರ್ಮಿಕ ಸ್ವಾತಂತ್ರ್ಯ ದ ಜತೆಗೆ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಸ್ವಾತಂತ್ರ್ಯ ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತವೆ. ಇವೆಲ್ಲವುದರ ಬಗೆಗೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ಇವುಗಳ ಪಾಲನೆ, ರಕ್ಷಣೆ ಬಗೆಗಿನ ಹೊಣೆಗಾರಿಕೆ ಕುರಿತಂತೆಯೂ ತಿಳಿ ಹೇಳಲು ಈ ದಿನದಂದು ವಿಶ್ವಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

Advertisement

ಮಾನವ ಹಕ್ಕುಗಳ ದಿನಕ್ಕೆ ಅಮೃತ ವರ್ಷ

ಮಾನವ ಹಕ್ಕುಗಳ ದಿನಾಚರಣೆಗೆ ಈ ಬಾರಿ 75 ವರ್ಷ ಸಂದ ಕಾರಣ ವಿಶ್ವಸಂಸ್ಥೆ  ಈ ದಿನದ  ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಮಾನವ ಹಕ್ಕು ದಿನದ 75ನೇ ವರ್ಷದ ಪ್ರಯುಕ್ತ ಈ ದಿನದಂದು ವಿಶ್ವದ ಹಲವು ದೇಶಗಳಲ್ಲಿ  ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.

 ಭಾರತದ ಸಂವಿಧಾನದಲ್ಲಿ  ಮಾನವ ಹಕ್ಕುಗಳು

ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಘೋಷಿಸಿದ ಸಂದರ್ಭ ಭಾರತದಲ್ಲಿ ಸಂವಿಧಾನ ರಚನಾ ಪ್ರಕ್ರಿಯೆ ನಡೆಯುತ್ತಿತ್ತು. ಹೀಗಾಗಿ ದೇಶದ ಸಂವಿಧಾನದಲ್ಲೂ ಮಾನವ ಹಕ್ಕುಗಳನ್ನು ಸೇರ್ಪಡೆಗೊಳಿಸಲಾಯಿತು. ಸಂವಿಧಾನದ ಪ್ರಸ್ತಾವನೆ ಸಹಿತ, ಅನುಚ್ಛೇದದಲ್ಲಿಯೂ ಮಾನವ ಹಕ್ಕು ಗಳ ಬಗ್ಗೆ ಉÇÉೇಖೀಸಲಾಗಿದೆ. ಭಾರತ ಸಂವಿಧಾನದ ಅನುಚ್ಛೇದ 32ರ ಅನುಸಾರ ಮಾನವ ಹಕ್ಕುಗಳ ರಕ್ಷಣೆ ಹಾಗೂ ಅನುಚ್ಛೇದ 226ರ ಪ್ರಕಾರ ಜಾರಿಗೊಳಿಸುವ ಜವಾಬ್ದಾರಿಯನ್ನು ನ್ಯಾಯಾಂಗಕ್ಕೆ ವಹಿಸಲಾಗಿದೆ.

ಭಾರತ ಮಂಟಪಂನಲ್ಲಿ ರಾಷ್ಟ್ರೀಯ ಕಾರ್ಯಕ್ರಮ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಡಿ.10ರ ರವಿವಾರದಂದು ಹೊಸದಿಲ್ಲಿಯ ಭಾರತ್‌ ಮಂಟಪಂನಲ್ಲಿ ಈ ಬಾರಿಯ ವಿಶ್ವ ಮಾನವ ಹಕ್ಕುಗಳ ದಿನದ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಿದೆ. ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವರು.

ಮಾನವ ಹಕ್ಕು ಮತ್ತು ಭಾರತ

ವಿಶ್ವದ ವಿವಿಧ ದೇಶಗಳಿಗೆ ಹೋಲಿಸಿದರೆ ಮಾನವ ಹಕ್ಕುಗಳ ರಕ್ಷಣೆ ವಿಷಯದಲ್ಲಿ ಭಾರತ ಉನ್ನತ ಸ್ಥಾನದಲ್ಲಿದೆ. ಮಾನವ ಹಕ್ಕುಗಳ ಸಂರಕ್ಷಣೆ ಗಾಗಿಯೇ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಮಾನವ ಹಕ್ಕುಗಳ ಆಯೋಗಗಳನ್ನು ರಚಿಸಲಾಗಿದೆ. ಈ ಆಯೋಗಗಳಿಗೆ ಕೆಲವೊಂದು ವಿಶೇಷ ಅಧಿಕಾರಗಳನ್ನು ನೀಡುವ ಮೂಲಕ ಇಂತಹ ಪ್ರಕರಣಗಳು ವರದಿಯಾದಾಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

 ಎನ್‌ಎಚ್‌ಆರ್‌ಸಿ ಪಾತ್ರ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ವು ದೇಶದಲ್ಲಿ ನಿರಂತರವಾಗಿ ಜನತೆಯ ನಾಗರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿದೆ. ಅಷ್ಟು ಮಾತ್ರವಲ್ಲದೆ ಮಾನವ ಹಕ್ಕುಗಳ ಬಗೆಗೆ ಸರಕಾರಿ ಅಧಿಕಾರಿಗಳು ಮತ್ತು ನಾಗರಿಕ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಉಪಕ್ರಮ ಗಳನ್ನು ಜಾರಿಗೊಳಿಸುತ್ತಲೇ ಬಂದಿದೆ. ಎನ್‌ಎಚ್‌ಆರ್‌ಸಿ ಸ್ಥಾಪನೆ ಯಾದ ಬಳಿಕದ ಕಳೆದ 30 ವರ್ಷಗಳ ಅವಧಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ 22.48 ಲಕ್ಷ  ಪ್ರಕರಣ ಗಳನ್ನು ದಾಖಲಿಸಿಕೊಂಡಿದ್ದು, ಈ ಪೈಕಿ 22.41 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಜತೆಯಲ್ಲಿ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ 230 ಕೋ. ರೂ.ಗಳಿಗೂ ಅಧಿಕ ಪರಿಹಾರ ಮೊತ್ತವನ್ನು ದೊರಕಿಸಿಕೊಟ್ಟಿದೆ.  2022ರ ಡಿಸೆಂಬರ್‌ನಿಂದ ಈ ವರ್ಷದ ನವೆಂಬರ್‌ 30ರ ವರೆಗೆ ಎನ್‌ಎಚ್‌ಆರ್‌ಸಿ 80,376 ಪ್ರಕರಣ ಗಳನ್ನು ದಾಖಲಿಸಿದೆ. ಇದರಲ್ಲಿ 117 ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದೆ. ಇದೇ ಅವಧಿಯಲ್ಲಿ ಹೊಸ ಮತ್ತು ಹಳೆಯ ಪ್ರಕರಣಗಳ ಸಹಿತ ಒಟ್ಟು 88,451 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. 390 ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಒಟ್ಟು 18.27 ಕೋ. ರೂ. ಪರಿಹಾರವನ್ನು ದೊರಕಿಸಿಕೊಟ್ಟಿದೆ.

ಧನ್ಯಶ್ರೀ ಬೋಳಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next