Advertisement

‘ಗಿಡ ನೆಡುವುದಕ್ಕಷ್ಟೇ ಮೀಸಲಾಗದಿರಲಿ ಈ ದಿನ’

02:05 AM Jun 06, 2020 | Hari Prasad |

ಮನುಷ್ಯ ತನ್ನ ವಿಕಸನದುದ್ದಕ್ಕೂ ಪ್ರಕೃತಿಯ ಮೇಲೆ ಹಿಡಿತ ಸಾಧಿಸುವ ಹುಚ್ಚು ಆಸೆಯಲ್ಲೇ ಹೆಜ್ಹೆ ಹಾಕಿದ್ದಾನೆ.

Advertisement

ವಿಪರ್ಯಾಸವೆಂದರೆ ಈ ಭೂಮಿಯ ಮೇಲಿರುವ ಬೇರಾವುದೇ ಜೀವಿಗಿಂತ ಹೆಚ್ಚು ಪರಿಸರಕ್ಕೆ ಹಾನಿ ಮಾಡಿರುವ, ಮಾಡಲಿರುವ ನಾವು ವರ್ಷದಲ್ಲೊಂದು ದಿನ ಮಾತ್ರ ಪ್ರಕೃತಿಯೆಡೆಗೆ ಕಾಳಜಿ ತೋರಿಸಲು “ವಿಶ್ವ ಪರಿಸರ ದಿನ” ಆಚರಿಸುತ್ತೇವೆ. ಪ್ರತಿ ವರ್ಷ ಜೂನ್ ೫ರಂದು ನಾವು ಹೇಳುವ, ಕೇಳುವ ಮಾತುಗಳನ್ನು ಪಾಲಿಸಿದರೂ ಸಾಕು ನಮ್ಮಿಂದ ಪ್ರಕೃತಿಗಾಗುವ ಹಾನಿಯ ಪ್ರಮಾಣ‌ ಕಡಿಮೆಯಾಗಬಹುದೇನು.

ನಮ್ಮನ್ನು ತಡೆಯುವವರೇ ಇಲ್ಲವೆಂಬ ಹುಂಬತನದಲ್ಲಿದ್ದ ನಮಗೀಗ ಅತಿ ದೊಡ್ಡ ಹೊಡೆತ ಬಿದ್ದಾಗಿದೆ. ಬರಿ ಕಣ್ಣಿಗೂ ಗೋಚರಿಸದಷ್ಟು ಚಿಕ್ಕ ವೈರಾಣುವೊಂದು ಇಡೀ ಮನುಷ್ಯ ಕುಲವನ್ನೇ ಅಲುಗಾಡಿಸಿಬಿಟ್ಟಿದೆ. ಈ ವೈರಾಣುವಿನ ನೆಪದಲ್ಲಿ ಮನುಷ್ಯ ತಿಂಗಳಾನುಗಟ್ಟಲೆ ಮನೆಯೊಳಗೆ ಬಂಧಿಯಾದ ಕಾರಣ ಸುತ್ತಲಿನ ಪರಿಸರದಲ್ಲಿ ಅನೇಕ ಬದಲಾವಣೆ ಆಗಿದೆ‌ ಕೂಡ. ಬಹುಶಃ ಈ ಬಾರಿಯ ಪರಿಸರ ದಿನಾಚರಣೆಗೆ ಇದೇ ದೊಡ್ಡ ಉಡುಗೊರೆ ಇರಬಹುದು! ಆದರೆ, ಈ ಪಾಠಗಳನ್ನು(?) ನಾವು ಎಷ್ಟು ದಿನಗಳ ಮಟ್ಟಿಗೆ ನೆನಪಿನಲ್ಲಿ ಉಳಿಸಿಕೊಳ್ಳುತ್ತೇವೆ? ಈಗಾಗಲೇ ಆಗಿರುವ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ? ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕು.

ಪರಿಸರದಲ್ಲಿ ಸಹಬಾಳ್ವೆ ಬಹುಮುಖ್ಯವಾಗುತ್ತದೆ. ಪರಿಸರ ಪ್ರೇಮವೆಂದರೆ ವರ್ಷಕ್ಕೊಂದು ಗಿಡ ನೆಡೆವುದಕ್ಕಷ್ಟೇ ಸೀಮೀತವಲ್ಲ. ತೋಟದಲ್ಲಿನ ಬೆಳೆ ಕಾಪಾಡಿಕೊಳ್ಳಲು ರಾಸಾಯನಿಕ ಸಿಂಪಡಿಸಿ ಯಾವ ತೊಂದರೆಯನ್ನೂ ನೀಡದ ಜೇನು ಹುಳುಗಳ ಜೀವಕ್ಕೆ ಪರೋಕ್ಷವಾಗಿ ಕುತ್ತು ತರುವುದರಿಂದ ಹಿಡಿದು, ಸಿಡಿಮದ್ದು ತುಂಬಿದ ಹಣ್ಣನ್ನು ಆನೆಗೆ ಕೊಟ್ಟು ಕೊಲ್ಲುವ ತನಕವೂ ನಾವು ಸಹಬಾಳ್ವೆಯ ನಿಯಮವನ್ನು ಮುರಿಯುತ್ತಲೇ ಇದ್ದೇವೆ. ಪ್ರಕೃತಿಯಲ್ಲಿ ಸಮತೋಲನ ಸ್ಥಿತಿ ಉಳಿಯಬೇಕೆಂದರೆ ಪ್ರತಿಯೊಂದು ಜೀವಿಯೂ ಮುಖ್ಯ ಎಂಬುದನ್ನು ಮರೆಯಬಾರದು.

ಈ ಬಾರಿಯ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ನಮ್ಮೆದುರು ಹಲವು ಸವಾಲುಗಳೂ ಇವೆ. ಲಾಕ್‌ಡೌನ್ ನೆಪದಲ್ಲೋ ಅಥವಾ ಕೊರೊನಾ ಭಯದಿಂದಲೋ ಮನುಷ್ಯನ ಆರ್ಭಟ ಕಡಿಮೆಯಾಗಿ ತುಸು ಸುಧಾರಿಸಿರುವ ವಾತಾವರಣವನ್ನು, ಇಳಿಕೆಯಾಗಿರುವ ವಾಯುಮಾಲಿನ್ಯ ಪ್ರಮಾಣವನ್ನು, ಶುದ್ಧಗೊಂಡಿರುವ ಜಲಮೂಲಗಳನ್ನು ಮತ್ತೆ ಹಾಳಾಗದಂತೆ ಕಾಪಾಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಇದೆ.

Advertisement

ಕೋವಿಡ್ ತಂದೊಡ್ಡಿದ ಆರ್ಥಿಕ ಸಂಕಷ್ಟವನ್ನು ನಿಭಾಯಿಸಲು ಆಡಳಿತ ವರ್ಗದವರು ಕಾರ್ಖಾನೆಗಳಿಗೆ, ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಹೋಗಿ ಅರಣ್ಯ ಪ್ರದೇಶವನ್ನೋ, ನೈಸರ್ಗಿಕವಾಗಿ ಹಲವು ಜೀವಿಗಳಿಗೆ ಆಸರೆಯಾಗಿರುವ ಬಯಲು ಜಾಗಗಳನ್ನೋ “ನಿರುಪಯುಕ್ತ” ಎಂಬ ಹೆಸರಿನಲ್ಲಿ ಉದ್ಯಮಿಗಳಿಗೆ ನೀಡಿದರೆ ಇನ್ನಷ್ಟು ಅನಾಹುತ, ಅಸಮತೋಲನ ಉಂಟಾಗುವುದು ನಿಶ್ಚಿತ. ಇಂತಹ ಸೂಕ್ಷ್ಮತೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಅಂತೆಯೇ, ಪರಿಸರ ದಿನಾಚರಣೆಯ ಹೊತ್ತಿನಲ್ಲಿ ತೆಗೆದುಕೊಳ್ಳಬೇಕಾಗಿರುವ ಇನ್ನೊಂದು ಮಹತ್ವದ ನಿರ್ಧಾರವೆಂದರೆ ರಾಜ್ಯದ  ಬಹುತೇಕ ಭಾಗಗಳಲ್ಲಿ ಸಹಜ ಅರಣ್ಯ, ಗೋಮಾಳಗಳಿದ್ದ ಜಾಗವೀಗ ಅಕೇಶಿಯಾ, ನೀಲಗಿರಿ ತೋಪುಗಳಾಗಿ ದಶಕಗಳುರುಳಿವೆ. ಈಗ ಕೆಲವೆಡೆ ಅವುಗಳನ್ನು ಖಾಸಗೀಕರಣ ಮಾಡುವ ಗಾಳಿಸುದ್ದಿಯೂ‌ ಇದೆ.

ಆದರೆ, ಸರ್ಕಾರ ಪರಿಸರ ಕಾಳಜಿ ಹೊಂದಿರುವುದೇ ಆದಲ್ಲಿ ಅದಷ್ಟೂ ಭೂಮಿಯನ್ನು ತನ್ನ ವಶದಲ್ಲೇ ಉಳಿಸಿಕೊಂಡು ಅಕೇಶಿಯಾ, ನೀಲಗಿರಿಯಂತಹ ಮರಗಳನ್ನು ತೆಗೆದು ಆಯಾ ಪ್ರದೇಶಕ್ಕೆ ಸೂಕ್ತವಾದ ಕಾಡು ವೃಕ್ಷಗಳನ್ನು, ಹಣ್ಣಿನ ಮರಗಳನ್ನು ಬೆಳೆಸುವತ್ತ ಗಮನಹರಿಸಲೇ ಬೇಕು.

ವನ್ಯಜೀವಿ ಮತ್ತು ಮಾನವನ ನಡುವಿನ ಸಂಘರ್ಷ ನಿಲ್ಲಬೇಕೆಂದರೆ ಕೋಟ್ಯಂತರ ರುಪಾಯಿಗಳನ್ನು ಸುರಿದು ಬೇಲಿ ಕಟ್ಟುವುದೋ, ಕಾಲುವೆ ನಿರ್ಮಿಸುವುದೋ ಮಾಡಿದರೆ ಸಾಲದು. ವನ್ಯಜೀವಿಗಳಿಗೆ ಕಾಡಿನಲ್ಲೇ ನೀರು, ಆಹಾರ ದೊರಕುವಂತೆ ಮಾಡಬೇಕಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.

ನೆಪಕ್ಕೊಂದು ಗಿಡನೆಟ್ಟು ಪರಿಸರ ದಿನಾಚರಣೆ ಆಚರಿಸಿ ಕೈ ತೊಳೆದುಕೊಳ್ಳುವ ಬದಲು. ಅರ್ಥಪೂರ್ಣ ಹಾಗೂ ಅತ್ಯವಶ್ಯಕ ಕ್ರಮಗಳನ್ನು ಕೈಗೊಂಡು ಪರಿಸರ ಕಾಳಜಿ ವ್ಯಕ್ತಪಡಿಸುವುದು ಸೂಕ್ತ.

– ಸ್ಕಂದ ಆಗುಂಬೆ, ಎಸ್‌ಡಿಎಂ ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next