Advertisement

World Bunts Conference: ಬಂಟರ ಸಂಘಟನಾತ್ಮಕ ಒಗ್ಗಟ್ಟಿಗೆ ಒತ್ತು

01:03 PM Oct 27, 2023 | Team Udayavani |

ಉಡುಪಿ: ವಿಶ್ವದಾದ್ಯಂತ ಹರಡಿರುವ ಬಂಟ ಸಮುದಾಯದ ಒಗ್ಗೂಡಿಸುವಿಕೆ ಮತ್ತು ಯುವ ಜನತೆಗೆ ತುಳುನಾಡ ಸಿರಿ, ದೈವ-ದೇವರು, ಸಂಸ್ಕೃತಿ, ಸಂಸ್ಕಾರ, ಇತಿಹಾಸವನ್ನು ತಿಳಿಸಿ ಭಾವನಾತ್ಮಕವಾಗಿ, ಸಂಘಟನಾತ್ಮಕವಾಗಿ ಇನ್ನಷ್ಟು ಅವರನ್ನು ಬಲಪಡಿಸುವುದಲ್ಲದೇ, ಸಮುದಾಯದ ಕಡು ಬಡವರನ್ನು ಮುಖ್ಯವಾಹಿನಿಗೆ ತರುವ ಮಹತ್ತರವಾದ ಆಶಯ ಸಮ್ಮೇಳನದ್ದು ಎನ್ನುತ್ತಾರೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ವಿವರಣೆ.

Advertisement

ಅ. 28 ಮತ್ತು 29 ರಂದು ಉಡುಪಿಯಲ್ಲಿ ನಡೆಯುವ ವಿಶ್ವ ಬಂಟರ ಸಮ್ಮೇಳನದ ಸಿದ್ಧತೆ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಭಾರತದ ವಿವಿಧ ರಾಜ್ಯಗಳು ಸಹಿತವಾಗಿ ಅಮೆರಿಕ, ಯುಎಇ, ಬಹ್ರೈನ್‌, ಮಸ್ಕತ್‌, ಒಮನ್‌, ಆಸ್ಟ್ರೇಲಿಯ ಸೇರಿದಂತೆ ವಿವಿಧೆಡೆ ಸುಮಾರು 150 ಬಂಟರ ಸಂಘಗಳಿವೆ. ಇವೆಲ್ಲವನ್ನೂ ಒಗ್ಗೂಡಿಸಿ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸಲಾಗುವುದು. ಯುವಜನರಿಗೆ ನಮ್ಮ ಇತಿಹಾಸ, ಸಂಸ್ಕೃತಿಯನ್ನು ಪರಿಚಯಿಸಿ, ಅದನ್ನು ಮುಂದುವರಿಸಿಕೊಂಡು ಹೋಗಲು ಪ್ರೇರಣೆ ನೀಡಿದಂತಾಗಲಿದೆ. ಈಗಾಗಲೆ ಎಲ್ಲ ಬಂಟರ ಸಂಘದಲ್ಲೂ ಯುವ ಘಟಕ ಇದೆ ಮತ್ತು ಹೆಚ್ಚು ಕ್ರಿಯಾಶೀಲ ಆಗಿದೆ ಎಂದರು.

ಶಕ್ತಿ ಪ್ರದರ್ಶನವಲ್ಲ

ಈ ಸಮ್ಮೇಳನವು ಬಂಟ ಸಮುದಾಯದ ಶಕ್ತಿ ಪ್ರದರ್ಶನವಲ್ಲ. ಆದರೆ ಸಮುದಾಯ ಎಲ್ಲದರಲ್ಲೂ ಸಮರ್ಥವಾಗಿದೆ ಎಂಬುದನ್ನು ಪ್ರಸ್ತುತಪಡಿಸಲಿದ್ದೇವೆ. ಸರಕಾರದ ಅಗತ್ಯ ಸೌಲಭ್ಯ ನಮ್ಮ ಸಮುದಾಯಕ್ಕೂ ಸಿಗಬೇಕು. ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ಅನುದಾನ ನೀಡಬೇಕು. ಸದ್ಯ ಬಂಟ ಸಮುದಾಯವು 3ಬಿ ಅಡಿ ಬರಲಿದ್ದು, ಉದ್ಯೋಗ ಅಥವಾ ಶಿಕ್ಷಣದಲ್ಲಿ ಮೀಸಲು ಸಿಗುತ್ತಿಲ್ಲ. ಹೀಗಾಗಿ ಸಮುದಾಯವನ್ನು 2ಎ ಅಡಿ ತರಬೇಕು ಎನ್ನುವ ಒಕ್ಕೊರಲ ಧ್ವನಿಯು ಸಮ್ಮೇಳನದ ಮೂಲಕ ಮೊಳಗಲಿದೆ. ಸರಕಾರದಿಂದ ಸಿಗಬೇಕಾದ ಸವಲತ್ತು ಪಡೆಯಲು ಶಕ್ತರಿದ್ದೇವೆ ಎಂಬುದನ್ನು ಪ್ರದರ್ಶಿಸಲಾಗುವುದು ಎಂದರು.

ಶಿಕ್ಷಣ, ಉದ್ಯೋಗ

Advertisement

ನಮ್ಮ ಸಮುದಾಯದಲ್ಲಿ ವಸತಿಹೀನ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯದ ಬಡ ಕುಟುಂಬದವರ ಮದುವೆಗೆ ಆರ್ಥಿಕ ಸಹಕಾರ ಹಾಗೂ ವೈದ್ಯಕೀಯ ಸಹಾಯ ಸೇರಿದಂತೆ ಹಲವು ಸಮಾಜಮುಖೀ ಕಾರ್ಯವನ್ನು ಒಕ್ಕೂಟದಿಂದ ಮಾಡಲಾಗುತ್ತಿದೆ. ಇದರಲ್ಲಿ ಶೇ.20ರಷ್ಟು ನೆರವು ಬೇರೆ ಸಮುದಾಯಕ್ಕೂ ನೀಡುತ್ತಿದ್ದೇವೆ. ಈ ಸಮ್ಮೇಳನದಲ್ಲಿ ಬಂಟ ಸಮುದಾಯದ ಉದ್ಯೋಗದಾತರು ಹಾಗೂ ದಾನಿಗಳ ಸಮಾಗಮ ನಡೆಯಲಿದೆ. ಆ ಮೂಲಕ ಸಮುದಾಯದ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ವ್ಯವಸ್ಥಿತ ಚೌಕಟ್ಟು ರಚಿಸುವ ಆಲೋಚನೆ ಇದೆ.

ಎಲ್ಲರೊಂದಿಗೂ ನಾವು

ಬಂಟರು ಎಲ್ಲರೊಂದಿಗೂ ಇದ್ದಾರೆ ಹಾಗೂ ಎಲ್ಲ ಸಮುದಾಯದವರು ನಮ್ಮ ಸಮುದಾಯದೊಂದಿಗೆ ಇದ್ದಾರೆ. ಅವರೊಂದಿಗೆ ಪ್ರೀತಿ, ಬಾಂಧವ್ಯ ಚೆನ್ನಾಗಿದ್ದು, ಈ ಸಮ್ಮೇಳನದಲ್ಲಿ ಬೇರೆಯವರೂ ಪಾಲ್ಗೊಳ್ಳುವರು. ಎಲ್ಲರೂ ಒಟ್ಟಾಗಿದ್ದಾಗ ಶಾಂತಿಯ ಬದುಕು ಸಾಧ್ಯ ಹಾಗೂ ದಾನದ ಮೂಲಕ ಹೆಸರು ಶಾಶ್ವತವಾಗಿ ಉಳಿದೀತು. ರಾಜಕಾ ರಣಿಗಳಿಗೆ ಸಮುದಾಯದ ಮೇಲೆ ನೈಜ ಕಾಳಜಿ ಇರಲಿ. ಚುನಾವಣೆಗೆ ಸೀಮಿತವಲ್ಲ. ಸರಕಾರದ ಸೌಲಭ್ಯ ಪಡೆಯಲು ರಾಜಕೀಯವಾಗಿ ಸದೃಢರಾಗಬೇಕು.

ಸಾಧಕರ ಸಮಾಗಮ

ಕ್ರೀಡೆ, ಸಿನೆಮಾ, ರಾಜಕೀಯ, ಕಲೆ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಸಮ್ಮೇಳನದಲ್ಲಿ ಇರುವರು. ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಇಡೀ ಸಮುದಾಯವು ಒಂದು ಕುಟುಂಬದಂತೆ ಬೆರೆಯಲಿದೆ ಎಂಬುದೇ ಸಂತಸದ ಸಂಗತಿ ಎನ್ನುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next