Advertisement

ಇಂದು ವಿಶ್ವ ಪುಸ್ತಕ ದಿನ: ಪುಸ್ತಕ ಓದುಗನಿಗೆ ಎಂದಿಗೂ ಒಂಟಿತನ ಕಾಡಲಾರದು

01:04 PM Apr 23, 2022 | Team Udayavani |

ಪುಸ್ತಕಗಳನ್ನು ಯಾಕೆ ಓದಬೇಕು ಎಂದು ಪ್ರಶ್ನಿಸಿದರೆ ಹಲವರ ಉತ್ತರ ವಿಭಿನ್ನವಾಗಿರಬಹುದು. ಪುಸ್ತಕ ಓದುವುದು ಕೆಲವರಿಗೆ ಹವ್ಯಾಸವಾದರೆ ಮತ್ತೆ ಕೆಲವರಿಗೆ ಜ್ಞಾನ ವೃದ್ಧಿಗಿರುವ ದಾರಿ. ಪ್ರತಿಯೊಬ್ಬ ಓದುಗನ ಅಭಿರುಚಿ ಭಿನ್ನವಾಗಿರಬಹುದು. ಆದರೆ ಆ ಓದು ಆತನ ಜ್ಞಾನದಾಹವನ್ನು ತಣಿಸುತ್ತದೆ. ಪುಸ್ತಕ ಓದುವುದರಿಂದ ನಮ್ಮ ಕಲ್ಪನಾ ಶಕ್ತಿ ಹೆಚ್ಚುವುದರ ಜತೆಯಲ್ಲಿ ಮನೋವಿಕಾಸಕ್ಕೆ ನೆರವಾಗುತ್ತದೆ. ಒಂದೊಂದು ಪುಸ್ತಕವು ತನ್ನದೇ ಆದ ವೈವಿಧ್ಯಮಯ ಕಥಾ ಮತ್ತು ಜ್ಞಾನ ಹಂದರವನ್ನು ಒಳಗೊಂಡಿದ್ದು, ಬೇರೆ ಬೇರೆ ಪ್ರಪಂಚದ ಅರಿವು ಮೂಡಿ ಸುತ್ತದೆ. ಒಟ್ಟಿನಲ್ಲಿ ಪುಸ್ತಕಗಳು ಕೇವಲ ಜ್ಞಾನದ ಗುತ್ಛವಾಗಿರದೆ ಒಂದು ಪ್ರದೇಶದ ಭಾಷೆ, ಸಂಸ್ಕೃತಿ ಇವೆಲ್ಲವನ್ನು ಬೆಸೆಯುವ ಕೊಂಡಿಗಳಾಗಿರುತ್ತವೆ.

Advertisement

ಪುಸ್ತಕಗಳು ನಮ್ಮ ಪೂರ್ವಜರ ಅಸ್ತಿತ್ವಕ್ಕೆ ಸಾಕ್ಷಿಯಾಗಿ, ಹಲವು ತಲೆಮಾರುಗಳನ್ನು ನಮಗೆ ಪರಿಚಯಿಸಿ ಕೊಡುತ್ತವೆ. ಇದರಿಂದ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಪುಸ್ತಕಗಳಿಂದ ಆಗುತ್ತದೆ. ಪುಸ್ತಕಗಳು ಹಿಂದಿನ ಮತ್ತು ಭವಿಷ್ಯದ ನಡುವಿನ ಕೊಂಡಿಯಾಗಿ, ತಲೆಮಾರುಗಳು ಮತ್ತು ಸಂಸ್ಕೃತಿಗಳ ನಡುವಿನ ಸೇತುವಾಗಿವೆ ಎಂದರೆ ತಪ್ಪಾಗಲಾರದು. ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಪುಸ್ತಕ ಉದ್ಯಮದ ಮೂರು ಪ್ರಮುಖ ಕೊಂಡಿಗಳಾದ ಪ್ರಕಾಶಕರು, ಪುಸ್ತಕ ಮಾರಾಟ ಗಾರರು ಮತ್ತು ಗ್ರಂಥಾಲಯಗಳನ್ನು ಪ್ರತಿನಿಧಿಸುವ ದಿನವಾಗಿದೆ. ಇವರೆಲ್ಲರೂ ಪುಸ್ತಕಗಳ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ನೆನಪಿಸುವ ಮತ್ತು ಇಂದಿನ ಆಧುನಿಕ ತಂತ್ರ ಜ್ಞಾನ ಜಗತ್ತಿನ ನಡುವೆಯೂ ಪುಸ್ತಕಗಳು ಉಳಿಸಿಕೊಂಡಿರುವ ಮಹತ್ವವನ್ನು ಸಾರುವ ದಿನ ಇದಾಗಿದೆ.

ಆರಂಭ: ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಅಥವಾ ಅಂತಾರಾಷ್ಟ್ರೀಯ ಪುಸ್ತಕ ದಿನವನ್ನು ಪ್ರತೀ ವರ್ಷ ಎ.23ರಂದು ಆಚರಿಸಲಾಗುತ್ತದೆ. ಆರಂಭದಲ್ಲಿ ವೆಲಿನ್ಸಿಯಾದ ಬರಹಗಾರ ವಿಸೆಂಟ್‌ ಕ್ಲವೆಲ್‌ ಆಂಡ್ರೊéà ಅವರ ಜನ್ಮದಿನವಾದ ಅ.7ರಂದು ಪುಸ್ತಕ ದಿನವನ್ನು ಆಚರಿಸಲಾಗುತ್ತಿದ್ದರೆ ಅನಂತರ ಅವರು ಮರಣ ಹೊಂದಿದ ಅಂದರೆ ಎ.23ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು. ಅದಲ್ಲದೆ ಇದೇ ದಿನ ದಂದು ಪ್ರಮುಖ ಲೇಖಕರಾದ ವಿಲಿಯಂ ಶೇಕ್ಸ್‌ ಪಿಯರ್‌, ಮಿಗುಯೆಲ್‌ ಡಿ. ಸರ್ವಾಂಟೆಸ್‌ ಮತ್ತು ಇಂಕಾಗಾರ್ಸಿ ಲಾಸೊಡೆ ಲಾವೆಗಾ ಮರಣ ಹೊಂದಿದ್ದು ಈ ಕಾರಣದಿಂದಾಗಿ ಈ ದಿನವನ್ನೇ ಆಯ್ಕೆ ಮಾಡಲಾಯಿತು.

1995ರಲ್ಲಿ ಯುನೆಸ್ಕೋ ಎ.23ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಎಂದು ಅಧಿಕೃತವಾಗಿ ಘೋಷಿಸಿತು. ಉದ್ದೇಶ: ಜನರಲ್ಲಿ ಓದುವ, ಅಭಿರುಚಿ ಹೆಚ್ಚಿಸುವ ಮತ್ತು ಕೃತಿಸ್ವಾಮ್ಯದ ಬಗ್ಗೆ ಜಾಗೃತಿ ಮೂಡಿಸಲು, ಲೇಖಕರಿಗೆ ಗೌರವ ಸಲ್ಲಿಸಲು, ಹೊಸ ಲೇಖಕರಿಗೆ ಬರೆಯಲು ಸ್ಪೂರ್ತಿಯಾಗಿ ವಿಶ್ವ ಪುಸ್ತಕ ದಿನವನ್ನು ಆಚರಣೆಗೆ ತರಲಾಯಿತು. ಇಂದಿನ ಆಧುನಿಕ ಮಾಧ್ಯಮಗಳ ಭರಾಟೆ ಯಿಂದಾಗಿ ಪುಸ್ತಕ ಓದುಗರರ ಸಂಖ್ಯೆ ಕ್ಷೀಣಿ ಸುತ್ತಿರುವುದಂತೂ ನಿಜ. ಮೊಬೈಲ್‌ಗ‌ಳಲ್ಲಿ ಸಣ್ಣ ಮಟ್ಟಿನ ಕಥೆ, ಕವನಗಳನ್ನು ಓದಿ ಮುಗಿಸುವ ಕಾಲಘಟ್ಟಕ್ಕೆ ನಾವು ಬಂದು ತಲುಪಿದ್ದೇವೆ. ಇಂಟರ್‌ನೆಟ್‌ ಯುಗದಲ್ಲಿ ವಿಶ್ವವೇ ಒಂದು ಹಳ್ಳಿಯಾಗಿ ಮಾರ್ಪಟ್ಟಿರುವಾಗ ಈ ಪುಸ್ತಕಗಳ ಜಂಜಾಟ ಯಾಕೆ? ಎಂದು ಮೂಗು ಮುರಿಯುವವರಿಗೇನೂ ಕಡಿಮೆ ಇಲ್ಲ. ಆದರೆ ಈ ತಂತ್ರಜ್ಞಾನಾಧರಿತ ಓದು ಮತ್ತು ಪುಸ್ತಕದ ಓದಿನ ಪರಿಣಾಮಗಳು ಮಾತ್ರ ವಿಭಿನ್ನ.

ಪುಸ್ತಕ ಓದುವ ಹವ್ಯಾಸವುಳ್ಳವನಿಗೆ ಅಡ್ಡ ಪರಿಣಾಮ ಬಾಧಿಸಲಾರದು. ತಂತ್ರಜ್ಞಾನಾಧರಿತ ಓದು ನಿಮ್ಮ ದೇಹಾರೋಗ್ಯದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತವೆ. ಲೇಖಕ, ಪ್ರಕಾಶಕ, ಮಾರಾಟಗಾರರಿಗೆ ಓದುಗನೇ ಸರ್ವಸ್ವ. ಪುಸ್ತಕಗಳನ್ನು ಕೊಂಡು ಓದಿದಾಗ ಇವ ರೆಲ್ಲರ ಜೀವನಬಂಡಿ ಸಾಗಲು ಸಾಧ್ಯ. ಪುಸ್ತಕದಲ್ಲಿನ ವಿಷಯಗಳ ಕುರಿತಂತೆ ಮತ್ತು ಹೊಸ ಹೊಸ ವಿಷಯಗಳ ವಿನಿಮಯವಾದಾಗ ಮುಂದಿನ ದಿನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗಲು ಸಾಧ್ಯ. ಹೀಗಾದಲ್ಲಿ ಬರಹಗಾರರಿಗೂ ಹೊಸ ಸ್ಫೂರ್ತಿ, ಪ್ರೇರಣೆ ಲಭಿಸಿ ಅವರು ಪುಸ್ತಕಗಳನ್ನು ಪ್ರಕಟಿಸಲು ಸಹಜವಾಗಿಯೇ ಆಸಕ್ತಿ ತೋರುತ್ತಾರೆ. ಪುಸ್ತಕದ ಮೂಲಕ ಮೌಲ್ಯಯುತ ವಿಷಯಗಳನ್ನು ಓದುಗರಿಗೆ ಉಣಬಡಿಸುವ ಕೆಲಸವಾಗಬೇಕಾಗಿದೆ. “ಎಷ್ಟು ಓದುತ್ತೇವೊ ಅಷ್ಟು ಜ್ಞಾನ ಶಕ್ತಿ ಬೆಳೆಯುತ್ತದೆ’ ಎಂಬ ಮಾತನ್ನು ಕೇಳಿರಬಹುದು. ಇದು ಅಕ್ಷರಶಃ ನಿಜ. ಪ್ರತಿಯೊಂದೂ ಓದು ನಿಮ್ಮ ಜ್ಞಾನವನ್ನು ವೃದ್ಧಿಸುವುದರ ಜತೆಯಲ್ಲಿ ನಿಮ್ಮ ಯೋಚನಾ ಲಹರಿ, ಮನೋಭಾವ ಬದಲಾವಣೆಗೆ ಕಾರಣ ವಾಗಬಹುದು. ಪುಸ್ತಕ ಓದನ್ನು ಆರಂಭದಲ್ಲಿ ಹವ್ಯಾಸವಾಗಿಸಿಕೊಂಡಲ್ಲಿ ಕಾಲಕ್ರಮೇಣ ಇದು ನಿಮ್ಮ ಬದುಕಿನ ಭಾಗವಾಗಿ ಮಾರ್ಪಡುತ್ತದೆ. ಹೊಸ ವಿಷಯ ಮತ್ತು ನವೀನ ಶೈಲಿಯ ಬರಹಗಾರರ ಪುಸ್ತಕಗಳಿಗೆ ಓದುಗರು ಇದ್ದೇ ಇರುತ್ತಾರೆ. ಹಾಗೆಂದು ಕೃತಿ ಚೌರ್ಯ ಸರ್ವಥಾ ಸಲ್ಲದು. ಬರಹಗಾರರಾದವರು ಮತ್ತು ಬರಹಗಾರರಾಗಲು ಆಸಕ್ತಿಯುಳ್ಳವರು ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡು ಸ್ವಂತಿಕೆ ಉಳಿಸಿಕೊಂಡಲ್ಲಿ ತಮ್ಮದೇ ಆದ ಓದುಗ ವರ್ಗವನ್ನು ಹೊಂದುವುದರಲ್ಲಿ ಸಂಶಯವಿಲ್ಲ.

Advertisement

ಈ ವರ್ಷದ ಧ್ಯೇಯ
“ಓದಿ, ಆಗ ನಿಮಗೆಂದೂ ಒಂಟಿತನ ಕಾಡಲಾರದು’- ಇದು ಈ ವರ್ಷದ ಪುಸ್ತಕ ದಿನದ ಧ್ಯೇಯವಾಕ್ಯ. ಓದುವ ಹವ್ಯಾಸ ವುಳ್ಳವರಿಗೆ ತಾನು ಒಂಟಿ ಎಂಬ ಅನಾಥ ಪ್ರಜ್ಞೆ ಎಂದೂ ಬಾಧಿಸಲಾರದು. ಪುಸ್ತಕಗಳು ಓದುಗನ ಒಡನಾಡಿಯಾಗಿ ಎಲ್ಲ ಸಮಯದಲ್ಲಿಯೂ ಜತೆಯಾಗಿರುತ್ತದೆ.

– ಪ್ರೀತಿ ಭಟ್‌, ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next