Advertisement

ಗುತ್ತಿಗೆ ಪೌರ ಕಾರ್ಮಿಕರಿಂದ ಪ್ರತಿಭಟನೆ

02:31 PM May 21, 2022 | Team Udayavani |

ರಾಮನಗರ: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ಪರಿಗಣಿಸ ಬೇಕು ಎಂಬ ಬೇಡಿಕೆಯೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ನೇರ ಪಾವತಿ ಪೌರಕಾರ್ಮಿಕರ ಸಂಘದ ಆಶ್ರಯದಲ್ಲಿ ಗುತ್ತಿಗೆ ಪೌರಕಾರ್ಮಿಕರು ಮತ್ತು ಸಿಬ್ಬಂದಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾರ್ಯನಿರ್ವಹಿಸುತ್ತಿರುವ ನೇರ ಪಾವತಿ, ಗುತ್ತಿಗೆ ಕ್ಷೇಮಾಭಿವೃದ್ಧಿ, ಟೈಮ್‌ ಸ್ಕೇಲ್‌ ಪೌರಕಾರ್ಮಿಕರು, ಒಳಚರಂಡಿ ಸ್ವತ್ಛತಾ ಕಾರ್ಮಿಕರು,ಲೋಡರ್, ಕ್ಲೀನರ್, ಸಹಾಯಕರು, ಕಸದ ವಾಹನ ಚಾಲಕರನ್ನು ಏಕಕಾಲಕ್ಕೆ ಖಾಯಂ ಮಾಡಬೇಕು.2017-18ನೇ ಸಾಲಿನಲ್ಲಿ ರಾಜ್ಯ ಸಚಿವ ಸಂಪುಟ ಈವಿಚಾರದಲ್ಲಿ ನಿರ್ಣಯ ಕೈಗೊಂಡಿದೆ. ಆ ನಿರ್ಣಯವನ್ನು ಅನುಷ್ಠಾನಕ್ಕೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಪುಟದ ನಿರ್ಣಯ ಅನುಷ್ಠಾನವಾಗಿಲ್ಲ:

2017-18ನೇ ಸಾಲಿನಲ್ಲಿದ್ದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಲು ನಿರ್ಧರಿಸಲಾಗಿತ್ತು. ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡಲು ನಿರ್ಣಯಮಾಡಲಾಗಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆಮತ್ತು ಪೌರಾಡಳಿತ ನಿರ್ದೇಶನಾಲಯದಲ್ಲಿರುವದಲಿತ ಪೌರಕಾರ್ಮಿಕರ ವಿರೋಧಿ ಅಧಿಕಾರಿಗಳು ಸಚಿವ ಸಂಪುಟದ ನಿರ್ಣಯವನ್ನು ಅನುಷ್ಠಾನಗೊಳಿಸಿಲ್ಲ. ಈ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅವರು ನೀಡುವ ಕಮೀಷನ್‌ಗೆ ಆಸೆ ಪಟ್ಟು ಇಡೀ ಕಾರ್ಮಿಕರನ್ನು ನೇರಪಾವತಿ, ನೇರ ನೇಮಕಾತಿ, ಗುತ್ತಿಗೆ, ಟೈಂ ಸ್ಕೇಲ್‌ ಈ ರೀತಿ ಅಸಂಬದ್ದ ಗುಂಪುಗಳಾಗಿ ಮಾಡಿಅವರ ಬದುಕನ್ನು ನಾಶ ಮಾಡುವಂತಹ ನಿಯಮಗಳನ್ನು ಜಾರಿ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಬೇಡಿಕೆ ಈಡೇರಿಸಿ: ಗುತ್ತಿಗೆ ಪದ್ಧತಿ ರದ್ದು ಮಾಡಿ, ಎಲ್ಲರನ್ನು ಖಾಯಂ ನೌಕರರು ಎಂದು ಪರಿಗಣಿಸಬೇಕು.ನೇರ ವೇತನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾವನ್ನಪ್ಪಿದನೇರ ಪಾವತಿ ಪೌರಕಾರ್ಮಿರ ಕುಟುಂಬದ ಸದಸ್ಯರಿಗೆನೇರವೇತನ ಸದರಿ ಕೆಲಸ ನೀಡುವುದು, ಪೌರ ಕಾರ್ಮಿಕರ ದಿನಾಚರಣೆ ವೇಳೆ ನೇರ ನೇಮಕಾತಿ ಪೌರಕಾರ್ಮಿಕರಿಗೆ 7500 ರೂ. ಬೋನಸ್‌ ಕೊಡಬೇಕು.  ನೌಕರರಿಗೆ ಸಿ.ಎಲ್‌ ರಜೆ ಕೊಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

Advertisement

ಅನಿರ್ಧಿಷ್ಠಾವಧಿ ಪ್ರತಿಭಟನೆಯ ಎಚ್ಚರಿಕೆ: ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಒಂದು ದಿನದ ಸಾಂಕೇತಿಕವಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗಿದೆ. ಇನ್ನು ಒಂದು ತಿಂಗಳಲ್ಲಿ ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ರಾಜ್ಯಾದ್ಯಂತ ಅನಿರ್ಧಿಷ್ಠಾವಧಿಗೆ ಕೆಲಸವನ್ನು ಸ್ಥಗಿತಗೊಳಿಸಿ, ಮುಷ್ಕರನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.ಪ್ರತಿಭಟನಾಕರರು ಜಿಲ್ಲಾಧಿಕಾರಿಗಳ ಮೂಲಕಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಚಲಪತಿ,ಉಪಾಧ್ಯಕ್ಷ ರಾಜು, ಕಾರ್ಯದರ್ಶಿ ಎಂ.ಗಣೇಶ್‌, ಚಿಕ್ಕನರಸಯ್ಯ, ಉಮಾಶಂಕರ್‌, ಮಹೇಂದ್ರ, ಪುಟ್ಟಸ್ವಾಮಿ ಮುಂತಾದವರು ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next