Advertisement

ಕಾರ್ಯಕರ್ತರಿಗೆ ನಿರಾಸೆ ಮೂಡಿಸಿದ ಸಿಎಂ 

07:25 AM Mar 06, 2019 | Team Udayavani |

ಕೋಲಾರ: ಜಿಲ್ಲೆಗೆ ಮುಖ್ಯಮಂತ್ರಿಗಳಾದ ನಂತರ ಪ್ರಥಮ ಬಾರಿಗೆ ಬಂದ ಕುಮಾರಸ್ವಾಮಿ ಕಾರ್ಯಕರ್ತರ ಸಂಕಷ್ಟಗಳಿಗೆ ಸ್ಪಂದಿಸುವ ಸಣ್ಣ ಪ್ರಯತ್ನ ಮಾಡದೆ ತೆರಳುವ ಮೂಲಕ ಜಿಲ್ಲೆಯ ಜೆಡಿಎಸ್‌  ನಾಯಕರ ನಿರ್ಲಿಪ್ತ ವರ್ತನೆಯಿಂದ ಬೇಸತ್ತಿದ್ದಾರೆಯೇ ಎನ್ನುವ ಅನುಮಾನ ಬರುವಂತೆ ಮಾಡಿದರು. ಅಲ್ಲದೇ, ತಮ್ಮ ಭೇಟಿ ವೇಳೆ ರಾಜಕೀಯವಾಗಿ ಏನನ್ನೂ ಮಾತನಾಡದಿದ್ದದ್ದು ಜೆಡಿಎಸ್‌ ಕಾರ್ಯಕರ್ತರ ನಿರಾಸೆಗೆ ಕಾರಣವಾಗಿತ್ತು.

Advertisement

ಸಮಾವೇಶಕ್ಕೆ ಸೂಚನೆ, ಮುಖಂಡರ ನಿರಾಸಕ್ತಿ: ಸಿಎಂ ಕುಮಾರಸ್ವಾಮಿ ವಾರದ ಹಿಂದೆ ಕೋಲಾರ ಜಿಲ್ಲೆಯ ಮುಖಂಡರ ಸಭೆ ಕರೆದು ಮಾ.5 ರಂದು ತಾವು ಕೋಲಾರಕ್ಕೆ ಆಗಮಿಸುತ್ತಿದ್ದು ಸಮಾವೇಶ ಆಯೋಜಿಸುವಂತೆ  ಸಲಹೆ ನೀಡಿದ್ದರು. ಹೀಗಾಗಿ ಜಿಲ್ಲಾ ಮುಖಂಡರ ಸಭೆ ಕರೆಯಲಾಗಿತ್ತು. ಆದರೆ, ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಇತರರು ಸಮಾವೇಶ ನಡೆಸಲು ಆಸಕ್ತಿ ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಮಾವೇಶ ರದ್ದಾಗಿತ್ತು. 

ಜೊತೆಗೆ ಕಳೆದ ವರ್ಷ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಕೇವಲ ಕೋಲಾರದಲ್ಲಿ ಮಾತ್ರವೇ ವರ್ತೂರು ವಿರೋಧಿ ಅಲೆಯಲ್ಲಿ ಗೆಲುವು ಸಂಪಾದಿಸಿದ್ದು ಬಿಟ್ಟರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿತ್ತು. ಜೆಡಿಎಸ್‌ಗೆ ಭದ್ರಕೋಟೆಯಾಗಿದ್ದ ಕೋಲಾರ ಜಿಲ್ಲೆಯನ್ನು ಹೀಗೆ ಮಾಡಿದ್ದ ಸ್ಥಳೀಯ ಮುಖಂಡರ ಬಗ್ಗೆ ಜೆಡಿಎಸ್‌ ವರಿಷ್ಠರಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನ ಕುಮಾರಸ್ವಾಮಿ ವರ್ತನೆ ಮೂಲಕ ಬಹಿರಂಗವಾಯಿತು ಎನ್ನಲಾಗುತ್ತಿದೆ.

ಸಾಮಾನ್ಯವಾಗಿ ಕುಮಾರಸ್ವಾಮಿ ಜಿಲ್ಲೆಗೆ ಆಗಮಿಸುವಾಗ ಹೆದ್ದಾರಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಕಾರ್ಯಕರ್ತರನ್ನು ಕಾರಿನಿಂದಿಳಿದು ಮಾತನಾಡಿಸಿ ಮಾಲಾರ್ಪಣೆ ಸ್ವೀಕರಿಸಿ ಹೋಗುತ್ತಿದ್ದರು. ಆದರೆ, ಈ ಬಾರಿ ಸ್ವಾಗತಿಸಲು ಬಂದ ನೂರಾರು ಕಾರ್ಯಕರ್ತರನ್ನು ಕಾರಿನಿಂದಿಳಿಯದೇ ನೆಪಮಾತ್ರಕ್ಕೆ ಕೈಬೀಸಿ ಹೋಗಿದ್ದು ಆಶ್ಚರ್ಯ ತರಿಸುವಂತಿತ್ತು. 

ಅಸಮಾಧಾನ: ಕೋಚಿಮುಲ್‌ ಕಾರ್ಯಕ್ರಮದ ಬಳಿಕ, ಮುಖ್ಯಮಂತ್ರಿ ಕುಮಾರಸ್ವಾಮಿ ಪೂರ್ವ ನಿಗದಿಯಾಗಿದ್ದಂತೆ ಪಿ.ಸಿ.ಬಡಾವಣೆಯ ಗೋವಿಂದರಾಜು ಎನ್ನುವವರ ಮನೆಗೆ ತೆರಳಿ ಊಟ ಮುಗಿಸಿದ್ದರು.ಈ ವೇಳೆ ಜೆಡಿಎಸ್‌ ಸಮಾವೇಶ ಕುರಿತು ಸ್ಥಳೀಯ ಮುಖಂಡರಲ್ಲಿ ತಮ್ಮ ಅಸಮಾಧಾನ ತೋರ್ಪಡಿಸಿದ್ದಾರೆ. ಇದಕ್ಕೆ ಸಮಜಾಯಿಷಿ ನೀಡಲು ಬಂದ ಮುಖಂಡರ ಮಾತುಗಳಿಗೆ ಮುಖ್ಯಮಂತ್ರಿಗಳು ಕಿವಿಗೊಡಲಿಲ್ಲವೆಂದು ತಿಳಿದು ಬಂದಿದೆ. ಇನ್ನು ಇದೇ ಭಾಗದ ಜೆಡಿಎಸ್‌ ಮುಖಂಡರಾದ ವಕ್ಕಲೇರಿ ರಾಮು, ಸಿಎಂಆರ್‌ ಹರೀಶ್‌ರ ಮನೆಗಳಿಗೂ ಭೇಟಿ ನೀಡಲಿಲ್ಲ. 

Advertisement

ಲೋಕ ಕಣಕ್ಕಿಳಿಯದ ಮುನ್ಸೂಚನೆಯೇ?: ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ಸ್ಪರ್ಧಿಯಾಗಿದ್ದ ಜೆಡಿಎಸ್‌ ಇದೀಗ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಾದಿಯತ್ತ ಸಾಗಿರುವುದು ನಿಷ್ಟಾವಂತ ಕಾರ್ಯಕರ್ತರಿಗೆ ನೋವು ತರಿಸಿದೆ. ಮೈತ್ರಿ ಇಲ್ಲದಿರುವಾಗಲೇ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕೊನೇ ಕ್ಷಣದಲ್ಲಿ ಸಂಸದ ಕೆ.ಎಚ್‌.ಮುನಿಯಪ್ಪ ಅವರಿಗೆ ಅನುಕೂಲ ಕಲ್ಪಿಸುವರೆಂಬ ಆರೋಪ ಎದುರಿಸುತ್ತಿರುವ ಜೆಡಿಎಸ್‌ ವರಿಷ್ಠರು, ಈಗಲೂ ಅವರ  ಹಾದಿ ಸುಗಮವಾಗಿಸಲು ಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ತೇಲಾಡುತ್ತಿದೆ. ಜೆಡಿಎಸ್‌ ಅಭ್ಯರ್ಥಿಯನ್ನೇ ಹಾಕದ ಮೇಲೆ ಇಲ್ಲಿನ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚಿಸುವ ಅಗತ್ಯವೇನಿದೆ. ಕಾಲಹರಣ ಮಾಡುವುದೇಕೆ ಎಂಬ ಕಾರಣದಿಂದಲೇ ಬೆಂಗಳೂರಿಗೆ ವಾಪಸ್ಸಾದರೇ ಎಂಬ ಅನುಮಾನ ಮೂಡುವಂತಾಗಿದೆ.

ಸ್ಪೀಕರ್‌ ಬಣದಲ್ಲಿ ಮುಖಂಡರು: ಈ ನಡುವೆ ಸಂಸದ ಕೆ.ಎಚ್‌.ಮುನಿಯಪ್ಪ ವಿರೋಧಿ ಬಣದೊಂದಿಗೆ ಪûಾತೀತವಾಗಿ ಹಲವು ಜೆಡಿಎಸ್‌ ಮುಖಂಡರು ಕೈಜೋಡಿಸಿದ್ದಾರೆ. ಇದರಲ್ಲಿ ಶಾಸಕ ಶ್ರೀನಿವಾಸಗೌಡರು ಹೊರತಾಗಿಲ್ಲ. ರಾಜ್ಯದ ಮೈತ್ರಿ ಸರ್ಕಾರದಲ್ಲಿ ಸ್ಥಾನ ಹೊಂದಾಣಿಕೆಯಾಗಿ ಕೋಲಾರವನ್ನು ಕೆ.ಎಚ್‌.ಮುನಿಯಪ್ಪರಿಗೆ ಬಿಟ್ಟುಕೊಟ್ಟರೆ ಜಿಲ್ಲೆಯಲ್ಲಿ ಜೆಡಿಎಸ್‌ ಅಸ್ತಿತ್ವಕ್ಕೆ ಹೊಡೆತ ಬೀಳುವುದಂತೂ ಗ್ಯಾರೆಂಟಿ ಎಂಬುದು ಕಾರ್ಯಕರ್ತರ ಮಾತಾಗಿದೆ.

ಸ್ಪೀಕರ್‌ ರಮೇಶ್‌ಕುಮಾರ್‌ ಸೇರಿ ಈ ಬಣದ ಪ್ರಮುಖ ಮುಖಂಡರಾದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಇತರರು ಕೋಚಿಮುಲ್‌ ಕಾರ್ಯಕ್ರಮದಲ್ಲಿ ಗೈರಾಗಿದ್ದು ಎದ್ದು ಕಾಣಿಸುತ್ತಿತ್ತು. ಸಂಸದ ಕೆ.ಎಚ್‌.ಮುನಿಯಪ್ಪ ಅವರು ಕೋಚಿಮುಲ್‌ ಕಾರ್ಯಕ್ರಮ ಆರಂಭವಾಗುವ ಮುನ್ನವೇ ರೈಲ್ವೆ ಕಾರ್ಯಕ್ರಮದ ನೆಪವೊಡ್ಡಿ ತೆರಳಿದ್ದರು. ಒಟ್ಟಾರೆ ಮುಖ್ಯಮಂತ್ರಿಯಾದ ಮೊದಲ ಬಾರಿಗೆ ಜಿಲ್ಲೆಗೆ ಬಂದರೂ ಕಾರ್ಯಕರ್ತರತ್ತ ಮುಖ ಮಾಡದ ಕುಮಾರಸ್ವಾಮಿ ವರ್ತನೆ ಹಿಂದೆ ಸಂಸದ ಕೆ.ಎಚ್‌.ಮುನಿಯಪ್ಪ ಅವರ ರಾಜಕೀಯ ತಂತ್ರಗಾರಿಕೆಯೂ ಇರಬಹುದೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next