Advertisement

Bangalore: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವು

10:38 AM Dec 26, 2023 | Team Udayavani |

ಬೆಂಗಳೂರು: ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕಾಗಿ ತೊಡಲಾ ಗುತ್ತಿದ್ದ ಪಾಯದ ಮಣ್ಣು ಕುಸಿದು ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿರುವ ಘಟನೆ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ. ಬಿಹಾರ ಮೂಲದ ರಂಜನ್‌ಕುಮಾರ್‌ ಮೃತ ಕಾರ್ಮಿಕ. ಮಣ್ಣಿನ ಅಡಿ ಸಿಲುಕಿದ್ದ ಮತ್ತೂಬ್ಬ ಕಾರ್ಮಿಕನ ರಕ್ಷಣೆ ಮಾಡಲಾಗಿದ್ದು, ಆತನಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ರಂಜನ್‌ಕುಮಾರ್‌, ಸುದ್ದಗುಂಟೆಪಾಳ್ಯದಲ್ಲಿ ಸ್ನೇಹಿತರ ಜತೆ ವಾಸವಾಗಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸ ಮಾಡುತ್ತಿದ್ದ. ಸೋಮವಾರ ಸುದ್ದಗುಂಟೆಪಾಳ್ಯದಲ್ಲಿ ಮೊಹಮ್ಮದ್‌ ಆರೀಫ್ ಎಂಬವರು ತಮ್ಮ ಖಾಲಿ ನಿವೇಶನದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಲು ಮಜರ್‌ ಖಾನ್‌ಗೆ ಗುತ್ತಿಗೆ ನೀಡಿದ್ದರು. ಮಜರ್‌ಖಾನ್‌ ಸೂಚನೆ ಮೇರೆಗೆ ರಂಜನ್‌ ಕುಮಾರ್‌ ಮತ್ತು ಇತರೆ ಕಾರ್ಮಿಕರು ಅಪಾರ್ಟ್‌ಮೆಂಟ್‌ ನಿರ್ಮಾಣ ಸಂಬಂಧ ಜೆಸಿಬಿ ಮೂಲಕ ಪಾಯ ತೆಗೆಯಲು ಮಣ್ಣು ತೊಡಲಾಗುತ್ತಿತ್ತು.

ಈ ವೇಳೆ ಜೆಸಿಬಿಯ ಬಕೆಟ್‌ ಪಕ್ಕದ ಕಟ್ಟಡಕ್ಕೆ ಜೋರಾಗಿ ತಗುಲಿದೆ. ಅದರ ಪರಿಣಾಮ ಜೆಸಿಬಿ ಅಲುಗಾಡಿದ್ದು, ಅದರ ಒತ್ತಡಕ್ಕೆ ಪಾಯದ ಅಕ್ಕ-ಪಕ್ಕದಲ್ಲಿದ್ದ ಮಣ್ಣು ಕುಸಿದು, ರಂಜನ್‌ ಸೇರಿ ಇಬ್ಬರು ಕಾರ್ಮಿಕರ ಮೇಲೆ ಬಿದ್ದಿತ್ತು. ಕೂಡಲೇ ಇತರೆ ಕಾರ್ಮಿಕರು ಹಾಗೂ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಆಗ ಒಬ್ಬ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ. ಮತ್ತೂಬ್ಬ ಕಾರ್ಮಿಕ ರಂಜನ್‌ ಕುಮಾರ್‌ ಮೇಲೆ ಇನ್ನಷ್ಟು ಮಣ್ಣು ಬಿದ್ದು ಆತ ಊಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಕೆಲಸದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರದ ಆರೋಪದ ಮೇಲೆ ನಿವೇಶನ ಮಾಲೀಕ ಮೊಹಮ್ಮದ್‌ ಆರೀಫ್ ಮತ್ತು ಕಟ್ಟಡ ನಿರ್ಮಾಣ ಗುತ್ತಿಗೆದಾರ ಮಜರ್‌ ಖಾನ್‌, ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next