ಮೈಸೂರು: ಭೂ ಸ್ವಾಧೀನಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಪೀಠೊಪಕರಣಗಳನ್ನು ಜಪ್ತಿ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಬಡಾವಣೆ ನಿರ್ಮಾಣ ಉದ್ದೇಶಕ್ಕಾಗಿ ಮೈಸೂರು ತಾಲೂಕಿನ ಉತ್ತನಹಳ್ಳಿಯ ರೈತ ಕರಿಯಪ್ಪ ಎಂಬುವರಿಗೆ ಸೇರಿದ 2.24 ಎಕರೆ ಜಮೀನನ್ನು ಮುಡಾ ವತಿಯಿಂದ 1997ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಭೂ ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಪ್ರತಿ ಎಕರೆಗೆ 17 ಲಕ್ಷ ರೂ.ಪರಿಹಾರ ನಿಗದಿ ಪಡಿಸಿ, ಶೇ.25 ಪರಿಹಾರವನ್ನು ನೀಡಲಾಗಿತ್ತು. ಆದರೆ ಬಾಕಿ ಹಣವನ್ನು ನೀಡದ ಹಿನ್ನೆಲೆಯಲ್ಲಿ ಬೇಸತ್ತ ರೈತ ಕರಿಯಪ್ಪ ಪರಿಹಾರದ ಹಣಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಮೈಸೂರಿನ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ರೈತ ಕರಿಯಪ್ಪ ಅವರಿಗೆ 1.03 ಕೋಟಿ ರೂ. ಪರಿಹಾರ ನೀಡುವಂತೆ ಮಾ.25 ರಂದು ಆದೇಶಿಸಿತ್ತು. ಆದರೆ ನ್ಯಾಯಾಲಯದ ಆದೇಶ ದೊರೆತು 15 ದಿನವಾದರೂ ಮುಡಾದಿಂದ ಯಾವುದೇ ಕ್ರಮವಹಿಸಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಅಮೀನರು, ರೈತ ಕರಿಯಪ್ಪ ಅವರ ಪರ ವಕೀಲ ಲೋಕೇಶ್ ಅವರೊಂದಿಗೆ ಮುಡಾ ಭೂಸ್ವಾಧೀನ ಅಧಿಕಾರಿಯ ಕಚೇರಿಯಲ್ಲಿದ್ದ ಪೀಠೊ
ಪಕರಣಗಳನ್ನು ಜಪ್ತಿ ಮಾಡಿದರು.