Advertisement

ಮಹಿಳಾಮಣಿಗಳ ಕೈಪಿಡಿದ ಬ್ರಹ್ಮಕಪಾಲ

06:18 PM Nov 28, 2019 | mahesh |

ಪುರುಷರು ಸ್ತ್ರೀವೇಷ ಹಾಕಿ ಎಷ್ಟೇ ಮರೆದಾಡಿದರೂ,ಸ್ತ್ರೀ ಸಹಜ ಭಾವನೆಗಳನ್ನು ವ್ಯಕ್ತಪಡಿಸಿದರೂ
ಇಂದಿನ ಯಕ್ಷಗಾನಾಭಿಮಾನಿಗಳು ಬಯಸುವುದು ಯಕ್ಷ-ನಾಟಕ-ನೃತ್ಯ ಸಮ್ಮಿಲನವನ್ನು.

Advertisement

ಉಡುಪಿಯಲ್ಲಿ ಇತ್ತೀಚೆಗೆ ಮಹಿಳಾ ಕಲಾವಿದರು, ಎರಡು ಪಾತ್ರಗಳನ್ನು ಹೊರತುಪಡಿಸಿ (ಇವುಗಳನ್ನು ಮಹಿಳೆಯರೇ ನಿರ್ವಹಿಸಬಹುದಿತ್ತು) ಪ್ರದರ್ಶಿಸಿದ ಪೌರಾಣಿಕ ಯಕ್ಷಗಾನ ಪ್ರಸಂಗ “ಬ್ರಹ್ಮಕಪಾಲ’ ಜನಮೆಚ್ಚುಗೆ ಗಳಿಸಿತು.

ಜನಪ್ರಿಯ ಹಾಗೂ ಪ್ರಚಲಿತ ಬ್ರಹ್ಮಕಪಾಲ ಕಥೆ ಬ್ರಹ್ಮನ ಅನಧಿಕೃತ ಪಂಚಮ ಶಿರಕ್ಕೆ ಶಿವ ಕೈ ಹಾಕಿ ಅದು ಶಿವನ ಕೈಗಂಟಿಕೊಂಡು ಅವನು ಅನುಭವಿಸುವ ದುಃಖ, ನೋವು, ಅವಮಾನ ಹಾಗೂ ಕೊನೆಯಲ್ಲಿ ಮಹಾವಿಷ್ಣು ಸಮಸ್ಯೆಯನ್ನು ಬಗೆಹರಿಸುವ ಸುಂದರ ಕತೆಯನ್ನೊಳಗೊಂಡಿದೆ.

ಶಿವ (ಸೌಮ್ಯಾ ಅರುಣ್‌) ಹಾಗೂ ದೇವೇಂದ್ರ (ನಾಗರತ್ನ ಹೇಳೆì) ಇವರ ಸಂವಾದದ ಮೂಲಕ ಪ್ರಾರಂಭಗೊಂಡ ಪ್ರಸಂಗದಲ್ಲಿ ಮುಂದೆ ಬ್ರಹ್ಮನ (ಅಶ್ವಿ‌ನಿ ಕೊಂಡದಕುಳಿ) ಪ್ರವೇಶದೊಂದಿಗೆ ಕಳೆಗಟ್ಟಿತು. ತನ್ನ ಮಾನಸ ಪುತ್ರಿ ಶಾರದೆಗೆ ವಿದ್ಯಾಧಿದೇವತೆಯ ಪಟ್ಟಕಟ್ಟುವ ಕಥಾನಕವನ್ನು ಬ್ರಹ್ಮ ವೇಷಧಾರಿ ಸುಂದರವಾಗಿ ನಿರೂಪಿಸಿದರು. ನಂತರದಲ್ಲಿ ಶಾರದೆಯಾಗಿ ಕು| ವಿಂಧ್ಯಾ ಆಚಾರ್ಯ ಕಂಗೊಳಿಸಿದರು. ಭಾಗವತರ ಕಂಠಸಿರಿಗೆ ಸವಾಲೆನ್ನುವಂತೆ ಯಕ್ಷನಾಟ್ಯದ ಹಲವು ಮಜಲುಗಳನ್ನು ತೆರೆದಿಟ್ಟ ಕಲಾವಿದೆ ತನ್ನ ಒನಪು-ವಯ್ನಾರಗಳಿಂದ ಕಲಾರಸಿಕರ ಮನಸೂರೆಗೊಂಡರು. ಈಕೆಯ ನರ್ತನ ವೈವಿಧ್ಯ ಹಾಗೂ ನೃತ್ಯದಲ್ಲಿನ ಲಾಲಿತ್ಯ ಕಂಡಾಗ ಭರತನಾಟ್ಯ ಹಿನ್ನಲೆಯಿಂದ ಬಂದಿರಬಹುದು ಎಂದು ಅನಿಸಿದ್ದು ಸುಳ್ಳಲ್ಲ. ಪುರುಷರು ಸ್ತ್ರೀವೇಷ ಹಾಕಿ ಎಷ್ಟೇ ಮರೆದಾಡಿದರೂ,ಸ್ತ್ರೀ ಸಹಜ ಭಾವನೆಗಳನ್ನು ವ್ಯಕ್ತಪಡಿಸಿದರೂ ಇಂದಿನ ಯಕ್ಷಗಾನಾಭಿಮಾನಿಗಳು ಬಯಸುವುದು ಯಕ್ಷ-ನಾಟಕ-ನೃತ್ಯ ಸಮ್ಮಿಲನವನ್ನು. ತಂದೆ-ಮಗಳ ಬಾಂಧವ್ಯವನ್ನು ಅಪವಿತ್ರಗೊಳಿಸಲು ಮನ್ಮಥನ ಪ್ರವೇಶವಾದಾಗ ಪಾತ್ರಧಾರಿಯ (ಹರೀಶ್‌ ಜಫ್ತಿ) ಶೃಂಗಾರಮಯ ಸಾಂಪ್ರದಾಯಿಕ ಕುಣಿತ ರಂಗದಲ್ಲಿ ಒಂದು ವೈಶಿಷ್ಟéಮಯ ವಾತಾವರಣ ಸೃಷ್ಟಿಸಿತು. ತನ್ನ ಭಾವಚಿತ್ರಕ್ಕೆ ಅವಮಾನ ಮಾಡಿದ ಬ್ರಹ್ಮನಿಗೆ ಮನ್ಮಥನು ಪುಷ್ಪಶರ ಎಸೆದು ಕಾಮಾತುರನನ್ನಾಗಿಸಿದ ದೃಶ್ಯಾವಳಿ ಮನಮೋಹಕವಾಗಿತ್ತು.

ಕಾಮ ಬಾಧೆಯಿಂದ ಬ್ರಹ್ಮನು ಶಾರದೆಯಲ್ಲಿ ಅನುರಕ್ತನಾದಾಗ ಕ್ರೋಧಗೊಂಡ ಈಶ್ವರನಿಗೂ ಬ್ರಹ್ಮನಿಗೂ ಮುಖಾಮುಖೀಯಾಗುತ್ತದೆ. ಈ ಸಂದರ್ಭದಲ್ಲಿ ಕೇಳಿ ಬಂದ ಹಾಡುಗಳು ಬಭ್ರುವಾಹನ ಚಲನಚಿತ್ರದ ಬಭ್ರುವಾಹನ ಹಾಗೂ ಅರ್ಜುನರ ಸಂವಾದ ರೂಪದ ಹಾಡುಗಳನ್ನು ನೆನಪಿಸುವಂತಿತ್ತು. ಸಿಟ್ಟಿನ ಪರಾಕಾಷ್ಠೆ ತಲುಪಿದ ಈಶ್ವರನು ಬ್ರಹ್ಮ ಶಿರಕ್ಕೆ ಕೈಹಾಕಲು ಆಗತಾನೆ ಮೂಡಿಬಂದ ಬ್ರಹ್ಮನ ಪಂಚಮ ಶಿರ ಶಿವನ ಕೈಗಂಟಿಕೊಳ್ಳುತ್ತದೆ. ಶತಪ್ರಯತ್ನ ಮಾಡಿದರೂ ಬ್ರಹ್ಮಕಪಾಲ ಕೈಯಿಂದ ಕಳಚಿಕೊಳ್ಳದೆ ಹೋದಾಗ ಅನಿವಾರ್ಯವಾಗಿ ಶಿವನು ಅದರ ಕ್ಷುದಾºಧೆ ನಿವಾರಣೆಗಾಗಿ ಭಿಕ್ಷೆ ಬೇಡಲು ಹೊರಟು ನಿಲ್ಲುವನು. ಜಾನಪದ ಶೈಲಿಯ “ತಂಗಿ ಶಿವನು ಭಿಕ್ಷಕೆ ಬಂದ ನೋಡು ಬಾರೆ’ ಶ್ರೋತೃಗಳ ಕ್ಷುದಾºಧೆ ನಿವಾರಿಸಿತು. ಶಿವನ ಪಯಣದಲ್ಲಿ ಎದುರಾದ ಮಹೋಗ್ರಮುನಿ (ಕಿರಣ್‌ ಪೈ)ಯ ಗರ್ವ ಭಂಗ ಮಾಡಿ ಆತನ ಪತ್ನಿ ಕುಮುದೆಯನ್ನು ಅನುಗ್ರಹಿಸುವ ಸನ್ನಿವೇಶದಲ್ಲಿ ತನ್ನ ಪತಿ ಹಾಗೂ ಶಿವನ ನಡುವಿನ ದೀರ್ಘ‌ ಸಂಭಾಷಣೆ ಮುಗಿಯುವವರೆಗೂ ಕುಮುದೆ ರುದ್ರಮಂತ್ರವನ್ನು ಪಠಿಸುತ್ತಾ ಕುಳಿತಿದ್ದದ್ದು ಗಮನಾರ್ಹವಾಗಿತ್ತು. “ತಂಪಾದುದೆನ್ನ ಮನ’ ಹಾಡು ಎಷ್ಟೊಂದು ಸೊಗಸಾಗಿ ಮೂಡಿಬಂದಿತೆಂದರೆ ಈಶ್ವರ ಪಾತ್ರಧಾರಿ ಕುಣಿಯುವದನ್ನೂ ಮರೆತು (ಧ್ಯಾನವೋ, ತೂಕಡಿಕೆಯೋ) ಕಣ್ಮುಚ್ಚಿ ಹಾಡನ್ನು ಅನುಭವಿಸುತ್ತಿರುವುದನ್ನು ನೋಡಿದ ಮದ್ದಳೆಗಾರರು ಎರಡು ಸಲ ಮದ್ದಲೆ ಶಬ್ದ ಮಾಡಿ ಶಿವನನ್ನು ಎಚ್ಚರಿಸಬೇಕಾಯಿತು. ಮುಂದೆ ಪ್ರವೇಶಗೈದ ವೈಕುಂಠದ ದ್ವಾರಪಾಲಕ ವಿಶ್ವಕ್ಸೇನ (ಕಾಸರಗೋಡು ಶ್ರೀಧರ ಭಟ್‌) ಹಾಸ್ಯದ ಲಹರಿ ಹರಿಸಿದರು. ಉಳಿದಂತೆ ಮಹಾವಿಷ್ಣು ಪಾತ್ರಧಾರಿ ಅಶ್ವಿ‌ನಿ ಶಾಸ್ತ್ರಿ, ಗಜಾಸುರನಾಗಿ ಗಾಯತ್ರಿ ಶಾಸ್ತ್ರಿ, ಕಿರಾತಕನಾಗಿ ರಮ್ಯಾ ಬ್ರಹ್ಮಾವರ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದರು. ಹಿಮ್ಮೇಳದಲ್ಲಿ ಪ್ರಸನ್ನ ಭಟ್‌ ಬಾಳ್ಕಲ್‌ ಭಾಗವತರಾಗಿ, ಪರಮೇಶ್ವರ ಭಂಡಾರಿ ಮದ್ದಳೆಗಾರರಾಗಿ, ಶಿವಾನಂದ ಕೋಟ ಚೆಂಡೆ ವಾದನದಲ್ಲಿ ವೃತ್ತಿಪರತೆ ಮೆರೆದರು.

Advertisement

ಜನನಿ ಭಾಸ್ಕರ ಕೊಡವೂರು

Advertisement

Udayavani is now on Telegram. Click here to join our channel and stay updated with the latest news.

Next