Advertisement

ಹಡಲಗೇರಿ ಗ್ರಾಪಂ ಮುಂದೆ ಮಹಿಳೆಯರ ಧರಣಿ

05:02 PM Apr 02, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ಹಡಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾತೆ ಮತ್ತು ಆಶ್ರಯ ಯೋಜನೆಯ ಮನೆಗಳು ಅತಿಕ್ರಮಣಗೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿಸುತ್ತಿರುವ ಗ್ರಾಪಂ ಆಡಳಿತದ ಬೇಜವಾಬ್ದಾರಿತನ ಖಂಡಿಸಿ ಕೆಲ ಮಹಿಳೆಯರು ಸಮಾಜ ಸೇವಕಿ ಎಂ.ಬಿ.ಮುಲ್ಲಾ ನೇತೃತ್ವದಲ್ಲಿ ಗ್ರಾಪಂ ಕಚೇರಿ ಎದುರು ಹಲಗೆ ಬಾರಿಸುವ ಮೂಲಕ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಮುಲ್ಲಾ ಅವರು, ಹಡಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮುದ್ದೇಬಿಹಾಳ ಪಟ್ಟಣಕ್ಕೆ ಹೋಗುವ ದಾರಿಯಲ್ಲಿ ಪದ್ಮಾವತಿ ದೇವಸ್ಥಾನದ ಎಡಭಾಗದ ಆಶ್ರಯ ಯೋಜನೆಗಳ ಮನೆಗಳ ನಿಜವಾದ ಫಲಾನುಭವಿಗಳ ಪಟ್ಟಿ ಮತ್ತು ಅಲ್ಲಿರುವ ಮನೆಗಳ ದಾಖಲೆಗಳನ್ನು ನೀಡುವಂತೆ ಕೇಳಿದ್ದರೂ ಗ್ರಾಪಂ ಪಿಡಿಓ ನೀಡುತ್ತಿಲ್ಲ. ಬಡವರಿಗೆ ದೊರಕಬೇಕಾದ ಆಶ್ರಯ ಮನೆಗಳಲ್ಲಿ ಸಂಬಂಧ ಇಲ್ಲದವರು ಬಂದು ವಾಸಿಸುತ್ತಿದ್ದು ಅಕ್ಕಪಕ್ಕದ ಸರ್ಕಾರಿ ಜಾಗೆಯನ್ನು ಕಬಳಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪಂಚಾಯಿತಿಯ 9 ನಂಬರ್‌ ರಜಿಸ್ಟರ್‌ನಲ್ಲೂ ಇಂಥ ಕೆಲವನ್ನು ನೋಂದಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅನಧಿಕೃತವಾಗಿ ವಾಸವಿರುವವರ ಮತ್ತು ಸರ್ಕಾರದ ಜಾಗ ಕಬಳಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪಿಡಿಒ ಶೋಭಾ ಮುದಗಲ್‌ ಅವರು, ನಾನು ಪಂಚಾಯಿತಿಗೆ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿವರೆಗೂ ಅಂಥ ಒಂದೂ ಮನೆ, ಜಾಗವನ್ನು ನೋಂದಾಯಿಸಿಲ್ಲ. ಅನ ಧಿಕೃತವಾಗಿದ್ದರೆ ಸಂಬಂಧಿಸಿದವರಿಗೆ ನೋಟಿಸ್‌ ನೀಡಲಾಗುತ್ತದೆ. ನಮ್ಮಲ್ಲೂ ಕೆಲ ದಾಖಲೆ ಲಭ್ಯವಿರುವುದಿಲ್ಲ. ಒಂದು ವಾರದ ಕಾಲಾವಕಾಶ ನೀಡಿದರೆ ನಿಮಗೆ ಬೇಕಾದ ದಾಖಲೆಗಳನ್ನು ಪೂರೈಸುವುದಕ್ಕೆ ಪ್ರಯತ್ನಿಸುತ್ತೇನೆ. ಅನಧಿಕೃವಾಗಿ ಇರುವವರಿಗೂ ದಾಖಲೆ ಸಲ್ಲಿಸುವಂತೆ ನೋಟಿಸ್‌ ನೀಡುತ್ತೇನೆ ಎಂದು ಭರವಸೆ ನೀಡಿದರು.

ಪಿಡಿಒ ಭರವಸೆಗೆ ಸ್ಪಂದಿಸಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಡಲಾಯಿತು. ಸತ್ಯಮ್ಮ ವಾಲೀಕಾರ, ಅಶ್ವಿ‌ನಿ ಗುಳೇದ, ಎಂ.ದೋಟಿಹಾಳ, ಹುಸೇನ ಮಡಿಕೇಶ್ವರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next