Advertisement

“ಮಹಿಳೆಯರಿಂದ ಕೊಂಕಣಿ ಸಂಸ್ಕೃತಿ ಅನಾವರಣ’

03:15 PM Mar 28, 2017 | |

ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಇದರ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಕೊಂಕಣಿ ಮಹಿಳೆಯರಿಗಾಗಿ ಆಯೋಜಿಸಿದ ಸಾಂಸ್ಕೃತಿಕ ಸ್ಪರ್ಧೆ “ಕೊಂಕಣಿ ಮಾತೃ ದೇವೋಭವ’ ಕಾರ್ಯಕ್ರಮದಲ್ಲಿ  ಕೊಂಕಣಿ ಮಹಿಳೆಯರಿಂದ ಕೊಂಕಣಿ ಸಂಸ್ಕೃತಿ ಅನಾವರಣಗೊಂಡಿತು.

Advertisement

ಉಡುಪಿ ಜಿಲ್ಲೆಯ ಕುಂದಾಪುರ ದಿಂದ ಕಾಸರಗೋಡು ಜಿಲ್ಲೆಯ ಕಾಂಞಂಗಾಡ್‌ ತನಕ ಹನ್ನೊಂದು ಮಹಿಳಾ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದವು. ಕಾಸರಗೋಡು ನಗರಸಭೆಯ ಮುನ್ಸಿಪಲ್‌ ಕಾನ್ಫರೆನ್ಸ್‌ ಹಾಲ್‌ನ ಪುಷ್ಪಲತಾ ನಟರಾಜ್‌ ವೇದಿಕೆಯಲ್ಲಿ ಜರಗಿದ ಸ್ಪರ್ಧೆಯನ್ನು ಕಾಸರಗೋಡು ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗೇಶ್‌ ಭಾಸ್ಕರ ಕಾಮತ್‌ ಅವರು ದೀಪ ಬೆಳಗಿಸಿ ಉದ್ಘಾಟಿಸಿದರರು. ಜಿ.ಎಸ್‌.ಬಿ.ಮಹಿಳಾ ಸಂಘದ ಅಧ್ಯಕ್ಷೆ ರಾಧಾ ಮುರಳೀಧರ್‌ ಕಾಮತ್‌, ಜಿ.ಎಸ್‌.ಬಿ. ಸೇವಾ ಸಂಘದ ಅಧ್ಯಕ್ಷ ಕೆ.ಕೃಷ್ಣ ಮಲ್ಯ, ಬದಿಯಡ್ಕ ಜಿಎಸ್‌ಬಿ ಸೇವಾ ಸಂಘದ ಅಧ್ಯಕ್ಷ ಕೆ.ಸುಂದರ ಪ್ರಭು, ಶ್ರೀ ವರದರಾಜ ದೇವಸ್ಥಾನದ ಮೊಕ್ತೇಸರ ವಿದ್ಯಾಕರ ಮಲ್ಯ, ಅಶೋಕ್‌ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಬದಿಯಡ್ಕ ಜಿಎಸ್‌ಬಿ ಸೇವಾ ಸಂಘದ ಅಧ್ಯಕ್ಷ ಕೆ.ಸುಂದರ ಪ್ರಭು ಅವರು ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕೊಂಕಣಿ ಸಮಾಜ ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಆದರೆ ಕೊಂಕಣಿ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗಾಗಿ ನಿರೀಕ್ಷೆಯಂತೆ ಬೆಂಬಲವಾಗಲೀ, ಸರಕಾರದಿಂದ ನೆರವಾಗಲೀ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾಸರಗೋಡು ಚಿನ್ನಾ ಅವರ ನೇತೃತ್ವದಲ್ಲಿರುವ ರಂಗ ಚಿನ್ನಾರಿ ಸಂಸ್ಥೆಯ ಮೂಲಕ “ಕೊಂಕಣಿ ಮಾತೃ ದೇವೋಭವ’ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಯೋಗ್ಯ ವೇದಿಕೆ ಲಭಿಸಿದೆ. ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ನಡೆಸುವಂತಾಗಲಿ ಎಂದು ಹಾರೈಸಿದ ಅವರು ಕೊಂಕಣಿ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ಕೊಂಕಣಿ ಮಹಿಳಾ ಸಮ್ಮೇಳನ  
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕಾರ್ಯಕ್ರಮದ ರೂವಾರಿ ಕಾಸರಗೋಡು ಚಿನ್ನಾ ಅವರು ಮುಂದಿನ ದಿನಗಳಲ್ಲಿ ಬೃಹತ್‌ ಮಟ್ಟದ ಕೊಂಕಣಿ ಮಹಿಳಾ ಸಮ್ಮೇಳನವನ್ನು ಆಯೋಜಿಸಲಾಗುವುದು. ಕಾಸರಗೋಡಿ ನಲ್ಲಿ ಈ ವರೆಗೂ ಕೊಂಕಣಿ ಭಾಷಿಗರಿಗೆ ಇಂತಹ ವೇದಿಕೆ ಈ ವರೆಗೂ ಲಭಿಸಿಲ್ಲ. ಇಂದು ಐತಿಹಾಸಿಕ ದಿನ. ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದ ಅವರು ಇದೇ ಪ್ರಥಮ ಬಾರಿಗೆ ಕೊಂಕಣಿ ಮಹಿಳೆಯರಿಗೆ ಸ್ಪರ್ಧೆಯನ್ನು ಏರ್ಪಡಿ ಸಿದ್ದು ಮುಂದಿನ ದಿನಗಳಲ್ಲಿ  ರಂಗಚಿನ್ನಾರಿ ಸಂಸ್ಥೆ  ರಾಜ್ಯ ಮಟ್ಟದ ಕೊಂಕಣಿ ಸ್ಪರ್ಧೆಯನ್ನು ಏರ್ಪಡಿಸುವುದಾಗಿ ಹೇಳಿದರು.

ರಂಗ ಚಿನ್ನಾರಿ ಸಂಸ್ಥೆಯ ದಶ ಸಂಭ್ರಮದ ಪ್ರಯುಕ್ತ ಬಲೆ ತೆಲಿಪಾಲೆ ತುಳು ಹಾಸ್ಯ ನಾಟಕಗಳೂ ಸೇರಿದಂತೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸುವ ಸಿದ್ಧತೆಯಲ್ಲಿದೆ. ಎಪ್ರಿಲ್‌ 29 ಮತ್ತು 30 ರಂದು ಕಾನ್ಫರೆನ್ಸ್‌ ಹಾಲ್‌ನಲ್ಲಿ ದಶ ಸಂಭ್ರಮದ ಸಮಾರೋಪ ಸಮಾರಂಭ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದ ಕಾಸರಗೋಡು ಚಿನ್ನಾ ಅವರು ಕೊಂಕಣಿ ಮಹಿಳೆಯರಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಅವರಿಗೆ ಈ ವರೆಗೂ ಸೂಕ್ತ ವೇದಿಕೆ ಲಭಿಸಿರಲಿಲ್ಲ. ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಕೊಂಕಣಿ ಮಾತೃ ದೇವೋಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಮೂಲಕ ಸಾಕಷ್ಟು ಮಂದಿ ಸುಪ್ತ ಪ್ರತಿಭೆಗಳಿಗೆ ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಾಗಲಿದೆ ಎಂದರು.

Advertisement

ಸಂಸ್ಕೃತಿ ಅನಾವರಣ : ಕೊಂಕಣಿ ಮಾತೃ ದೇವೋಭವ ಕಾರ್ಯಕ್ರಮದಲ್ಲಿ ಕೊಂಕಣಿ ಮಹಿಳೆಯರು ಕೊಂಕಣಿ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ವಿವಿಧ ಹಬ್ಬಗಳ ಆಚರಣೆ, ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರುವ ಜೀವನ ಕ್ರಮಗಳು, ಸಾಂಸ್ಕೃತಿಕ ವೈವಿಧ್ಯ, ಪೂಜೆ, ಪುನಸ್ಕಾರಗಳ ರೀತಿ ನೀತಿಗಳು, ಆಚಾರ ವಿಚಾರಗಳನ್ನು ಪ್ರದರ್ಶಿಸಿ ಕಣ್ಮನ ಸೆಳೆದರು.ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನ ಸಹಿತ ಭಾಗವಹಿಸಿದ ಎಲ್ಲ ತಂಡಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next