Advertisement

ಮಹಿಳಾ ಸಬಲೀಕರಣ ಪ್ರಯತ್ನ

10:24 AM Sep 08, 2019 | Suhan S |

ಗದಗ: ಬೇಟಿ ಬಚಾವೋ, ಬೇಟಿ ಪಡಾವೊ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದರಿಂದ ಗದಗ ಜಿಲ್ಲಾಡಳಿತಕ್ಕೆ ಕೇಂದ್ರ ಸರಕಾರ ನಿಡುವ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿತ್ತು. ಈಗ ಅದೇ ಯೋಜನೆಯ ಸಾರವನ್ನು ಸ್ತಬ್ಧಚಿತ್ರದ ಮೂಲಕ ಮೈಸೂರು ದಸರಾ ಉತ್ಸವದಲ್ಲಿ ಪ್ರದರ್ಶಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

Advertisement

ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣ, ಲಿಂಗಾನುಪಾತ ಕಡಿಮೆ ಮಾಡುವುದು, ಮಹಿಳಾ ಸಬಲೀಕರಣ ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು, ಹೆಣ್ಣು ಮಕ್ಕಳ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು 2015ರಲ್ಲಿ ಜಾರಿಗೆ ತಂದಿತ್ತು. ಈ ಯೋಜನೆಯನ್ನು ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದರೊಂದಿಗೆ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿಗೆ ಒತ್ತು ನೀಡಲಾಗಿದೆ. ಈ ಬಾರಿ ಮೈಸೂರು ದಸರಾ ಉತ್ಸವದಲ್ಲಿ ಈ ಯೋಜನೆಯನ್ನೇ ಸ್ತಬ್ಧ ಚಿತ್ರವನ್ನಾಗಿಸಿ ಪ್ರದರ್ಶಿಸಲು ಅಗತ್ಯ ಸಿದ್ಧತೆಗಳಿಗೆ ಚಾಲನೆ ನೀಡಿದೆ.

2017ರಲ್ಲಿ ತ್ರಿಕೂಟೇಶ್ವರ ದೇವಸ್ಥಾನ, ವೀರನಾರಾಯಣ ಮತ್ತು ಜುಮ್ಮಾ ಮಸೂತಿ ಹೊಂದಿರುವ ಒಂದೇ ಟ್ರಸ್ಟ್‌ ಕಮಿಟಿಯ ಸ್ತಬ್ಧಚಿತ್ರ, 2018ರಲ್ಲಿ ಜಿಲ್ಲಾಡಳತ ಕೈಗೊಂಡಿದ್ದ ಬೃಹತ್‌ ಮರಗಳ ಮರು ನೆಡುವಿಕೆ ಕುರಿತು ಸ್ತಬ್ಧ ಚಿತ್ರ ರೂಪಿಸಲಾಗಿತ್ತು. ಈ ಪೈಕಿ 2017ರ ದಸರಾ ಉತ್ಸವದಲ್ಲಿ ಗದಗ ಜಿಲ್ಲೆಯ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಬಂದಿತ್ತು. ಕಳೆದ ಎರಡೂ ವರ್ಷಗಳಿಂದ ಇಲ್ಲಿನ ಬಾಲಾಜಿ ಎಂಟರ್‌ಪ್ರೖಸೆಸ್‌ನ ಕಲಾವಿದ ರವಿ ಶಿಶುವಿನಹಳ್ಳಿ ಅವರಿಂದ ಜಿಲ್ಲೆಯ ಸ್ತಬ್ಧ ಚಿತ್ರ ತಯಾರಿಸುತ್ತಿದ್ದು, ಈ ಬಾರಿಯೂ ಅವರಿಗೆ ವಹಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಮೈಸೂರು ದಸರಾ ಉತ್ಸವ-2019ರ ಪ್ರಯುಕ್ತ ಪ್ರತೀ ವರ್ಷದಂತೆ ಗದಗ ಜಿ.ಪಂ. ನಿಂದ ಸ್ತಬ್ಧ ಚಿತ್ರ ನಿರ್ಮಿಸಲಾಗುತ್ತಿದ್ದು, ಈ ಬಾರಿ ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಮೈಸೂರು ದಸರಾ ಉಪ ಸಮಿತಿಯಿಂದಲೂ ಒಪ್ಪಿಗೆ ಪಡೆಯಲಾಗಿದೆ. ಈ ಸ್ತಬ್ಧ ಚಿತ್ರದ ಮೂಲಕ ಸಾರ್ವಜನಿಕರಲ್ಲಿರುವ ತಾರತಮ್ಯ ಧೋರಣೆ ಹೋಗಲಾಡಿಸುವುದಾಗಿದೆ.•ಚಂದ್ರಶೇಖರ ಆರ್‌. ಮುಂಡರಗಿ ಜಿ.ಪಂ. ಯೋಜನಾ ನಿರ್ದೇಶಕ

ಹೇಗಿರಲಿದೆ ಗದಗಿನ ಸ್ತಬ್ಧ ಚಿತ್ರ?:

ಬೃಹತ್‌ ಲಾರಿಯಲ್ಲಿ ಈ ಟ್ಯಾಬ್ಲೋ ಸಿದ್ಧಗೊಳಿಸಲಿದ್ದು, ಚಾಲಕನ ಕ್ಯಾಬಿನ್‌ ಮುಂಭಾಗದಲ್ಲಿ ಪಾಠ ಹೇಳುವ ತಾಯಿಯ ಚಿತ್ರ, ಅಕ್ಕಪಕ್ಕದಲ್ಲಿ ಲಿಂಗ ಸಮಾನತೆ ಸಾರುವ ಬಾಲಕ, ಬಾಲಕಿಯೊಂದಿಗೆ ಆಟವಾಡುವ ತಾಯಿ, ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸಾಧನೆ ತೋರಿದ ಜಿಲ್ಲೆಯ ಬಾಲಕಿಯರ ಚಿತ್ರಗಳು, ಪೊಲೀಸ್‌, ವೈದ್ಯರು, ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಪೋಸ್ಟ್‌ಗಳನ್ನು ರೂಪಿಸಲಾಗುತ್ತದೆ. ಅದರೊಂದಿಗೆ ಲಾರಿಯ ಒಳಾಂಗಣದಲ್ಲಿ ವೇದಿಕೆ ನಿರ್ಮಿಸಿ, ಸರದಿಯಂತೆ ಕಂದಮ್ಮನನ್ನು ಎತ್ತಿ ಆಡಿಸುತ್ತಿರುವ ಮಹಿಳೆ, ಶಿಕ್ಷಕಿಯ ಪಾಠ ಆಲಿಸುತ್ತಿರುವ ಬಾಲೆಯರು, ಕುಂಬಾರ ಮಹಿಳೆ, ಹೆಗಲ ಮೇಲೆ ಮಗಳನ್ನು ಹೊತ್ತುಕೊಂಡಿರುವ ರೈತ ದಂಪತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಸಾಧನೆ ಬಿಂಬಿಸುವ ಗೊಂಬೆಗಳನ್ನು ನಿರ್ಮಿಸಲು ಈಗಾಗಲೇ ನೀಲ ನಕ್ಷೆ ತಯಾರಿಸಿದೆ. ಬಹುತೇಕ ಇದೇ ನೀಲನಕ್ಷೆ ಅಂತಿಮವಾಗಿದ್ದರೂ ಮೈಸೂರು ದಸರಾ ಉತ್ಸವದ ಉಪ ಸಮಿತಿ ಸೂಚನೆ ಮೇರೆಗೆ ಕೆಲವು ಬದಲಾವಣೆ ಆಗಲಿವೆ ಎಂದು ಹೇಳಲಾಗಿದೆ.
ಸೆ. 15ರಿಂದ ನಗರದಲ್ಲಿ ಸ್ತಬ್ಧ ಚಿತ್ರ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 15 ದಿನಗಳಲ್ಲಿ ಪೂರ್ಣ ಗೊಳಿಸಲಾಗುವುದು. ಈ ಬಾರಿಯೂ ಉತ್ತಮವಾಗಿ ಸ್ತಬ್ಧ ಚಿತ್ರ ಆಕರ್ಷಕವಾಗಿ ಮೂಡಿಬಂದು, ಜನರಿಗೆ ಉತ್ತಮ ಸಂದೇಶ ರವಾನಿಸುವುದರ ಜೊತೆಗೆ ಗದಗ ಜಿ.ಪಂ. ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಸಲ್ಲುವಂತಾಗಬೇಕು. •ರವಿ ಶಿಶ್ವಿ‌ನಹಳ್ಳಿ ಸ್ತಬ್ಧ ಚಿತ್ರದ ಕಲಾವಿದ
•ವೀರೇಂದ್ರ ನಾಗಲದಿನ್ನಿ
Advertisement

Udayavani is now on Telegram. Click here to join our channel and stay updated with the latest news.

Next