Advertisement

BJP ಟಿಕೆಟ್ ಕೊಡದಿದ್ದರೆ ನನ್ನ ದಾರಿ ನೋಡಿಕೊಳ್ಳುವೆ: ಬಿ.ವಿ.ನಾಯಕ ಆಕ್ರೋಶ

03:36 PM Mar 27, 2024 | Team Udayavani |

ರಾಯಚೂರು: ಎರಡು ದಿನದಲ್ಲಿ ಬಿಜೆಪಿ ವರಿಷ್ಠರು ರಾಯಚೂರು ಲೋಕಸಭೆ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಮರುಪರಿಶೀಲನೆ ನಡೆಸಿ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ನಾನು ನನ್ನ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ಟಿಕೆಟ್ ಆಕಾಂಕ್ಷಿ ಬಿ.ವಿ.ನಾಯಕ ಎಚ್ಚರಿಕೆ ನೀಡಿದರು.

Advertisement

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿ.ವಿ.ನಾಯಕ ಅಭಿಮಾನಿಗಳ ಹಿತೈಷಿಗಳ ಕಾರ್ಯಕರ್ತರ ಚಿಂತನಾ ಸಭೆಯಲ್ಲಿ ಮಾತನಾಡಿ’ ನಮ್ಮ ಮನೆತನದ ರಾಜಕೀಯ ಇತಿಹಾಸ ಒತ್ತೆ ಇಟ್ಟು ಬಿಜೆಪಿಗೆ ಬಂದಿದ್ದೇನೆ. ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಕೊನೆಗೆ ಕೈ ಕೊಡಲಾಗಿದೆ. ಇದು ನನ್ನ ಬೆಂಬಲಿಗರಿಗೆ ಸಾಕಷ್ಟು ಬೇಸರ ಉಂಟು ಮಾಡಿದೆ. ಎರಡು ದಿನದಲ್ಲಿ ಟಿಕೆಟ್ ವಿಚಾರದಲ್ಲಿ ಮರು ಪರಿಶೀಲನೆಗೆ ಮುಂದಾಗಬೇಕು. ಇಲ್ಲವಾದರೆ ಕಾರ್ಯಕರ್ತರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ’ ಎಂದರು.

‘ಕ್ಷೇತ್ರದಲ್ಲಿ ಎಲ್ಲಿಯೇ ಕೇಳಿದರೂ ನನ್ನ ಹೆಸರು ಮುಂಚೂಣಿಯಲ್ಲಿದೆ.ಆದರೆ, ಒಮ್ಮೆಯೂ ಕಾರ್ಯಕರ್ತರ ಭೇಟಿಯಾಗದ ಸಮಸ್ಯೆಗಳಿಗೆ ಕಿವಿಯಾಗದ ರಾಜಾ ಅಮರೇಶ್ವರ ನಾಯಕರಿಗೆ ಟಿಕೆಟ್ ಕೊಡಲಾಗಿದೆ. ಕಾರ್ಯಕರ್ತರು ಕೊನೆ ತನಕ ಜತೆಗೆ ನಿಲ್ಲುವುದಾದರೆ ನಾನು ಯಾವ ನಿರ್ಧಾರ ಕೈಗೊಳ್ಳಲು ಸಿದ್ಧ’ ಎಂದರು.

ಆತ್ಮಹತ್ಯೆಗೆ ಯತ್ನ
ಬಿ.ವಿ ನಾಯಕ್ ಗೆ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದ್ದು, ಇಂದು ನಡೆದ ಚಿಂತನಾ ಸಭೆ ಬಳಿಕ ಬೆಂಬಲಿಗರು ಡೀಸೆಲ್ ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

Advertisement

ಬೆಂಬಲಿಗರಾದ ಶಿವಮೂರ್ತಿ, ರಾಘವೇಂದ್ರ ಎನ್ನುವವರು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಸಭೆಯಲ್ಲಿಯೂ ಭಾರೀ ಆಕ್ರೋಶ ವ್ಯಕ್ತವಾಯಿತು. ಬಳಿಕ ಕೆಳಗಿಯುವಾಗ ರಾಯಚೂರು ಹಬ್ ಮುಂಭಾಗದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ತೀರ ಹತಾಶೆಗೊಂಡಿದ್ದ ಕಾರ್ಯಕರ್ತರು ಡೀಸೆಲ್ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್ ಟಿ ಮೀಸಲು ಕ್ಷೇತ್ರ ರಾಯಚೂರಿನಲ್ಲಿ ಸಂಸದ ಅಮರೇಶ್ವರ ನಾಯಕ ಅವರಿಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿದ್ದು, ಬಿ.ವಿ.ನಾಯಕ್ ಬೆಂಬಲಿಗರು ” ಗೋ ಬ್ಯಾಕ್ ಅಮರೇಶ್ವರ ನಾಯಕ” ಘೋಷಣೆಗಳನ್ನು ಕೂಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next