Advertisement

ಹತ್ತು ಸಾವಿರ ಎಕರೆ ಬಂಡೀಪುರ ಅರಣ್ಯ ಸಂಪೂರ್ಣ ನಾಶ

12:10 AM Feb 28, 2019 | |

ಗುಂಡ್ಲುಪೇಟೆ: ಕಳೆದ ಆರು ದಿನಗಳಿಂದ ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಬಂಡೀಪುರ ಹುಲಿ ರಕ್ಷಿತಾರಣ್ಯದ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬುಧವಾರ ವೈಮಾನಿಕ ಸಮೀಕ್ಷೆ ನಡೆಸಿದರು. ಬರೋಬ್ಬರಿ 10 ಸಾವಿರ ಎಕರೆ ಅರಣ್ಯವನ್ನು ಬಲಿ ಪಡೆದು ಬೆಂಕಿ ಕಡೆಗೂ ತಹಬದಿಗೆ ಬಂದಿದೆ.

Advertisement

ಮಧ್ಯಾಹ್ನ 12.30ರ ವೇಳೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ಮುಖ್ಯಮಂತ್ರಿಯವರು ಹುಲಿ ಯೋಜನೆಯ ವ್ಯಾಪ್ತಿಯಲ್ಲಿನ ಕಾಡ್ಗಿಚ್ಚಿನಿಂದ ಹೆಚ್ಚು ಹಾನಿಗೊಳಗಾಗಿರುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ವಲಯದ ಕರಡಿಕಲ್ಲು ಬೆಟ್ಟ, ಗುಮ್ಮನಗುಡ್ಡ ಮತ್ತು ಬೋಳಗುಡ್ಡ ಪ್ರದೇಶಗಳಲ್ಲಿ ಅಲ್ಲದೇ ಚಮ್ಮನಹಳ್ಳ, ತಿಪ್ಪನಹಳ್ಳ, ಮದ್ದೂರು ಅರಣ್ಯ ವಲಯ, ಮೂಲೆಹೊಳೆ ಅರಣ್ಯ ಹಾಗೂ ಕರಡಿಬೆಟ್ಟ ಅರಣ್ಯ ವಲಯ, ಕುಂದಕೆರೆ ಅರಣ್ಯ ವಲಯದಲ್ಲಿನ ಪ್ರದೇಶಗಳಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಸಂಚರಿಸಿ ವೈಮಾನಿಕ ಸಮೀಕ್ಷೆ ನಡೆಸಿ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಹೆಲಿಕಾಪ್ಟರ್‌ ಸಮೀಕ್ಷೆಯನ್ನು ಮುಗಿಸಿ ಮಂಡ್ಯಕ್ಕೆ ಪ್ರಯಾಣ ಬೆಳೆಸಿದರು.

ಕಳೆದ 24ರಂದು ಅರಣ್ಯ ಸಚಿವ ಸತೀಶ್‌ ಜಾರಕಿಹೋಳಿ ಭೇಟಿ ನೀಡಿ ಪರಿಶೀಲಿಸಿದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ವಾಯುಸೇನೆಯ ಎರಡು ಹೆಲಿಕಾಪ್ಟರ್‌ ಮೂಲಕ ಬೆಂಕಿ ನಂದಿಸಲು ಆದೇಶಿಸಿದ್ದರು. ಸತತ ಎರಡು ದಿನಗಳ ಕಾರ್ಯಾಚರಣೆ ನಂತರ ಬೆಂಕಿಯು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಆದರೆ, ಅಪರೂಪದ ಜೀವ ವೈವಿಧ್ಯಗಳು ಮತ್ತು ಅಪಾರ ಪ್ರಮಾಣದ ವನ್ಯ ಸಂಪತ್ತು ಬೆಂಕಿಯಲ್ಲಿ ಭಸ್ಮವಾಗಿದೆ.

10 ಸಾವಿರ ಎಕರೆ ಭಸ್ಮ: ಫೆ 21ರ ಸಂಜೆ ಹುಲಿಯೋಜನೆಯ ಕುಂದಕೆರೆ ವಲಯದ ಲೊಕ್ಕೆರೆ ಪ್ರದೇಶಕ್ಕೆ ಬಿದ್ದ ಬೆಂಕಿಯು ಸತತ 6 ದಿನಗಳ ಕಾಲ ನಿಯಂತ್ರಣಕ್ಕೆ ಬಾರದೇ ಸಮೀಪದ ಹಿಮವದ್‌ ಗೋಪಾಲಸ್ವಾಮಿಬೆಟ್ಟ, ಬಂಡೀಪುರ, ಮದ್ದೂರು ಹಾಗೂ ಮೂಲೆಹೊಳೆ ವಲಯಗಳಿಗೂ ಹರಡಿತ್ತು. ಸತತ ಆರು ದಿನಗಳ ಕಾಲ ಬೆಂಕಿನಂದಿಸಲು ನಡೆದ ಪ್ರಯತ್ನಗಳು ಸಫ‌ಲವಾಗದೆ 10 ಸಾವಿರ ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ ಎಂದು ಅಂದಾಜಿಸಲಾಗಿದೆ.

ಗೋಪಾಲಸ್ವಾಮಿ ಬೆಟ್ಟ ಮೇಲಿರುವ ಗುಡ್ಡಗಳಿಗೆ ಮಾನವರು ಹೋಗಿ ಬೆಂಕಿ ನಂದಿಸಲು ಅಸಾಧ್ಯವೆಂದು ಅರಿತ ವಾಯುಸೇನೆಯ ಹೆಲಿಕಾಪ್ಟರ್‌ ಅವಿರತವಾಗಿ 24, 25 ಹಾಗೂ 26ರಂದು ನೀರು ಸಿಂಪಡಿಸುವ ಮೂಲಕ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ ಬೆಂಕಿ ನಂದಿಸಿದವು.

Advertisement

ಶಾಂತವಾದ ಬಂಡೀಪುರ: ಕಳೆದ ಆರು ದಿನಗಳಿಂದ ತನ್ನ ರುದ್ರನರ್ತನವನ್ನು ತೋರಿಸಿದ ಬೆಂಕಿಯು ಈಗ ಸಂಪೂರ್ಣವಾಗಿ ಶಾಂತವಾಗಿದೆ. ಸಫಾರಿ ವಲಯ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ವಲಯ, ಕುಂದಕೆರೆ ಸೇರಿದಂತೆ ಬಂಡೀಪುರ ಅರಣ್ಯವಲಯದಲ್ಲಿ ಸಂಪೂರ್ಣವಾಗಿ ಬೆಂಕಿಯನ್ನು ನಂದಿಸಲಾಗಿದೆ.

ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆಯಲು ನಿರ್ಧಾರ

ಚಿಕ್ಕಮಗಳೂರು: ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದಾಗ ಅದನ್ನು ನಂದಿಸಲು ಬೇಸಿಗೆ ಕಾಲದಲ್ಲಿ 3 ತಿಂಗಳ ಕಾಲ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆಯಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಾಗಿ ಹೆಲಿಕಾಪ್ಟರ್‌ ಖರೀದಿಸಲು ಇಲಾಖೆಯಲ್ಲಿ ಹಣದ ಕೊರತೆ ಇರುವುದರಿಂದ ಬಾಡಿಗೆ ಆಧಾರದಲ್ಲಿ ಪಡೆಯಲಾಗುವುದು. ಬೇಸಿಗೆ ಕಾಲದಲ್ಲಿ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚಿನಿಂದಾಗಲಿ ಅಥವಾ ಇನ್ನಾವುದೇ ಕಾರಣದಿಂದ ಬೆಂಕಿ ಬಿದ್ದಲ್ಲಿ ಅದನ್ನು ನಂದಿಸುವ ಉದ್ದೇಶಕ್ಕಾಗಿ ಪ್ರತಿ ವರ್ಷ 50 ಲಕ್ಷ ರೂ.ಗಳನ್ನು ಮೀಸಲಿಡಲಾಗುತ್ತದೆ ಎಂದರು.

ಬಂಡೀಪುರ ಅಭಯಾರಣ್ಯದಲ್ಲಿ ಬೆಂಕಿ ಸ್ವಾಭಾವಿಕವಾಗಿ ಬಿದ್ದಿಲ್ಲ. ಬೆಂಕಿ ಬೀಳಲು ಇಲಾಖೆಯ ವೈಫಲ್ಯ ಕಾರಣವಲ್ಲ. ಯಾರೋ ಬೆಂಕಿಯನ್ನು ಉದ್ದೇಶಪೂರ್ವಕವಾಗಿ ಹಾಕಿದ್ದಾರೆ. ಇಲಾಖೆಯಿಂದ ಈಗಾಗಲೇ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು. ಇಲಾಖೆ ಸಿಬ್ಬಂದಿಗೆ ಈಗ ನೀಡಲಾಗಿರುವ ಆಯುಧಗಳು
ಹಳೆಯದಾಗಿದೆ. ಆದ್ದರಿಂದ ಅತ್ಯಾಧುನಿಕ ಆಯುಧಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next