ಆನೇಕಲ್: ರಾತ್ರಿ ವೇಳೆ ಮೇವು ಹರಸಿ ಬಂದ ಕಾಡಾನೆಗಳ ಗುಂಪು ಬೆಳಗಾದರೂ ಕಾಡಿಗೆ ತೆರಳದೇ ಗಡಿಭಾಗದ ಹಳ್ಳಿಗಳ ನೀಲಗಿರಿ ತೋಪಿನಲ್ಲಿ ಮೊಕ್ಕಾಂ ಹೂಡಿದ್ದು ಕಂಡು ಬಂದಿತು. ಕರ್ನಾಟಕ-ತಮಿಳುನಾಡಿನ ಗಡಿ ಭಾಗದ ಮೆಣಿಸಿಗನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುತ್ತಾಡಿ ಅಪಾರ ಬೆಳೆ ಹಾನಿ ಮಾಡಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಗಳತ್ತ ಬಂದ ಮೂರು ಕಾಡಾನೆಗಳನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಆನೆಗಳು ಗಾಬರಿಗೊಂಡು ಊರಿನ ಹೊಲ, ಗದ್ದೆ ಮತ್ತು ತೋಪುಗಳಲ್ಲಿ ಓಡಾಡಿ ಗೊಂದಲ ಸೃಷ್ಟಿ ಆಯಿತು.
ಗಾಬರಿಯಿಂದ ಓಡಾಟ: ಆನೇಕಲ್ ತಾಲೂಕಿನ ಮೆಣಸುಗನಹಳ್ಳಿ ಹಾಗೂ ಹುನಸನಹಳ್ಳಿ ಮಧ್ಯೆದ ಗ್ರಾಮದತ್ತ ಬಂದ ಮೂರು ಕಾಡಾನೆಗಳು, ನೀಲಗಿರಿ ತೋಪು ಹಾಗೂ ರೈತರ ಹೊಲ, ಗದ್ದೆಗಳಲ್ಲಿ ಬೀಡು ಬಿಟ್ಟಿದ್ದವು. ಆನೆಗಳು ಬಂದಿ ರುವುದನ್ನು ತಿಳಿದು ಸುತ್ತಮುತ್ತಲಿನ ಗ್ರಾಮದಿಂದ ನೂರಾರು ಜನ ಕಾಡಾನೆಗಳನ್ನು ನೋಡಲು ಆಗಮಿಸಿದ್ದರು. ಜನ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಂತೆ ಗಾಬರಿಗೊಂಡು ಆನೆಗಳು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಗಾಬರಿಯಿಂದ ಓಡಾಡಿ ರೈತರು ಬೆಳೆದಿದ್ದ ತರಕಾರಿ ಹಾಗೂ ಬೆಳೆ ಆನೆಗಳ ತುಳಿತಕ್ಕೆ ನಾಶ ಆಗಿದೆ.
ವಾರದಿಂದ ವಿವಿಧಡೆ ಸಂಚಾರ: ಕಳೆದ ಒಂದು ವಾರದಿಂದ ಇದೇ ಕಾಡಾನೆಗಳು ತಮಿಳುನಾಡು ಹಾಗೂ ಆನೇಕಲ್ ಭಾಗದ ವಿವಿಧಡೆ ಸಂಚಾರ ಮಾಡುತ್ತಿದ್ದು, ಅಲ್ಲಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಎಷ್ಟೇ ಕ್ರಮ ಕೈಗೊಂಡರೂ, ಆನೆಗಳು ಆನೆಕಲ್ಲಿನ ಅರಣ್ಯ ಹಾಗೂ ತಮಿಳುನಾಡಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಿವೆ. ಸಂಜೆವರೆಗೆ ಕಾರ್ಯಾಚರಣೆ: ಶುಕ್ರವಾರ ಮೆಣಸಿನಹಳ್ಳಿ ಬಳಿ ಆನೇಕಲ್ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ತಮಿಳುನಾಡಿನ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಓಡಿಸಲು ಹರಸಾಹಸ ಪಟ್ಟರೂ, ಆನೆಗಳು ಮಾತ್ರ ಪೊದೆಯನ್ನು ಬಿಟ್ಟು ಹೊರ ಬರಲಿಲ್ಲ. ಪಟಾಕಿ ಸಿಡಿಸಿ ಆನೆಗಳನ್ನು ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಬೆಳಗ್ಗೆಯಿಂದ ಸಂಜೆವರೆಗೆ ಕಾರ್ಯಾಚರಣೆ ನಡೆಸಿದರೂ, ಆನೆಗಳು ಗ್ರಾಮವನ್ನು ಬಿಟ್ಟು ಹೊರ ಹೋಗಲಿಲ್ಲ.
ಜನರನ್ನು ಚದುರಿಸಲು ಅಧಿಕಾರಿಗಳ ಪರದಾಟ : ಆನೆಗಳು ರೈತರು ಬೆಳೆದಿದ್ದ ಬೆಳೆ ಹಾನಿ ಮಾಡ ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಎಷ್ಟೇ ಪರದಾಡಿದರೂ, ಸಾರ್ವಜನಿಕರು ಆನೆಗಳಿಗೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಅಡ್ಡ ಬರುತ್ತಿದ್ದು, ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ನೆರೆದಿದ್ದ ಜನರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು.
ಭಯಬೀಳದ ಆನೆಗಳು : ಆನೆಗಳು ರೈತರು ಬೆಳೆದಿದ್ದ ತರಕಾರಿ ಬೆಳೆ ಹಾಗೂ ರಾಗಿ ಬೆಳೆ ಹಾಳು ಮಾಡದಂತೆ ತಮ್ಮ ತೋಟದ ಸುತ್ತಮುತ್ತ ಆನೆಗಳು ಬಾರದೆ ಇರಲಿ ಎನ್ನುವ ಕಾರಣಕ್ಕೆ ರೈತರು ಬೆಂಕಿ ಹಚ್ಚಿ ಭಯ ಹುಟ್ಟಿಸಿದರು. ನೂರಾರು ಸಂಖ್ಯೆಯಲ್ಲಿ ಜನ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳು ಸುತ್ತುವರಿದು ಪಟಾಕಿ ಸಿಡಿಸಿದರೂ, ಮೂರು ಕಾಡಾನೆಗಳು ಭಯ ಬೀಳದೆ, ಪೊದೆಯಲ್ಲಿ ಹಾಗೂ ನೀಲಗಿರಿ ತೋಪಿನಲ್ಲಿ ತಂಗಿದ್ದವು.
ಸ್ಥಳದಲ್ಲೇ ಬೀಡು ಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು : ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಯಾರಿಗೂ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಎರಡು ಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟದ್ದರು. ಡಿಆರ್ಎಫ್ಒ ಬಾಲಕೃಷ್ಣ, ಅರಣ್ಯ ರಕ್ಷಕ ತಿರುಕಪ್ಪ ಜನಗೇರಿ, ಸಿಬ್ಬಂದಿ ಚಿನ್ನಸ್ವಾಮಿ, ತಮಿಳುನಾಡು ಅರಣ್ಯ ಇಲಾಖೆಯ ಆರ್ಎಫ್ಒಡಿ ಸುಕುಮಾರ್, ಡಿಆರ್ಎಫ್ಒ ಆನಂದ್ ಹಾಗೂ ಸಿಬ್ಬಂದಿ ಪುನೀತಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಗ್ರಾಮಸ್ಥರು ಸಹ ಕಾಡಾನೆ ಓಡಿಸಲು ಕೆಲವರು ಸಹಕಾರ ನೀಡಿದರು.