Advertisement

ಬೈಯಪಲ್ಲಿ ಸೇರಿ ಮುಖ್ಯರಸ್ತೆಗಳ ಅಗಲೀಕರಣ

12:24 PM Jul 07, 2019 | Suhan S |

ಮುಳಬಾಗಿಲು: ಭವಿಷ್ಯದ ಜನರ ಹಿತದೃಷ್ಟಿಯಿಂದ ನಗರದಲ್ಲಿ ಕೆ.ಬೈಯಪಲ್ಲಿ ಸೇರಿ ಮುಖ್ಯರಸ್ತೆಗಳನ್ನು ಅಗಲೀಕರಣ ಮಾಡುವುದು ಅಗತ್ಯವಾಗಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣಕೈಗಾರಿಕೆ ಸಚಿವ ಎಚ್.ನಾಗೇಶ್‌, ಪೌರಾಯುಕ್ತ ಶ್ರೀನಿವಾಸ್‌ಗೆ ಸೂಚಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ಸಚಿವ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ನಾಗೇಶ್‌, ಈಗಾಗಲೇ ಕೊರೆಸಿರುವ ಕೊಳವೆ ಬಾವಿಗಳಿಂದ ನಗರದ 14 ವಾರ್ಡ್‌ಗಳಿಗೆ 24 ಗಂಟೆಗಳ ಕಾಲ ನೀರು ಸರಬರಾಜು ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಉಳಿದ ವಾರ್ಡ್‌ಗಳು ಮತ್ತು 38 ಹಳ್ಳಿಗಳಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ನಿವಾರಣೆಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.

ಸಸಿ ನಾಟಿ ಮಾಡಿ: ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದ್ದರೂ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಹರೀಶ್‌ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಸಿಗಳನ್ನು ನಾಟಿ ಮಾಡಿಸುತ್ತಿಲ್ಲ. ಒಂದು ವೇಳೆ ಕಾರ್ಯಕ್ರಮಗಳನ್ನು ಮಾಡಿದರೂ ಜನಪ್ರತಿನಿಧಿ ಗಳನ್ನು ನಿರ್ಲಕ್ಷಿಸುತ್ತಿರುತ್ತಾರೆಂದು ಸದಸ್ಯರು ಆರೋಪಿಸಿದರು.

ಜನಪ್ರತಿನಿಧಿಗಳಿಗೆ ತಿಳಿಸಿ ಅಗತ್ಯವಿರುವ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳ ಆವರಣಗಳಲ್ಲಿ ಸಸಿ ನಾಟಿ ಮಾಡಿಸಿ ಎಂದು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಗಾರ್ಮೆಂಟ್ಸ್‌ ಕಾರ್ಖಾನೆ: ಮಹಿಳೆಯರ ಸಬಲೀಕರಣಕ್ಕಾಗಿ ದೇವರಾಯಸಮುದ್ರ ಕೈಗಾರಿಕೆ ವಲಯದಲ್ಲಿ ವರ್ಷದ ಒಳಗಾಗಿ ಗಾರ್ಮೆಂಟ್ಸ್‌ ಕಾರ್ಖಾನೆಗಳನ್ನು ಸ್ಥಾಪಿಸಲಾಗುವುದು. ಶೀಘ್ರವೇ ನಗರದಲ್ಲಿ ನಡೆಯುವ ಕೈಗಾರಿಕೆ ಮೇಳಕ್ಕೆ ಹೆಚ್ಚಿನ ಪ್ರಚಾರವನ್ನು ನೀಡುವ ಮೂಲಕ ವಿದ್ಯಾವಂತ ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

Advertisement

ಪ್ರತಿಮೆ ಸ್ಥಾಪನೆ: ಸೆಪ್ಟಂಬರ್‌ನಲ್ಲಿ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲು ನಿರ್ಧರಿಸಲಾಗಿದ್ದು, ಆ ಸಂದರ್ಭದಲ್ಲಿ ಕೆಂಪೇಗೌಡ ಪ್ರತಿಮೆಯನ್ನು ನಗರದಲ್ಲಿ ಸ್ಥಾಪಿಸಲಾಗುವುದು. ಅದೇ ದಿನ ದಿ.ಆಲಂಗೂರು ಶ್ರೀನಿವಾಸ್‌ ಅವರ ಪ್ರತಿಮೆಯನ್ನೂ ತೆರವುಗೊಳಿಸಿ ನಗರಸಭೆ ಆವರಣದಲ್ಲಿ ಪುನರ್‌ ಸ್ಥಾಪಿಸಲಾಗುವುದು. ಅದರೊಂದಿಗೆ ಡಿವಿಜಿ ಮತ್ತು ಡಾ.ರಾಜ್‌ ಪ್ರತಿಮೆ ಸಹ ಸ್ಥಾಪಿಸಲಾಗುವುದು ಎಂದು ವಿವರಿಸಿದರು.

ಮೇಲಧಿಕಾರಿಗಳೆ ಹೊಣೆ: ಶೀಘ್ರದಲ್ಲಿಯೇ ಪ್ರಾದೇಶಿಕ ಆರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ಗೂಕುಂಟೆ ಅಥವಾ ಕೆಜಿಎಫ್ ರಸ್ತೆಯಲ್ಲಿರುವ ಕುಮದೇನಹಳ್ಳಿ ಅರಣ್ಯ ಪ್ರದೇಶಗಳ‌ಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಅತಿಥಿ ಗೃಹವನ್ನು ನಿರ್ಮಿಸಲಾಗುವುದು. ಪ್ರತಿ ಇಲಾಖೆಯಲ್ಲಿರುವ ಮೇಲಧಿಕಾರಿಗಳು ತಮ್ಮ ಕೆಳ ಹಂತದ ಅಧಿಕಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು, ಇಲ್ಲವಾದಲ್ಲಿ ಇಲಾಖೆ ಮೇಲಧಿಕಾರಿಯನ್ನು ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೇವು ಕೇಂದ್ರ ತೆರೆದಿಲ್ಲ: ತಾಪಂ ಸದಸ್ಯ ನಂಗಲಿ ಶ್ರೀನಾಥ್‌ ಸಭೆಯಲ್ಲಿ ಮಾತನಾಡಿ, ಮೂರು ತಿಂಗಳ ಹಿಂದೆ ತೀವ್ರ ಬರವಿರುವುದರಿಂದ ಪ್ರತಿ ಹೋಬಳಿಗೆ ಒಂದರಂತೆ ಗೋಶಾಲೆ ಹಾಗೂ ಮೇವು ಕೇಂದ್ರ ತೆರೆಯಲು ಜಿಲ್ಲಾಡಳಿತ ತಿಳಿಸಿದ್ದರೂ ತಾಲೂಕಿನ ಕಂದಾಯ ಮತ್ತು ಪಶು ಇಲಾಖೆ ಇದುವರೆಗೂ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.

ಗೋಶಾಲೆ ತೆರೆಯದಂತೆ ಹೇಳಿಲ್ಲ: ಇದಕ್ಕೆ ಸೂಕ್ತ ಉತ್ತರ ನೀಡದೆ ಗೋಶಾಲೆ ತೆರೆಯುವುದು ಬೇಡವೆಂದು ಕಂದಾಯ ಇಲಾಖೆ ತಿಳಿಸಿದೆ ಎಂದು ಉತ್ತರ ನೀಡಲು ಮುಂದಾದ ಪಶು ಇಲಾಖೆ ಸಹಾಯಕ ನಿರ್ದೇಶಕರ ಮಾತಿಗೆ, ಆಕ್ಷೇಪ ವ್ಯಕ್ತಪಡಿಸಿದ ತಹಶೀಲ್ದಾರ್‌, ನಮ್ಮ ಇಲಾಖೆಯವರು ಹೇಳಿಲ್ಲ. ಇಲಾಖೆಯಿಂದ ಈಗಾಗಲೇ ನಗರದ ಎಪಿಎಂಸಿ ಆವರಣದಲ್ಲಿ ಮೇವು ಕೇಂದ್ರವನ್ನು ತೆರೆಯಲು ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್‌ ಬಿ.ಎನ್‌.ಪ್ರವೀಣ್‌, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌, ಸಚಿವರ ವಿಶೇಷಾಧಿಕಾರಿ ಡಾ. ಕೆ.ಸರ್ವೇಶ್‌, ಇಒ ಬಿ.ಎಂ ಮಂಜುನಾಥ್‌, ತಾಪಂ ಸದಸ್ಯರಾದ ಸಿ.ವಿ.ಗೋಪಾಲ್, ಗಂಗಿರೆಡ್ಡಿ, ಮಾರಪ್ಪ, ಆವಣಿ ರವಿ, ತೊರಡಿ ಹರೀಶ್‌, ಭಾಗ್ಯಮ್ಮ, ನಾರಾಯಣಮ್ಮ, ಉಷಾ, ಕೃಷಿ ಸಹಾಯಕ ನಿರ್ದೇಶಕ ಅಮರನಾರಾಯಣರೆಡ್ಡಿ, ಜಿಪಂ ಎಇಇ ಪ್ರವೀಣ್‌ಕುಮಾರ್‌, ಪಿಎಸ್‌ಐಗಳಾದ ಶ್ರೀಧರ್‌, ಶ್ರೀನಿವಾಸ್‌, ಅನಿಲ್ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next