Advertisement

ಅವನು ಏಕೆ ಹಣ್ಣನ್ನು ಕಚ್ಚಿ ಕೆಳ ಹಾಕುತ್ತಿದ್ದ?

06:35 PM Jan 16, 2020 | mahesh |

ತೆಳುವಾದ ಸೆಣಬಿನಬಳ್ಳಿ ಸುತ್ತಿದ್ದ ಪೇಪರಿನ ಕಟ್ಟು,ಚಿಕ್ಕಪ್ಪನ ಕೈಯಿಂದ ನೇರ ಅಜ್ಜಿಯ ಕೈಗೆ ವರ್ಗಾಯಿಸಲ್ಪಟ್ಟಿತು. ಅದರಲ್ಲೇನಿರಬಹುದು ಎಂಬ ಕುತೂಹಲ ಅಜ್ಜನ ಮನೆಯಲ್ಲಿ ಸೇರಿದ್ದ ಮೊಮ್ಮಕ್ಕಳದ್ದು. ಬಳ್ಳಿಯ ಕಟ್ಟು ಸಡಿಲಗೊಂಡಾಗ ಹುರಿದ ನೆಲಗಡಲೆ ಅಜ್ಜಿಯ ಬೊಗಸೆ ತುಂಬಾ. ಅದನ್ನೆಲ್ಲಾ ತನ್ನ ಸೀರೆಯ ಸೆರಗಿಗೆ ವರ್ಗಾಯಿಸಿದ ಅಜ್ಜಿ, ಅದಕ್ಕೆ ಸುತ್ತಿದ ಪೇಪರನ್ನು ಸಣ್ಣ ಸಣ್ಣ ತುಂಡು ಮಾಡಿ ಪೊಟ್ಟಣ ಕಟ್ಟಿದಳು. ಒಂದೊಂದು ಪೊಟ್ಟಣಕ್ಕೂ ಅಜ್ಜಿಯ ಕೈಯಿಂದಲೇ ನೆಲಗಡಲೆಗಳು ತುಂಬಲ್ಪಟ್ಟವು. ಎಲ್ಲರ ಕೈಗೂ ಒಂದೊಂದು ಪೊಟ್ಟಣ ಕೊಟ್ಟು, “”ಹೊರಗೆ ಹೋಗಿ ಆಟ ಆಡಿಕೊಂಡು ತಿನ್ನಿ” ಎಂದ ಅಜ್ಜಿ ಸೆರಗಿನಲ್ಲಿ ಉಳಿದ ಕಡಲೆಯನ್ನು ಒಳಗೆಲ್ಲೋ ನಮಗೆ ಕಾಣದಂತೆ ಬಚ್ಚಿಡುತ್ತಾಳೆ ಎಂದು ನಮಗೆ ಗೊತ್ತಿತ್ತು. ಅದರ ಜೊತೆಗೆ ಒಂದು ಸಣ್ಣ ಅಸಮಾಧಾನವೂ…! ಅಜ್ಜಿಯ ಮೊಮ್ಮಕ್ಕಳೆಂದರೆ ಮಗನ ಮಕ್ಕಳು ಮಾತ್ರವಲ್ಲದೇ ಮಗಳ ಮಕ್ಕಳೂ ಇದ್ದರು. ನಮ್ಮ ಎಲ್ಲ ಆಟಗಳಲ್ಲಿ ಅವರೂ ಭಾಗಿಗಳೇ. ಸ್ನೇಹ ಪ್ರೀತಿ ಎಲ್ಲವೂ ಇತ್ತು. ಆದರೆ, ಅಜ್ಜಿಗೆ ನಮ್ಮ ಮೇಲಿರುವುದಕ್ಕಿಂತ ಅವರ ಮೇಲೆಯೇ ಜಾಸ್ತಿ ಪ್ರೀತಿ. ನಿತ್ಯ ಜೊತೆಗಿರುವ ನಮಗೆ ಬೈಯಳು, ಅವರಿಗಾದರೋ ಬರೀ ಮುದ್ದು. ಹಾಗಾಗಿ, ಅವರಿಗೆ ಹೆಚ್ಚು ಕಡಲೆ ಹಾಕಿರುತ್ತಾರೆ ಎಂಬುದು ನಮ್ಮ ದೃಢ ನಂಬಿಕೆ. ಹೇಗಾದರೂ ಮಾಡಿ ಅವರ ಪೊಟ್ಟಣಗಳನ್ನು ನಮ್ಮದಾಗಿಸಿ ಅವರಿಗೆ ನಮ್ಮ ಪೊಟ್ಟಣಗಳನ್ನು ದಾಟಿಸುವಾಸೆ. ಇದಕ್ಕೆಂದೇ ನಮ್ಮ ಬತ್ತಳಿಕೆಯಲ್ಲಿ ಹತ್ತಾರು ಉಪಾಯಗಳೂ ಇದ್ದವು. ಹಾಗೆ ಬದಲಾಯಿಸಿ ತಿಂದ ದಿನ ನಾವು ಗೆದ್ದೆವು ಎಂಬ ಸಂಭ್ರಮ.

Advertisement

ಅದೊಂದು ದಿನ ಆಗಷ್ಟೇ ಅವರ ಪೊಟ್ಟಣಗಳನ್ನು ಬದಲಾಯಿಸಿ ಮುಸಿ ಮುಸಿ ನಗುತ್ತಿದ್ದೆವು. ಅದೇನು ಮನಸಾಯಿತೋ ಗೊತ್ತಿಲ್ಲ. ಅಣ್ಣ ತನ್ನ ಪೊಟ್ಟಣವನ್ನು ಬಿಚ್ಚಿ ಕಡಲೆ ಲೆಕ್ಕ ಹಾಕತೊಡಗಿದ. ಅಣ್ಣ ಮಾಡಿದ್ದನ್ನು ನಾವು ಮಾಡದಿರುವುದುಂಟೇ. ಎಲ್ಲ ಮೊಮ್ಮಕ್ಕಳ ಪೊಟ್ಟಣವೂ ಬಿಡಿಸಲ್ಪಟ್ಟು ಕಡಲೆ ಲೆಕ್ಕ ಹಾಕುವ ಆಟ ಶುರು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಪ್ರತಿಯೊಬ್ಬನ ಪೊಟ್ಟಣದಲ್ಲೂ ತುಂಬಿದ ಕಡಲೆಗಳ ಸಂಖ್ಯೆ ಒಂದೇ ಆಗಿತ್ತು. ಅಜ್ಜಿ ಅದನ್ನೇನೂ ಲೆಕ್ಕ ಹಾಕಿ ತುಂಬಿ ಕೊಡುತ್ತಿರಲಿಲ್ಲ. ಆದರೂ ಈ ಅಳತೆ ನಮ್ಮನ್ನು ಅಚ್ಚರಿಗೊಳಿಸಿತ್ತು. ಅಜ್ಜಿಯೂ ಅಮ್ಮನಂತೆಯೇ ಎಂಬರಿವು ಕಣ್ಣು ತೆರೆಸಿ, ಮತ್ತೆಂದೂ ಯಾರಿಗೂ ಭೇದ‌ ಮಾಡದಂತೆ ನಮ್ಮನ್ನು ಕಾಪಾಡಿತ್ತು.

ಅವಳು ಶಾಲೆಗೆ ಹೋಗುತ್ತಿದ್ದುದೇ ಮಧ್ಯಾಹ್ನ ಸಿಗುವ ಸಿಹಿಯಾದ ಉಂಡೆಯ ಆಸೆಗೆ. ದೊಡ್ಡ ಕ್ಲಾಸಿನಲ್ಲಿದ್ದ ಕಾರಣ ಪ್ರತಿನಿತ್ಯವೂ ಉಂಡೆಯ ತಯಾರಿಗಾಗಿ ಅವಳ ತರಗತಿಯ ಮಕ್ಕಳು ಸರದಿ ಪ್ರಕಾರ ಉಪಾಧ್ಯಾಯರುಗಳ ಸಹಾಯಕ್ಕೆ ಹೋಗಬೇಕಿತ್ತು. ಆ ಉಂಡೆಗೆ ಒಂದು ಅಳತೆ ಇತ್ತು. ಅದೇ ಅಳತೆಯ ಪ್ರಕಾರ ಉಂಡೆಗಳು ಇರಬೇಕಿತ್ತು. ಹೆಚ್ಚು ಕಡಿಮೆ ಆರುನೂರು ಮಕ್ಕಳಿಗೆ ಮಾಡಬೇಕಿದ್ದ ಉಂಡೆಗಳಿಗೆ ಇಂತಿಷ್ಟೇ ಹುಡಿಯ ಬಳಕೆ. ಲೆಕ್ಕ ಹಾಕಿಯೇ ಹುಡಿಯ ಪ್ಯಾಕೇಟುಗಳನ್ನು ಹೊರಗಿಡುತ್ತಿದ್ದರು. ಅದನ್ನು ಕಾಸಿ ಆದ ನಂತರ ಒಬ್ಬೊಬ್ಬರಿಗೆ ಉಂಡೆ ಮಾಡಲು ಇಷ್ಟಿಷ್ಟು ಹಿಟ್ಟು ಎಂದು ಕೊಡುತ್ತಿದ್ದರು. ಉಂಡೆ ಮಾಡಿದ ನಂತರ ಅದನ್ನೆಲ್ಲ ದೊಡ್ಡ ಬೋಗುಣಿಯೊಂದಕ್ಕೆ ವರ್ಗಾಯಿಸಿ ಮಧ್ಯಾಹ್ನದ ಹೊತ್ತಲ್ಲಿ ಊಟಕ್ಕೆಂದು ಎಲ್ಲ ವಿದ್ಯಾರ್ಥಿಗಳಿಗೆ ಒಂದೊಂದರಂತೆ ಹಂಚಲಾಗುತ್ತಿತ್ತು. ಅದೊಂದು ಕೆಟ್ಟ ದಿನ ಅವಳಿಗೇನೆನ್ನಿಸಿತೋ, ಒಂದಿಷ್ಟು ಉಂಡೆಯ ಹಿಟ್ಟನ್ನು ಮೊದಲೇ ಕೊಂಡೊಯ್ದ ಪ್ಲಾಸ್ಟಿಕ್‌ ಲಕೋಟೆಗೆ ಹಾಕಿ ಅಲ್ಲಿಯೇ ಅಡಗಿಸಿಟ್ಟಳು. ಮತ್ತೂಮ್ಮೆ ಅಡುಗೆಮನೆ ಸ್ವತ್ಛ ಮಾಡುವಾಗ ಅದನ್ನು ತೆಗೆದುಕೊಂಡು ಹೊರಟರಾಯ್ತು ಎಂಬುದವಳ ಲೆಕ್ಕಾಚಾರ. ಆ ದಿನ ಅವಳು ಮಾಡಿದ ಉಂಡೆಗಳು ಗಾತ್ರದಲ್ಲಿ ಸಣ್ಣದಾಗಿದ್ದವು. ಎಲ್ಲ ಉಂಡೆಗಳ ಜೊತೆಗೆ ಅದನ್ನೂ ಸೇರಿಸಿ ಬೆರೆಸಿದಾಗ ಅವಳ ಕಳ್ಳತನದ ಸುಳಿವು ಯಾರಿಗೂ ಸಿಗಲಿಲ್ಲ. ಊಟದ ಹೊತ್ತು. ಎಲ್ಲರೊಂದಿಗೆ ಅವಳೂ ಸಾಲಲ್ಲಿ ಕುಳಿತು ಉಂಡೆಗೆ ಕೈಯೊಡ್ಡಿದಳು. ಅವಳು ಕಟ್ಟಿದ ಉಂಡೆಯೇ ಅವಳ ಕೈಗೆ ಬೀಳಬೇಕೇ! ಅತ್ತಿತ್ತ ನೋಡಿದಳು. ತನಗೆ ಸಿಕ್ಕ ಹಾಗೆ ಸಣ್ಣ ಉಂಡೆ ಸಿಕ್ಕಿದವರು ಉಂಡೆಯನ್ನು ತಿರುಗಿಸಿ ಮುರುಗಿಸಿ ನೋಡಿಕೊಳ್ಳುತ್ತಿದ್ದರು.

ಅವಳಿಗೆ ಚಿಂತೆಯಿರಲಿಲ್ಲ. ತನ್ನ ಬಳಿ ಇದಕ್ಕಿಂತ ದೊಡ್ಡ ಗಾತ್ರದ ಹತ್ತಕ್ಕಿಂತ ಹೆಚ್ಚು ಉಂಡೆಯಾಗುವಷ್ಟು ಹಿಟ್ಟು ಇದೆಯಲ್ಲ ಎಂದುಕೊಂಡು ಎಲ್ಲರ ಜೊತೆ ಕುಳಿತು ಉಂಡೆ ಹೊಟ್ಟೆಗಿಳಿಸಿದಳು. ಯಾವತ್ತಿನಂತೆ ಹೊಟ್ಟೆ ತುಂಬಲಿಲ್ಲ. ಅಷ್ಟರಲ್ಲಿ ಉಪಾಧ್ಯಾಯರೊಬ್ಬರು ಲಕೋಟೆಯೊಂದನ್ನು ಎತ್ತಿ ಹಿಡಿದು, “”ಯಾರೋ ಉಂಡೆ ಹಿಟ್ಟು ತೆಗೆದಿಟ್ಟಿದ್ದಾರೆ. ಅವರು ಯಾರೆಂದು ನಾವು ಕೇಳುವುದಿಲ್ಲ. ಇಂದು ಕೆಲವರಿಗಾದರೂ ಕಡಿಮೆ ಗಾತ್ರದ ಉಂಡೆ ಬಂದಿರಬಹುದು. ಯಾರಿಗೆಲ್ಲ ಹೊಟ್ಟೆ ತುಂಬಲಿಲ್ಲವೋ ಅವರೆಲ್ಲ ಬನ್ನಿ” ಎಂದು ಕೂಗಿ ಹೇಳಿದರು. ಒಂದಿಷ್ಟು ಮಕ್ಕಳು ಎದ್ದರು. “”ಬಾರೇ ನಿನಗೂ ಸಣ್ಣ ಉಂಡೆ ಸಿಕ್ಕಿದ್ದಲ್ವಾ ” ಎಂದು ಗೆಳತಿಯೊಬ್ಬಳು ಕೈ ಹಿಡಿದು ಎಳೆಯುತ್ತಿದ್ದರೆ, ಅವಳ ನಡುಗುವ ಕಾಲುಗಳು ಮೇಲೇಳಲಿಲ್ಲ. ಆ ದಿನ ಅರೆ ಹೊಟ್ಟೆಯಲ್ಲೇ ದಿನ ಕಳೆದಳು. ಹಸಿವಿನ ಸಂಕಟ ಎಷ್ಟು ಕಷ್ಟದ್ದೆಂಬ ಅರಿವು ಮೂಡಿತು. ಮತ್ತೆಂದೂ ಇನ್ನೊಬ್ಬರ ಪಾಲನ್ನು ಕಿತ್ತುಕೊಳ್ಳುವ ತಪ್ಪನ್ನವಳು ಮಾಡುವಂತೆ ಪ್ರೇರೇಪಿಸಲಿಲ್ಲ.

ಅವನು ಮರದ ತುದಿಯಲ್ಲಿದ್ದ. ಎತ್ತರವಾದ ಸೀಬೆ ಹಣ್ಣಿನ ಮರವದು. ಕೆಳಗೆ ನಿಂತವರು ಅವನು ಕೊಯ್ದು ಕೊಡುವ ಸೀಬೆ ಹಣ್ಣಿಗಾಗಿ ಆಸೆಯಿಂದ ಕಾಯುತ್ತಿದ್ದರು. ಅವನಿಗೂ ಗೊತ್ತು, ಹಣ್ಣು ಕೆಳಗೆಸೆದೊಡನೇ ಒಂದು ಹಣ್ಣೂ ಇವನಿಗೆ ಉಳಿಯದಂತೆ ಎಲ್ಲವನ್ನೂ ಹಿಡಿದುಕೊಂಡು ಮಾಯವಾಗುತ್ತಿದ್ದ ಗೆಳೆಯರ ಬುದ್ಧಿವಂತಿಕೆ. ಅದಕ್ಕೆಂದೇ ಹಣ್ಣನ್ನು ಕಚ್ಚಿ ಕೆಳಗೆಸೆಯುತ್ತಿದ್ದ. “”ಅದು ನಾನು ಕಚ್ಚಿದ ಹಣ್ಣು, ನಿಮಗಿರುವುದು ನನ್ನ ಚಡ್ಡಿ ಕಿಸೆಯಲ್ಲಿ ಹಾಕಿ ತರುತ್ತಿದ್ದೇನೆ” ಎಂದು ಮರದ ಮೇಲಿನಿಂದಲೇ ಕೂಗಿ ಹೇಳುತ್ತಿದ್ದ. ಅವನು ಬರುವವರೆಗೆ ಕಾಯುತ್ತಿರುವುದು ಕೆಳಗೆ ನಿಂತಿದ್ದವರಿಗೂ ಅನಿವಾರ್ಯ. ಅಪಾತ್ರ ದಾನವಾಗದಂತೆ ನೋಡಿಕೊಂಡು ತಮ್ಮ ಪಾಲನ್ನು ಭದ್ರಪಡಿಸಿಕೊಳ್ಳುವ ಜಾಣತನವೂ ನಮ್ಮಲ್ಲೇ ಇರಬೇಕಾದ್ದು.

Advertisement

ಹಂಚುವಿಕೆಯೆನ್ನುವುದು ಒಂದು ಧರ್ಮ. ಮತ್ತು ಆ ಧರ್ಮ ನಮ್ಮನ್ನು ಯಾವತ್ತೂ ಕಾಪಾಡುವಂಥಾದ್ದು.

ಅನಿತಾ ನರೇಶ ಮಂಚಿ

Advertisement

Udayavani is now on Telegram. Click here to join our channel and stay updated with the latest news.

Next