Advertisement

ರಾಯಣ್ಣನನ್ನು ಅವಮಾನಿಸಿ ಶಿವಾಜಿಯನ್ನು ಕೊಂಡಾಡುತ್ತಾರೆ. ಇದೆಂಥಾ ದೇಶಪ್ರೇಮ?: ಎಚ್ ಡಿಕೆ

09:39 AM Dec 21, 2021 | Team Udayavani |

ಬೆಂಗಳೂರು: ಬೆಳಗಾವಿಯ ಒಂದು ಹಳ್ಳಿಯಲ್ಲಿ ಹುಟ್ಟಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಅದೇ ಬ್ರಿಟಿಷರು ಬಿಗಿದ ನೇಣು ಹಗ್ಗಕ್ಕೆ ಕೊರಳು ಕೊಟ್ಟ ಸಂಗೊಳ್ಳಿ ರಾಯಣ್ಣ ಅವರನ್ನು ಅಪಮಾನಿಸುತ್ತಾರೆ. ಅದೇ ಮೊಘಲರ ವಿರುದ್ಧ ಹೋರಾಡಿದ ಶಿವಾಜಿಯನ್ನು ಕೊಂಡಾಡುತ್ತಾರೆ. ಇದೆಂಥಾ ದೇಶಪ್ರೇಮ? ರಾಷ್ಟ್ರಪ್ರೇಮದಲ್ಲೂ ಬೇಧ ಭಾವವೇ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಎಚ್ ಡಿಕೆ, ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ ಎಂದು ನಾನು ಹಿಂದೆಯೇ ಹೇಳಿದ್ದೆ. ಈಗಲೂ ಅದೇ ಮಾತನ್ನು ಹೇಳುತ್ತಿದ್ದೇನೆ. ಬೆಳಗಾವಿಯಲ್ಲಿ ನಡೆದ ವಿಕೃತಿ ಬಗ್ಗೆ, ಕನ್ನಡಿಗರ ಹೆಮ್ಮೆ ಸಂಗೊಳ್ಳಿ ರಾಯಣ್ಣ ಅವರಿಗಾದ ಅಪಚಾರದ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳ ಬದ್ಧತೆ ಬಗ್ಗೆ ಈಗ ಪ್ರಶ್ನೆ ಉಂಟಾಗಿದೆ ಎಂದಿದ್ದಾರೆ.

ಮಾತೆತ್ತಿದರೆ ರಾಷ್ಟ್ರದ ಸಮಗ್ರತೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕವು 30 ರಾಜ್ಯಗಳಲ್ಲಿ ಒಂದು ರಾಜ್ಯವಷ್ಟೆ. ಕನ್ನಡವು ದೇಶ ಭಾಷೆಗಳಲ್ಲಿ ಒಂದು ಭಾಷೆ ಮಾತ್ರ. ಆದರೆ ನಮಗೆ ಕರ್ನಾಟಕವೇ ಕರ್ಮಭೂಮಿ. ಕನ್ನಡವೇ ತಾಯಿ. ನಾವು ಕನ್ನಡಮ್ಮನ ಕರುಳಬಳ್ಳಿಗಳು. ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ ಕೇವಲ ಚುನಾವಣೆ ಬಂದಾಗ ವೋಟ್ ಮಾಡುವ ಮತಯಂತ್ರ ಹಾಗೂ ತೆರಿಗೆ ರೂಪದಲ್ಲಿ ಕೇಂದ್ರದ ಖಜಾನೆ ತುಂಬುವ ಅಕ್ಷಯ ಪಾತ್ರೆ. ಆದರೆ; ನಮಗೆ ನೆರೆ, ಬರ ಬಂದಾಗ ಅವರ ಮುಂದೆಯೇ ಭಿಕ್ಷೆಗೆ ನಿಲ್ಲಬೇಕು! ಇದೆಂಥಾ ವಿಪರ್ಯಾಸ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಪುಂಡರ ವಿರುದ್ಧ ದೇಶದ್ರೋಹ, ಗೂಂಡಾ ಕಾಯ್ದೆಯಡಿ ಪ್ರಕರಣ

ಗಡಿ, ಭಾಷೆ, ಜಲದ ಪ್ರಶ್ನೆ ಬಂದಾಗ ಆ ಪಕ್ಷಗಳ ಆದ್ಯತೆ ಕನ್ನಡ-ಕರ್ನಾಟಕ ಅಲ್ಲ. ಕನ್ನಡದ ಮೇಲೆ ಹಿಂದಿ ಹೇರಿಕೆ ಮಾಡಲು ಬಂದವರನ್ನು ಸಹಿಸಿಕೊಳ್ಳುತ್ತಿದ್ದೇವೆ. ಕನ್ನಡಿಗರ ತೆರಿಗೆ ಹಣದಲ್ಲಿ ಜಾರಿ ಮಾಡಿದ ಯೋಜನೆ, ರಸ್ತೆ, ಸೇತುವೆಗಳಿಗೆ ಮಹಾರಾಷ್ಟ್ರದಲ್ಲಿ ಹುಟ್ಟಿದವರ ಹೆಸರಿಟ್ಟು ಔದಾರ್ಯ ತೋರುತ್ತಿದ್ದೆವೆ. ಇದು ಇನ್ನೆಷ್ಟು ದಿನ? 2006ರಲ್ಲಿ ಶಿವಸೇನೆ-ಎಂಇಎಸ್ ಗಡಿತಂಟೆ ಮಾಡಿದಾಗ, ಆಗ ಕೇಂದ್ರದಲ್ಲಿ ಗೃಹಮಂತ್ರಿಯಾಗಿದ್ದ ಅದೇ ರಾಜ್ಯದ ನಾಯಕರು ಬೆಳಗಾವಿ ಮೇಲೆ ಕಣ್ಣು ಹಾಕಿದಾಗ, ಅಲ್ಲಿ ವಿಧಾನಕಲಾಪ ನಡೆಯಿತು. ಸುವರ್ಣಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆಯೂ ಆಯಿತು. ಇದು ಕನ್ನಡದ ಒಂದು ಸಣ್ಣ ಪಕ್ಷಕ್ಕೆ ಇದ್ದ ಬದ್ಧತೆ. ಈ ಎದೆಗಾರಿಕೆ ರಾಷ್ಟ್ರೀಯ ಪಕ್ಷಗಳಿಗೆ ಏಕಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

Advertisement

ನಮ್ಮ ರಾಯಣ್ಣರ ಪ್ರತಿಮೆ ಮೇಲೆ ʼಕೈʼ ಇಟ್ಟವರ ಮೇಲೆ ಕರುಣೆ ಯಾಕೆ? ಎಂಇಎಸ್ ಬಗ್ಗೆ ಎರಡು ನಾಲಗೆಯಲ್ಲಿ ಮಾತನಾಡುವ ʼಕೈಚಳಕʼದ ಮರ್ಮವೇನು? ಮಸೂದೆಗಳನ್ನು ಇಟ್ಟುಕೊಂಡು ಕನ್ನಡದ ಆಸ್ಮಿತೆಯ ಮೇಲಾದ ದಾಳಿಯನ್ನು ʼವಿಷಯಾಂತರʼ ಮಾಡುವ ಹುನ್ನಾರ ಏಕೆ ಎಂದು ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next