Advertisement

ಹಿಂಸಾವಾದಿಗಳಿಗೇಕೆ ಕೊಡುವಿರಿ ಬೆಂಬಲ?

12:30 AM Sep 20, 2018 | |

ವಿಚಾರ ಭಿನ್ನತೆ, ಅಡಳಿತ ವಿರೋಧಿ ನೀತಿ, ಪ್ರತಿಭಟನಾ ಹಕ್ಕುಗಳಿಗೆ ಕೆಲವು ಇತಿಮಿತಿಗಳು ಇರುತ್ತವೆ. ಇವುಗಳನ್ನು ಈ ಇತಿಮಿತಿಯ ಹಂದರದಲ್ಲೇ ಬಳಸಬೇಕಾಗುತ್ತದೆ. ಇವು ರಾಷ್ಟ್ರದ್ರೋಹಕ್ಕೆ, ಹಿಂಸೆಗೆ, ರಕ್ತಪಾತಕ್ಕೆ ಮತ್ತು ದೇಶ ವಿಭಜನೆಗೆ ಪ್ರಚೋದನೆ ನೀಡುವುದಾದರೆ ಅದನ್ನು ತಡೆಯುವ ಅನಿವಾರ್ಯತೆ ಸರ್ಕಾರಕ್ಕೆ ಇರುತ್ತದೆ. 

Advertisement

ಈ ದೇಶದ ಸಂವಿಧಾನದಲ್ಲಿ “ಬುದ್ಧಿಜೀವಿ’ ಅಥವಾ “ಚಿಂತಕ’ ಎನ್ನುವುದನ್ನು ಎಲ್ಲಿಯೂ ಉಲ್ಲೇಖೀಸಿಲ್ಲ. ಯಾವ ಸಂದರ್ಭದಲ್ಲಿಯೂ ಯಾವ ನ್ಯಾಯಾಲಯವೂ ಬುದ್ಧಿ ಜೀವಿಗಳನ್ನು ವ್ಯಾಖ್ಯಾನಿಸಿದ ಉದಾಹರಣೆ ಇರುವುದಿಲ್ಲ. ಯಾರೂ ಅವರಿಗೆ ಈ ಬಿರುದು ಬಾವಲಿಗಳನ್ನು ನೀಡಿ ಗೌರವಿಸಲಿಲ್ಲ. ಆದರೂ ಇವರು ಜೀವನದ ಪ್ರತಿರಂಗದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ವಿಚಾರಧಾರೆಗಳು ಇತರರಿಗಿಂತ ಭಿನ್ನವಾಗಿರುತ್ತವೆ. ಇವರಲ್ಲಿ ಕೆಲವರು ತೆರಿಗೆದಾರರ ಹಣದಿಂದ ಸದಾ ರಕ್ಷಣೆ ಪಡೆಯುತ್ತಾರೆ. ಇವರು ಸ್ವಘೋಷಿತರು ಮತ್ತು ಮಾಧ್ಯಮದ ಕೆಲವರ ಮೂಲಕ ಸದಾ ಸುದ್ದಿಯಲ್ಲಿರುವವರು. ಇವರಲ್ಲಿ ಕೆಲವರು ಸಾಹಿತಿಗಳು, ಸಿನೆಮಾ ನಟರು, ವಕೀಲರು ಮತ್ತು ಸೆಲಬ್ರಿಟಿಗಳು ಇರುವುದು ವಿಶೇಷ. 

ಇವರ ವಿಶೇಷತೆಯೆಂದರೆ ಊರಿಗೆ ಒಂದು ದಾರಿಯಾದರೆ, ಪೋರನಿಗೆ ಮತ್ತೂಂದು ಎನ್ನುವಂತೆ, ತಮ್ಮ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳಲೋ ಅಥವಾ ತಮ್ಮ ಅಂತಸ್ತನ್ನು ತೋರಿಸಲೋ ಏನೋ? ಮುಖ್ಯವಾಹಿನಿಗೆ ತದ್ವಿರುದ್ಧವಾಗಿಯೇ ಈಜುತ್ತಾರೆೆ. ಮುಖ್ಯ ಪ್ರವಾಹದಲ್ಲಿ ಕಾಣದೇ ಆಡಳಿತ ವ್ಯವಸ್ಥೆಯ ವಿರುದ್ಧ ಸದಾ ಕತ್ತಿ ಮಸೆಯುವ ವರ್ಗವಿದು. 

ತೀರಾ ಇತ್ತೀಚಿನವರೆಗೆ ನಕ್ಸಲ್‌ ಹೋರಾಟಗಾರರಿಗೆ ತಮ್ಮ ತಿರುಚಿದ ಭಾಷೆಯಲ್ಲಿ, ಶಬ್ದಗಳ ಆಡಂಬರದಲ್ಲಿ ಪರೋಕ್ಷ ಸೈದ್ಧಾಂತಿಕ ಬೆಂಬಲ ನೀಡುತ್ತಿದ್ದ ಈ ಚಿಂತಕರು/ ಬುದ್ಧಿಜೀವಿಗಳು ಈಗ “ನಾವು ನಗರದ ನಕ್ಸಲ್‌’ಗಳೆಂದು ಸಾರಿ ತಮ್ಮ ನಿಜ ಬಣ್ಣವನ್ನು ಹೊರಹಾಕಿದ್ದಾರೆ. ಈ ಮೂಲಕ ಬಹುಕಾಲದಿಂದ ಇರುವ ಸಂದೇಹಕ್ಕೆ ಅವರೇ ತೆರೆ ಎಳೆದಿದ್ದಾರೆ. ವಾಸ್ತವವಾಗಿ ನಕ್ಸಲರಲ್ಲಿ ಹಳ್ಳಿ ನಕ್ಸಲ್‌, ನಗರ ನಕ್ಸಲ್‌ ಎನ್ನುವ ಬಣಗಳು ಇರುವುದಿಲ್ಲ. ನಕ್ಸಲ್‌ ಯಾವಾಗಲೂ ನಕ್ಸಲ್‌. ಒಂದು ರೂಪಾಯಿ ಕದಿಯಲಿ ಅಥವಾ ನೂರು ಕದಿಯಲಿ, ಹಳ್ಳಿಯಲ್ಲಿ ಕದಿಯಲಿ ಅಥವಾ ನಗರದಲ್ಲಿ ಕದಿಯಲಿ, ಕಳ್ಳ ಕಳ್ಳನೇ, ಕೊಲೆಗಾರ ಕೊಲೆಗಾರನೇ ಎನ್ನುವ ಸತ್ಯವನ್ನು ಅವರು ತಿಳಿಯದಿರುವುದು ತೀರಾ ಆಶ್ಚರ್ಯ. ಜಗತ್ತು ಸಂದೇಹಿ ಸುತ್ತಿದ್ದುದನ್ನು ಅವರೇ ಒಪ್ಪಿಕೊಂಡಂತೆ ಕಾಣುತ್ತದೆ. ಅವರು ತಮ್ಮ ನಡೆಯನ್ನು ಸದಾ ಸಮರ್ಥಿಸಿಕೊಳ್ಳಲು ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್‌ ಸ್ವಾತಂತ್ರ್ಯ, ವಿಚಾರ ಭಿನ್ನತೆಯನ್ನು ಬಳಸಿಕೊಳ್ಳುವ ವೈಖರಿ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ.

ಗೌರಿ ಕೊಲೆ ಮನುಕುಲವು ಎಂದೂ ಸಹಿಸದ ಅಮಾನುಷ ಕೃತ್ಯ. ಹಾಗೆಯೇ ದಾಭೋಲ್ಕರ, ಕಲಬುರ್ಗಿ, ರಾಜು, ಶರತ್‌ ಮಡಿವಾಳ, ದೀಪಕ್‌, ಪನ್ಸಾರೆ ಹತ್ಯೆಗಳೂ ಕೂಡಾ. ಇವು ಖಂಡಿಸಲೇಬೇಕಾದ ಹೀನ ಕೃತ್ಯಗಳು. ಅದರೆ, ಈ ಚಿಂತಕರು ಕೇವಲ ಗೌರಿ ಮತ್ತು ಕೆಲವರ ಹತ್ಯೆಯ ಬಗೆಗೆ ಮಾತ್ರ ಧ್ವನಿ ಏರಿಸುವುದು ಏಕೆ? ನಕ್ಸಲರನ್ನು ಪೊಲೀಸರು ಅಥವಾ ಸೈನಿಕರು ಕೊಂದಾಗ ಮಾನವ ಹಕ್ಕುಗಳ ಹೆಸರಿನಲ್ಲಿ ಬೊಬ್ಬೆ ಇಡುವ, ಹುಯಿಲೆಬ್ಬಿಸುವ, ಪ್ರತಿಭಟಿಸುವ ಇವರು, ನಕ್ಸಲರು ಅಮಾಯಕರನ್ನು ಹತ್ಯೆಗೈದಾಗ ಮೌನವೃತಕ್ಕೆ ಜಾರುವುದೇಕೆ? ಇವರ ಟೀಕಾಸ್ತ್ರಗಳೆಲ್ಲ ಕೇವಲ ಒಂದು ಧರ್ಮದ, ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಅದರ ಅಚಾರ ವಿಚಾರಗಳ ವಿರುದ್ಧವೇ ಇರುತ್ತವೆ. 

Advertisement

ಅಮಾಯಕರಿಗೆ ಮಾನವ ಹಕ್ಕು, ಬದುಕುವ ಹಕ್ಕು ಇಲ್ಲವೇ? ಕಾಶ್ಮೀರದಲ್ಲಿ ಉಗ್ರಗಾಮಿಗಳು ಅಮಾಯಕರನ್ನು ಮತ್ತು ಸೈನಿಕರನ್ನು ಕೊಂದಾಗ ಮೌನವಾಗಿರುವ ಇವರು, ಸೈನಿಕರ ಮೇಲೆ ಕಲ್ಲು ಒಗೆಯುವವರನ್ನು ಏಕೆ ಪ್ರಶ್ನಿಸುವುದಿಲ್ಲ? ರಾಮಾಯಣ- ಮಹಾಭಾರತ, ಭಗವದ್ಗೀತೆಗಳಿಗೆ ಅಪಮಾನ ಮಾಡಿದಾಗ, ಬಹುಸಂಖ್ಯಾತ ಹಿಂದೂಗಳು ಪೂಜಿಸುವ ಶ್ರೀರಾಮ, ಸೀತೆ, ಕೃಷ್ಣ,  ಮಾರುತಿ, ಗ‌ಣಪತಿಯರನ್ನು ಲೇವಡಿ ಮಾಡಿದಾಗ, ನಡು ರಸ್ತೆಯಲ್ಲಿ ಗೋ ಮಾಂಸದ ರುಚಿ ನೋಡಿದಾಗ ಇವರ ಪ್ರಜ್ಞೆ ಸ್ಪಂದಿಸುವುದಿಲ್ಲ. ಮಧ್ಯ ಪ್ರಾಚ್ಯದಲ್ಲಿ ಧರ್ಮದ ಹೆಸರಿನಲ್ಲಿ ಲಕ್ಷಾಂತರ ಜನರ ಹತ್ಯೆಯಾಗುತ್ತಿದೆ. ಇವರು ಈ ಬಗೆಗೆ ಬಾಯಿ ಬಿಡುವುದಿಲ್ಲ. ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಒಬ್ಬೇ ಒಬ್ಬ ಹಿಂದುಯೇತರನಿಗೆ ಘಾಸಿಯಾದರೆ, ಇವರು ಕೂಡಲೇ ಬೀದಿಗಿಳಿಯುತ್ತಾರೆ.

ತೀರಾ ಇತ್ತೀಚೆಗಿನವರೆಗೆ ಈ ಬುದ್ಧಿಜೀವಿ/ಚಿಂತಕರಿಗೆ ದೇಶದಲ್ಲಿ ಭಾರೀ ಗೌರವವಿತ್ತು. ದೇಶದ ಆಗುಹೋಗುಗಳ ಬಗೆಗೆ ಅವರ ಪ್ರತಿಕ್ರಿಯೆಗೆ ಜನರು ಕಾಯುತ್ತಿದ್ದರು. ಅದರೆ, ಇಂದು ತಮ್ಮ ಸ್ವಯಂಕೃತ ಕುಕೃತ್ಯಗಳಿಂದಾಗಿ ಮತ್ತು ದ್ವಂದ್ವ ನಡವಳಿಕೆಯಿಂದಾಗಿ ತಮ್ಮ ಮಹತ್ವ ಮತ್ತು ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ. ಅಸಹನೆ ಮತ್ತು ಅಸಹಿಷ್ಣುತೆ ಹೆಸರಿನಲ್ಲಿ ಅವರು ನಡೆದುಕೊಂಡ ರೀತಿಯಿಂದ ಅರಂಭವಾದ ಅವರ ಬಗೆಗಿನ ನಕಾರಾತ್ಮಕ ಭಾವನೆಗಳು, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರು ದೆಹಲಿಯ ಜವಾಹರ ನೆಹರು ವಿಶ್ವ ವಿದ್ಯಾಲಯದಲ್ಲಿ ಕನ್ಹಯ್ಯ ಕುಮಾರ್‌ ಎನ್ನುವ ಸ್ವಘೋಷಿತ ಯುವ ಬದ್ಧಿ ಜೀವಿ ಮಾಡಿದ ಪ್ರಚೋದನಕಾರಿ ಮತ್ತು ದೇಶದ್ರೋಹದ ಭಾಷಣವನ್ನು ಶಬ್ದಗಳ ಕಲಸು ಮೇಲೋಗರದಲ್ಲಿ ಸಮರ್ಥಿಸಿಕೊಂಡ ರೀತಿಯನ್ನು ದೇಶಾಭಿಮಾನಿಗಳು ಸಹಿಸಿಕೊಂಡಿಲ್ಲ. 

ಅವರ “ಪ್ರಶಸ್ತಿ ಹಿಂತಿರುಗಿಸಿ’ ಅಭಿಯಾನ ಅವರನ್ನು ನೋಡುವ ದೃಷ್ಟಿಯನ್ನು ಬದಲಿಸಿತ್ತು. ನಕ್ಸಲ್‌ ಚಟುವಟಿಕೆಗಳನ್ನು ಪರೋಕ್ಷವಾಗಿ ಬೆಂಬಲಿಸುವ ಈ ವರ್ಗದ “ನಾನು ನಗರ ನಕ್ಸಲ್‌’ ಹೇಳಿಕೆ ಇದರೆಡೆಗೆ ಇದ್ದ ಕೊನೆ ಗುಟುಕು ಗೌರವವನ್ನೂ ಎಳೆದು ಹಾಕಿದೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು, ತಮ್ಮ ಸಿದ್ಧಾಂತಗಳಿಗೆ ಹೊಂದಿಕೆಯಾಗುವಂತೆ ಅದನ್ನು ವಿಶ್ಲೇಷಣೆ ಮಾಡಬಹುದು. ಆದರೆ ಇದನ್ನು ವಿತಂಡವಾದ ಎನ್ನಬಹುದಷ್ಟೆ. 

ಜನಸಾಮಾನ್ಯರು ನೋಡುವುದು ನಕ್ಸಲರ ಕೃತ್ಯಗಳನ್ನೇ ಹೊರತು ಅವರ ಸಿದ್ಧಾಂತವನ್ನಲ್ಲ. ವೈಚಾರಿಕ ಗೊಂದಲದಲ್ಲಿ ಇರುವವರು ಈ ರೀತಿ ಮಾಡಿದರೆ ಕ್ಷಮಿಸಬಹುದು. ಆದರೆ, ಜ್ಞಾನಪೀಠಿಗಳು, ಅಪಾರ ಜ್ಞಾನವಂತರು, ಪ್ರಗತಿಪರರು ಎಂದು ಗುರುತಿಸಿಕೊಂಡವರು ಈ ರೀತಿ ಮಾಡಿದರೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವ ಗೊಂದಲ ಉಂಟಾಗುತ್ತದೆ. ಹಾಗೆಯೇ ಮಾಧ್ಯಮದಲ್ಲಿ ಕೆಲವರು ನಕ್ಸಲರ ವಿಚಾರ ಧಾರೆಯನ್ನು ಬೆಂಬಲಿಸುವುದು ಇನ್ನೊಂದು ದುರಂತ.

ವಿಚಾರ ಭಿನ್ನತೆ, ಅಡಳಿತವಿರೋಧಿ ನೀತಿ, ಪ್ರತಿಭಟನಾ ಹಕ್ಕುಗಳು absolute ಅಗಿರದೇ, ಅವುಗಳಿಗೆ ಕೆಲವು ಇತಿಮಿತಿಗಳು ಇರುತ್ತವೆ. ಇವುಗಳನ್ನು ಈ ಇತಿಮಿತಿಯ ಹಂದರದಲ್ಲಿ ಬಳಸಬೇಕಾಗುತ್ತದೆ. ಇವು ರಾಷ್ಟ್ರದ್ರೋಹಕ್ಕೆ, ಹಿಂಸೆಗೆ, ರಕ್ತಪಾತಕ್ಕೆ ಮತ್ತು ದೇಶ ವಿಭಜನೆಗೆ ಪ್ರಚೋದನೆ ನೀಡುವುದಾದರೆ ಅದನ್ನು ತಡೆಯುವ ಅನಿವಾರ್ಯತೆ ಸರ್ಕಾರಕ್ಕೆ ಇರುತ್ತದೆ. ಸರ್ಕಾರ ಮಧ್ಯ ಪ್ರವೇಶಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಕ್ರಮಗಳನ್ನು ದಮನಕಾರಿ ಕ್ರಮ ಎಂದು ಚಿಂತಕರು ಅಪಾದಿಸುವಂತೆ ಕರೆಯಲಾಗದು. ಸರ್ಕಾರಕ್ಕೂ ತನ್ನದೇ ಆದ ಸಂವಿಧಾನ ನೀಡಿದ ಕರ್ತವ್ಯಗಳು ಇವೆ. ನಕ್ಸಲರಿಗೂ ಹಲವು ಸಮಸ್ಯೆಗಳಿವೆ. ಇವುಗಳಿಗೆ ಪರಿಹಾರ ಹಿಂಸೆಯಲ್ಲಿ ಇರದೇ, ಸಂಘರ್ಷದಲ್ಲಿ ಇರದೇ ಮಾತುಕತೆಯಲ್ಲಿ ಮತ್ತು ಸಂಭಾಷಣೆಯಲ್ಲಿ ಇರುತ್ತದೆ. ಗನ್‌ ಮೂಲಕ ಪಡೆದ ಪರಿಹಾರ ಶಾಶ್ವತವಲ್ಲ. ಮನವೊಲಿಕೆಯಿಂದ ಗಳಿಸಿದ ಪರಿಹಾರ ಬಹುಕಾಲ ಇರುತ್ತದೆ. ಇದನ್ನು ಚಿಂತಕರು ಗಮನಿಸಿ ಈ ನಿಟ್ಟಿನಲ್ಲಿ ತಮ್ಮ ಬುದ್ಧಿಮತ್ತೆಯನ್ನು ಮತ್ತು ಜಾಣ್ಮೆಯನ್ನು ಉಪಯೋಗಿಸಬೇಕು. ಸರ್ಕಾರವನ್ನು ವಿರೋಧಿಸುವುದರಲ್ಲಿ ದೊಡ್ಡತನವನ್ನು ಕಾಣುವುದು ಸಮಂಜಸವಲ್ಲ.

ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next