Advertisement

ಯಾಕೆ, ಒಂಟಿಯಾಗಿರಬಾರದಾ?

03:50 AM Mar 24, 2017 | |

ವಯಸ್ಸು ಮೂವತ್ತರ ಗಡಿ ಸಮೀಪಿಸುತ್ತಿದೆ ಎಂದಾಕ್ಷಣ, “”ನಿನಗಿನ್ನೂ ಮದುವೆಯಾಗಿಲ್ವಾ? ಯಾಕೆ, ಏನು?” ಎಂಬಿತ್ಯಾದಿ ಪ್ರಶ್ನೆಗಳನ್ನು ಹೆಣ್ಣು ಎದುರಿಸುತ್ತಾಳೆ. “ನೀನೇನು ಸೆಲೆಬ್ರಿಟಿನಾ? ಲವ್‌ ಇದೆಯಾ?’ ಎಂಬ ವ್ಯಂಗ್ಯದ ಮಾತುಗಳೂ ಆಕೆಯನ್ನು ಕಂಗೆಡಿಸುತ್ತವೆ.

Advertisement

ಇತ್ತೀಚೆಗೆ ಗೆಳತಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಫೋನ್‌ ಮಾಡಿದ್ದೆ. ಈಚೆ ಕಡೆಯಿಂದ ನಾನು ಹುಟ್ಟುಹಬ್ಬದ ಶುಭಾಶಯಗಳು ಎಂದಾಗ ಆ ಕಡೆಯಿಂದ ಆಕೆ, “ಹುಂ’ ಅಂದಷ್ಟೆ ಹೇಳಿ ಸುಮ್ಮನಾದಳು. “”ಥ್ಯಾಂಕ್ಸ್‌ ಹೇಳಿದರೆ ನಿನ್ನ ಗಂಟೇನು ಹೋಗುತ್ತದೆ” ಎಂದಾಗ ಆಕೆ ಹಾವಿನಂತೆ ಬುಸುಗುಟ್ಟಿದಳು. “”ವರ್ಷ ಮೂವತ್ತಾಯಿತು ಕಣೆ ನನಗೆ ಹೇಗೆ ಸಂಭ್ರಮಿಸಲಿ ಈ ಹುಟ್ಟುಹಬ್ಬವನ್ನು? ಕೇಕ್‌ ಕತ್ತರಿಸಿ ಖುಷಿಪಡಲು ನನಗೇನು ಹದಿನಾರು ವರ್ಷನಾ?” ಎಂದಾಗ ನನಗೆ ತುಸು ಪಿಚ್ಚೆನಿಸಿತು. ಅವಳ ಅಸಮಾಧಾನಕ್ಕೆ ವರುಷವಾದರೂ ಬೆಸೆಯದ ಮದುವೆಯ ನಂಟು ಎಂಬುದು ಗೊತ್ತಾಯಿತು. 

“”ಏನು ಮಾಡಲಿ ಕಣೆ, ಆಫೀಸ್‌ಗೆ ಹೋಗೋದಕ್ಕೂ ಬೇಜಾರು. ಯಾವಾಗ್ರೀ ಮದುವೆ ಊಟ ಹಾಕಿಸ್ತೀರಿ” ಎಂದು ಸಹೋದ್ಯೋಗಿಗಳು ಸಮಯ ಸಿಕ್ಕಾಗಲೆಲ್ಲ ಕಿಚಾಯಿಸುತ್ತಿರುತ್ತಾರೆ. ಯಾರಾದರೂ ಒಬ್ಬ ಹುಡುಗ ಸಿಕ್ಕಿದರೂ ಸಾಕು ಮಗಳ ಕತ್ತಿನಲಿ ಒಂದು ತಾಳಿ ನೇತಾಡಲಿ ಎಂಬುದು ಅಮ್ಮನ ಆಸೆ, “”ಎಷ್ಟು ಒಳ್ಳೆಯ ಸಂಬಂಧ ಬಂದರೂ ನೀನು ಏನಾದರೂ ಒಂದು ತಗಾದೆ ತೆಗೆಯುತ್ತಿಯ, ನನಗಿನ್ನೂ ಹುಡುಕೋದಕ್ಕೆ ಆಗುವುದಿಲ್ಲ” ಎಂಬುದು ಅಪ್ಪನ ಬೈಗುಳ. “”ನೀನು ಹೀಗೆ ತಡಮಾಡಿದರೆ ನಾನು ಮುದುಕನಾದ ಮೇಲೆ ಮದುವೆಯಾಗಬೇಕು. ಆಮೇಲೆ ನನಗೆ ಯಾರು ಹೆಣ್ಣು ಕೊಡಲು ಮುಂದೆ ಬರುತ್ತಾರೆ ತಲೆಯಲ್ಲಿ ಕೂದಲು ಉದುರಲು ಶುರುವಾಗಿದೆ” ಎಂದು ಅಣ್ಣ ಒಳಗೊಳಗೆ ಸಿಡುಕುತ್ತಾನೆ. ಯಾರದ್ದಾದರೂ ಫೋಟೊ ಬಂದರೆ, “”ಅಕ್ಕಾ… ಇವನು ಚೆನ್ನಾಗಿದ್ದಾನೆ ಹುಂ ಅನ್ನು ಇನ್ನು ತಡ ಮಾಡಿದರೆ ಕಷ್ಟ” ಎಂದು ತಂಗಿ ತನ್ನ ಲೈನ್‌ ಕ್ಲೀಯರ್‌ ಆಗುವುದಕ್ಕಾಗಿ ಕಾಯುತ್ತಿದ್ದಾಳೆ. “”ವರ್ಷ ಮೂವತ್ತು ದಾಟಿದ ಮೇಲೆ ಮಕ್ಕಳು ಆಗೋದಕ್ಕೆ ಸ್ವಲ್ಪ ಕಷ್ಟವಾಗುತ್ತದೆ, ಡೆಲಿವರಿಗೂ ಸಮಸ್ಯೆಯಾಗುತ್ತದೆ. ಅದು ಅಲ್ಲದೇ, ಈಗ ಪಿಸಿಓಎಸ್‌ ಮಣ್ಣುಮಸಿ ಎಂಬ ಸಮಸ್ಯೆಗಳು ಹೆಣ್ಣುಮಕ್ಕಳನ್ನು ಕಾಡುತ್ತಿದೆ ಬೇಗ ಒಂದು ಮದುವೆಯಾದರೆ ಒಳ್ಳೆಯದು” ಎಂದು ಪಕ್ಕದ ಮನೆಯ ಆಂಟಿಯ ಬಿಟ್ಟಿ ಉಪನ್ಯಾಸ.

ಇದನ್ನೆಲ್ಲ ಕೇಳಿ ಕೇಳಿ ನನಗೂ ಸಾಕಾಗಿದೆ. ಅಷ್ಟಕ್ಕೂ ಮೂವತ್ತಾಗಿದೆ ಎಂದ ತಕ್ಷಣ ಎಲ್ಲ ಮುಗಿದೇ ಹೋಗಿದೆ ಎನ್ನುವ ಹಾಗೆ ಯಾಕೆ ಈ ಜನ ವರ್ತಿಸುತ್ತಾರೆ? ಎಲ್ಲರೂ ಹದಿನೆಂಟಕ್ಕೆ ಮದುವೆಯಾಗಿ ಇಪ್ಪತ್ತಕ್ಕೆ ಎರಡೆರಡು ಮಕ್ಕಳನ್ನು ಹಡೆದಿದ್ದಾರಾ? ಎಂದು ತನ್ನೆಲ್ಲಾ ಅಸಮಾಧಾನಗಳನ್ನೆಲ್ಲಾ ಕಕ್ಕಿ ಆದರೂ ಬೇಗ ಒಂದು ಮದುವೆಯಾಗಬೇಕು ಈ ಪ್ರಶ್ನೆಗಳನ್ನೆಲ್ಲ ಎದುರಿಸಿ ಸಾಕಾಗಿ ಹೋಗಿದೆ’ ಎಂದು ಮಾತಿಗೆ ವಿರಾಮ ಕೊಟ್ಟಳು.

ಕಾಲ ಬದಲಾಗಿದೆ!
ಕಾಲಕಾಲಕ್ಕೆ ಮಳೆ, ಬೆಳೆ ಆದ ಹಾಗೆ ಹೆಣ್ಣುಮಕ್ಕಳು ಆಯಾ ವಯಸ್ಸಿಗೆ ಮದುವೆ, ಮಕ್ಕಳು ಅಂತ ಆದರೆ ಚೆಂದ ಎಂದು ಹಿರಿಯರು ಹೇಳುತ್ತಿರುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡಿನಷ್ಟೇ ಸಮಾನಳು. ಗಂಡಿನಂತೆ ಸಂಸಾರದ ಜವಾಬ್ದಾರಿಗೆ ಹೆಗಲು ಕೊಡಬಲ್ಲಳು. ಅದು ಅಲ್ಲದೇ ಈಗ ಐಟಿಬಿಟಿ ವಲಯದಲ್ಲಿ ಕೆಲಸಕ್ಕೆ ಹೋಗುವವರು “ತಮ್ಮ ಜೀವನ ಒಂದು ನೆಲೆ ಕಂಡುಕೊಂಡ ಮೇಲೆ ಮದುವೆಯಾದರೆ ಆಯ್ತು ಇಷ್ಟು ಬೇಗ ಯಾಕೆ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದು ಮದುವೆ ಮಾತುಕತೆಗೆ ಬ್ರೇಕ್‌ ಹಾಕಿರುತ್ತಾರೆ.

Advertisement

ಈಗಿನ ತಂದೆ-ತಾಯಿಯರೂ ಮಕ್ಕಳ ಅಭಿಪ್ರಾಯಕ್ಕೆ ಬೆಲೆಕೊಡುತ್ತಿದ್ದಾರೆ. “ಈಗಷ್ಟೇ ಕಾಲೇಜು ಮುಗಿಸಿ¨ªಾಳೆ. ಒಂದಷ್ಟು ವರ್ಷ ಕೆಲಸ ಮಾಡಿಕೊಂಡು ಹಾಯಾಗಿರಲಿ, ಆಮೇಲೆ ಈ ಮನೆ-ಮಕ್ಕಳ ಲಾಲನೆ-ಪಾಲನೆ ಇದ್ದ¨ªೆ’ ಎಂಬುದು ಪೋಷಕರ ಅಭಿಪ್ರಾಯ.

ಮೊದಲೆಲ್ಲ ಹುಡುಗಿಯರು ಅಷ್ಟಾಗಿ ಉದ್ಯೋಗಕ್ಕೆ ಹೋಗುತ್ತಿರಲಿಲ್ಲ. ಮನೆಕೆಲಸ ನೋಡಿಕೊಂಡು, ಹಾಡುಹಸೆ ಕಲಿತುಕೊಂಡು ಮನೆಯಲ್ಲಿಯೇ ಇರುತ್ತಿದ್ದರು. ವಯಸ್ಸಿಗೆ ಬಂದ ಮಗಳು ಮನೆಯಲ್ಲಿದ್ದರೆ ಹೆತ್ತವರು ಮಡಿಲಲ್ಲಿ ಕೆಂಡ ಕಟ್ಟಿಕೊಂಡವರ ಹಾಗೆ ಓಡಾಡುತ್ತಿದ್ದರು. ಈಗ ಆಯ್ಕೆಗಳು ಹೆಚ್ಚಿವೆ. ಹುಡುಗಿಯರು ತಮ್ಮ ಇಷ್ಟಕಷ್ಟದ ಬಗ್ಗೆ ಮುಕ್ತವಾಗಿ ಮನೆಯವರ ಎದುರು ಹೇಳುತ್ತಾರೆ. ಇದು ನನ್ನ ಜೀವನ ನಾಳೆ ಬದುಕ ಸಾಗಿಸಬೇಕಾದವಳು ನಾನು ಎಂದು ವಾದಿಸುವಷ್ಟರ ಮಟ್ಟಿಗೆ ಗಟ್ಟಿಗಿತ್ತಿಯರೂ ಆಗಿದ್ದಾರೆ. 

ಒಂದಿಷ್ಟು ಸಮಸ್ಯೆಗಳು
ಇನ್ನು ಮಧ್ಯಮ ವರ್ಗದ ಹೆಣ್ಣು ಮಕ್ಕಳದ್ದು ಇನ್ನೊಂದು ರೀತಿಯ ಪಾಡು. ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲ ತೀರಿಸಬೇಕು, ಎಲ್ಲಾ ಭಾರವನ್ನು ಅಪ್ಪನ ಹೆಗಲ ಮೇಲೆ ಹೊರಿಸುವುದು ಬೇಡ, ತಮ್ಮನ ಓದು, ಬೆಳೆದು ನಿಂತ ತಂಗಿ, ಅಮ್ಮನ ಔಷಧಿ… ಈ ರೀತಿಯ ಹಣಕಾಸಿನ ಸಮಸ್ಯೆ ನಿವಾರಿಸುವುದಕ್ಕೆ ಒಂದು ಕೆಲಸ ಹುಡುಕಿಕೊಂಡು ನಗರದ ಕಡೆ ಹೋಗಿರುತ್ತಾರೆ. ತಾನು ಬೇಗ ಮದುವೆಯಾದರೆ ಇದನ್ನೆಲ್ಲಾ ನಿಭಾಯಿಸುವವರು ಯಾರು? ಎಂಬ ಅಭದ್ರತೆಯಿಂದ ಮದುವೆ ಮುಂದೂಡಿರುತ್ತಾರೆ. ಇನ್ನು ಕೆಲವರು ಈ ಪ್ರೀತಿ-ಪ್ರೇಮದ ಬಲೆಗೆ ಸಿಕ್ಕಿ ಮೋಸ ಹೋಗಿ ಹುಡುಗರೆಂದರೆ ಅಸಹ್ಯ, ಈ ಮದುವೆ ಎಂಬುದರಲ್ಲಿ ಅರ್ಥವಿಲ್ಲ ಎಂದು ಜೀವನದ ಮೇಲೆ ನಂಬಿಕೆ ಕಳೆದುಕೊಂಡವರ ಹಾಗೆ ಮಾತನಾಡುತ್ತಾ ಇರುತ್ತಾರೆ. ವರುಷ ಕಳೆದಂತೆ ಬದುಕಿನ ಬಂಡಿ ಸಾಗಿಸಲು ಇನ್ನೊಂದು ಜೀವ ಜತೆಯಾಗಬೇಕು ಎಂದು ಮನ ಬಯಸಿದ್ದರೂ, ಕಹಿ ಘಟನೆಯಿಂದ ಹೊರಬರಲಾಗದೇ ತೊಳಲಾಡುತ್ತಿರುತ್ತಾರೆ. 

ತಂದೆ-ತಾಯಿ ಇಲ್ಲದವರು, ಮಗಳ ಮದುವೆಯ ಜವಾಬ್ದಾರಿ ಹೊರದ ಕುಡುಕ ಅಪ್ಪ, ಆರ್ಥಿಕ ಸಮಸ್ಯೆ, ಪ್ರೇಮ ವೈಫ‌ಲ್ಯ, ವಿದ್ಯಾಭ್ಯಾಸ, ಹೆಣ್ಣಿನ ರೂಪ, ಆಕಾರಗಳು ಕೂಡ ಮದುವೆ ತಡವಾಗುವುದಕ್ಕೆ ಒಂದು ನೆಪವಾಗಿರುತ್ತದೆ.

ಕಾಡುವ ಕಳವಳ
ತನ್ನ ಗೆಳತಿಯರಿಗೆಲ್ಲ ಮದುವೆಯಾಗಿ ಮಗುವಾಗಿದೆ ತನಗಿನ್ನೂ ಆಗಿಲ್ಲ ಎಂಬ ಚಿಂತೆ ಆ ಹೆಣ್ಣನ್ನು ಕಾಡುತ್ತಿರುತ್ತದೆ. ಗೆಳತಿಯರು ಫೋನ್‌ ಮಾಡಿ ತಮ್ಮ ಸಂಸಾರದ ಬಗ್ಗೆ ಗಂಟೆಗಟ್ಟಲೆ ಮಾತನಾಡುವಾಗ ಅವಳದೆಯಲ್ಲೂ ನೋವಿನ ಎಳೆ ಮೋಡ ಕಟ್ಟಿಕೊಳ್ಳುತ್ತದೆ. ಹುಡುಗಿ ನೋಡೋದಕ್ಕೆ ಬಂದವರೆಲ್ಲಾ “ಯಾಕಿಷ್ಟು ತಡ ಮಾಡಿದ್ದೀರಿ?’ ಎಂದಾಗ ಉತ್ತರ ಹೇಳಲಾಗದೇ ಅವಳ ನಾಲಿಗೆಯೂ ತಡವರಿಸುತ್ತದೆ!

ವ್ಯಂಗ್ಯದ ಬಾಣ ಚುಚ್ಚಬೇಡಿ
ಈಗ ಕಾಲ ಬದಲಾಗಿರಬಹುದು. ಆದರೆ, ಮನಃಸ್ಥಿತಿಗಳು ಇನ್ನೂ ತುಕ್ಕು ಹಿಡಿದಂತೆ ಇವೆ. “ನಿನಗಿನ್ನೂ ಮದುವೆಯಾಗಿಲ್ವಾ? ಯಾಕಿಷ್ಟು ತಡಮಾಡಿದ್ದಿಯಾ?’ ಎಂಬ ಪ್ರಶ್ನೆಗಳನ್ನು ಕಚೇರಿಗಳಲ್ಲೋ, ಯಾವುದಾದರೂ ಸಭೆ-ಸಮಾರಂಭಕ್ಕೆ ಹೋದಾಗಲೋ ಹೆಣ್ಣು ಮಕ್ಕಳು ಎದುರಿಸುತ್ತಲೇ ಇರುತ್ತಾರೆ. “ನಿನ್ನ ನಿರೀಕ್ಷೆಗಳು ಹೆಚ್ಚಾಗಿವೆ, ವರ್ಷ ಆದರೂ ನಿನಗಿನ್ನೂ ಬುದ್ಧಿ ಬಂದಿಲ್ಲ’ ಎಂಬ ಕುಹಕಗಳನ್ನು ಪ್ರಯೋಗಿಸುವುದು ಗಂಡಸರಿಗಿಂತ ಹೆಂಗಸರೇ ಹೆಚ್ಚು. ಅವಳು ಮದುವೆಯಾಗದೇ ಇರುವುದಕ್ಕೂ ಅವಳದೇ ಆದ ಕಾರಣಗಳಿರುತ್ತವೆ. ಮದುವೆ ಅನ್ನುವುದು ಅವಳ ಖಾಸಗಿ ವಿಷಯ. ಎಲುಬಿಲ್ಲದ ನಾಲಿಗೆ ಎಂದು ಇನ್ನೊಬ್ಬರ ನೋವನ್ನು ನಾವು ಕವಳದಂತೆ ಹಾಕಿಕೊಂಡು ಜಗಿಯುವುದು ಎಷ್ಟು ಸಮಂಜಸ…?

ಎದುರಿಸುವ ಮನಃಸ್ಥಿತಿ ಬೆಳೆಸಿಕೊಳ್ಳಿ 
ಮದುವೆನೇ ಜೀವನದ ಪರಮಗುರಿ ಅಲ್ಲ. ನನಗಿನ್ನೂ ಮದುವೆಯಾಗಿಲ್ಲ ಎಂಬ ನೆಪ ಇಟ್ಟುಕೊಂಡು ಜೀವನದ ಅತ್ಯಮೂಲ್ಯ ಕ್ಷಣಗಳನ್ನು ವ್ಯಥೆ ಪಡುವುದರಲ್ಲಿ ವ್ಯರ್ಥ ಮಾಡಬೇಡಿ. ಯಾವುದೋ ಒಂದು ಕಾರಣದಿಂದ ಮದುವೆ ಆಗದೇ ಇರಬಹುದು ಅಥವಾ ಸ್ವಲ್ಪ ಸಮಯ ಮುಂದೆ ಹೋಗಿರಬಹುದು. ಇರುವ ಪರಿಸ್ಥಿತಿಗೆ ಹೊಂದಿಕೊಂಡು ಬದುಕುವ ಕಲೆ ರೂಢಿಸಿಕೊಳ್ಳಿ. “ನಾನು ಇಷ್ಟು ಬೇಗ ಮದುವೆಯಾಗುವುದಿಲ್ಲ, ಇದು ನನ್ನ ಜೀವನ, ನಾನಿರುವುದೇ ಹೀಗೆ’ ಎಂದು ವ್ಯಂಗ್ಯದಿಂದ ಪ್ರಶ್ನೆ ಕೇಳುವವರಿಗೆ ಉತ್ತರ ಹೇಳುವಷ್ಟರಮಟ್ಟಿಗಿನ ಧೈರ್ಯ ತಂದುಕೊಳ್ಳಿ. ಮೊದಲೆಲ್ಲಾ ಹೆಣ್ಣಿಗೆ ಆಯ್ಕೆಗಳು ಇರಲಿಲ್ಲ. ಈಗ ಅವಳ ಜೀವನ ಸಂಗಾತಿಯನ್ನು ಅವಳೇ ಆಯ್ಕೆ ಮಾಡಿಕೊಳ್ಳುವಷ್ಟು ಸ್ವಾತಂತ್ರ್ಯ ಇದೆ. ಸವಾಲುಗಳನ್ನು ಎದುರಿಸುವ ಛಲವಿದ್ದರೆ ತಲೆಎತ್ತಿ ನಡೆಯಲು ಸಾಧ್ಯ. ಪ್ರಶ್ನೆಗಳಿಗೆ ಹೆದರಿ ಕಣ್ಣೀರು ಹರಿಸುವ ಬದಲು ನಕ್ಕು ಬದುಕಿ.

ಪವಿತ್ರಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next