ಬೆಂಗಳೂರು: “ರೋಷನ್ ಬೇಗ್ ಮೇಲೆ ಬಿಜೆಪಿಯರಿಗೆ ಏಕೆ ಇಷ್ಟೊಂದು ಪ್ರೀತಿ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ, “ಐಎಂಎ ಪ್ರಕರಣದಲ್ಲಿ ಬಿಜೆಪಿಯವರೇ ಪ್ರತಿಭಟನೆ ಮಾಡಿದ್ದರು.
ಈಗ ರೋಷನ್ ಬೇಗ್ ಅವರನ್ನು ಅವರೇ ಕರೆದುಕೊಂಡು ಹೋಗುತ್ತಿದ್ದಾರೆ. ರೋಷನ್ ಬೇಗ್ಗೆ ವಿಶೇಷ ವಿಮಾನ ಮಾಡಿಸಿ, ಅವರನ್ನು ಕರೆದುಕೊಂಡು ಹೋಗುವಾಗ ಬಿಜೆಪಿ ನಾಯಕರೇ ಅವರೊಂದಿಗೆ ಇರುವುದು ಬಿಜೆಪಿ ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದು ಗೊತ್ತಾಗುತ್ತಿದೆ’ ಎಂದು ಆರೋಪಿಸಿದರು.
ಬಿಜೆಪಿಯವರಿಗೆ ಅಧಿಕಾರ ಹಿಡಿಯಬೇಕೆನ್ನುವುದು ಒಂದೇ ಉದ್ದೇಶ. ನಮ್ಮ ಶಾಸಕರನ್ನು ಸೆಳೆಯಲು ಎಂತಹ ಕೆಲಸ ಮಾಡುತ್ತಿದ್ದಾರೆಂದು ತಿಳಿಯಲು ಯಡಿಯೂರಪ್ಪ ಅವರ ಹೇಳಿಕೆಯೊಂದೇ ಸಾಕು. ಶಾಸಕರನ್ನು ಅನರ್ಹ ಮಾಡಿಸಲು ಬಿಜೆಪಿಯೇ ಮುಂದಾಗಿದೆ.
ನಾವು ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದೇವೆ. ನಮ್ಮಲ್ಲಿ ಗೊಂದಲ ಇರಬಾರದು ಎನ್ನುವ ಕಾರಣಕ್ಕೆ ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದೇವೆ. ನಮಗೆ ಗೆಲ್ಲುವ ವಿಶ್ವಾಸ ಇದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಆಗುತ್ತವೆ ಎಂದು ಹೇಳಿದರು.
ಅತೃಪ್ತರ ಬಗ್ಗೆ ಟ್ವೀಟ್: ಮುಂಬೈಗೆ ತೆರಳಿರುವ ಅತೃಪ್ತ ಶಾಸಕರ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಮುಂಬೈನಲ್ಲಿ ಕಾಂಗ್ರೆಸ್ ಶಾಸಕರನ್ನು ಸಂಪೂರ್ಣ ಗೃಹ ಬಂಧನದಲ್ಲಿ ಇಡಲಾಗಿದೆ. ಅವರ ಮೊಬೈಲ್ ಫೋನ್ಗಳನ್ನು ಕಸಿದುಕೊಳ್ಳಲಾಗಿದ್ದು, ಹೊರಗೆ ಹೋಗದಂತೆ ಕೂಡಿ ಹಾಕಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅವರು ಕೇಂದ್ರದ ಬಿಜೆಪಿ ಹಿಡಿತದಲ್ಲಿ ಸಿಲುಕಿಕೊಂಡಿದ್ದು, ಅವರು ಅನರ್ಹರಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಶೀಘ್ರವೇ ಬಿಜೆಪಿ ಕಚೇರಿ ಮುಂದೆ ಬಿ ಫಾರಂಗಾಗಿ ಸರತಿಯಲ್ಲಿ ನಿಲ್ಲುವ ಸ್ಥಿತಿ ಬರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.