Advertisement

ಯಾರು ಗೆದ್ದರೂ ಇತಿಹಾಸ; ಅದಕ್ಕೇ ಅಖಾಡದಲ್ಲಿ ತೀವ್ರ ಪೈಪೋಟಿ

08:24 PM May 05, 2023 | Team Udayavani |

ಕುಂದಾಪುರ: ಈ ಬಾರಿ ಕಾಂಗ್ರೆಸ್‌ ಅಥವಾ ಬಿಜೆಪಿ ಯಾರೇ ಗೆದ್ದರೂ ಹೊಸ ಇತಿಹಾಸದ ನಿರ್ಮಾಣ. ಎರಡು ಅವಧಿಗಷ್ಟೇ ವಿನ್ನಿಫ್ರೆಡ್‌ ಫೆರ್ನಾಂಡಿಸ್‌ ಶಾಸಕಿಯಾಗಿದ್ದರ ಹೊರತು 1952ರಿಂದ ಈವರೆಗೆ ಬಂಟ ಸಮುದಾಯದವರೇ ಶಾಸಕರಾದದ್ದು ಇಲ್ಲಿನ ದಾಖಲೆ. ಕಾಂಗ್ರೆಸ್‌ ಪ್ರಾಬಲ್ಯ ಮುರಿದು 1999ರಿಂದ ಈವರೆಗೆ ಹಾಲಾಡಿ ಶ್ರೀನಿವಾಸ ಶೆಟ್ಟರೇ 4 ಬಾರಿ ಬಿಜೆಪಿ, ಒಮ್ಮೆ ಪಕ್ಷೇತರರಾಗಿ ಗೆದ್ದು ರಾಜ್ಯದಲ್ಲಿ ಮೂರನೇ ಅತೀ ಹೆಚ್ಚು ಅಂತರದ ಗೆಲುವಿನ ಕ್ಷೇತ್ರವಾಗಿಸಿದ್ದು ಇನ್ನೊಂದು ದಾಖಲೆ.

Advertisement

ಬಿಜೆಪಿಯ ಕಿರಣ್‌ ಕುಮಾರ್‌ ಕೊಡ್ಗಿ ಗೆದ್ದರೆ ಬಂಟರ ವಿಜಯದ ಸರಪಳಿ ಮುರಿದ ದಾಖಲೆ, ಕಾಂಗ್ರೆಸ್‌ ಮೊಳಹಳ್ಳಿ ದಿನೇಶ್‌ ಹೆಗ್ಡೆ ಗೆದ್ದರೆ ಬಿಜೆಪಿ ವಿಜಯದ ಜೈತ್ರಯಾತ್ರೆಗೆ ಅಡ್ಡಗಾಲಿಟ್ಟು ಕಾಂಗ್ರೆಸ್‌ ತೆಕ್ಕೆಗೆ ಕ್ಷೇತ್ರ ವನ್ನು ವಾಪಸು ತಂದ ದಾಖಲೆ. ಇಬ್ಬರೂ ಹೊಸಮುಖಗಳೇ. ಬಿಜೆಪಿಗೆ ಉಳಿಸಿಕೊಳ್ಳುವ ಕಾತರ, ಕಾಂಗ್ರೆಸ್‌ಗೆ ಮರಳಿ ಪಡೆಯುವ ಆತುರ.

ಸ್ಪರ್ಧಿಸುವುದಾಗಿ ಪಕ್ಷದ ಸಭೆಯಲ್ಲಿ ಹೇಳಿ ಊರಿಗೆ ಬಂದ ಹಾಲಾಡಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಈ ಬೆಳವಣಿಗೆ ಜಿಲ್ಲೆಯ ರಾಜಕೀಯ ಚಿತ್ರಣ ಬದಲಿಸಿತು. ಅವರ ಬಯಕೆ ಯಂತೆಯೇ ಜತೆಗಾರ ಕಿರಣ್‌ ಕೊಡ್ಗಿಗೆ ಅವಕಾಶ ಸಿಕ್ಕಿದ್ದು, ಗೆಲ್ಲಿಸುವ ಹೊಣೆ ಹೊತ್ತ ಹಾಲಾಡಿ ಕ್ಷೇತ್ರಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ.

ಕಳೆದ ಬಾರಿ ಬೇರೆ ಜಿಲ್ಲೆಯ ಅಭ್ಯರ್ಥಿಯನ್ನು ಆಮದು ಮಾಡಿಕೊಂಡಿದ್ದ ಕಾಂಗ್ರೆಸ್‌ ಈ ಬಾರಿ ಕ್ಷೇತ್ರದವರಿಗೇ ಅವಕಾಶ ನೀಡಿದೆ. ಟಿಕೆಟ್‌ ಘೋಷಣೆಗೆ ಮುನ್ನವೇ ಒಂದು ಹಂತ ಪ್ರಚಾರ ಮುಗಿಸಲಾಗಿತ್ತು. ಪಕ್ಷದಲ್ಲಿ ಬಹಿರಂಗ ಅಸಮಾಧಾನ ಇಲ್ಲದಿದ್ದರೂ ದೊಡ್ಡ ನಾಯಕರ ಪೂರ್ಣ ಸಹಕಾರದ ಕೊರತೆ ಇರುವುದು ಕೊಂಚ ಹಿನ್ನಡೆ ಒದಗಿಸಿದೆ.

ಜಿ.ಪಂ. ಕ್ಷೇತ್ರವಾರು ಸಭೆಗಳಲ್ಲಿ ನಿರೀಕ್ಷೆ ಮೀರಿ ಜನ ಪಾಲ್ಗೊಳ್ಳುತ್ತಿರುವುದು ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಿಸಿದೆ. ಚುನಾವಣೆ ಘೋಷಣೆಗೂ ಮುನ್ನ ನಡೆಸಿದ ಸಭೆಗಳಲ್ಲಿ ದೊರೆತ ಬೆಂಬಲ, ಗ್ಯಾರಂಟಿ ಕಾರ್ಡ್‌ ಕುರಿತಾದ ಜನರ ಆಸಕ್ತಿ ಕಾಂಗ್ರೆಸ್‌ ಆಸೆಯನ್ನು ಪುಟಿದೆಬ್ಬಿಸಿದೆ. ಸಾಂಪ್ರದಾಯಿಕ ಮತಗಳ ಜತೆ ಗ್ಯಾರಂಟಿ ಕಾರ್ಡ್‌ ಮೂಲಕ ಮಹಿಳಾ ಮತಗಳ ಕಡೆ ಕಾಂಗ್ರೆಸ್‌ ಕಣ್ಣು ಹಾಕಿದ್ದರೆ ಹಾಲಾಡಿಯವರಿಗೆ ದೊರೆತ ಮತಗಳೊಂದಿಗೆ ಹೆಚ್ಚಿನ ಅಂತರದ ಗೆಲುವಿನ ಹಂಬಲದಲ್ಲಿದೆ. ಮತದಾರರ ಒಲವು ಯಾರನ್ನು ಗೆಲ್ಲಿಸುವುದೋ ಎಂಬುದೇ ಕುತೂಹಲ.

Advertisement

ಜಾತಿ ಲೆಕ್ಕ
ಇಲ್ಲಿ ಬಂಟ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಬಿಜೆಪಿಯಿಂದ ಬ್ರಾಹ್ಮಣ ಅಭ್ಯರ್ಥಿ ಸ್ಪರ್ಧಿಸಿದ ಕಾರಣ ಕಾಂಗ್ರೆಸ್‌ನ ಬಂಟ ಅಭ್ಯರ್ಥಿ ಕಡೆ ಜಾತಿ ಮತಗಳು ಧ್ರುವೀಕರಣ ಆಗಬಹುದು ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಇಂಥ ಲೆಕ್ಕಾಚಾರ ಕರಾವಳಿಯಲ್ಲಿ ಕಡಿಮೆ. ಪಕ್ಕದ ಬೈಂದೂರು, ಉಡುಪಿಯಲ್ಲೂ ಹೆಚ್ಚಿನ ಸಂಖ್ಯೆಯವರು ಇರುವ ಸಮುದಾಯದವರ ಬದಲಿಗೆ ಬೇರೆಯವರು ಅನೇಕ ಬಾರಿ ಆರಿಸಿ ಬಂದದ್ದಿದೆ ಎನ್ನುತ್ತಾರೆ ವಿಶ್ಲೇಷಕರು.

ಧನಾತ್ಮಕ-ಋಣಾತ್ಮಕ ಅಂಶಗಳು
ಎರಡೂ ಪಕ್ಷದ ಅಭ್ಯರ್ಥಿಗಳು ವಿಧಾನಸಭೆ ಚುನಾವಣೆಗೆ ಹೊಸಬರಾದರೂ ಕ್ಷೇತ್ರಕ್ಕೆ ಹಳ ಬರೇ. ಕೊಡ್ಗಿ ಪಕ್ಷದ ವಿವಿಧ ಹುದ್ದೆಗಳಲ್ಲಿದ್ದು ರಾಜಕೀಯದಲ್ಲಿ 40 ವರ್ಷಗಳಿಂದ ಇದ್ದಾರೆ. ದಿನೇಶ್‌ ಹೆಗ್ಡೆಯವರು ಮೊಳಹಳ್ಳಿ ಪಂಚಾಯತ್‌ ಸದಸ್ಯರಾಗಿ, ಅಧ್ಯಕ್ಷರಾಗಿ 15 ವರ್ಷ ಸೇವೆ ಸಲ್ಲಿಸಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದವರು. ರಾಷ್ಟ್ರ , ರಾಜ್ಯ ನಾಯಕರ ದಂಡೇ ಬಿಜೆಪಿ ಪಾಳಯದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಕಾಂಗ್ರೆಸ್‌ ಪಾಳಯದಲ್ಲಿ ಹಿರಿಯ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಜೆಡಿಎಸ್‌ ಮತ್ತಿತರ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಪಡೆಯುವ ಮತಗಳು ಇಲ್ಲಿ ಫ‌ಲಿತಾಂಶದ ಮೇಲೆ ಪರಿಣಾಮ ಬೀರುವುದು ಕಡಿಮೆ.

ಕಣದಲ್ಲಿರುವ ಅಭ್ಯರ್ಥಿಗಳು 5
- ಎ. ಕಿರಣ್‌ ಕುಮಾರ್‌ ಕೊಡ್ಗಿ (ಬಿಜೆಪಿ )
-  ದಿನೇಶ್‌ ಹೆಗ್ಡೆ ಮೊಳಹಳ್ಳಿ (ಕಾಂಗ್ರೆಸ್‌ )
-  ರಮೇಶ (ಜೆಡಿಎಸ್‌)
-  ಅರುಣ್‌ ದೀಪಕ್‌ ಮೆಂಡೋನ್ಸಾ (ಉತ್ತಮ ಪ್ರಜಾಕೀಯ ಪಕ್ಷ )
-  ಚಂದ್ರಶೇಖರ ಜಿ.(ಪಕ್ಷೇತರ)

ಲೆಕ್ಕಾಚಾರ ಏನು?
ಇಬ್ಬರೂ ಹೊಸಬರಾದರೂ ಮತ ಗಳಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರದು. ಹಾಲಾಡಿ ನೆರಳು ಒಬ್ಬರಿಗೆ ಆಶ್ರಯವಾದರೆ, ಸಾಂಪ್ರದಾಯಕ ಮತ ಬ್ಯಾಂಕ್‌ ಇನ್ನೊಬ್ಬರಿಗೆ ಆಸರೆ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next