Advertisement

ಗೆಲುವು ಯಾರ ಪಾಲಿಗೆ?; ಎಲ್ಲರ ಚಿತ್ತ ಫಲಿತಾಂಶದತ್ತ

07:54 PM May 22, 2019 | sudhir |

ಕಾಸರಗೋಡು: ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆಯ ಕಣವಾಗಿದ್ದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಯಾರ ಪಾಲಿಗೆ ಒಲಿಯಲಿದೆ ಎಂಬ ಪ್ರಶ್ನೆಗೆ ಮೇ 23ರಂದು ಸ್ಪಷ್ಟ ಉತ್ತರ ಲಭಿಸಲಿದೆ. ಎಪ್ರಿಲ್‌ 23ರಂದು ನಡೆದ ಮತದಾನದ ಮೂಲಕ ಜನರ ಆಯ್ಕೆ ಈಗಾಗಲೇ ನಡೆದಿದ್ದು, ಫಲಿತಾಂಶ ಯಾರ ಪರವಾಗಿರುತ್ತದೆ ಎಂಬ ಕುತೂಹಲ ಕೆರಳಿಸಿದೆ. ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬ ಬಗ್ಗೆ ಕ್ಷಣಗಣನೆ ಆರಂಭಗೊಂಡಿದೆ.

Advertisement

ಪಡನ್ನಕ್ಕಾಡ್‌ ನೆಹರೂ ಆರ್ಟ್ಸ್ ಆ್ಯಂಡ್‌ ಸಯನ್ಸ್‌ ಕಾಲೇಜಿನಲ್ಲಿ ಮೇ 23ರಂದು ಮತ ಎಣಿಕೆ ನಡೆಯಲಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಆರಂಭದಲ್ಲಿ ಅಂಚೆ ಮತಗಳ ಎಣಿಕೆಯಾಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದರ ಬದಲು ಐದು ವಿ.ವಿ. ಪ್ಯಾಟ್‌ಗಳ ಮತ ತಾಳೆಗೆ ನಿರ್ಧರಿಸಿರುವ ಕಾರಣ ಎಂದಿಗಿಂತ 5-6 ಗಂಟೆ ಹೆಚ್ಚು ಕಾಲಾವಕಾಶ ಬೇಕಾಗಬಹುದು. ಮಧ್ಯಾಹ್ನ ಅನಂತರವೇ ಫಲಿತಾಂಶ ಹೊರ ಬೀಳಬಹುದು.

ಬಿಜೆಪಿಯ ರವೀಶ ತಂತ್ರಿ ಕುಂಟಾರು, ಯುಡಿಎಫ್‌ನಿಂದ ರಾಜ್‌ಮೋಹನ್‌ ಉಣ್ಣಿತ್ತಾನ್‌(ಕಾಂಗ್ರೆಸ್‌) ಮತ್ತು ಎಲ್‌ಡಿಎಫ್‌ನಿಂದ ಕೆ.ಪಿ. ಸತೀಶ್ಚಂದ್ರನ್‌ (ಸಿಪಿಎಂ) ಇವರ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಮೂವರೂ ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಐದು ಮತ್ತು ಕಣ್ಣೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಳ್ಳಮತದಾನ ಭಾರೀ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮೇ 19ರಂದು ನಾಲ್ಕು ಮತಗಟ್ಟೆಗಳಲ್ಲಿ ಮರುಮತದಾನ ನಡೆದಿತ್ತು. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಬೋಗಸ್‌ ಮತದಾನ ಸಾಮಾನ್ಯವಾಗಿ ನಡೆಯುತ್ತಿದ್ದು, ಈ ಬಗ್ಗೆ ಆರೋಪ ಕೇಳಿ ಬರುತ್ತಲೇ ಇತ್ತು. ಆದರೆ ಈ ಬಾರಿ ಕೆಲವು ಮತಗಟ್ಟೆಗಳಲ್ಲಿ ಸಿ.ಸಿ. ಕೆಮರಾ ಅಳವಡಿಸಿದ್ದರಿಂದ ಬೋಗಸ್‌ ಮತದಾನ ಬಯಲಾಗಿತ್ತು.

ಸರ್ಪಗಾವಲು
ಲೋಕಸಭೆ ಚುನಾವಣೆ ಮತಗಣನೆ ಸಂಬಂಧ ಪೊಲೀಸ್‌ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಜೇಮ್ಸ್‌ ಜೋಸೆಫ್‌ ತಿಳಿಸಿದ್ದಾರೆ. ಮೆರವಣಿಗೆ ನಡೆಸು ವುದಿದ್ದಲ್ಲಿ ಮುಂಗಡವಾಗಿ ಪೊಲೀಸ್‌ ಅನುಮತಿ ಪಡೆಯಬೇಕು. ಗೂಡ್ಸ್‌ ಕ್ಯಾರೇಜ್‌ ವಾಹನಗಳು, ಓಪನ್‌ ಲಾರಿಗಳು ಇತ್ಯಾದಿಗಳ ಮೂಲಕ ಜನರನ್ನು ಒಯ್ಯುವುದನ್ನು, ಮೆರವಣಿಗೆ ನಡೆಸುವುದನ್ನು ನಿಷೇ ಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಅಂತಹ ವಾಹನಗಳ ಪರವಾನಿಗೆ ರದ್ದು ಸಹಿತ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಿಜಯೋತ್ಸವ ಆಚರಿಸುವುದಿದ್ದಲ್ಲಿ ಅದು ನಿಯಂತ್ರಣಾತೀತವಾಗಿರಬಾರದು. ಮೆರವಣಿಗೆ ವೇಳೆ ಅಥವಾ ಬೇರೆ ಸಂದರ್ಭದಲ್ಲಿ ಘರ್ಷಣೆ ಸಹಿತ ಕಾನೂನುಭಂಗ ಪ್ರಕರಣಗಳು ನಡೆದರೆ ಕಠಿನ ಕ್ರಮ ಕೈಗೊಳ್ಳಲಾಗುವುದು. ಸಂಚಾರ ಮೊಟಕು, ಸಾರ್ವಜನಿಕರಿಗೆ ತೊಂದರೆ ಇತ್ಯಾದಿ ನಡೆಯುವಂತೆ ಮೆರವಣಿಗೆ ನಡೆಯದಂತೆ ಪ್ರತ್ಯೇಕ ಗಮನಹರಿಸಬೇಕು. ಮೋಟಾರು ಬೈಕ್‌ ರ್ಯಾಲಿ ನಿಷೇಧಿಸಲಾಗಿದೆ ಎಂದವರು ಹೇಳಿದ್ದಾರೆ.

ಕುಟುಂಬಶ್ರೀಯಿಂದ ಆಹಾರ ಪೂರೈಕೆ
ಮತಗಣನೆಗೆ ನಿಯುಕ್ತರಾಗಿರುವ ಸಿಬಂದಿಗೆ ಆಹಾರ ವಿತರಣೆಯ ಹೊಣೆಗಾರಿಕೆಯನ್ನು ಕುಟುಂಬಶ್ರೀ ಜಿಲ್ಲಾ ಮಿಷನ್‌ ವಹಿಸಿಕೊಂಡಿದೆ. ಪಡನ್ನಕ್ಕಾಡ್‌ ನೆಹರೂ ಆರ್ಟ್ಸ್ ಆ್ಯಂಡ್‌ ಸಯನ್ಸ್‌ ಕಾಲೇಜಿನಲ್ಲಿ ನಡೆಯಲಿರುವ ಲೋಕಸಭೆ ಚುನಾ ವಣೆಯ ಮತ ಎಣಿಕೆಗೆ ನೇಮಕಗೊಂಡಿರುವ ಸಿಬಂದಿಗೆ ಹೊತ್ತು ಹೊತ್ತಿನ ಭೋಜನ, ನೀರು ಇತ್ಯಾದಿಗಳನ್ನು ಕುಟುಂಬಶ್ರೀ ವಿತರಣೆ ನಡೆಸಲಿದೆ. ಬೆಳಗ್ಗೆ 6 ಗಂಟೆಗೆ ಚಹಾ, ಉಪಾಹಾರ, 11 ಗಂಟೆಗೆ ಬಿಸ್ಕೆಟ್‌, ಚಹಾ, ಮಧ್ಯಾಹ್ನ 12 ಗಂಟೆಗೆ ಭೋಜನ ಇತ್ಯಾದಿಗಳನ್ನು ಮತಗಣನೆಯ ಕೇಂದ್ರದಲ್ಲಿ ನೀಡಲಾಗುವುದು. ಮತಗಣನೆ ಕೇಂದ್ರದ ಹೊರಬದಿಯಲ್ಲಿ ಸಜ್ಜುಗೊಳಿಸಿರುವ ಕೌಂಟರ್‌ಗಳಲ್ಲಿ ಕುಟುಂಬಶ್ರೀ ಆಹಾರ ವಿತರಿಸಲಿದೆ. ಬೆಳಗ್ಗಿನ ಉಪಾಹಾರಕ್ಕೆ 40 ರೂ., ಮಧ್ಯಾಹ್ನದ ಭೋಜನಕ್ಕೆ 60 ರೂ. ಬೆಲೆ ನಿಗದಿ ಪಡಿಸಲಾಗಿದ್ದು, ಈ ಮೌಲ್ಯದ ಕೂಪನ್‌ಗಳನ್ನು ಸಿಬಂದಿಗೆ ನೀಡಲಾಗಿದೆ.

Advertisement

ಬೆಳಗ್ಗಿನ ಉಪಾಹಾರದಲ್ಲಿ ಇಡ್ಲಿ-ಚಟ್ನಿ- ಸಾಂಬಾರ್‌, ವೆಳ್ಳಪ್ಪಂ-ಕಡಲೆ ಕರಿ,
ಉಪ್‌ ಮಾ, ಬಾಳೆಹಣ್ಣು ಚಹಾ ಇರುವುದು. ಮಧ್ಯಾಹ್ನದ ಭೋಜನದಲ್ಲಿ ತುಪ್ಪ ಅನ್ನ-ಚಿಕ್ಕನ್‌ ಕರಿ, ಅನ್ನ-ತರಕಾರಿ ಸಾಂಬಾರ್‌ ಇರುವುದು.
ಕುಟುಂಬಶ್ರೀ ವ್ಯಾಪ್ತಿಯ ಮೂರು ಕ್ಯಾಟರಿಂಗ್‌ ಸರ್ವಿಸ್‌ಗಳ ಮೂಲಕ ಆಹಾರ ತಯಾರಿ ಮತ್ತು ವಿತರಣೆ ನಡೆಯಲಿದೆ. ಆಹಾರ ವಿತರಣೆಗೆ ಕಾಂಞಂಗಾಡ್‌ ನಗರಸಭೆಯ ಸಿ.ಡಿಎಸ್‌. ಕುಟುಂಬಶ್ರೀ ಕಾರ್ಯಕರ್ತರು ಸಹಾಯ ನೀಡಲಿದ್ದಾರೆ.

ಮತದಾನದ ದಿನ ಮತ್ತು ಹಿಂದಿನ ದಿನ ನಿಯುಕ್ತ ಸಿಬಂದಿಗೆ ಹೊತ್ತು ಹೊತ್ತಿನ ಆಹಾರ-ನೀರು ವಿತರಣೆ ನಡೆಸುವ ವಿಚಾರದಲ್ಲಿ ಕುಟುಂಬಶ್ರೀಯ ಚಟುವಟಿಕೆ ಪ್ರಶಂಸನೀಯವಾಗಿತ್ತು.

ಲೋಕಸಭೆ ಚುನಾವಣೆ ಫಲಿತಾಂಶ ತಿಳಿಯಲು ಸಹಕಾರಿ ಟ್ರೆಂಡ್‌ ಮೊಬೈಲ್‌ ಆ್ಯಪ್‌: ಲೋಕಸಭೆ ಚುನಾವಣೆಯ ಫಲಿತಾಂಶ ನೇರವಾಗಿ ತಿಳಿಯಲು ನ್ಯಾಶನಲ್‌ ಇನ್‌ ಫಾರ್ಮೆಟಿಕ್‌ ಸೆಂಟರ್‌ನ ಟ್ರೆಂಡ್‌ ಮೊಬೈಲ್‌ ಆ್ಯಪ್‌ ಸಹಕಾರಿಯಾಗಲಿದೆ. ಪಡನ್ನಕ್ಕಾಡ್‌ ನೆಹರೂ ಆರ್ಟ್ಸ್ ಆ್ಯಂಡ್‌ ಸಯನ್ಸ್‌ ಕಾಲೇಜಿನಲ್ಲಿ ನಡೆಯುವ ಮತ ಎಣಿಕೆ ಫಲಿತಾಂಶವನ್ನು ಆಗಿಂದಾಗ ಈ ಆ್ಯಪ್‌ ಮೂಲಕ ಸಾರ್ವಜನಿಕರು ತಿಳಿದು ಕೊಳ್ಳಬಹುದಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಟ್ರೆಂಡ್‌ ಕೇರಳ ಎಂದು ಸರ್ಚ್‌ ನಡೆಸಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಬಹುದಾಗಿದೆ.

ಮತ ಎಣಿಕೆ ಕೇಂದ್ರದಲ್ಲಿ ಎನ್‌. ಐ.ಸಿ. ವತಿಯಿಂದ ಪ್ರತ್ಯೇಕವಾಗಿ ಸಜ್ಜುಗೊಳಿಸಿದ ತಾಂತ್ರಿಕ ತಂಡ ಈ ಆ್ಯಪ್‌ಗೆ ಮಾಹಿತಿ ಯಥಾಸಮಯ ಅಪ್‌ಲೋಡ್‌ ನಡೆಸಬಹುದು.

ಯಾರ ಮುಖದಲ್ಲಿ ವಿಜಯದ ನಗೆ?
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಂಬತ್ತು ಮಂದಿ ಕಣದಲ್ಲಿದ್ದು, ಬಿಜೆಪಿ, ಎಡರಂಗ, ಐಕ್ಯರಂಗದ ಅಭ್ಯರ್ಥಿಗಳ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಚುನಾವಣ ಕಣದಲ್ಲಿ ನ್ಯಾಯವಾದಿ ಬಶೀರ್‌ ಆಲಡಿ (ಬಿ.ಎಸ್‌.ಪಿ.), ಕುಂಟಾರು ರವೀಶ ತಂತ್ರಿ (ಬಿ.ಜೆ.ಪಿ.), ರಾಜ್‌ಮೋಹನ್‌ ಉಣ್ಣಿತ್ತಾನ್‌ (ಐಎನ್‌ಸಿ), ಕೆ.ಪಿ. ಸತೀಶ್ಚಂದ್ರನ್‌ (ಸಿ.ಪಿ.ಎಂ.), ಗೋವಿಂದನ್‌ ಬಿ.ಆಲಿನ್‌ ತಾಳೆ (ಸ್ವತಂತ್ರ), ಸುರೇಂದ್ರ ಕುಮಾರ್‌ ಕೆ. (ಸ್ವತಂತ್ರ), ರಣದೀವನ್‌ ಆರ್‌.ಕೆ. (ಸ್ವತಂತ್ರ), ರಮೇಶನ್‌ ಬಂದಡ್ಕ (ಸ್ವತಂತ್ರ), ಸಜಿ (ಸ್ವತಂತ್ರ) ಇದ್ದರು.

2014ರ ಚುನಾವಣೆ
ಮಂಜೇಶ್ವರ, ಕಾಸರಗೋಡು, ಉದುಮ, ಹೊಸದುರ್ಗ (ಕಾಂಞಂಗಾಡು), ತೃಕ್ಕರೀಪುರ, ಪಯ್ಯನ್ನೂರು, ಕಲ್ಯಾಶೆÏàರಿ ಎಂಬ ಏಳು ವಿಧಾನಸಭಾ ಕ್ಷೇತ್ರಗಳನ್ನು ಕಾಸರಗೋಡು ಲೋಕಸಭಾ ಕ್ಷೇತ್ರವು ಒಳಗೊಂಡಿದೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಡರಂಗದ ಪಿ. ಕರುಣಾಕರನ್‌ 3,84,964 ಮತ್ತು ಐಕ್ಯರಂಗದ ಟಿ. ಸಿದ್ದಿಕ್‌ 3,78,043 ಹಾಗೂ ಬಿಜೆಪಿಯ ಕೆ. ಸುರೇಂದ್ರನ್‌ 1,72,826 ಮತಗಳನ್ನು ಗಳಿಸಿದ್ದರು. ಎಡರಂಗದ ಪಿ. ಕರುಣಾಕರನ್‌ ಸಂಸದರಾಗಿ ಆಯ್ಕೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next