Advertisement

ರಾಣಿ ಚನ್ನಮ್ಮ ವಿವಿಗೆ ಸಾರಥಿ ಯಾರು?ಯಾರಾಗ್ತಾರೆ ಎಂಬುದೇ ನಿಗೂಢ

05:36 PM Dec 26, 2023 | Team Udayavani |

ಬೆಳಗಾವಿ: ರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ, ಉತ್ತರ ಕರ್ನಾಟಕದಲ್ಲಿಯೇ ಹೆಸರುವಾಸಿಯಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಶಾಶ್ವತ ಕುಲಪತಿ ಇಲ್ಲದೇ ಆರು ತಿಂಗಳು ಸಮೀಪಿಸಿದರೂ ಇನ್ನೂ ಸಾರಥಿ ಸಿಕ್ಕಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದರೂ ಹೊಸ ಕುಲಪತಿ ನೇಮಕ ವಿಚಾರದಲ್ಲಿ ಹಗ್ಗಜಗ್ಗಾಟ ಮಾಡುತ್ತಿರುವುದಾದರೂ ಏಕೆ ಎಂಬುದು ಗಡಿ ಭಾಗದ ಜನರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಮಾಡಲು ಸರ್ಕಾರ ರಚಿಸಿದ್ದ ಶೋಧನಾ ಸಮಿತಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಮೂವರ ಹೆಸರು ಇದೆ. ಇದರಲ್ಲಿ ಒಬ್ಬರ ಹೆಸರು ಅಂತಿಮಗೊಳಿಸುವ ಅಧಿ ಕಾರ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಅವರಿಗಿದೆ. ಸರ್ಕಾರಕ್ಕೆ ವರದಿ ಕೈ ಸೇರಿ ಹಲವು ದಿನಗಳು ಕಳೆದರೂ ನೇಮಕ ಆಗಿಲ್ಲ. ಶೀಘ್ರದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಆಗಲಿದೆ.

ಕುಲಪತಿ ಹುದ್ದೆಗೆ ಈಗಾಗಲೇ ಸಂಭವನೀಯರ ಹೆಸರುಗಳಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿವಿ ವಾಣಿಜ್ಯ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಎಚ್‌.ವೈ. ಕಾಂಬಳೆ, ಕಲುºರ್ಗಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಎಚ್‌.ಟಿ. ಪೋಟೆ ಹಾಗೂ ರಾಚವಿ ಎಂಬಿಎ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಸಿ.ಎಂ. ತ್ಯಾಗರಾಜನ್‌ ಅವರ ಹೆಸರಿದ್ದು, ಈ ಮೂವರಲ್ಲೇ ನೇಮಕ ಆಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸದ್ಯ ಆರ್‌ಸಿಯುದಲ್ಲಿ ಪ್ರಭಾರಿ ಕುಲಪತಿ ಆಗಿ ಡಾ. ಎಫ್‌.ವಿ. ನಾಗಣ್ಣವರ ಕಾರ್ಯ ನಿರ್ವಹಿಸುತ್ತಿದ್ದು, ಈಗ ಕುಲಪತಿಯ ನೇಮಕ ಆಗಬೇಕೆಂಬುದು ಈ ಭಾಗದ ಶಿಕ್ಷಣ ತಜ್ಞರ ಬೇಡಿಕೆ ಆಗಿದೆ. ಕುಪತಿ ಆಗಿದ್ದ ಡಾ. ರಾಮಚಂದ್ರಗೌಡ ಆವರು ಜು. 4ರಂದು ನಿವೃತ್ತಿ
ಆಗಿದ್ದು, ನಂತರದಲ್ಲಿ ಕುಲಪತಿ ನೇಮಕ ಆಗಿಲ್ಲ. ಆರು ತಿಂಗಳು ಮುಗಿಯಲು ಬಂದರೂ ಇನ್ನೂ ನೇಮಕ ಆಗದಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿಸಿದೆ. ಕುಲಪತಿ ಆಗಲು ಸುಮಾರು 100ಕ್ಕೂ ಹೆಚ್ಚು ಅರ್ಜಿಗಳು ಶೋಧನಾ ಸಮಿತಿ ಬಳಿ ಇದ್ದವು. ಇದರಲ್ಲಿ ಯಾರ ಹೆಸರನ್ನು ವರದಿಯಲ್ಲಿ ಹಾಕಬೇಕು ಎಂದು ಸಮಿತಿ ಗೊಂದಲಕ್ಕೀಡಾಗಿತ್ತು. ಅನೇಕರು ಆಕಾಂಕ್ಷಿಗಳಾಗಿದ್ದರೂ ಇದರಲ್ಲಿ ಮೂವರ ಹೆಸರು ಅಂತಮಗೊಳಿಸಲಾಗಿದೆ.

ವಿವಿಗೆ ಕುಲಪತಿ ನೇಮಕ ಆಗದಿರುವುದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿಯೂ ಬೇಸರ ಮೂಡಿಸಿದೆ. ಶಾಶ್ವತ ಕುಲಪತಿ ಇಲ್ಲದೇ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಿಂಡಿಕೇಟ್‌ನಲ್ಲಿ ಸರ್ಕಾರದ ನಾಮ ನಿರ್ದೇಶನ ಸದಸ್ಯರನ್ನೂ ಇನ್ನೂ ನೇಮಕ ಮಾಡಿಲ್ಲ. ಇದರಿಂದ ಒಂದೆಡೆ ಕಲಪತಿ ಇಲ್ಲದಿರುವ ಸಮಸ್ಯೆ ಕಾಡುತ್ತಿದ್ದರೆ, ಇನ್ನೊಂದೆಡೆ ಸಿಂಡಿಕೇಟ್‌ ಸದಸ್ಯರ ಕೊರತೆಯಿಂದಾಗಿ ಸುಲಲಿತ ಆಡಳಿತ ಮೇಲೆ ಅನಿವಾರ್ಯವಾಗಿ ಪರಿಣಾಮ ಬೀರುತ್ತಿದೆ.

Advertisement

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತಕ್ಕೆ ಚುರುಕು ಸಿಗಲಿ ಎಂಬ ಉದ್ದೇಶದಿಂದ ಕುಲಪತಿ ನೇಮಕ ಆಗಬೇಕೆಂಬ ಬೇಡಿಕೆ ಇದ್ದರೂ ಪ್ರಭಾರಿ ಕುಲಪತಿಗಳಿಗೂ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುತ್ತದೆ. ವಿಶ್ವವಿದ್ಯಾಲಯದ ಹಣಕಾಸು ವಿಷಯದಲ್ಲಿಯೂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದ್ದರೂ ಪ್ರಭಾರಿಗಳು ಈ ಬಗ್ಗೆ ಹಿಂದೇಟು ಹಾಕುವುದು ಸಹಜ. ಪ್ರಭಾರಿಗಳು ಶಾಶ್ವತವಾಗಿ ಕುಲಪತಿ ಆಗಿ ಇರುವುದಿಲ್ಲ ಎಂಬ ಕಾರಣಕ್ಕೆ ಮಹತ್ವದ ನಿರ್ಣಯ ಕೈಗೊಳ್ಳುವುದಿಲ್ಲ.

ವಿವಿಯ ಸ್ವತಂತ್ರ ಕಟ್ಟಡಕ್ಕಾಗಿ ಹೆಣಗಾಟ
ಈ ಭಾಗದ ಪ್ರಾದೇಶಿಕ ಅಸಮಾನತೆ ನಿವಾರಿಸಬೇಕು ಎಂಬ ಉದ್ದೇಶದಿಂದ 1982ರಲ್ಲಿ ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ಸ್ನಾತಕೋತ್ತರ ಕೇಂದ್ರ ಆರಂಭಿಸಲಾಗಿತ್ತು. ಆದರೆ ವಿಶ್ವವಿದ್ಯಾಲಯವಾಗಿ ಪರಿವರ್ತನೆ ಆಗಲು 30 ವರ್ಷಗಳು ಬೇಕಾಯಿತು. 2010ರಲ್ಲಿ ರಾಜ್ಯ ಸರ್ಕಾರ ರಾಣಿ ಚನ್ನಮ್ಮ ಸ್ನಾತಕೋತ್ತರ ಕೇಂದ್ರವನ್ನು ಸ್ವತಂತ್ರ ವಿವಿಯಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿತು. ಈ ಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳಲ್ಲಿ ಹೊಸ ಹುರುಪು ಹಾಗೂ ಉತ್ಸಾಹಕ್ಕೆ ಕಾರಣವಾಯಿತು. ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳನ್ನೊಳಗೊಂಡ ವಿವಿ ಆಯಿತು. ಆದರೆ 13 ವರ್ಷ ಕಳೆದರೂ ವಿವಿ ಆವರಣದಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಅರಣ್ಯ ಇಲಾಖೆಯ ಅಧೀನದಲ್ಲಿ ವಿವಿ ಜಾಗ  ಒಳಪಟ್ಟಿದ್ದರಿಂದ ಅನೇಕ ಕೆಲಸಗಳು ಆಗಿಲ್ಲ. ಹೀಗಾಗಿ ಸರ್ಕಾರ ಹಿರೇಬಾಗೇವಾಡಿಯಲ್ಲಿ ಹೊಸ ಜಾಗ ಗುರುತಿಸಿ ಕಟ್ಟಡ ನಿರ್ಮಾಣ ಆರಂಭಿಸಿದೆ. ಈ ಹಿಂದಿನ ಕುಲಪತಿ ಡಾ. ಎಂ. ರಾಮಚಂದ್ರಗೌಡ ಅವರು ಕಟ್ಟಡ ನಿರ್ಮಾಣದಲ್ಲಿ ಆಸಕ್ತಿ ತೋರಿದ್ದು, ಕಾಮಗಾರಿ ಆರಂಭಗೊಂಡಿದೆ. ಆದರೆ ಆ ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ವಿಚಾರದಲ್ಲಿ ಆರು ತಿಂಗಳು ಕಳೆಯಲು ಬಂದಿದೆ. ಇನ್ನೂ ಅಂತಿಮ ನಿರ್ಧಾರ ಆಗದಿರುವುದು ಬೇಸರದ ಸಂಗತಿ. ಈ ಭಾಗದ ಶೈಕ್ಷಣಿಕ ಸಮಸ್ಯೆಗಳನ್ನು ಅರಿತು ಸ್ಪಂದಿಸುವವರನ್ನು ನೇಮಕ ಮಾಡಬೇಕು. ಉತ್ತರ ಕರ್ನಾಟಕದವರು ಅದರಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಿ ನೇಮಕಗೊಳಿಸುವಂತೆ ಉನ್ನತ
ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ.
ಅಶೋಕ ಚಂದರಗಿ,ಕನ್ನಡ
ಹೋರಾಟಗಾರರು

ರಾಣಿ ಚನ್ನಮ್ಮ ವಿವಿ ಕುಲಪತಿ ನೇಮಕ ಕೂಡಲೇ ಆಗಬೇಕು. ಇದರಿಂದ ವಿವಿಯಲ್ಲಿನ ಆಡಳಿತಾತ್ಮಕ ಹಾಗೂ ಶೈಕ್ಷಣಿಕ
ಕೆಲಸಗಳಿಗೆ ಚುರುಕು ಮುಟ್ಟುತ್ತದೆ.
ಡಾ| ಸರಜೂ ಕಾಟ್ಕರ, ಹಿರಿಯ ಸಾಹಿತಿ

*ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next