Advertisement

Kundapura, ಕಾರ್ಕಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಯಾರಾಗ್ತಾರೆ

03:09 PM Aug 07, 2024 | Team Udayavani |

ಕುಂದಾಪುರ: ಇಲ್ಲಿನ ಪುರಸಭೆಗೂ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟವಾಗಿದೆ. ಕಾದು, ಕಾದು ಕೊನೆಗೂ ಗಜಗರ್ಭ ಪ್ರಸವವಾಗಿದೆ. ಯಾರಾಗ್ತಾರೆ ಅಧ್ಯಕ್ಷ, ಉಪಾಧ್ಯಕ್ಷೆಯಾಗಿ ಎಂದು ರಾಜಕೀಯ ಚರ್ಚೆ ಆರಂಭವಾಗಿದೆ. ಸಾರ್ವಜನಿಕರಿಗಂತೂ ತೀರಾ ಅಂತಹ ಕುತೂಹಲ ಇದ್ದಂತಿಲ್ಲ!

Advertisement

ಯಾವ ಮೀಸಲಾತಿ

ಕುಂದಾಪುರ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಮೀಸಲಾತಿ ಬಂದಿದೆ. ಈ ಮೊದಲು ಸಾಮಾನ್ಯ ಮಹಿಳೆ ಅಧ್ಯಕ್ಷತೆಗೆ, ಹಿಂದುಳಿದ ವರ್ಗ ಎ ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟವಾಗಿತ್ತು. ಇದರಂತೆ ಆ.31ರ 2018ರಲ್ಲಿ ಚುನಾವಣೆ ನಡೆದಿದ್ದರೂ ಗೆದ್ದು 2ವರ್ಷ 2 ತಿಂಗಳು ಕಾದ ಬಳಿಕ ಪುರಸಭೆಗೆ 9ನೇ ಅವಧಿಗೆ ಅಧ್ಯಕ್ಷರಾಗಿ ವೀಣಾ ಭಾಸ್ಕರ್‌ ಮತ್ತು ಉಪಾಧ್ಯಕ್ಷರಾಗಿ ಸಂದೀಪ್‌ ಖಾರ್ವಿ ಅವರು 2020ರಲ್ಲಿ ನ. 3ರಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಸಾಧ್ಯಾಸಾಧ್ಯತೆ

ಅಧ್ಯಕ್ಷತೆಗೆ ಈ ಹಿಂದೆ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದವರನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ 12 ಮಂದಿ ಇದ್ದು ಅದರಲ್ಲೂ ಉಪಾಧ್ಯಕ್ಷತೆ ಮಹಿಳೆಯರಿಗೆ ಮೀಸಲಾದ ಕಾರಣ 6 ಜನರನ್ನು ಕೈ ಬಿಟ್ಟರೆ 6 ಜನ ಪುರುಷರು ಮುಂದಿನ ಸಾಲಿನಲ್ಲಿ ಇರುತ್ತಾರೆ. ಇದರಲ್ಲಿ ಸ್ಥಾಯಿ ಸಮಿತಿಗೆ ಇಬ್ಬರು ತಲಾ ಒಂದೊಂದು ವರ್ಷಕ್ಕೆ ಆಯ್ಕೆಯಾಗಿದ್ದಾರೆ. ಉಳಿದ 4 ಮಂದಿಗೆ ಯಾವುದೇ ಅಧಿಕಾರ ಸಿಗಲಿಲ್ಲ. ಈ 4 ಮಂದಿಯಲ್ಲೂ ಮೋಹನದಾಸ ಶೆಣೈ ಈ ಹಿಂದೆ ಅಧ್ಯಕ್ಷರಾಗಿದ್ದರು. ಅವರನ್ನು ಹೊರತುಪಡಿಸಿದರೆ ಸಂತೋಷ್‌ ಶೆಟ್ಟಿ, ಪ್ರಭಾಕರ್‌ ವಿ., ಶ್ರೀಕಾಂತ್‌ ಉಳಿಯುತ್ತಾರೆ.

Advertisement

ಅಧ್ಯಕ್ಷತೆ ಲೆಕ್ಕಾಚಾರ

ಪುರಸಭೆ ಕುರಿತು ಜನರಿಗೆ ಅಸಮಾಧಾನ ಇರುವುದು, ಕೇವಲ 14 ತಿಂಗಳ ಅವಧಿಯ ಅಧಿಕಾರ ಇದ್ದು ಆ ಅವಧಿಯಲ್ಲಿಯೇ ಪಕ್ಷದ ಹಾಗೂ ಪುರಸಭೆಯ ಕುರಿತು ಜನರಿಗೆ ಸದಭಿಪ್ರಾಯ ಮೂಡಿಸುವ ಜವಾಬ್ದಾರಿ ಅಧ್ಯಕ್ಷರಾದವರ ಹೆಗಲಿಗೆ ಇರುತ್ತದೆ. ಮೋಹನದಾಸ ಶೆಣೈ ಹಿರಿಯ ಸದಸ್ಯರಾಗಿದ್ದು 2009ರಿಂದ 5 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಇನ್ನು ಸಂತೋಷ್‌ ಶೆಟ್ಟಿ, ಪ್ರಭಾಕರ್‌ ವಿ., ಶೇಖರ್‌ ಪೂಜಾರಿ, ಗಿರೀಶ್‌ ದೇವಾಡಿಗ, ಶ್ರೀಕಾಂತ್‌, ರಾಘವೇಂದ್ರ ಖಾರ್ವಿ ಹೆಸರುಗಳೂ ಇದ್ದು ಪಕ್ಷ ಯಾರನ್ನು ಪರಿಗಣಿಸುತ್ತದೆ ಎನ್ನುವುದು ನಿಕ್ಕಿ ಆಗಲಿಲ್ಲ.

ಇವರಿಗೆ ಅಧಿಕಾರ ಸಿಕ್ಕಿಲ್ಲ

ಶೆಟ್ಟಿ, ದೇವಾಡಿಗ, ಎಸ್‌ಟಿ ಸಮುದಾಯಕ್ಕೆ ಈವರೆಗೆ ಮೀಸಲಾತಿ ಮೂಲಕ ಅಧ್ಯಕ್ಷತೆ ದೊರೆಯಲಿಲ್ಲ. ಈ ಮೂರು ಸಮುದಾಯದ ಸದಸ್ಯರಿದ್ದಾರೆ. ಹಾಗಾಗಿ ಅವರನ್ನು ಪರಿಗಣಿಸ ಲಾಗುವುದೇ ಎನ್ನುವ ಕುತೂಹಲವೂ ಇದೆ.

ಉಪಾಧ್ಯಕ್ಷತೆ

ಮಹಿಳಾ ಮೀಸಲಾತಿ ಆದ ಕಾರಣ 6 ಸದಸ್ಯರ ಪೈಕಿ ಈ ಹಿಂದೆ ಅಧ್ಯಕ್ಷರಾದವರ ಹೆಸರು ಕೈ ಬಿಟ್ಟರೆ 5 ಆಕಾಂಕ್ಷಿಗಳಿರುತ್ತಾರೆ. ಅಶ್ವಿ‌ನಿ ಪ್ರದೀಪ್‌, ರೋಹಿಣಿ ಉದಯ್‌, ಶ್ವೇತಾ ಸಂತೋಷ್‌, ವನಿತಾ ಬಿಲ್ಲವ, ಪ್ರೇಮಲತಾ ಹೆಸರು ಅರ್ಹರ ಸಾಲಿನಲ್ಲಿ ಇದ್ದು ಅಶ್ವಿ‌ನಿ, ವನಿತಾ, ಶ್ವೇತಾ ಹೆಸರು ಮುಂಚೂಣಿಯಲ್ಲಿದೆ. ಶಾಸಕರು, ಪಕ್ಷ ಹಾಗೂ ಸದಸ್ಯರೆಲ್ಲ ಒಟ್ಟಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾಡಲಿದ್ದಾರೆ. ಯಾರೇ ಅಧ್ಯಕ್ಷ, ಉಪಾಧ್ಯಕ್ಷರಾದರೂ ಜವಾಬ್ದಾರಿ ದೊಡ್ಡದೇ ಆಗಿರಲಿದೆ. ಮುಂದಿನ ಚುನಾವಣೆಯ ಭವಿಷ್ಯ ಈ ಆಡಳಿತದ ಮೇಲೆ ಅವಬಲಂಬಿತವಾಗಿರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇರುವ ಕಾರಣ ಅನುದಾನ ತರುವ ಸವಾಲು ಇರುತ್ತದೆ. ಅರ್ಧದಲ್ಲಿ ಬಾಕಿಯಾದ ಕಾಮಗಾರಿಗಳನ್ನು ಮುಗಿಸುವ ಹೊಣೆಗಾರಿಕೆ ಇರುತ್ತದೆ. ಆದ್ದರಿಂದ ಸವಾಲುಗಳಿಗೆ ತಲೆಯೊಡ್ಡುವವರಿಗಾಗಿ ಪೀಠ ಕಾಯುತ್ತಿದೆ.

ಬಲಾಬಲ

2018ರ ಆ.31ರಂದು ಪ್ರಕಟಗೊಂಡ ಫಲಿತಾಂಶದಂತೆ ಒಟ್ಟು 23 ಸದಸ್ಯರಲ್ಲಿ ಬಿಜೆಪಿ 14 ಮತ್ತು 8 ಕಾಂಗ್ರೆಸ್‌, ಪಕ್ಷೇತರ ಸದಸ್ಯರೊಬ್ಬರು ಆಯ್ಕೆಯಾಗಿದ್ದಾರೆ. ಬಿಜೆಪಿಯಲ್ಲಿ 6 ಮಹಿಳೆಯರು, 8 ಪುರುಷರು ಇದ್ದು ಅಷ್ಟೂ ಮಂದಿ ಅಧ್ಯಕ್ಷತೆಗೆ ಹಾಗೂ ಉಪಾಧ್ಯಕ್ಷತೆಗೆ 6 ಮಂದಿ ಮೀಸಲಾತಿ ಪ್ರಕಾರ ಅರ್ಹರಾಗಿದ್ದಾರೆ.

ಕಾರ್ಕಳ ಪುರಸಭೆ: ಸಮಬಲದಲ್ಲಿ ಬಿಜೆಪಿ ಮುಂದೆ

ಕಾರ್ಕಳ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಪುರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಬಿಜೆಪಿ, ಕಾಂಗ್ರೆಸ್‌ ಸಮ ಬಲದ ಸ್ಥಾನ ಹೊಂದಿರುವ ಕಾರಣ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ಇಲ್ಲಿ ಮುಖ್ಯವಾಗಬೇಕಿತ್ತು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಶಾಸಕ, ಸಂಸದರ ಮತ ಗಣನೆಗೆ ಇರುವುದರಿಂದ ಅವರ ಮತವೇ ನಿರ್ಣಾಯಕವಾಗಲಿದೆ. ಇದರಿಂದ ಬಿಜೆಪಿ ಸದಸ್ಯರೇ ಆಡಳಿತದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಬಿಜೆಪಿಯ ಈ ಹಿಂದೆ ಅಧ್ಯಕ್ಷೆಯಾಗಿದ್ದ ಸುಮಾ ಕೇಶವ್‌ ಹಾಗೂ ಪಲ್ಲವಿ ಪ್ರವೀಣ್‌, ಶೋಭಾ ಆರ್‌. ದೇವಾಡಿಗ, ಯೋಗೀಶ್‌ ದೇವಾಡಿಗ, ಪ್ರಶಾಂತ ಕೋಟ್ಯಾನ್‌, ಪ್ರದೀಪ್‌ ರಾಣೆ, ಶಶಿಕಲಾ ಶೆಟ್ಟಿ, ಮಮತಾ ಪೂಜಾರಿ, ನೀತಾ ಆಚಾರ್ಯ, ಮೀನಾಕ್ಷಿ ಗಂಗಾಧರ್‌, ಭಾರತಿ ಅಮೀನ್‌ ಇವರೆಲ್ಲರೂ ಅರ್ಹರಾಗುತ್ತಾರೆ.

ಬಿಜೆಪಿಯ 11 ಮಂದಿ ಸದಸ್ಯರ ಪೈಕಿ ಶೋಭಾ ಆರ್‌. ದೇವಾಡಿಗ, ಯೋಗೀಶ್‌ ದೇವಾಡಿಗ, ಶೋಭಾ ಹಿರಿಯ ಸದಸ್ಯರು. 2018ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆಚುನಾವಣೆ ನಡೆದಿತ್ತಾದರೂ ಮೀಸಲಾತಿ ಘೋಷಣೆಯಲ್ಲಿ ವಿಳಂಬವಾಗಿ 2019ರಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿತ್ತು. ಆಗ ಬಿಜೆಪಿಯ ಸುಮಾ ಕೇಶವ್‌ ಅಧ್ಯಕ್ಷರಾಗಿ, ಪಲ್ಲವಿ ಪ್ರವೀಣ್‌ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎರಡೂವರೆ ವರ್ಷ ಆಡಳಿತ ನಡೆಸಿದ್ದರು. ಆ ಬಳಿಕ 15 ತಿಂಗಳಿನಿಂದ ಕುಂದಾಪುರ ಸಹಾಯಕ ಆಯುಕ್ತರು

ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿ ಹಿರಿಯ ಸದಸ್ಯ ಯೋಗೀಶ್‌ ಅಧ್ಯಕ್ಷರಾಗಿ ಹಾಗೂ ಪ್ರಶಾಂತ್‌ ಕೋಟ್ಯಾನ್‌ ಉಪಾಧ್ಯಕ್ಷರಾಗುವ ಸಂಭವವಿದೆ ಎಂದು ಹೇಳಲಾಗುತ್ತಿದ್ದು ಅಂತಿಮವಾಗಿ ಪಕ್ಷ ತೀರ್ಮಾನ ಕೈಗೊಳ್ಳುವುದರಿಂದ ಯಾರು ಅಧ್ಯಕ್ಷ, ಉಪಾಧ್ಯಕ್ಷರಾಗುವರು ಎನ್ನುವುದು ಕಗ್ಗಂಟಾಗಿದೆ.
ಶಾಸಕ, ಸಂಸದರ ಮತ ನಿರ್ಣಾಯಕವಾಗಿರುವುದರಿಂದ ಕಾಂಗ್ರೆಸ್‌ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಕಾಂಗ್ರೆಸ್ಸಿನ ಅಸ್ಫಾಕ್‌ ಅಹಮ್ಮದ್‌, ಶುಭದ ರಾವ್‌, ನಳಿನಿ ಆಚಾರ್ಯ, ಪ್ರತಿಮಾ ರಾಣೆ, ಪ್ರಭಾ ಕಿಶೋರ್‌, ವಿನ್ನಿ ಬೋಲ್ಡ… ಪ್ರವೀಣ್‌ ಶೆಟ್ಟಿ, ಸೀತಾರಾಮ ಅವರೂ ಕೂಡ ಸ್ಪರ್ಧಿಸಲು ಅರ್ಹರಾಗಿದ್ದಾರೆ.

ಬಲಾಬಲ
23 ಸದಸ್ಯರನ್ನು ಹೊಂದಿರುವ ಕಾರ್ಕಳ ಪುರಸಭೆಯಲ್ಲಿ 11 ಮಂದಿ ಬಿಜೆಪಿ, 11 ಮಂದಿ ಕಾಂಗ್ರೆಸ್‌ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿಯಲ್ಲಿ 11 ಮಂದಿ, ಕಾಂಗ್ರೆಸ್‌ನ 8 ಮಂದಿ ಅರ್ಹರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next