Advertisement

ಮಗನೇ ಎಲ್ಲಿದ್ದೀಯಪ್ಪಾ?

09:35 AM Mar 29, 2019 | Team Udayavani |

ಜೈ ಪಬ್‌ ಜೀ… ಒಂದಾದ ಮೇಲೊಂದು ಆಟದ ಕಾಟ. ಮನೆಯಲ್ಲಿ ಇದ್ದಷ್ಟು ಹೊತ್ತು, “ಪಬ್‌ ಜೀ’ ಗೇಮ್‌ನಲ್ಲಿಯೇ ಕಳೆದುಹೋಗಿದ್ದ ಗದಗದ ಕಾಲೇಜಿನ ಒಬ್ಬ ಹುಡುಗ, ಉತ್ತರ ಪತ್ರಿಕೆಯಲ್ಲೂ ಅದೇ ಆಟವನ್ನೇ ಸ್ಮರಿಸುತ್ತಾ, ಅಂಕಗಳನ್ನು ಕೈಚೆಲ್ಲಿಕೊಂಡ ಘಟನೆ ಇತ್ತೀಚೆಗೆ ನಡೆದಿತ್ತು. ಈ ಮೊದಲು ಚೀನಾದ ದಿಕ್ಕಿನಿಂದಲೋ, ಅಮೆರಿಕದ ಕಡೆಯಿಂದಲೋ ಇಂಥ ಸುದ್ದಿಗಳು ಪತ್ರಿಕೆಯಲ್ಲಿ ಬಂದುಬಿಟ್ಟರೆ, ಅದನ್ನು ಚಪ್ಪರಿಸುತ್ತಾ ಓದುತ್ತಿದ್ದೆವು. ಈಗ ನಮ್ಮ ಅಕ್ಕಪಕ್ಕದಲ್ಲಿಯೇ ಇಂಥ ಗೇಮ್ಸ್‌ಬಾಂಡ್‌ಗಳು ಹುಟ್ಟುತ್ತಿರೋ­ದನ್ನು ನೋಡಿ, ಅಯ್ಯೋ ಎನ್ನುತ್ತದೆ ಮನಸ್ಸು.

Advertisement

ಹಾಗಾದರೆ, ನಮ್ಮ ಮಕ್ಕಳ ಮನಸ್ಸು ಎಲ್ಲಿ ಟೈಟಾನಿಕ್‌ನಂತೆ ಮುಳುಗುತ್ತಿದೆ? ಶಾಲೆಗಳು ಇದ್ದಾಗಲೇ ಹೀಗೆ. ಇನ್ನು ಬೇಸಿಗೆ ರಜೆ ಸಿಕ್ಕಿಬಿಟ್ಟರಂತೂ ಕೇಳಬೇಕೇ? ಮಕ್ಕಳನ್ನು ಕಳೆದುಹೋಗಲು ಬಿಡಬೇಕು… ಹಾಗೆ ಕಳೆದುಹೋದರೇನೇ, ಅವರು ಬದುಕಿನಲ್ಲಿ ಎದ್ದುಬರೋದು ನಿಜ… ಆದರೆ, ಅದು ಎಲ್ಲೋ ಗೇಮ್‌ಗಳಲ್ಲಿ ಅಲ್ಲ; ಕಾರ್‌ ರೇಸೊಳಗಲ್ಲ; ಕಂಪ್ಯೂಟರಿನ ಗೂಡೊಳ­ಗಲ್ಲ; ಹಾಸಿಗೆ ಮೇಲಿನ ಸೋಮಾರಿ ನಿದ್ದೆಯೊಳಗೂ ಅಲ್ಲ… ಯಾವುದೋ ಒಂದು ಹವ್ಯಾಸದೊಳಗೆ, ಸದಭಿರುಚಿಯ ಕಲೆಯೊಳಗೆ, ಮನಸ್ಸನ್ನು ಹಗುರ ಮಾಡುವ ಒಳ್ಳೆಯ ಆಟದೊಳಗೆ, ಬುದ್ಧಿಯನ್ನು ವಿಕಸನ ಮಾಡುವಂಥ ಸಂಗತಿಯೊಳಗೆ, ನಿಮ್ಮ ಮಕ್ಕಳು ಕಳೆದು ಹೋಗಲಿ… “ಎಲ್ಲಿದ್ದೀಯ ಮಗನೇ..?’ ಎಂದು ಕೂಗಿ ಕರೆದಾಗ, “ನಾನು ಇಲ್ಲಿದ್ದೀನಪ್ಪಾ…’ ಎಂದು ಮಕ್ಕಳು ಹೆಮ್ಮೆಯಿಂದ ಹೇಳುವಂಥ ಕ್ಷೇತ್ರದೊಳಗೆ ಅವರು ನಿಂತಿರಲಿ.

ಹೆಚ್ಚು ಕಡಿಮೆ ಇನ್ನೊಂದು ವಾರ ಕಳೆದರೆ ಮನೆಯ ಬಾಗಿಲಿಗೆ ಮಕ್ಕಳ ರಜೆಗಳು ಬಂದು ಬೀಳುತ್ತವೆ. ಸುಮಾರು ಐವತ್ತು ದಿನಗಳ ಭರ್ತಿರಜೆ. ಕಾಲ ನಿಲ್ಲೋದಿಲ್ಲ, ನೋಡಿ. ನೀವು ಆ ಕಡೆ ಈ ಕಡೆ ನೋಡುವುದರೊಳಗೆ ಕೈಯಿಂದ ಅಷ್ಟೂ ದಿನಗಳು ಸೋರಿ ಹೋಗುತ್ತವೆ.

ರಜೆಗಳು ಬರುವುದು ಮಗುವಿನ ಸತತ ಓದಿನ ನಡುವೆ ಒಂದು ಬ್ರೇಕ್‌ ಆಗಿ. ನೀವು ಅದನ್ನು ರೆಸ್ಟ್‌ ಅಂತ ಭಾವಿಸಬಾರದು. Rest is change of work ಅನ್ನುತ್ತೆ ಇಂಗ್ಲಿಷ್‌ ಗಾದೆ. ಇಂಥ ರಜೆಗಳು ಮಗುವಿನ ಅಭಿರುಚಿ ಪೋಷಿಸಿ, ತಳಪಾಯವಾಗುವಂತಾಗಲು ಯಾಕೆ ಬಳಸಿಕೊಳ್ಳಬಾರದು? ಮಗುವಿನ ಭವಿಷ್ಯದ ದೃಷ್ಟಿಯಿಂದ ಅದು ರಜೆಯಲ್ಲಿ ಕಳೆದುಹೋಗಬೇಕಾದ ಜಾಗಗಳಾವುವು ಎಂಬುದನ್ನು ಯೋಚಿಸಬೇಕಾದ ಸಮಯವಿದು. ಈ ರಜೆಯಲ್ಲಿ ನಿಮ್ಮ ಮಗು ಕಳೆದು ಹೋಗಲೇಬೇಕಾದಲ್ಲೆಲ್ಲಿ? ಎಂಬುದರ ಒಂದು ಪಟ್ಟಿಯನ್ನು ನೀಡಿದ್ದೇವೆ.

ಹಳ್ಳಿಗೂಗಿ
ಹಳ್ಳಿ ಬದುಕಿಗಿಂತ ಅದ್ಭುತ ಯೂನಿವರ್ಸಿಟಿ, ಬೇಸಿಗೆ ಶಿಬಿರ ಮತ್ತೂಂದು ಬೇಕೆ? ರಜೆಯಲ್ಲಿ ನಿಮ್ಮ ನಿಮ್ಮ ಹಳ್ಳಿಗೆ ಹೋಗಿ. ಅಲ್ಲಿ ಅಜ್ಜ ಅಜ್ಜಿಯರು ನಿಮಗಾಗಿ ಕಾದಿರುತ್ತಾರೆ. ಅವರ ಬಳಿ ಅನುಭವಗಳಿವೆ. ಬದುಕಿನ ಪಾಠಗಳಿವೆ ಮತ್ತು ಕಥೆಗಳಿವೆ. ಬಾಚಿಕೊಳ್ಳಿ. ನೆಲ, ಹೊಲ, ಬೆಳೆ, ಹಳ್ಳಿ, ಕಾಡು, ಹಸಿರು, ದನ ಇವುಗಳಿಗಿಂತ ಸೊಬಗು ಯಾವುದಿದೆ? ಮತ್ತೆ ಪ್ರಕೃತಿಗೆ ವಾಪಸ್ಸಾಗುವಲ್ಲಿ ಎಂಥ ಖುಷಿ ಇದೆ ನೋಡಿ. ಹಳ್ಳಿಯಲ್ಲಿ ಅಂಥದ್ದೇನು ಸಿಕ್ಕೀತು ಅಂತನ್ನಿಸಬಹುದು.

Advertisement

ಬುಕ್‌ ಒಳಗೆ…
ಪಂಚತಂತ್ರವೋ, ಒಳ್ಳೆಯ ಕಾದಂಬರಿಯೋ… ಕೆಲವು ಮಕ್ಕಳಿಗೆ ಅದನ್ನೆಲ್ಲ ಓದುವ ಆಸೆ. ಆದರೆ, ತರಗತಿಯ ಓದಿನ ಮಧ್ಯೆ ಸಮಯ ಇರುವು ದಿಲ್ಲ. ಸಿಗುವ ದೀರ್ಘಾವಧಿಯ ರಜೆಯನ್ನು ಇಷ್ಟದ ಪುಸ್ತಕ ಓದುವುದಕ್ಕೆ ಬಳಸಿಕೊಳ್ಳ ಬಹುದು. ಜಗತ್ತಿನಲ್ಲಿ, ಪುಸ್ತಕಗಳಿಗಿಂತ ಅದ್ಭುತ ಗೆಳೆಯ ಮತ್ತೂಬ್ಬನಿಲ್ಲ. ನಿಮ್ಮ ಮಕ್ಕಳು ಪುಸ್ತಕಗಳ ಮಧ್ಯೆ ಕಳೆದು ಹೋಗಲಿ…

ಕಂಪ್ಯೂಟರ್‌ ಕೋರ್ಸ್‌
ಕಂಪ್ಯೂಟರ್‌ ಜ್ಞಾನ ಇಲ್ಲದವನೇ ಈಗ ನಿಜವಾದ ಅನಕ್ಷರಸ್ಥ. ಈಗಂತೂ ಎಲ್ಲಾ ನೌಕರಿಗಳೂ ಕಂಪ್ಯೂಟರ್‌ ಜ್ಞಾನವನ್ನು ಕೇಳುತ್ತವೆ. ಆದ್ದರಿಂದ ಕಂಪ್ಯೂಟರ್‌ ಕಲಿಯದೆ ವಿಧಿ ಇಲ್ಲ. ಕಲಿಯಲು ಸಮಯವೇ ಸಾಲದು ಅನ್ನುವವರು ಭರಪೂರ ಸಿಗುವ ಐವತ್ತು ದಿನಗಳನ್ನು ಬಳಸಿಕೊಂಡು ಕಂಪ್ಯೂಟರ್‌ ಬಳಕೆಯಲ್ಲಿ ಪಳಗಬಹುದು.

ಬೇಸಿಗೆ ಶಿಬಿರಗಳು
“ಸಮ್ಮರ್‌ ಕ್ಯಾಂಪಾ? ಅಲ್ಲೇನು ಇರುತ್ತೆ ಬಿಡಿ’ ಅನ್ನೋರಿದ್ದಾರೆ. ಕೆಲವು ಅಸರ್ಮಪಕವಾಗಿ ಸಂಘಟಿತವಾದ ಶಿಬಿರಗಳು ನಮ್ಮಲ್ಲಿ ಅಂಥ ಅಭಿಪ್ರಾಯ ಹುಟ್ಟಿಸಿವೆ. ಒಳ್ಳೆಯ ಶಿಬಿರಗಳು ಮಗುವಿನ ವ್ಯಕ್ತಿತ್ವ ವಿಕಾಸವನ್ನು ನಿಜಕ್ಕೂ ಬೂಸ್ಟ್‌ ಮಾಡುತ್ತವೆ. ಆದರೆ, ಸೂಕ್ತವಾದ ಶಿಬಿರದಲ್ಲಿ ಮಗುವನ್ನು ತೊಡಗಿಸೋದು ಮುಖ್ಯ.

ಆಟೋಟಗಳು
ಮಕ್ಕಳು ಬರೀ ಆಟದ ಕಡೆ ಗಮನ ಹರಿಸಲು ಯಾವ ಪೋಷ ಕರೂ ಬಿಡಲಾರರು. ಆದರೆ, ಓದಿನ ಸಮಯದಲ್ಲಿ ಓದು ಆಗಿದೆ. ರಜೆಯಲ್ಲಿ ನಿಮ್ಮ ಮಗುವಿಗೆ ಆಸಕ್ತಿಯಿರುವ ಕ್ರೀಡೆಯನ್ನು ಆಡಲು ಬಿಡಿ. ಆಟ ಅಂದ್ರೆ ವಿಡಿಯೋ ಗೇಮಲ್ಲ. ತಿಳೀತಾ!

ಟೂರ್‌ಗೆ ಹೊರಡಿ…
ಪ್ರವಾಸಗಳು ಖುಷಿ ಕೊಡುತ್ತವೆ. ಆದರೆ ಕೇವಲ ಖುಷಿಯೊಂದನ್ನೇ ಇಟ್ಟುಕೊಂಡು ಹೊರಡಬಾರದು. ಓದುವುದರಿಂದ ಲಭಿಸುವ ಜ್ಞಾನಕ್ಕಿಂತ ಸುತ್ತಾಡುವುದರಿಂದ ಬರುವ ಜ್ಞಾನವೇ ಹೆಚ್ಚು. ಐತಿಹಾಸಿಕ ಸ್ಥಳಗಳಿಗೆ ಮತ್ತು ಎಂದೂ ಹೋಗದ ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಹೊರಡಬಹುದು. ಅಲ್ಲಿ ನೋಡಿದ ಸಂಗತಿಗಳು ಮುಂದೆ ಪಠ್ಯದಲ್ಲಿ ಬಂದರೂ ಬರಬಹುದು ಅನ್ನೋದಕ್ಕಿಂತ, ಆ ಅನುಭವಗಳು ಅಪ್ಪಟ ಚಿನ್ನ.

ಚಿತ್ರಕಲೆ
ಕೆಲವು ಮಕ್ಕಳಿಗೆ ಚಿತ್ರ ಬರೆಯುವುದರ ಬಗ್ಗೆ ಭಯಂಕರ ಆಸಕ್ತಿ ಇರುತ್ತದೆ. ಮಕ್ಕಳ ಆ ಸುಂದರ ಕಲ್ಪನೆಗೆ ಆಕಾರ ಕೊಡುವ ಕೆಲಸ ಈ ಬೇಸಿಗೆಯಲ್ಲಾಗಲಿ. ಬಿಂದು ಬಿಂದುಗಳಲ್ಲಿ ಆಕಾರ ಸೃಷ್ಟಿಸುವುದರಲ್ಲಿ ಇರುವ ಸುಖಕ್ಕೆ ಬೇರೆ ಹೋಲಿಕೆಯಿಲ್ಲ. ತಪಸ್ಸಿನಂತೆ ಕುಳಿತರೆ, ಮಕ್ಕಳು ಅದ್ಭುತ ಚಿತ್ರಕಾರರೇ ಆಗುತ್ತಾರೆ.

ಸಂಗೀತ
ಮಗುವಿನ ಆಸಕ್ತಿ ಸಂಗೀತವೇ ಆಗಿದ್ದರೆ, ಕೇವಲ ಸಂಗೀತದ ಕಡೆಗೆ ಹೆಚ್ಚು ಗಮನ ಕೊಡಲು ಹೇಳಿ. ಓದು ಬರಹದ ಒತ್ತಡವಿಲ್ಲದೆ ಇರುವುದರಿಂದ ಮಕ್ಕಳು ರಜೆಯಲ್ಲಿ ನೆಮ್ಮದಿಯಾಗಿ ಸಂಗೀತ ಕಲಿಕೆಯಲ್ಲಿ ತೊಡಗಿಕೊಳ್ಳಬಹುದು. ಅಭ್ಯಾಸಕ್ಕೆ ಸಾಕಷ್ಟು ಸಮಯ ಸಿಗುವುದರಿಂದ ಕಲಿಕೆ ಕೈ ಹಿಡಿಯುತ್ತದೆ.

ಪೋಷಕರೇ, ನೀವಿಷ್ಟು ಮಾಡಿ…
1 ನಿಮಗೆ ಚಿತ್ರ ಬರೆಯಲು ಚೆನ್ನಾಗಿ ಬರುತ್ತದೆ ಅನ್ನುವ ಕಾರಣಕ್ಕೆ ನಿಮ್ಮ ಮಗುವೂ ಅದನ್ನೇ ಕಲಿಯಬೇಕೆಂಬ ಒತ್ತಡ ಹೇರುವುದು ಸಲ್ಲ! ಅವನಿಗೆ ಸಂಗೀತದಲ್ಲಿ ಆಸಕ್ತಿ ಇದ್ದರೆ ಅದನ್ನು ಗೌರವಿಸಿ, ಬೆಳೆಸಿ.

2 ರಜೆಯಲ್ಲಿ ಓದಿ ಬರೆಯುವ ಒತ್ತಡವಿಲ್ಲದ ಕಾರಣ ಮಕ್ಕಳು ಟಿವಿ, ಮೊಬೈಲ್‌ಗ‌ಳಿಗೆ ಹತ್ತಿರವಾಗುತ್ತವೆ. ಮುಂದೆ ಅದೊಂದು ಗೀಳಾಗಿ ಬಿಡುವ ಅಪಾಯವಿದೆ. ರಜೆ ಅಲ್ವೇ, ನೋಡಿಕೊಳ್ಳಲಿ ಬಿಡಿ ಎಂಬ ಉಡಾಫೆ ಬೇಡ್ವೇ ಬೇಡ. ರಜೆ, ಮಕ್ಕಳಿಗೆ ಮೊಬೈಲ್‌ ರೋಗವನ್ನು ಅಂಟಿಸಿ ಹೋಗದಂತೆ ನೋಡಿಕೊಳ್ಳಿ.

3 ಈ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಎಲ್ಲವನ್ನೂ ಕಲಿಸಿಬಿಡ್ತೀನಿ ಎನ್ನುವ ಹಠ ಬೇಡವೇ ಬೇಡ. ಮಗುವಿಗೆ ಆಸಕ್ತಿ ಇರುವ ಒಂದು ವಿಚಾರದಲ್ಲಿ ಮಾತ್ರವೇ ಪರ್ಫೆಕ್ಟಾಗಿ ತರಬೇತುಗೊಳಿಸಿ.

ಸದಾಶಿವ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next