Advertisement

ಕಾಲಕಾಲದ ಸಮೂಹ ಸನ್ನಿಗಳು

12:30 AM Jun 01, 2018 | |

ಇಂಥ ಘಟನೆಗಳಾದಾಗ ಅವರಿಗೆ ನೇರವಾಗಿ ಸಂಬಂಧವಿಲ್ಲದಿದ್ದರೂ ಗುಂಪಿನಲ್ಲಿ ಬಂದು ಸೇರುವ ಈ ವ್ಯಕ್ತಿಗಳು ಯಾರು? ಅದುವರೆಗೂ ಅವರೆಲ್ಲ ಎಲ್ಲಿ ಇರುತ್ತಾರೆ. ಎಲ್ಲವೂ ಸಹಜವಾಗಿ ನಡೆಯುತ್ತಿದ್ದಾಗ ಇಲ್ಲದ, ಏನೋ ಗಲಾಟೆಯ, ಆತಂಕದ ಕಿಡಿ ಬಿದ್ದಾಗ ಛಕ್ಕನೆ ಬರುವ ಇವರು ಯಾರು? ದುಃಖದ ಸಂಗತಿಯೆಂದರೆ ಇವರಲ್ಲಿ ಹೆಚ್ಚಿನವರು ನಿರುದ್ಯೋಗಿಗಳು. ಆತಂಕ, ಅಸಹನೆಯನ್ನು ಜೀವಿಸುತ್ತಿರುವವರು. ಮನಸ್ಸಿನಲ್ಲಿರುವ ಎಲ್ಲ ಸೋಲುಗಳೂ, ಸಿಟ್ಟು, ಅಸಹನೆ ಎಲ್ಲವನ್ನೂ ಯಾವುದೋ ಅವರಿಗೆ ಸಂಬಂಧವಿಲ್ಲದಿರುವ ಘಟನೆಯಲ್ಲಿ ನಿವಾರಿಸಿಕೊಳ್ಳುವವರು.

Advertisement

ರಾಜಧಾನಿಯಲ್ಲಿ ಹೀಗೊಂದು ಘಟನೆ ನಡೆಯಬಹುದು ಎಂದು ನಾವ್ಯಾರೂ ಊಹಿಸಿರಲಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಎಷ್ಟೇ ರೌಂಡ್ಸ್‌ ಹೊಡೆದರೂ ರೌಡಿಗಳ ಹೊಡೆದಾಟ, ಕೊಲೆ, ಸುಲಿಗೆ ನಡೆಯುತ್ತಿರುತ್ತದೆ. ಸಮಾಜ ವಿದ್ರೋಹಿಗಳನ್ನು ಹಿಡಿದು ಜೈಲಿಗೆ ಅಟ್ಟುವ ಕೆಲಸವೂ ನಿರಂತರವಾಗಿರುತ್ತದೆ. ರೌಡಿಗಳ ಪ್ರಪಂಚವೇ ಬೇರೆ, ಜನಸಾಮಾನ್ಯರ ಬದುಕೇ ಬೇರೆ. ಶಾಂತಿಯಿಂದ ಇರಬೇಕಾದ ನಮ್ಮ ಜನ, ತಂದೆ ತಾಯಿಯನ್ನು ಕಳೆದುಕೊಂಡು, ಉದ್ಯೋಗ ಅರಸಿ ರಾಜಸ್ಥಾನದಿಂದ ಬೆಂಗಳೂರಿಗೆ ಬಂದ ಯುವಕ ಕಾಲೂ ರಾಮನನ್ನು ಹೊಡೆದು ಕೊಂದರು. ಇಂಥ ಘಟನೆ ನಮ್ಮಲ್ಲೂ ನಡೆಯ ಬಹುದು ಎಂದು ಊಹಿಸಿಯೇ ಇರಲಿಲ್ಲ. ಕೆಲವು ವರ್ಷಗಳ ಹಿಂದೆ ಬೆಂಗಳೂರು ನಗರ ಹಾಗೂ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ಸ್ವಲ್ಪ ಹೆಚ್ಚೇ ಎನ್ನುವಂತೆ ಒಂದು ವಿಚಿತ್ರ ಬೆಳವಣಿಗೆ ನಡೆದಿತ್ತು. ಹೆಚ್ಚಿನವರ ಮನೆ ಬಾಗಿಲಿನ ಮೇಲೆ “ನಾಳೆ ಬಾ’ ಎನ್ನುವ ಬರವಣಿಗೆಯನ್ನು ಕಾಣಬಹುದಿತ್ತು. ಕೂಗು ಮಾರಿಯೊಂದು ಬಂದು ರಾತ್ರೆ ಬಾಗಿಲು ಬಡಿದು ಮನೆ ಯಲ್ಲಿರುವ ಒಬ್ಬರ ಹೆಸರು ಕೂಗುತ್ತದೆ (ಪರಿಚಿತರ ದನಿಯಲ್ಲಿ) ಎಂದೂ, ಅದನ್ನು ನಂಬಿ ಬಾಗಿಲು ತೆರೆದರೆ ಅವರು ಸಾಯುತ್ತಾರೆಂದೂ ಕಥೆ ಹರಡಿತು. ಅದರಿಂದ ತಪ್ಪಿಸಿಕೊಳ್ಳ ಬೇಕೆಂದರೆ ಬಾಗಿಲಿಗೆ “ನಾಳೆ ಬಾ’ ಎಂದು ಬರೆಯಬೇಕು, ಅದನ್ನು ನೋಡಿ ಆ ಕೂಗುಮಾರಿ ಆ ದಿನ ಮುಂದೆ ಹೋಗುತ್ತದೆ, ಮರುದಿನವೂ ಅದು ಈ “ನಾಳೆ ಬಾ’ ಎನ್ನುವುದನ್ನು ನೋಡಿ ಮತ್ತೆ ಮುಂದೆ ಸಾಗುತ್ತದೆ ಎನ್ನುವಂತಹ ಮಾತುಗಳು ಜನರಲ್ಲಿ ಭಯ ಹುಟ್ಟಿಸಿತ್ತು. ಬಾಡಿಗೆಗೆ ಮನೆಯನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ಹೆಚ್ಚಿನ ಮನೆ ಬಾಗಿಲಿನ ಮೇಲೆ ಇಂಥ “ನಾಳೆ ಬಾ’ಗಳನ್ನು ಕಂಡಿದ್ದೆ. ವಿದ್ಯಾವಂತ ಜನರೂ ನಮಗ್ಯಾಕೆ ಇಲ್ಲದ ಉಸಾಬರಿ ಎಂದು ಅವರೂ ಹೀಗೆ ಬಾಗಿಲ ಮೇಲೆ ಬರೆದು ಕೂಗುಮಾರಿಯಿಂದ ಮುಕ್ತಿ ಪಡೆಯಲು ಪ್ರಯತ್ನಿಸಿದ್ದೂ ಸುಳ್ಳಲ್ಲ. ಇದೊಂಥರಾ ಸಮೂಹ ಸನ್ನಿ. ಎಲ್ಲಿಂದ ಹುಟ್ಟತ್ತದೋ, ಯಾರು ಇಂಥವನ್ನು ಸೃಷ್ಟಿಸುತ್ತಾರೋ ತಿಳಿಯದು. ಆದರೆ ಕಾಲ ಕಾಲಕ್ಕೆ ಆಗೊಮ್ಮೆ ಈಗೊಮ್ಮೆ ಇಂಥ ಸಮೂಹ ಸನ್ನಿಗಳು ಜನರನ್ನು ಕಾಡುತ್ತಿರುವುದು ಸತ್ಯ. ಮಕ್ಕಳ ಕಳ್ಳನೆಂದು ಅಮಾಯಕ ಕಾಲೂರಾಮನನ್ನು ಹಿಡಿದು ಸಾಯಿಸಿದ್ದು ಸಮೂಹ ಸನ್ನಿಗೆ ಜನರು ಹಿಂದೆ ಮುಂದೆ ಯೋಚಿಸದೇ ಹೇಗೆ ಬಲಿಯಾಗುತ್ತಾರೆ ಅನ್ನುವುದಕ್ಕೆ ಕನ್ನಡಿ ಹಿಡಿದಂತಿದೆ. 

ಮಕ್ಕಳ ಕಳ್ಳರು ಎಂದು ವಾಟ್ಸಾಪ್‌ನಲ್ಲಿ ಶೇರ್‌ ಆದ ಕೆಲವು ಚಿತ್ರಗಳನ್ನು ನೋಡಿ ಬೆಂಗಳೂರು ಸೇರಿದಂತೆ ಕೋಲಾರ, ರಾಯಚೂರು ಇನ್ನೂ ಹಲವಾರು ಕಡೆಗಳಲ್ಲಿ ಜನರೇ ರಾತ್ರಿಯಿಡೀ ಕೋಲು ಬಡಿಗೆಗಳನ್ನು ಹಿಡಿದುಕೊಂಡು ಗಸ್ತು ತಿರುಗುತ್ತಾ ಪೊಲೀಸು ಕೆಲಸವನ್ನು ಮಾಡಿದ್ದೂ ಅಲ್ಲದೇ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಮಾನಸಿಕ ಅಸ್ವಸ್ಥರನ್ನು ಹಿಡಿದು ಹೊಡೆದೂ ತಂತಮ್ಮ ಆಕ್ರೋಶವನ್ನು ತೀರಿಸಿಕೊಂಡಿದ್ದರು. ಅದೇ ರೀತಿಯ ಒಂದು ಬೇಜವಾಬ್ದಾರಿಯುತ ಘಟನೆಯಿಂದ ಕಾಲೂರಾಮ ಹೆಣವಾಗಿ ಹೋಗಿದ್ದಾನೆ. ದುರ್ದೈವವೆಂದರೆ ಕಾಲೂರಾಮನ ಹೆಣದ ಮುಂದೆ ಅಳ್ಳೋರೂ ಯಾರೂ ಇಲ್ಲ. ಕಾಲೂರಾಮ ಅನಾಥ. “ಮೇ ಚೋರ್‌ ನಹೀ’ ಎನ್ನುವ ದೈನ್ಯದ ಕೂಗಿಗೂ ಸಮೂಹ ಸನ್ನಿಗೆ ಒಳಗಾಗಿ ಕಟುಕರಾದ ಅಷ್ಟೂ ಜನರಲ್ಲಿ ಒಬ್ಬನಿಗೂ ಕರುಣೆ ಮೂಡದೇ ಇರುವುದು ದುರಂತ. ಅನ್ಯಾಯವಾಗಿ ಕಾಲೂರಾಮ ರಾಮನ ಪಾದ ಸೇರಿದ.

ರವೀಂದ್ರನಾಥ ಠಾಗೋರರ ಕಾಬೂಲಿವಾಲದ ಕತೆ ಎಲ್ಲರಿಗೂ ತಿಳಿದಿರುವುದೇ. ಕಾಬೂಲಿನಿಂದ ಬಂದ ಒಣ ಹಣ್ಣುಗಳ ವ್ಯಾಪಾರಿ ಮತ್ತು ಪುಟ್ಟ ಹುಡುಗಿಯ ಬಾಂಧವ್ಯದ ಕತೆಯಿದು. ಕತೆಯಲ್ಲೂ ಆ ಪುಟ್ಟ ಹುಡುಗಿಯ ತಾಯಿಗೆ ಎಂದೂ ತನ್ನ ಮಗಳು ಈ ಪರದೇಸಿಯೊಂದಿಗೆ ಸ್ನೇಹದಿಂದ ಇರುವುದು ಸರ್ವಥಾ ಇಷ್ಟವಿರಲಿಲ್ಲ. ಅವನು ಮಕ್ಕಳ ಕಳ್ಳನೋ, ಮಗಳನ್ನು ಅಪಹರಿಸಿ ಗುಲಾಮಳನ್ನಾಗಿಸುತ್ತಾನೋ ಎನ್ನುವ ಆತಂಕ ಆ ತಾಯಿಯಲ್ಲೂ ಇತ್ತು. ಕೊನೆಗೆ ಯಾವುದೋ ಬೇರೆ ವಿಷಯಕ್ಕೆ ಜೈಲು ಸೇರಿದ ಕಾಬೂಲಿವಾಲಾ ಶಿಕ್ಷೆಯ ಅವಧಿ ಮುಗಿಸಿ ಹೊರಬರುವ ಹೊತ್ತಿಗೆ ಆತನ ಪುಟ್ಟಿ ಬೆಳೆದು ಯುವತಿಯಾಗಿರುತ್ತಾಳೆ. ಈ ಕತೆಯನ್ನು ಪ್ರಸ್ತಾಪಿಸಲು ಕಾರಣವಿಷ್ಟೇ, ಶತಮಾನಗಳ ಹಿಂದೆಯೂ ಅಪರಿಚಿತರನ್ನು ಸ್ವೀಕರಿಸಲು ನಮಗಿದ್ದ ಆತಂಕ ಏನೂ ಬದಲಾಗಿಲ್ಲ. ಅದಿಂದೂ ಬೃಹತ್ತಾಗಿ ಮನದಲ್ಲಿ ಬೆಳೆದಿದೆ. ಅದಕ್ಕೆ ಕಾರಣಗಳೂ ಹಲವು.  

ಮಕ್ಕಳ ಅಪಹರಣ ಅತ್ಯಂತ ಗಂಭೀರ ವಿಷಯವೇ, ನಿಜ. ಮಕ್ಕಳ ಅಪಹರಣದಲ್ಲಿ ಕಿಡ್ನಿ ದಂಧೆ, ಮಕ್ಕಳನ್ನು ಕದ್ದು ಮಕ್ಕಳಿಲ್ಲದವರಿಗೆ ಮಾರಾಟ ಮಾಡುವುದು, ಹೆಣ್ಣು ಮಕ್ಕಳನ್ನು ಅಪಹರಿಸಿ ವೇಶ್ಯಾವೃತ್ತಿಗೆ ತಳ್ಳುವುದು, ಮಕ್ಕಳನ್ನು ಕದ್ದು ಭಿಕ್ಷೆ ಬೇಡಲು ಕಳಿಸುವ ಜಾಲ, ಮಕ್ಕಳನ್ನು ವಿದೇಶಕ್ಕೆ ಕಳಿಸುವವರ ಜಾಲಗಳೂ ಸೇರಿದಂತೆ ಹೀಗೆ ಹತ್ತಾರು ಆತಂಕ ಮೂಡಿಸುವ ವಿಚಾರಗಳಿವೆ. ಮಾನವ ಕಳ್ಳ ಸಾಗಾಣಿಕೆಯಲ್ಲಿ ದೇಶದಲ್ಲಿಯೇ ಕರ್ನಾಟಕ ಐದನೇ ಸ್ಥಾನದಲ್ಲಿದೆ ಎನ್ನುತ್ತದೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ವರದಿ. ಮಹಿಳೆಯರು ಲೈಂಗಿಕ ಶೋಷಣೆಗೆ ಒಳಗಾದರೆ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳಲಾಗುತ್ತದೆ. ಇಂತಹ ವರದಿಗಳು ಜನರನ್ನು ಎಚ್ಚರಿಸಲು ಪ್ರಕಟವಾಗುತ್ತವೆ. ಮಕ್ಕಳನ್ನು ಹೆತ್ತವರು, ಪೋಷಕರು, ಶಾಲೆಯಲ್ಲಿ ಶಿಕ್ಷಕರು ನೋಡಿಕೊಂಡರೂ ಮಕ್ಕಳ ಕಳ್ಳರಿಗೆ ಮಕ್ಕಳು ಬಲಿಯಾಗುತ್ತಲೇ ಇರುತ್ತಾರೆ. ಆ ಆತಂಕವೇ ಮೊನ್ನೆ ಚಾಮರಾಜಪೇಟೆಯಲ್ಲಿ ಈ ಮಟ್ಟದ ದುರಂತ ನಡೆಯಲು ಕಾರಣ ವಾಯಿತು. ಆದರೆ, ಕಾನೂನನ್ನು ಕೈಗೆತ್ತಿ ಕೊಳ್ಳಲು ಯಾರಿಗೂ ಹಕ್ಕಿಲ್ಲವೆನ್ನುವುದನ್ನು ಮರೆತ ಜನರು ಅಮಾಯಕನ ಸಾವಿಗೆ ಕಾರಣವಾಗಿದ್ದಾರೆ. 

Advertisement

ಇಲ್ಲಿ ಸಮೂಹ ಸನ್ನಿಯೇ ಹೆಚ್ಚು ಕೆಲಸ ಮಾಡಿದಂತಿದೆ. ವಾಟ್ಸಾಪುಗಳಿಂದ ಮಿಂಚಿನ ವೇಗದಲ್ಲಿ ಸುದ್ದಿಗಳು ಮೂಲೆಮೂಲೆಗೂ ಮುಟ್ಟುತ್ತವೆ. ಸುದ್ದಿಗಳ ಜನಕರು ಯಾವುದೋ ಮೂಲೆಗಳಲ್ಲಿ ವಿಕೃತ ಆನಂದವನ್ನು ಪಡೆಯುತ್ತಿರುತ್ತಾರೆ. ಹೆಚ್ಚಿನ ಸುದ್ದಿಗಳಲ್ಲಿ ಸತ್ಯಾಂಶವೇ ಇರದು. ಚುನಾವಣೆಯ ಸಂದರ್ಭದಲ್ಲಂತೂ ಇಂತಹ ಭರಪೂರ ಮನರಂಜನೆ ಎಲ್ಲರಿಗೂ ಮುಟ್ಟಿತ್ತು. ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಮಾತು, ನಡತೆ ಎಲ್ಲವೂ ಇಲ್ಲಿ ಮಸಾಲೆ ಸೇರಿಸಿ ಹರಿಬಿಡಲಾಗಿತ್ತು. ವೈಯಕ್ತಿಕ ತೇಜೋವಧೆಗಳೂ ನಡೆದವು. ಪ್ರತಿಯೊಬ್ಬನ ಜಾತಕ ಅಲ್ಲಿ ಸಲೀಸಾಗಿ ಸಿಕ್ಕಿತ್ತು. ಆದರೆ ರಾಜಕಾರಣಿಗಳಿಗೆ ಇವೆಲ್ಲವನ್ನೂ ಮೀರಿ ಬೆಳೆಯುವ ಮನೋ ದಾಡ್ಯìವಿರುತ್ತದೆ. ಅದಕ್ಕಿಂತಲೂ ಅವ್ಯಾವುದೂ ಜೀವ ಹಾನಿಗೆ ಕಾರಣವಾಗುವಂತಹ ಪ್ರಯತ್ನವಾಗಿರಲಿಲ್ಲ. 

ನಮ್ಮ ದೇಶದಲ್ಲಿ ಇಂಥ ಸಮೂಹ ಸನ್ನಿಗೆ ಒಳಗಾಗಿದ್ದ ಹಲವಾರು ಘಟನೆಗಳು ಈ ಹಿಂದೆಯೂ ನಡೆದಿವೆ. ಕಳೆದ ವರ್ಷ ಹರ್ಯಾಣ, ದೆಹಲಿಯ ಅನೇಕ ಕಡೆಗಳಲ್ಲಿ ಹೆಣ್ಣು ಮಕ್ಕಳ ಜಡೆ ಕತ್ತರಿಸುವವರ ಆತಂಕ ವೊಂದು ಏಕಾಏಕಿ ಸೃಷ್ಟಿಯಾಗಿತ್ತು. ಗಣೇಶನ ಮೂರ್ತಿಗಳು ಒಮ್ಮಿಂದೊಮ್ಮೆ ಹಾಲು ಕುಡಿಯುವ ಪವಾಡ ಸೃಷ್ಟಿಸಿ ಗಣೇಶ ಮಂದಿರಗಳ ಮುಂದೆ ಭಕ್ತಾದಿಗಳ ಮೈಲುದ್ದದ ಕ್ಯೂ ಕಂಡಿತ್ತು. ಇಂಥವೆಲ್ಲ ನಡೆದಾಗ ಅದರ ದುರುಪಯೋಗ ಮಾಡುವವರ ಸಂಖ್ಯೆಯೂ ಹೆಚ್ಚಿರುವ ಕಾರಣ ಸಾಮಾನ್ಯವಾಗಿ ಜನರು ಕೂಡಾ ಯೋಚಿಸದೇ ಇದರ ಆಕರ್ಷಣೆಗೆ ಒಳಗಾಗುತ್ತಾರೆ. ಬಂದ್‌ಗಳ ವೇಳೆ ಟೈರ್‌ ಸುಟ್ಟು ದೊಂಬಿ ಗಲಾಟೆ ಮಾಡುವುದು, ಬಸ್ಸುಗಳಿಗೆ ಕಲ್ಲು ಎಸೆಯುವುದೂ ಇವೆಲ್ಲ ಗುಂಪಿನಲ್ಲಿ ಧೀರರಾಗುವವರ ಕತೆಗಳು. ಲಾಠಿ ಏಟು ತಿಂದರೂ ಪರವಾಗಿಲ್ಲ, ಕ್ರಿಕೆಟ್‌ ಪಂದ್ಯದ ಟಿಕೆಟ್‌ ಪಡೆಯಲು ನೂಕು ನುಗ್ಗಲ್ಲಿ ಪರದಾಡಿ, ಕೊನೆಗೂ ಕಾಲು ಮುರಿದುಕೊಂಡು ಬರುವುದು. ಡಿಸ್ಕೌಂಟ್‌ ಬೆಲೆಗೆ ಸಿಗುವ ವಸ್ತುವಿಗಾಗಿ ಇಡೀ ದಿನ ಕಾದು ಕುಳಿತುಕೊಳ್ಳುವುದು, ಬಸ್‌ ನಿಲ್ದಾಣಗಳಲ್ಲಿ ಮಲಗಿದವರೆಲ್ಲ ಭಿಕ್ಷುಕರೆಂದು ಅವರನ್ನು ಹಿಡಿದು ಭಿಕ್ಷುಕರ ಕಾಲನಿಗೆ ಸೇರಿಸು ವುದು, ನಿಪ ವೈರಸ್‌ ಹರಡುತ್ತಿದೆ ಎಂದು ಬಾವಲಿಗಳನ್ನು ಕೊಲ್ಲುವುದು ಕೂಡಾ ಸಾಧನೆ ಮಾಡಿದ್ದೇವೆ ಎಂದು ಧೀರರಾಗುವ ಕಥೆಗಳೇ ಆಗಿವೆ! 

ಹಾಗಾದರೆ ಇಂಥ ಘಟನೆಗಳಾದಾಗ ಅವರಿಗೆ ನೇರವಾಗಿ ಸಂಬಂಧವಿಲ್ಲದಿದ್ದರೂ ಗುಂಪಿನಲ್ಲಿ ಬಂದು ಸೇರುವ ಈ ವ್ಯಕ್ತಿಗಳು ಯಾರು? ಅದುವರೆಗೂ ಅವರೆಲ್ಲ ಎಲ್ಲಿ ಇರುತ್ತಾರೆ. ಎಲ್ಲವೂ ಸಹಜವಾಗಿ ನಡೆಯುತ್ತಿದ್ದಾಗ ಇಲ್ಲದ, ಏನೋ ಗಲಾಟೆಯ, ಆತಂಕದ ಕಿಡಿ ಬಿದ್ದಾಗ ಛಕ್ಕನೆ ಬರುವ ಇವರು ಯಾರು? ದುಃಖದ ಸಂಗತಿಯೆಂದರೆ ಇವರಲ್ಲಿ ಹೆಚ್ಚಿನವರು ನಿರುದ್ಯೋಗಿಗಳು. ಆತಂಕ, ಅಸಹನೆಯನ್ನು ಜೀವಿಸುತ್ತಿರುವವರು. ಮನಸ್ಸಿ ನಲ್ಲಿರುವ ಎಲ್ಲ ಸೋಲುಗಳೂ, ಸಿಟ್ಟು, ಅಸಹನೆ ಎಲ್ಲವನ್ನೂ ಯಾವುದೋ ಅವರಿಗೆ ಸಂಬಂಧವಿಲ್ಲದಿರುವ ಘಟನೆಯಲ್ಲಿ ನಿವಾರಿಸಿಕೊಳ್ಳು ವವರು. ಚಾಮರಾಜಪೇಟೆಯ ಘಟನೆಯಲ್ಲಿ ಸಿಕ್ಕಿಬಿದ್ದವರು ಈ ಮಾತನ್ನು ಪುಷ್ಟಿಕರಿಸುತ್ತಾರೆ. ವಿಷಾದವೆಂದರೆ ಹೆಚ್ಚಿನವರು ಇಪ್ಪತ್ತರ ಆಸುಪಾಸಿನವರು. ಕೈಲಾಶ್‌ ಸತ್ಯಾರ್ಥಿ ಯಂಥವರು ಅನಾಥ ಬಡ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಮಾಡಿದಂತೇ ಈ ಯುವಕರಿಗೂ ಯೋಗ್ಯ ಬದುಕಿಗೆ ಅನುಕೂಲ ವಾಗುವ ವ್ಯವಸ್ಥೆಯನ್ನು ಮಾಡಿದರೆ ಮುಂದೆ ಇಂತಹ ಘಟನೆಗಳು ಕಡಿಮೆ ಆಗಬಹುದು. 

ಸಮೂಹ ಸನ್ನಿ ದುರ್ಬಲ ಮನಸ್ಸಿನ ಒಂದು ಕ್ರಿಯೆ. ಮನೋ ವಿಜ್ಞಾನಿಗಳು ಇದರ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಆದರೆ ದುರ್ಬಲ ಮನಸ್ಸು ಸಮಾಜಕ್ಕೆ ಘಾತಕವಾಗುತ್ತಿದ್ದರೆ ಅದಕ್ಕೆ ಸರಿಯಾದ ಮಾರ್ಗದರ್ಶನ ಆಗಬೇಕು. ಮಕ್ಕಳ ಕಳ್ಳರೇ ಇರಲಿ, ಯಾರೇ ಇರಲಿ, ಕಾನೂನನ್ನು ಕೈಗೆತ್ತಿಕೊಳ್ಳುವ ದುಸ್ಸಾಹಸವನ್ನು ಮಾಡಬಾರದು. ಅಂತಹವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸು ವುದೇ ನಮ್ಮ ಮುಂದಿರುವ ಏಕೈಕ ಆಯ್ಕೆ. ಕಾಲೂರಾಮನ ಸಾವು ವಿಷಾದನೀಯ.ಎಷ್ಟೇ ಹೇಳಿದರೂ ವಿದ್ಯಾವಂತ ಜನರೂ ಒಮ್ಮೊಮ್ಮೆ ಇಂಥ ಸುಳ್ಳುಸುದ್ದಿಗಳಿಗೆ, ವಾಟ್ಸಾಪ್‌ ಸುದ್ದಿಗಳಿಗೆ ಬಲಿಯಾಗುವುದು, ಅವುಗಳಿಗೆ ಕಿವಿಯಾಗುವುದು ಅಲ್ಲದೇ ಇತರರಿಗೂ ಅದನ್ನು ಹಬ್ಬಿಸುವ ಚಾಳಿ ಮಾತ್ರ ಬಿಡದಿರುವುದು ದುರ್ದೈವ.

ಶಿವಸುಬ್ರಹ್ಮಣ್ಯ ಕೆ.

Advertisement

Udayavani is now on Telegram. Click here to join our channel and stay updated with the latest news.

Next