Advertisement

ಪೆಟ್ಟಿಗೆ ಒಳಗಡೆ ಏನಿತ್ತು?

06:00 AM Jun 28, 2018 | Team Udayavani |

ಬಹಳ ಕಾಲದ ಹಿಂದೆ ಒಂದು ಹಳ್ಳಿಯಲ್ಲಿ ಒಬ್ಬ ವರ್ತಕನಿದ್ದ. ಅವನ ಬಳಿ ಭೂಮಿ, ಚಿನ್ನಾಭರಣ ಹಾಗೂ ನಗದು ಸೇರಿದಂತೆ ಅಪಾರ ಸಂಪತ್ತಿತ್ತು. ಅವನಿಗೆ ಮೂವರು ಗಂಡು ಮಕ್ಕಳು. ಅವರು ಬೇರೆ ಬೇರೆ ಊರಿನಲ್ಲಿ ವೃತ್ತಿಯಲ್ಲಿದ್ದರು. ಪತ್ನಿ ತೀರಿ ಹೋಗಿದ್ದರಿಂದ ವರ್ತಕ ಒಬ್ಬಂಟಿಯಾಗಿದ್ದನು. ಮಕ್ಕಲು ವರ್ಷಕ್ಕೊಮ್ಮೆ ಮಾತ್ರ ಹಳ್ಳಿಗೆ ಬಂದು ಅಪ್ಪನ ಜೊತೆ ಕೆಲವು ದಿನ ಕಳೆದು ಹೋಗುತ್ತಿದ್ದರು. ವರ್ಷಗಳು ಉರುಳಿದಂತೆ ವರ್ತಕನಿಗೆ ಮುಂಚಿನಂತೆ ಊರೂರು ತಿರುಗಿ ವ್ಯಾಪಾರ ಮಾಡುವುದು ಕಷ್ಟವೆನಿಸಿತು. ಆದ್ದರಿಂದ ತನ್ನ ಉಳಿದ ಜೀವನವನ್ನು ಮಕ್ಕಳ ಮನೆಯಲ್ಲಿ ಕಳೆಯಲು ನಿರ್ಧರಿಸಿ, ತನ್ನ ಆಸ್ತಿಯನ್ನು ಮೂವರು ಮಕ್ಕಳಿಗೂ ಸಮನಾಗಿ ಹಂಚಿದನು. ತಾನು ಪ್ರತಿಯೊಬ್ಬ ಮಗನ ಮನೆಯಲ್ಲೂ ವರ್ಷಕ್ಕೆ ನಾಲ್ಕು ತಿಂಗಳಿನಂತೆ ಇರುತ್ತೇನೆ, ತನ್ನ ಕೊನೇ ಉಸಿರಿರುವವರೆಗೆ ಯಾವುದೇ ಕೊರತೆ‌ಯಾಗದಂತೆ ನೋಡಿಕೊಳ್ಳಬೇಕು ಎಂಬ ಶರತ್ತನ್ನೂ ಹಾಕಿದ್ದನು. 

Advertisement

ಪ್ರಾರಂಭದಲ್ಲಿ ಮಕ್ಕಳು ಮತ್ತು ಸೊಸೆಯಂದಿರು ವರ್ತಕನನ್ನು ಬಹಳ ಪ್ರೀತಿ ವಿಶ್ವಾಸಗಳಿಂದಲೇ ನೋಡಿಕೊಂಡರು. ಆದರೆ ವರ್ಷಗಳು ಉರುಳುತ್ತಿದ್ದಂತೆ ಅವನನ್ನು ಬೇಡದ ಅತಿಥಿಯಂತೆ ಕಾಣತೊಡಗಿದರು. ಹೊಟ್ಟೆ ತುಂಬಾ ಊಟವನ್ನೂ ಹಾಕುತ್ತಿರಲಿಲ್ಲ. ವರ್ತಕನಿಗೆ ಬದುಕೇ ಬೇಸರವೆನಿಸಿತು. ತಾನು ಆತುರಪಟ್ಟು ಆಸ್ತಿಯನ್ನೆಲ್ಲ ಮಕ್ಕಳಿಗೆ ಹಂಚಿ ದೊಡ್ಡ ತಪ್ಪು ಮಾಡಿದೆ ಎಂದುಕೊಂಡ.  

ಹೀಗಿದ್ದಾಗ ಒಮ್ಮೆ ವರ್ತಕನ ಆಪ್ತ ಸ್ನೇಹಿತನೊಬ್ಬ ಅವನನ್ನು ಕಾಣಲು ಬಂದ. ವರ್ತಕ ಅವನಿಗೆ ತನ್ನ ದುಃಸ್ಥಿತಿಯ ಬಗ್ಗೆ ವಿವರಿಸಿ ಕಣ್ಣೀರಿಟ್ಟ. ಸ್ನೇಹಿತ ಅವನಿಗೆ ಒಂದು ಉಪಾಯ ಹೇಳಿಕೊಟ್ಟು ತನ್ನೂರಿಗೆ ಹಿಂದಿರುಗಿದ. ಹಿಂದಿರುಗುವಾಗ ಪೆಟ್ಟಿಗೆಯೊಂದನ್ನು ವರ್ತಕನಿಗೆ ಕೊಟ್ಟು ಹೋದನು. ಅದಕ್ಕೆ ಬಲವಾದ ಬೀಗ ಹಾಕಲಾಗಿತ್ತು. ಅದರಲ್ಲಿ ಏನಿದೆಯೆಂದು ವರ್ತಕನ ಹೊರತಾಗಿ ಯಾರಿಗೂ ಗೊತ್ತಿರಲಿಲ್ಲ. ಸೊಸೆಯಂದಿರೆಲ್ಲರೂ ಸೇರಿ ಪೆಟ್ಟಿಗೆಯಲ್ಲೇನಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದರು. ಆದರೆ ಪ್ರಯತ್ನ ವಿಫ‌ಲವಾಯಿತು. ವರ್ತಕನ ಸ್ನೇಹಿತ ಸಾಲ ಹಿಂದಿರುಗಿಸುವ ಸಲುವಾಗಿ ಪೆಟ್ಟಿಗೆ ತುಂಬಾ ಚಿನ್ನಾಭರಣಗಳನ್ನು ಕೊಟ್ಟು ಹೋಗಿದ್ದಾನೆ ಎಂಬ ಗುಲ್ಲು ಊರೆಲ್ಲಾ ಹರಡಿತು.

ಪೆಟ್ಟಿಗೆ ಮೇಲಿನ ಆಸೆಗಾಗಿ ಮನೆಯವರು ವರ್ತಕನನ್ನು ಚೆನ್ನಾಗಿ ನೋಡಿಕೊಳ್ಳತೊಡಗಿದರು. ವರ್ತಕ ಒಂದು ಕ್ಷಣವೂ ಪೆಟ್ಟಿಗೆ ಬಿಟ್ಟಿರುತ್ತಿರಲಿಲ್ಲ. ರಾತ್ರಿ ಮಲಗುವಾಗಲೂ ಅದನ್ನು ಪಕ್ಕದಲ್ಲೇ ಇಟ್ಟುಕೊಂಡಿರುತ್ತಿದ್ದ. ದೊಡ್ಡ ಮಗನಂತೂ ತನ್ನ ತಂದೆಯನ್ನು ಹಿಂದೆಂದೂ ತೋರದಷ್ಟು ಪ್ರೀತಿಯಿಂದ ನೋಡಿಕೊಂಡನು. ಪ್ರತಿದಿನ ಮಕ್ಕಳು ಪೆಟ್ಟಿಗೆ ಕುರಿತು ಕನಸು ಕಂಡಿದ್ದೇ ಕಂಡಿದ್ದು.

ಒಂದು ದಿನ ವರ್ತಕ ತನ್ನ ಕೊನೆಯ ಮಗನ ಮನೆಯಲ್ಲಿ ಕೊನೆಯುಸಿರೆಳೆದ. ಅದನ್ನೇ ಕಾಯುತ್ತಿದ್ದ ಕಿರಿಯ ಸೊಸೆ ಕೂಡಲೇ ಉಳಿದವರಿಗೆ ಸುದ್ದಿ ತಿಳಿಸಿದಳು. ಮಕ್ಕಳು ತಮ್ಮ ತಂದೆಯ ಅಂತ್ಯ ಸಂಸ್ಕಾರವನ್ನು ಯಾವುದೇ ಲೋಪವಾಗದಂತೆ ನೆರವೇರಿಸಿದರು. ಧಾರಾಳವಾಗಿ ಹಣ ಖರ್ಚು ಮಾಡಿದರು. ಕಾರ್ಯವೆಲ್ಲಾ ಮುಗಿದ ನಂತರ ಮನೆಗೆ ವಾಪಸ್ಸಾಗಿ ಪೆಟ್ಟಿಗೆಯನ್ನು ತೆರೆದರು. ಅವರಿಗೆ ನಿರಾಸೆ ಕಾದಿತ್ತು. ಪೆಟ್ಟಿಗೆ ತುಂಬಾ ಚಿನ್ನದ ನಾಣ್ಯಗಳಿಗೆ ಬದಲಾಗಿ ಜಲ್ಲಿಕಲ್ಲುಗಳಿದ್ದವು. ಜೊತೆಗೆ ಒಂದು ಪತ್ರವೂ ಇತ್ತು. ಅದರಲ್ಲಿ “ನಿಮ್ಮಷ್ಟು ದುರಾಶೆಯುಳ್ಳವರಿಗೆ ನಾನು ಬಿಟ್ಟು ಹೋಗುತ್ತಿರುವ ಸಂಪತ್ತು ಇದೇ’ ಎಂದು ಬರೆದಿತ್ತು.   

Advertisement

ಪದ್ಮಜಾ ಸುಂದರೇಶ್‌, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next