Advertisement

ಟೈಮ್ ಲೈನ್; 1528ರಲ್ಲಿ ಬಾಬರಿ ಮಸೀದಿ ಸ್ಥಾಪನೆಯಿಂದ ಇಂದಿನ ವರೆಗೆ ಏನೇನಾಯಿತು?

11:09 AM Oct 17, 2019 | sudhir |

ಮಣಿಪಾಲ: ಅಯೋಧ್ಯೆ ಭೂಮಿಯ ತಗಾದೆ ಬ್ರಿಟಿಷ್‌ ಆಡಳಿತದ ಕಾಲದಿಂದ ಬಳುವಳಿಯಾಗಿ ಬಂದಿದೆ. ರಾಜರ ಆಡಳಿತದ ಕಾಲದಲ್ಲಿ ಹುಟ್ಟಿಕೊಂಡ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ವಿಫ‌ಲವಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಂಗದ ಮೊರೆ ಹೋಗುವ ನಿರ್ಧಾರ ಕೈಗೊಂಡರೂ ಅಲ್ಲೂ ಇತ್ಯರ್ಥ ಕಾಣದೇ ಮತ್ತೆ ಕೋರ್ಟ್‌ ಕಟಕಟೆಯ ಹೊರಗೆ ಸಂಧಾನ ನಡೆಸಲು ವೇದಿಕೆಯೊಂದು ಸಿದ್ಧವಾಗಿತ್ತು. ಆದರೆ ಕೊನೆಯಲ್ಲಿ ನಡೆದ ಸಂಧಾನವೂ ವಿಫ‌ಲವಾಗಿತ್ತು. ಬಳಿಕ ಸುಪ್ರೀಂ ಕೋರ್ಟ್‌ ತ್ವರಿತ ವಿಚಾರಣೆಯ ಮೂಲಕ ಪ್ರಕರಣದ ಅಂತಿಮ ವಿಚಾರಣೆ ಮುಕ್ತಾಯಗೊಂಡಿದೆ. ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೋಗೊಯಿ ನಿವೃತ್ತಿಗೂ ಮುನ್ನ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

Advertisement

ಅಯೋಧ್ಯೆ ವಿವಾದಿತ ಸ್ಥಳವಾಗಿ ಬದಲಾದ ಪರಿ ಹೇಗೆ? ಇಲ್ಲಿದೆ ಓದಿ…

1528: ಮೊಘಲ್‌ ದೊರೆ ಬಾಬರ್‌ ತನ್ನ ಆಡಳಿತದ ಅವಧಿಯಲ್ಲಿ ಅಯೋಧ್ಯೆ ಭೂಮಿಯಲ್ಲಿ ಬಾಬರಿ ಮಸೀದಿ ನಿರ್ಮಾಣ.

1611: ಅಯೋಧ್ಯೆಯಲ್ಲಿ ಶ್ರೀರಾಮ ನಿರ್ಮಿಸಿದ ಕೋಟೆ, ಸ್ಮಾರಕಗಳನ್ನು ನೋಡಿದ್ದೇನೆ ಎಂದು ಉಲ್ಲೇಖಿಸಿದ ಬ್ರಿಟಿಷ್‌ ವ್ಯಾಪಾರಿ ವಿಲಿಯಂ ಫಿಂಚ್‌.

1717: ರಾಜಪೂತ್‌ ದೊರೆ 2ನೇ ಜೈ ಸಿಂಗ್‌ನಿಂದ ಮಸೀದಿ ಇದ್ದ ಜಾಗದ ಖರೀದಿ. ಮಸೀದಿಯೊಳಗೆ ಇದ್ದ ರಾಮನ ವಿಗ್ರಹವನ್ನು ಹೊರಗೆ ತಂದು ಪೂಜಿಸುತ್ತಿತ್ತದ್ದ ಹಿಂದೂಗಳು.

Advertisement

1768: ಕ್ರಿಶ್ಚಿಯನ್‌ ಪಾದ್ರಿ ಜೋಸೆಫ್ ಟಿಫೆಂತಾಲರ್‌ ಮಸೀದಿ ನಿರ್ಮಾಣವನ್ನು ನೋಡಿದ್ದೇನೆ. ಬಾಬರ್‌ ಅಲ್ಲ ಔರಂಗಜೇಬ್‌ ನಿರ್ಮಿಸಿದ್ದಾನೆ ಎಂಬ ಹೇಳಿಕೆ.

1853: ಅಯೋಧ್ಯೆ ವಿವಾದಿತ ಸ್ಥಳದ ಕುರಿತಂತೆ ಮೊದಲ ಹಿಂಸಾಚಾರ. ಬ್ರಿಟಿಷರ ಆಡಳಿತದ ಅವಧಿಯಲ್ಲೇ ಬಾಬರ್‌ ಮಸೀದಿಯ ಮೇಲೆ ಹಿಂದೂಗಳ ಆಕ್ರೋಶ.

1859: ಆಯೋಧ್ಯೆ ವಿವಾದಕ್ಕೊಳಗಾಗುತ್ತಿರುವುದನ್ನು ಕಂಡ ಬ್ರಿಟಿಷ್‌ ಸರಕಾರ ಸ್ಥಳದಲ್ಲಿ 2 ಭಾಗ ಮಾಡಿ ಹಿಂದೂಗಳಿಗೆ ಹಾಗೂ ಮುಸ್ಲಿಂಮರಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು. 90 ವರ್ಷಗಳ ಕಾಲ ಇದು ಸ್ಥಿರವಾಗಿತ್ತು.

1949: ಡಿಸೆಂಬರ್‌ನಲ್ಲಿ ವಿವಾದಿತ ಕಟ್ಟಡದಲ್ಲಿ ಭಗವಾನ್‌ ಶ್ರೀರಾಮಚಂದ್ರನ ಮೂರ್ತಿಯನ್ನು ಪ್ರತಿಷ್ಠಾಪನೆ. ಕೋರ್ಟ್‌ನಲ್ಲಿ ಹಿಂದೂಗಳು ಹಾಗೂ ಮುಸ್ಲಿಂ ನಾಯಕರ ದಾವೆ. ಅಯೋಧ್ಯೆಯನ್ನು ವಿವಾದಿತ ಭೂಮಿ ಎಂದು ಘೋಷಿಸಿದ ಕೋರ್ಟ್‌.

1959: ಡಿ. 17ರಂದು ನಿರ್ಮೋಹಿ ಅಖಾಡದಿಂದ ವಿವಾದಿತ ಸ್ಥಳದ ಒಡೆತನದ ಕುರಿತ ಪ್ರಕರಣ ದಾಖಲು.

1961: ವಿವಾದಿತ ಜಾಗ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು. ರಾಮನ ಮೂರ್ತಿ ಪ್ರತಿಷ್ಠಾಪಿಸಿದ್ದು ತಪ್ಪು ಎಂದು ಡಿ. 18ರಂದು ಕೋರ್ಟ್‌ ಮೊರೆ ಹೋದ ಸುನ್ನಿ ವಕ್ಫ್ ಬೋರ್ಡ್‌.

1984: ವಿಶ್ವ ಹಿಂದೂ ಪರಿಷತ್‌ ವತಿಯಿಂದ ವಿವಾದಿತ ಭೂಮಿಯಲ್ಲಿ ರಾಮ ಮಂದಿರ ಕಟ್ಟುವ ಅಭಿಯಾನ ಆರಂಭ.

1986: ಗಾಝಿಯಾಬಾದ್‌ನ ಜಿಲ್ಲಾ ನ್ಯಾಯಾಲಯ ಅಯೋಧ್ಯೆಯ ಕಟ್ಟಡದ ಗೇಟ್‌ ಬಾಗಿಲು ತೆರೆಯಲು ಸೂಚನೆ. ಜತೆಗೆ ಕಟ್ಟದ ಒಳಗೆ ಶ್ರೀರಾಮನನ್ನು ಪೂಜಿಸಲು ಅನುಮತಿ. ಇದಕ್ಕೆ ಮುಸ್ಲಿಂ ಸಂಘಟನೆಗಳ ತೀವ್ರ ಆಕ್ಷೇಪ, ಬಾಬರಿ ಮಸೀದಿ ಆ್ಯಕ್ಷನ್‌ ಕಮಿಟಿ ರಚನೆ.

1989: ವಿವಾದಿತ ಪ್ರದೇಶದ ಹೊರಗೆ ರಾಮ ಮಂದಿರ ಸ್ಥಾಪನೆಗೆ ಅನುಮತಿ ನೀಡಿದ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ. ನವೆಂಬರ್‌ 9ರಂದು ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದ ವಿಶ್ವ ಹಿಂದೂ ಪರಿಷತ್‌.

1990: ಸೆ. 25ರಂದು ಬಿಜೆಪಿ ನೇತಾರ ಲಾಲ್‌ ಕೃಷ್ಣ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆಯ ವರೆಗೆ ರಥಯಾತ್ರೆ ಆರಂಭ. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರಿಂದ ಯಾತ್ರೆಗೆ ಅನುಮತಿ. ಬಿಹಾರದ ಸಮಷ್ಟಿಪುರದಲ್ಲಿ ಅಡ್ವಾಣಿ ಬಂಧನ.

1992: ಡಿ. 6ರಂದು ಹಿಂದೂ ಕರಸೇವಕರಿಂದ ವಿವಾದಿತ ಬಾಬರಿ ಮಸೀದಿ ಧ್ವಂಸ.

1993: 3 ತಿಂಗಳ ಬಳಿಕ ಲಿಬರ್ಹಾನ್‌ ಆಯೋಗದಿಂದ ಮಸೀದಿ ಕೆಡವಲಾದ ವಿಚಾರದ ಕುರಿತು ತನಿಖೆ ಪಾರಂಭ.

2002: ಹೈಕೋರ್ಟ್‌ನ ತ್ರಿ ಸದಸ್ಯ ಪೀಠದಿಂದ ವಿವಾದಿತ ಭೂಮಿಯ ಒಡೆತನಕ್ಕಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆ. ಜಾಗದ ಮೂಲವನ್ನು ಅರಿಯುವ ಸಲುವಾಗಿ ಭಾರತೀಯ ಪುರಾತತ್ವ ಇಲಾಖೆಯಿಂದ ಜಾಗದ ಉತ್ಖನನ.

2003: ಭಾರತೀಯ ಪುರಾತತ್ವ ಇಲಾಖೆ ಮಸೀದಿ ನಿರ್ಮಿಸಿದ್ದ ಜಾಗದ ಅಡಿಯಲ್ಲಿ ದೇವಸ್ಥಾನ ಇದ್ದ ಕುರಿತು ಸ್ಪಷ್ಟತೆ.

2009: ಲಿಬರ್ಹಾನ್‌ ಸಮಿತಿಯಿಂದ ಲಕ್ನೋ ಕೋರ್ಟ್‌ಗೆ ಗೌಪ್ಯ ವರದಿ ಸಲ್ಲಿಕೆ.

2010: ಜುಲೈ. 26ರಂದು ತನ್ನ ತೀರ್ಪನ್ನು ಕಾಯ್ದಿರಿಸಿದ ಲಕ್ನೋ ಹೈಕೋರ್ಟ್‌. ಸಮಸ್ಯೆಯ ಇತ್ಯರ್ಥಕ್ಕಾಗಿ ಸರ್ವ ಪಕ್ಷದ ಅಭಿಪ್ರಾಯ ಸಂಗ್ರಹ. ಹೈ ಕೋರ್ಟ್‌ ವಿವಾದಿತ ಭೂಮಿಯನ್ನು 3 ಪಾಲು ಮಾಡಿ ಆದೇಶ. ಸುಪ್ರಿಂ ಕೋಟ್‌ ಮೆಟ್ಟಿಲೇರಿದ ಪ್ರಕರಣ.

2011: ಬಾಬರಿ ಮಸೀದಿ ಧ್ವಂಸ ಪ್ರಕರಣ ಅಡ್ವಾಣಿ ಹಾಗೂ ಇತರರ ಮೇಲೆ ಕ್ರಮಕ್ಕೆ ತೀರ್ಪು.

2015: ಸುಪ್ರಿಂ ಕೋರ್ಟ್‌ನಿಂದ ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ, ಮುರಳೀ ಮನೋಹರ ಜೋಷಿ ಅವರಿಗೆ ನೋಟಿಸ್‌.

2017: ಈ ಪ್ರಕರಣ ಅತ್ಯಂತ ಸೂಕ್ಷವಾಗಿದ್ದು, ನ್ಯಾಯಾಲಯದ ಹೊರಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಎಂದು ಹೇಳಿದ ಕೋರ್ಟ್‌. ಲಾಲ್‌ಕೃಷ್ಣ ಅಡ್ವಾಣಿ, ಮುರಳೀ ಮನೋಹರ ಜೋಷಿ, ಉಮಾ ಭಾರತಿ ಹಾಗೂ ವಿನಯ್‌ ಕಠಿಯಾರ್‌ ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲು.

2018: ಹಿರಿಯ ವಕೀಲ ರಾಜೀವ್‌ ಧವನ್‌ ನಿತ್ಯ ವಿಚಾರಣೆ ನಡೆಸುವ ಮೂಲಕ ಪ್ರಕರಣ ಕೊನೆಗೊಳಿಸಲು ಕೋರ್ಟ್‌ಗೆ ಮನವಿ. ಸೆ. 27ರಂದು ಮನವಿ ತಿರಸ್ಕರಿಸಿ, ವಿಚಾರಣೆ ನಡೆಯುವ ದಿನಾಂಕ ಪ್ರಕಟಿಸಿದ ಕೋರ್ಟ್‌.

2019: ದಶಕಗಳ ಹಳೆಯ ಪ್ರಕರಣವನ್ನು ಇತ್ಯರ್ಥಗೊಳಿಸಲು ನಿವೃತ್ತ ನ್ಯಾಯಮೂರ್ತಿ ಕಲೀಫುಲ್ಲಾ, ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌ ಮತ್ತು ಖ್ಯಾತ ಮಧ್ಯಸ್ಥಿಕೆದಾರ, ಹಿರಿಯ ವಕೀಲ ಶ್ರೀರಾಮ್‌ ಪಂಚ ಸಮಿತಿಯ ಮೂರು ಸದಸ್ಯರ ಮಧ್ಯಸ್ಥಿಕೆ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್‌. ಸ್ಪಷ್ಟ ನಿರ್ಧಾರಕ್ಕೆ ಬಾರದೇ ಸಂಧಾನ ವಿಫ‌ಲ.

2019: ಸಂಧಾನ ವಿಫ‌ಲಗೊಂಡ ಕಾರಣ ಅಗಸ್ಟ್‌ 6ರ ಬಳಿಕ ನಿತ್ಯ ಅಯೋಧ್ಯೆ ಪ್ರಕರಣವನ್ನು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ. ಅಕ್ಟೋಬರ್‌ 16ರಂದು ವಿಚಾರಣೆ ಮುಕ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next