Advertisement

‘ಟ್ವೀಟರ್‌’ನಲ್ಲಿ ಮಿಶ್ರ ಪ್ರತಿಕ್ರಿಯೆ

09:23 AM Sep 12, 2019 | Team Udayavani |

ಮೋದಿ ಶತದಿನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲೂ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆಂದು ಎಲ್ಲರೂ ಸ್ವೀಟು ಕೊಟ್ಟು ಸಂಭ್ರಮಿಸಿಲ್ಲ, ಟೀಕೆಯ ಕಹಿಯನ್ನೂ ಉಣಿಸಿದ್ದಾರೆ. ಶೂನ್ಯ ಸಂಪಾದನೆಯೆಂದು ವ್ಯಾಖ್ಯಾನಿಸಿರುವುದೂ ಇದೆ.

Advertisement

— ಕಾರ್ತಿಕ್‌ ಆಮೈ

ಮೋದಿ ಸರಕಾರ ದ ನೂರು ದಿನಗಳಿಗೆ ಟ್ವೀಟರ್‌ನಲ್ಲಿ ಸಿಕ್ಕಿರುವುದು ಮಿಶ್ರ ಪ್ರತಿಕ್ರಿಯೆ. ಕೆಲವರು ಪರವಾಗಿಲ್ಲರೀ ಎಂದಿದ್ದರೆ, ಇನ್ನು ಕೆಲವರು ಏನು ಪರವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ ಎನ್ನುವುದೇ ಸರಿ.

ಈ ಕುರಿತು ವಿವಿಧ ಸಾಮಾಜಿಕ ಜಾಲ ತಾಣಗಳಲ್ಲೂ ಸಾಕಷ್ಟು ಚರ್ಚೆ ನಡೆದಿದೆ. ಇನ್ನೂ ಒಂದು ಮಾತಿನಲ್ಲಿ ಹೇಳುವುದಾದರೆ ಸಾಕಷ್ಟು ನೀರು ಹರಿದಿದೆ ಗಂಗೆಯಲ್ಲಿ ಹರಿದಂತೆಯೇ. ಪ್ರಮುಖವಾಗಿ ಟ್ವೀಟರ್‌ ನಲ್ಲಿ #MODIfied100 ಎಂಬ ಹ್ಯಾಶ್‌ಟ್ಯಾಗ್‌ಮೂಲಕ ಪರವಾದ ಅಭಿಪ್ರಾಯ ವ್ಯಕ್ತವಾಗಿವೆ. #100DaysNoVikas ಎಂದು ವಿಪಕ್ಷಗಳು ಮೋದಿ ಸರಕಾರವನ್ನು ಕುಟುಕಿದ್ದು ಗುಟ್ಟಾಗಿ ಉಳಿದಿಲ್ಲ.

ಸರಕಾರದ ಪರ
ಆರ್ಟಿಕಲ್‌ 370ರದ್ದು, ತ್ರಿವಳಿ ತಲಾಖ್‌, ಭಯೋತ್ಪಾದನೆ ವಿರೋಧಿ ಕ್ರಮ, ರೈತರಿಗೆ ಕಲ್ಯಾಣ ಕಾರ್ಯಕ್ರಮ ಮೊದಲಾದ ಕಾರ್ಯಕ್ರಮಗಳಿಗೆ ಪರವಾಗಿಲ್ಲ ಎನ್ನುವ ಅಭಿಪ್ರಾಯ ದೊರೆತಿದೆ. ಪಾಕಿಸ್ಥಾನದ ಹಲವು ಪ್ರಯತ್ನಗಳಿಗೆ ಸರಕಾರ ಕೊಟ್ಟ ಪ್ರತ್ಯುತ್ತರಕ್ಕೆ ಶಹಭಾಷ್‌ ಗಿರಿ ದೊರೆತಿದೆ. ಇದು ಸಹಜವಾಗಿ ಸರಕಾರದ ಸಾಧನೆಯ ಅಂಶಗಳಲ್ಲಿ ಗುರುತಿಸಿಕೊಂಡಿವೆ.

Advertisement

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಸರಕಾರ ಕೈಗೊಂಡ ಉಪಕ್ರಮಗಳೂ ಜಾಣ ನಡೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಕಾಶ್ಮೀರಕ್ಕೆ ಹಂತ ಹಂತವಾಗಿ ಸೇನೆಯನ್ನು ಕಳುಹಿಸಿ ಸಂಭವನೀಯ ಆಕ್ರೋಶವನ್ನು ಕಡಿಮೆಗೊಳಿಸುವ ಪ್ರಯತ್ವವನ್ನು ಕೆಲವರು ರಾಜಕೀಯ ತಂತ್ರಗಾರಿಕೆ ಎಂದಿದ್ದಾರೆ.

ಕಳೆದ ಅವಧಿಯಲ್ಲಿ ಜಿಎಸ್‌ಟಿ ಸೇರಿದಂತೆ ಹಲವು ಪ್ರಮುಕ ವಿಧೇಯಕಗಳ ಅನುಮೋದನೆಗೆ ರಾಜ್ಯಸಭೆ ತೊಡಕಾಗುತ್ತಿತ್ತು. ಲೋಕಸಭೆಯಲ್ಲಿ ಬಹುಮತ ಇದ್ದ ಕಾರಣ ಇಲ್ಲಿ ಚರ್ಚೆಗೊಂಡು ಅನುಮೋದನೆ ಪಡೆದರೂ ಮೇಲ್ಮನೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಸೋಲುತ್ತಿದ್ದವು. ಈ ಬಾರಿ ಸರಕಾರ ರಾಜ್ಯಸಭೆಯಲ್ಲಿ ತನ್ನ ಪರವಾಗಿ ಹೆಚ್ಚ ಮತ ಬೀಳುವಂತೆ ನೋಡಿಕೊಂಡು, ಕೆಲವು ವಿಧೇಯಕಗಳಿಗೆ ಕೆಲವು ವಿಪಕ್ಷಗಳ ಸದಸ್ಯರ ಒಮ್ಮತ ಪಡೆಯುವಲ್ಲಿಯೂ ಸಫಲವಾಯಿತು.

ಇದು ಅಮಿತ್‌ ಶಾ ಅವರ ಜಿಪುಣ ನಡೆ ಎಂಬ ವ್ಯಾಖ್ಯಾನ ಟ್ವೀಟಿಗರದ್ದು. ಇಂಧನ ಚಾಲಿತ ವಾಹನಗಳ ಬದಲಾಗಿ ಎಲೆಕ್ಟ್ರಿಕ್‌ ವಾಹನಗಳನ್ನು ಉತ್ತೇಜಿಸಿದ ಸರಕಾರದ ನಿರ್ಧಾರ, ವಿದೇಶಾಂಗ ನೀತಿ, ಮಧ್ಯಮ ವ್ಯಾಪಾರಸ್ಥರ ಜೀವನ ಉತ್ತೇಜಿಸುವ ನಿರ್ಧಾರ, ಜಲ್‌ ಶಕ್ತಿ ಮಂತ್ರಾಲಯ, 75 ಸರಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ನಿರ್ಣಯ, ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ, 4.5 ಲಕ್ಷ ವೈಫೈ ಹಾಟ್‌ಸ್ಪಾಟ್‌ಗಳಿಗ ಅವಕಾಶ ಇತ್ಯಾದಿ ನಿರ್ಣಯಗಳಿಗೆ ಪ್ರಶಂಸೆ ವ್ಯಕ್ತವಾಗಿದೆ.

 

ಟೀಕೆಯೂ ಕಡಿಮೆ ಇಲ್ಲ
ಹಾಗೆಂದು ವಿಪಕ್ಷಗಳೇನು ಸುಮ್ಮನೆ ಕುಳಿತುಕೊಳ್ಳಲಿಲ್ಲ. ವ್ಯಂಗ್ಯದ ಶುಭಾಶಯ ಕೋರಿ ಸರಕಾರದ ಕಾಲೆಳೆದಿವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು “ಯಾವುದೇ ವಿಕಾಸ ಇಲ್ಲದ 100 ದಿನ’ ಎಂದು ವ್ಯಾಖ್ಯಾನಿಸಿ ಸರಕಾರದ್ದು ಶೂನ್ಯ ಸಂಪಾದನೆ ಎಂದು ಹೇಳಿದರು. #100DaysNoVikas ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಕೇಂದ್ರದ ಕೆಲವು ನಡೆಗಳನ್ನು ಕಟುವಾಗಿ ಟೀಕಿಸಲಾಯಿತು.

ಅವುಗಳಲ್ಲಿ ಪ್ರಮುಖವಾಗಿ 370ನೇ ವಿಧಿಯನ್ನು ರದ್ದು ಮಾಡುವ ಸಂದರ್ಭ ಕೈಗೊಳ್ಳಲಾದ ಕೆಲವು ತೀರ್ಮಾನಗಳು ಪ್ರಜಾಪ್ರಭುತ್ವವನ್ನು ಅಪಾಯದಲ್ಲಿರಿಸಿವೆ ಎಂದೂ ಅಭಿಪ್ರಾಯಿಸಲಾಯಿತು. 370ನೇ ವಿಧಿಯನ್ನು ಹಿಂಪಡೆದ ಬಳಿಕ ಅಲ್ಲಿ ತುರ್ತು ಪರಿಸ್ಥಿತಿಯ ಕರಾಳತೆಯ ದರ್ಶನವಾಗುತ್ತಿದೆ. ನಾಯಕರನ್ನು ಬಂಧಿಸಿ, ಮೊಬೈಲ್‌ ನೆಟ್‌ ವರ್ಕ್‌, ಇಂಟರ್‌ನೆಟ್‌ ಸೇರದಂತೆ ಸಂಪರ್ಕ ವ್ಯವಸ್ಥೆಯನ್ನೇ ಸ್ಥಗಿತಗೊಳಿಸಲಾಗಿದೆ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಲಾಗಿತ್ತು.

ದೇಶದಲ್ಲಿ ಕುಸಿಯುತ್ತಿರುವ ಜಿಡಿಪಿಯ ಕುರಿತೂ ಕಳವಳ ವ್ಯಕ್ತವಾಗಿತ್ತು. ಮೋದಿ ಸರಕಾರದ ಕೆಟ್ಟ ನಿರ್ಧಾರವೇ ಇದಕ್ಕೆ ಕಾರಣ ಎಂಬುದು ವಿಪಕ್ಷಗಳ ಟೀಕೆ. ಇನ್ನು ರೂಪಾಯಿಯ ಅಧಃ ಪತನ, ನಿರುದ್ಯೋಗ ಸಮಸ್ಯೆ, ಬ್ಯಾಂಕ್‌ ವಂಚನೆ, ಅಟೋ ಮೊಬೈಲ್‌ ಕ್ಷೇತ್ರದ ಹಿನ್ನಡೆಗೆ ಕೇಂದ್ರದ ನಿರ್ಧಾರಗಳು ಕಾರಣ ಎಂಬುದು ವಿಪಕ್ಷಗಳ ಟೀಕೆ.

ಹಲವು ಕ್ಷೇತ್ರಗಳಲ್ಲಿ ಕಂಡ ವೈಫ‌ಲ್ಯವೇ ಬಿಜೆಪಿ ನೇತೃತ್ವದ ಎನ್‌.ಡಿ.ಎ. ಸರಕಾರ ಸಾಧನೆ ಎಂಬುದು ವಿಪಕ್ಷಗಳ ಪಡಸಾಲೆಯಿಂದ ತೂರಿಬರುತ್ತಿರುವ ಟೀಕಾಸ್ತ್ರ. ದೇಶದ ಆರ್ಥಿಕ ಮಂದಗತಿಯ ಕುರಿತಾಗಿ ಮಾಜಿ ಪ್ರಧಾನಿ, ಹಿರಿಯ ಅರ್ಥಶಾಸ್ತ್ರಜ್ಞ ಡಾ| ಮನಮೋಹನ್‌ ಸಿಂಗ್‌ ಅವರ ಸಲಹೆಯನ್ನು ಉಲ್ಲೇಖಿಸಿ ಮೋದಿ ಸರಕಾರದ ಕಾಲೆಳೆದಿದ್ದಾರೆ ಕೆಲವರು.

ರಾಜ್ಯಕ್ಕೆ ಭಾರದ ಮೋದಿ
ರಾಜ್ಯ ಈವರೆಗೆ ಕಂಡು ಕೇಳರಿಯದ ಪ್ರವಾಹಕ್ಕೆ ಬಲಿಯಾಗಿದ್ದು, ಕೇಂದ್ರ ಸರಕಾರ ಇನ್ನೂ ಪರಿಹಾರ ನೀಡಲಿಲ್ಲ. ದೇಶದ ಇತರೆಡೆಗಳಿಗೆ ಮೋದಿ ತೆರಳಿದ್ದರೂ ರಾಜ್ಯಕ್ಕೆ ಬಾರದಿರುವುದಕ್ಕೂ ಕೆಲವರ ತೀವ್ರ ಆಕ್ರೋಶ ಇದೆ. 100 ದಿನಗಳಲ್ಲಿ ಒಮ್ಮೆಯೂ ರಾಜ್ಯಕ್ಕೆ ಮೋದಿ ಬರಲಿಲ್ಲ. ಚುನಾವಣೆ ಪ್ರಚಾರಕ್ಕೆ ದಿನಕ್ಕೆರಡು ಬಾರಿ ಬಂದು ಹೋಗುತ್ತಿದ್ದ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಬದಲಾಗಿದ್ದಾರೆ ಎಂಬ ಟೀಕೆಯೂ ಕನ್ನಡಿಗರಿಂದ ವ್ಯಕ್ತವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next