Advertisement

ಆರ್ಥಿಕ ಹಿಂಜರಿತಕ್ಕೆ ಹಿತ್ತಲ ಗಿಡ ಮದ್ದಾಗಬಹುದಲ್ಲ !

04:12 PM Sep 12, 2019 | Nagendra Trasi |

ಇದು ನೂರು ದಿನಗಳ ಸಾಧನೆಯ ಬಗೆಗಲ್ಲ. ಆದರೆ ಕೆಲವು ಮಹತ್ವದ ತೀರ್ಮಾನದ ಸಂಭ್ರಮಕ್ಕೆ ಬಿದ್ದ ಕಪ್ಪುಚುಕ್ಕೆ ಅಳಿಯಬಹುದೇ ಎಂಬುದರ ಬಗೆಗಿನದು. ಆರ್ಥಿಕ ಹಿಂಜರಿತ ಇಡೀ ದೇಶವನ್ನು ಬಾಧಿಸುತ್ತಿರುವಾಗ, ಅದರಿಂದ ಹೊರಬರುವ ಬಗೆ ಕುರಿತು ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕೆಲವು ಉಪಕ್ರಮಗಳನ್ನು ಪ್ರಕಟಿಸಿದೆ. ಅವುಗಳು ಪರಿಹಾರ ಕೊಡಬಹುದು. ಇಲ್ಲಿ ಚರ್ಚಿಸಿರುವುದು ಮೂಲ ಮಂತ್ರದ ಬಗ್ಗೆ, ಹಿತ್ತಲು ಗಿಡವನ್ನು ಮದ್ದಾಗಿ ಬಳಸುವುದು ಹೇಗೆ ಎಂಬುದರ ಬಗ್ಗೆ

Advertisement

*ರಾಜೇಶ್‌ ಮೂಲ್ಕಿ

ಮೋದಿಯವರ ಎರಡನೇ ಅವಧಿಯ ಆರಂಭದಲ್ಲೇ ಮಗ್ಗುಲ ಮುಳ್ಳಾಗಿ ಕಾಡ ತೊಡಗಿರುವುದು ಆರ್ಥಿಕ ಹಿಂಜರಿತ. ಇದು ಜಗತ್ತಿನಾದ್ಯಂತ ಕಾಣುವ ಸಮಸ್ಯೆಯಾದರೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯೂ ಇದೆ.

ಯಾವುದೇ ಒಂದು ಸಮಸ್ಯೆಯ ಮೂಲ ಕಾರಣ ಏನು ಎಂದು ತಿಳಿಯುವುದು ಎಷ್ಟು ಮುಖ್ಯವೋ, ಅದರ ಸಂಭಾವ್ಯ ಪರಿಣಾಮಗಳನ್ನು ಮೊದಲೇ ಗ್ರಹಿಸಿ ಸಂಭಾವ್ಯ ಪರಿಹಾರಕ್ಕೆ ತೊಡಗುವುದೂ ಅಷ್ಟೇ ಮುಖ್ಯ. ಆರ್ಥಿಕ ಹಿಂಜರಿತ ಇದೇ ಮೊದಲ ಬಾರಿಯಲ್ಲ. 2008-09ರಲ್ಲಿ ಜಗತ್ತಿನ ಹಿರಿಯಣ್ಣ ಎನಿಸಿಕೊಂಡಿದ್ದ ಅಮೆರಿಕ ಕೂಡ ಇದೇ ಸಮಸ್ಯೆಯಿಂದ ತತ್ತರಿಸಿತ್ತು. ಆದರೆ ಭಾರತ ಅಂದು ಕೂಡ ಬೇರೆಯವರು ಎನಿಸಿದಷ್ಟು ಗಂಭೀರ ಸಮಸ್ಯೆ ಎದುರಿಸಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಸ್ಥಳೀಯ “ಕಿರು ಆರ್ಥಿಕತೆ’.

ಜನರ -ಶಕ್ತಿ-ವೃದ್ಧಿ

Advertisement

ಆರ್ಥಿಕ ಹಿಂಜರಿತದ ಸಮಯದಲ್ಲಿ ಮುಖ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಜನಸಾಮಾನ್ಯರ ಆರ್ಥಿಕ ಶಕ್ತಿ ಕುಂಠಿತಗೊಳ್ಳುವುದು. ಇದು ಒಟ್ಟಾರೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೊಳ್ಳುವಿಕೆಯ ಸಾಮರ್ಥ್ಯ ಕುಸಿಯುವುದರೊಂದಿಗೆ ಇಡೀ ಆರ್ಥಿಕತೆಯೇ ಕುಸಿಯಲು ಕಾರಣವಾಗುತ್ತದೆ.

ಇಕಾನಾಮಿಕ್ಸ್‌ನ ಮೂಲ ಮಂತ್ರವೇ ಜನರ ಕೈಯಲ್ಲಿ ಕಾಸು ಓಡಾಡಬೇಕು ಎಂಬುದು. ಇಂಥ ಸಮಸ್ಯೆಯನ್ನು ನಿವಾರಿಸಲು ಇಕಾನಾಮಿಕ್ಸ್‌ನಲ್ಲಿ ಅತ್ಯಂತ ಜನಪ್ರಿಯವಾದ ಸಿದ್ಧ ತಂತ್ರಗಾರಿಕೆಯೊಂದಿದೆ, ಅದೆಂದರೆ “ಓರ್ವನಿಗೆ ಗುಂಡಿಯನ್ನು ತೋಡುವ ಕೆಲಸ ಕೊಡಿ. ಮತ್ತೋರ್ವನಿಗೆ ಅದನ್ನು ಮುಚ್ಚುವ ಕೆಲಸ ಕೊಡಿ’ ಎಂಬುದಾಗಿ. ಮೇಲ್ನೋಟಕ್ಕೆ ಇದೊಂದು ತಮಾಷೆ ಎನಿಸಬಹುದು. ಆದರೆ ಇದನ್ನು ಜಾರಿಗೊಳಿಸಿದ ಬಳಿಕವೇ ಅದರ ಫ‌ಲಿತಾಂಶ ಗೊತ್ತಾಗಿದ್ದು, ಕೆಲಸವೇ ಇಲ್ಲದ ಜನರಿಗೆ ಏನಾದರೂ ಕೆಲಸ ಕೊಟ್ಟ ಕೂಡಲೇ ಆತನ ದೈನಂದಿನ ಜೀವನ ಮಟ್ಟ ಸುಧಾರಿಸುತ್ತದೆ.

ಪೇಟೆಯಲ್ಲಿ ಕಾಸು ಓಡಾಡತೊಡಗುತ್ತದೆ. ಈಗಂತೂ ಇದನ್ನು ಭಾರತದಲ್ಲಿ ಇನ್ನೂ ಉತ್ತಮವಾಗಿ ಮಾಡಲು ಸಾಧ್ಯವಿದೆ. ನರೇಗಾ ಯೋಜನೆಯಡಿ ಹೆಚ್ಚು ದಿನಗಳ ಕೆಲಸ ಸಿಗುವಂತೆ ಮಾಡಿದರೆ ಕೋಟ್ಯಂತರ ಜನರ ಆದಾಯ ವೃದ್ಧಿಯಾಗುವುದರಲ್ಲಿ ಸಂಶಯವೇ ಇಲ್ಲ. ಅವಶ್ಯವಿದ್ದ ಸಂದರ್ಭಗಳಲ್ಲಿ ಇದರ ನೀತಿ ನಿಯಮಗಳಲ್ಲಿ ಅಲ್ಪ ಸಡಿಲು ಮಾಡಿದರಾಯಿತು. ಗುಡಿ ಕೈಗಾರಿಕೆಗಳಿಗೆ ಉತ್ತೇಜನ

ಐದು ಟ್ರಿಲಿಯನ್‌ ಆರ್ಥಿಕ ಸಾಮರ್ಥ್ಯದ ಕನಸು ಕಾಣುತ್ತಿರುವ ಭಾರತವು ಈಗ ತುರ್ತಾಗಿ ಕಿರು ಉದ್ಯಮ, ಗುಡಿ ಕೈಗಾರಿಕೆಗಳತ್ತ ಗಮನ ನೀಡುವುದು ತೀರಾ ಅವಶ್ಯ. ಬೃಹತ್‌ ಕೈಗಾರಿಕೆಗಳಿಗೆ “ರೆಡ್‌ ಕಾಪೆìಟ್‌’ ಹಾಸುವ ಜತೆಜತೆಗೇ ಕಿರು ಕೈಗಾರಿಕೆಗಳನ್ನೂ ಪ್ರೋತ್ಸಾಹಿಸಬೇಕು. ಅವುಗಳನ್ನು ನಿರ್ಲಕ್ಷಿéಸುವುದು ಅಪಾಯದ ಕರೆಗಂಟೆ ಒತ್ತಿದಂತೆಯೇ. ಈ ಹಿಂದಿನ ಆರ್ಥಿಕ ಹಿಂಜರಿತ ಸಂದರ್ಭ ಭಾರತವನ್ನು ರಕ್ಷಿಸಿದ್ದೇ ಇಂತಹ ಕಿರು ಕೈಗಾರಿಕೆಗಳು.

ಇಡೀ ಜಗತ್ತಿನ ಕೈಗಾರಿಕೆಗಳ ಸಾಧನೆ ಅವರೋಹಣದಲ್ಲಿದ್ದರೆ, ಗುಡಿ ಕೈಗಾರಿಕೆ ಮತ್ತು ಕಿರು ಕೈಗಾರಿಕೆಗಳು ಭಾರತದ ಆರ್ಥಿಕತೆ ಕುಸಿಯದಂತೆ ತಡೆದಿದ್ದ ಆಪತ್ಪಾಂಧವಗಳಾಗಿದ್ದವು. ಇದರಿಂದ ದುಡಿಯುವ ಸಾಮಾನ್ಯ ಕೈಗಳಿಗೆ ದೊಡ್ಡ ಪೆಟ್ಟಾಗಿರಲಿಲ್ಲ. ಇಂದು ನಾವು ಬೃಹತ್‌ ಕೈಗಾರಿಕೆಗಳಿಗೆ “ಗುÉಕೋಸ್‌’ ನೀಡುತ್ತಿದ್ದರೆ, ಅದೇ ಸಣ್ಣ ಕೈಗಾರಿಕೆಗಳಿಗೆ  “ನೀರು’ ಕೂಡ ಕೊಡುತ್ತಿಲ್ಲ ಎಂಬ ಭಾವನೆ ಜನರಲ್ಲಿದೆ.

ಕೃಷಿಗೆ ಉತ್ತೇಜನ

ಭಾರತಕ್ಕೆ ಕೃಷಿಯೇ ಜೀವಾಳ ಎಂಬುದು ಪ್ರಧಾನಿಯಿಂದ ಹಿಡಿದು ಗ್ರಾ.ಪಂ. ಸದಸ್ಯನವರೆಗೆ ಎಲ್ಲರಿಗೂ ಗೊತ್ತಿರುವ ವಿಷಯ. ಸಾಕಷ್ಟು ಕೃಷಿ ಕ್ರಾಂತಿಗಳಾಗಿದ್ದರೂ ಹಳ್ಳಿ ರೈತನವರೆಗೆ ಅದಿನ್ನೂ ತಲುಪಿಲ್ಲ, ಆದಾಯ ನಿರೀಕ್ಷಿತ ಮಟ್ಟದ ಏರಿಕೆ ತಲುಪಿಲ್ಲ. ಮುಖ್ಯವಾಗಿ ಆರ್ಥಿಕ ಹಿಂಜರಿತಗಳನ್ನು ತಡೆಯುವ ಸಾಮರ್ಥ್ಯ ಇರುವುದೇ ಕೃಷಿಗೆ. ಏಕೆಂದರೆ ಕಾರು, ಬೈಕ್‌, ಫ್ಲ್ಯಾಟ್‌ಗಳನ್ನಾದರೂ ಬಿಡಬಹುದು. ಉಣ್ಣುವ, ತಿನ್ನುವ ವಸ್ತುಗಳನ್ನಲ್ಲವಲ್ಲ. ದೇಶದ ಅಭಿವೃದ್ಧಿ ಮತ್ತು ಆರ್ಥಿಕತೆಯನ್ನು ಅಳೆಯುವ ಮಾನದಂಡವಾದ ಜಿಡಿಪಿಗೆ ಶೇ. 18ರ ಗರಿಷ್ಠ ಕೊಡುಗೆ ಇರುವುದು ಕೃಷಿ ವಲಯದಿಂದಲೇ.

ಇನ್ನು ಭಾರತದ ಶೇ. 50 ಜನರು ಕೃಷಿ ಸಂಬಂಧಿತ ಕೆಲಸ ಕಾರ್ಯದಲ್ಲಿಯೇ ತೊಡಗಿಕೊಂಡಿದ್ದಾರೆ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು. ಬೇರೆ ದೇಶಗಳು ಬೃಹತ್‌ ಕೈಗಾರಿಕೆಗಳನ್ನು ತೆರೆದು ಕುಳಿತುಕೊಳ್ಳಬಹುದು. ಆದರೆ ಅವರಿಗೆ ತಿನ್ನುವ ಹಣ್ಣುಗಳು ಮತ್ತು ತರಕಾರಿಗಳನ್ನು ಪೂರೈಸುವ ಜಗತ್ತಿನ ಎರಡನೇ ದೊಡ್ಡ ದೇಶ ಇನ್ನೂ ಭಾರತವೇ ಆಗಿದೆ.

ಹಾಗೆಂದು ಬೃಹತ್‌ ಕೈಗಾರಿಕೆಗಳು ಬೇಡ ಎಂದಲ್ಲ. ದೇಶ ವೇಗವಾಗಿ ಅಭಿವೃದ್ಧಿ ಹೊಂದಲು ಇದೆಲ್ಲ ಅಗತ್ಯವಿದೆ. ಇದರ ಜತೆ ಜತೆಗೆ ಕೃಷಿ ವಲಯವನ್ನು ಗಟ್ಟಿಮುಟ್ಟಾಗಿಸುವುದೂ ಮುಖ್ಯ. ಆಗ ಭವಿಷ್ಯದ ಯಾವುದೇ ಆರ್ಥಿಕ ಹಿಂಜರಿತವನ್ನೂ ಭಾರತ ಸುಲಭವಾಗಿ ಹಿಮ್ಮೆಟ್ಟಿಸಬಹುದು. ಇವೆಲ್ಲವೂ “ಕಿರು ಆರ್ಥಿಕತೆ’ಯ ಅವಿಭಾಜ್ಯ ಅಂಗಗಳೇ.

ಕಾಲಕ್ಕೆ ತಕ್ಕಂತೆ. . .

ಈಗ ಮಾರುಕಟ್ಟೆ ಚೇತರಿಕೆ ಕಾಣಲು, ಹಣ ಓಡಾಡಲು ಸರಕಾರ ಕೆಲವು ಕ್ರಮಗಳನ್ನು ಪ್ರಕಟಿಸಿದೆ. ಆದರೆ ಅದು ಅನುಷ್ಠಾನವಾಗುವ ಹಂತವನ್ನು ಗಮನಿಸಬೇಕು. ಸರಕಾರ ಕೆಲವು ಪ್ರೋತ್ಸಾಹಕ ಯೋಜನೆಗಳನ್ನು ಪ್ರಕಟಿಸಬೇಕು. ಕಡಿಮೆ ಬಡ್ಡಿಗೆ ಸಾಲ ದಾಖಲೆಗಳ ಜಂಜಾಟವಿಲ್ಲದೆ ಸುಲಭವಾಗಿ ಸಿಗುವಂತಾಗಬೇಕು. ಬ್ಯಾಂಕ್‌ಗಳ ಆರ್ಥಿಕ ಸಾಮರ್ಥ್ಯವನ್ನೂ ಹೆಚ್ಚಿಸಬೇಕು. ಜತೆ ಜತೆಗೆ ಯಾವ ಕೈಗಾರಿಕೆಗಳು ಹೆಚ್ಚಿನ ಸಮಸ್ಯೆಯನ್ನು ಎದುರಿಸುತ್ತಿವೆಯೋ ಅವುಗಳಿಗೆ “ಪ್ಯಾಕೇಜ್‌’ ಮಾದರಿಯ ಪರಿಹಾರ ಯೋಜನೆಗಳನ್ನು ಪ್ರಕಟಿಸಬೇಕು. ಜಿಎಸ್‌ಟಿ ರೀತಿಯ ವಿವಿಧ ತೆರಿಗೆಗಳಲ್ಲಿ ಆಗುತ್ತಿರುವ ಅಸಮತೋಲನ ನಿವಾರಿಸಿ, ಅಗತ್ಯವಿದ್ದಲ್ಲಿ ರಿಯಾಯಿತಿ ನೀಡಿ ತಾತ್ಕಾಲಿಕ ಪರಿಹಾರ ಕೊಡಬಹುದು. ಇನ್ನು ಪ್ರಜೆಗಳಾದ ನಾವೂ ವಿದೇಶಿ ವಸ್ತುಗಳ ಖರೀದಿ (ಆಮದುಗೊಳಿಸಿಕೊಳ್ಳು ವಂಥ) ಕೆಲವು ಸಮಯದ ಮಟ್ಟಿಗಾದರೂ ಕೈ ಬಿಟ್ಟರೆ ಇತರರು ಕೈ ಸುಡುವುದು ತಪ್ಪುತ್ತದೆ. ದೇಶದ ಕರೆನ್ಸಿಯ ದರ ಸ್ಥಿರವಾಗಬಹುದು.

ಲಾಭ ವರ್ಗಾವಣೆ

ಕೆಲವೊಂದು ವಲಯಗಳಿಂದ ಸರಕಾರ ಸಾಕಷ್ಟು ಲಾಭ ಗಳಿಸುತ್ತದೆ. ಅದನ್ನು ಇಂಥ ಸ್ಥಿತಿಯಲ್ಲಿ ಜನರಿಗೆ ವರ್ಗಾಯಿಸಿದರೆ ಜನಜೀವನ ಸುಧಾರಣೆ ಸಾಧ್ಯ. ಇದರಿಂದ ಹಣಕಾಸೂ ಓಡಾಡಬಹುದು. ಉದಾ: ಇಂಧನ ಬೆಲೆ ಈಗ ಇಳಿಮುಖವಾಗಿದೆ. ಸರಕಾರ ಇದನ್ನು ನೇರವಾಗಿ ಜನರಿಗೆ ವರ್ಗಾಯಿಸಿದರೆ ಇದರ ಪರಿಣಾಮ ಸರ್ವವ್ಯಾಪಿಯಾಗುತ್ತದೆ. ಸಾಮಾನ್ಯ ಜನರ ಓಡಾಟದ ವೆಚ್ಚದಿಂದ ಎಲ್ಲ ರೀತಿಯ ಸಾಮಗ್ರಿ ಸಾಗಾಟದವರೆಗೂ ಅಗ್ಗವಾಗಹುದು.

ಹಣ ಶೇಖರಣೆ ಮೇಲೆ ನಿಗಾ

ಸರಕಾರ ನಿಯಮ ಸಡಿಲಿಸಿ ಮತ್ತೆ ಕೆಲವರಲ್ಲೇ ಹಣ ಸಂಗ್ರಹವಾಗುವಂಥ ಪ್ರಯತ್ನಕ್ಕೆ ಅವಕಾಶ ಕೊಡಬಾರದು. ನಮ್ಮ ದೇಶದಲ್ಲಿ ಇಂತಹ ಅಪಾಯಗಳು ಅತೀ ಹೆಚ್ಚು. ಹಣ ಕೆಲವೇ ಕೆಲವು ವ್ಯಕ್ತಿಗಳ ಕೈ ಸೇರಿ ಅಲ್ಲಿಂದ ಹೊರ ಬಾರದೇ ಸರಕಾರ ಬಯಸಿದ್ದು ಆಗದೇ ಇರುತ್ತದೆ. ಆದುದರಿಂದ ಇಂತಹ ಹಣ ಎಲ್ಲಿಯೂ ಶೇಖರಣೆಯಾಗದಂತೆಯೂ ನಿಗಾವಹಿಸಬೇಕು. ಯಾಕೆಂದರೆ ಮಾರುಕಟ್ಟೆಯಲ್ಲಿ ಹಣ ಓಡಾಡಿಕೊಂಡರೆ ಮಾತ್ರ ಆರೋಗ್ಯ.

ಒಟ್ಟಾರೆಯಾಗಿ ಆರ್ಥಿಕ ಹಿಂಜರಿತದಂತಹ ಸಮಸ್ಯೆಯನ್ನು ಎದುರಿಸಲು ತುರ್ತು ಕ್ರಮಗಳೊಂದಿಗೆ ದೂರಗಾಮಿ ಯೋಜನೆಗಳನ್ನು ಹಾಕಿಕೊಳ್ಳುವುದು ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next