Advertisement

ಬಡ್ಡಿ ಕರಡಿ ಕುಣಿತ

09:50 PM Sep 10, 2018 | Team Udayavani |

ಹೀಗೊಂದು ಆಶಾಭಾವನೆ ಕಳೆದ ಕೆಲವು ತಿಂಗಳುಗಳಿಂದ ಬ್ಯಾಂಕ್‌ ಠೇವಣಿದಾರರಲ್ಲಿ  ಚಿಗುರುತ್ತಿದೆ. ಕಳೆದ ಮೂರು ವರ್ಷಗಳಿಂದ ಹಾವು -ಏಣಿ ಆಟದಲ್ಲಿ ಹಾವಿನ ಬಾಯಿಗೆ  ಸಿಕ್ಕಂತೆ  ಧರೆಗಿಳಿಯುತ್ತಿದ್ದ ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿದರ,  ಕಳೆದ  ಆರು ತಿಂಗಳಿನಿಂದ ಕ್ರಮೇಣ  ಚೇತರಿಸಿಕೊಳ್ಳುತ್ತಿದೆ. ಇದು ಗಮನಾರ್ಹವಾಗಿ ಇರದಿದ್ದರೂ, ಹತಾಶರಾದ  ಠೇವಣಿಧಾರರಲ್ಲಿ ಸ್ವಲ್ಪ ಭರವಸೆಯನ್ನು ಹುಟ್ಟಿಸಿದೆ. 2012 ಮಾರ್ಚ್‌ನಲ್ಲಿ ಐದು ವರ್ಷದ  ಠೇವಣಿಗೆ ಶೇ.9.25ರಷ್ಟು  ಇದ್ದ ಬಡ್ಡಿ ದರ ಏಪ್ರಿಲ…  2017 ರಲ್ಲಿ ಶೇ. 6.25ಕ್ಕೆ ಇಳಿದಿತ್ತು. ಈಗ ಶೇ.6.85ರಷ್ಟು ಏರಿದೆ. 

Advertisement

ಕಳೆದ ಮೂರು ವರ್ಷಗಳಲ್ಲಿ  ಒಂದು ವರ್ಷದ ಠೇವಣಿ  ಮೇಲಿನ ಬಡ್ಡಿದರ ಶೇ.2.50ರಷ್ಟು  ಇಳಿದಿದೆ. ಈಗ  ಏರಿಕೆ ಮಾರ್ಜಿನಲ…  ಆಗಿದ್ದರೂ  ಈ ನಿಟ್ಟಿನಲ್ಲಿ ಠೇವಣಿಧಾರರಲ್ಲಿ  ಸ್ವಲ್ಪ ಆಶಾಭಾವನೆ ಯನ್ನು ಮೂಡಿಸಿದೆ.  ನಾಲ್ಕಾರು ವರ್ಷಗಳ ಹಿಂದೆ,  ಐದಾರು ವರ್ಷಗಳಲ್ಲಿ ದ್ವಿಗುಣವಾಗತ್ತಿದ್ದ ಠೇವಣಿ, ಇಂದು  ದಶಕಗಳನ್ನೇ  ತೆಗೆದುಕೊಳ್ಳುತ್ತಿದೆ.  ಠೇವಣಿದಾರರ ದುರ್ದೈವವೇನೋ.  ಇತ್ತೀಚೆಗೆ ಬಹುತೇಕ ಬ್ಯಾಂಕುಗಳು ಗರಿಷ್ಠ ಐದು ವರ್ಷದ ಅವಧಿ ಮೀರಿದ  ಠೇವಣಿಯನ್ನು ಸ್ವೀಕರಿಸುವುದಿಲ್ಲ. ಆ ಮಾತು ಬೇರೆ.

ಅನಿವಾರ್ಯ, ಅಗತ್ಯ 
 ಬ್ಯಾಂಕುಗಳ ಠೇವಣಿದಾರರಲ್ಲಿ ಮಧ್ಯಮವರ್ಗದವರು, ಸಂಬಳಪಡೆಯುವವರು ಮತ್ತು ಪಿಂಚಣಿದಾರರೇ ಹೆಚ್ಚು. ಬೇರೆ ಕಡೆ ಹೆಚ್ಚಿನ ಬಡ್ಡಿದರ ದೊರಕಿದರೂ, ಭದ್ರತೆ ಮತ್ತು ಸುರಕ್ಷತೆ ಮತ್ತು ತಮ್ಮ ಹಣ ತಮಗೆ ಬೇಕಾದಾಗ  ಜಂಜಾಟವಿಲ್ಲದೇ ಮರಳಿ ದೊರಕುವ ವಿಶ್ವಾಸದಿಂದ  ತಮ್ಮ ಉಳಿತಾಯವನ್ನು ಬ್ಯಾಂಕಿನಲ್ಲಿ ಇಡುತ್ತಾರೆ. ಬ್ಯಾಂಕುಗಳಲ್ಲಿ ನೀಡುವ ಸುರಕ್ಷತೆ ಮತ್ತು ಭದ್ರತೆಯನ್ನು  ಖಾಸಗಿ  ಸಂಸ್ಥೆಗಳು ನೀಡಿದ್ದರೆ, ಬಹುಶ:  ಬ್ಯಾಂಕುಗಳಲ್ಲಿ  ಠೇವಣಿ ವಿಭಾಗವೇ ಇರುತ್ತಿರಲಿಲ್ಲ ಎನ್ನುವ ಮಾತುಗಳು ಹಣಕಾಸು ವಲಯದಲ್ಲಿ ಸದಾ ಕೇಳಿಬರುತ್ತದೆ.

 ನಿವೃತ್ತರಲ್ಲಿ ಹಲವರು, ಅನಿವಾರ್ಯವಾದ  ಮಕ್ಕಳ ಮದುವೆ, ವಿದ್ಯಾಭ್ಯಾಸ ಮತ್ತು  ತಲೆಯ ಮೇಲೊಂದು ಸೂರಿನ ಅವಶ್ಯಕತೆಯ ನಂತರ, ಉಳಿದದ್ದನ್ನು, ಬ್ಯಾಂಕಿನಲ್ಲಿ   ಠೇವಣಿ ಇರಿಸಿ, ಅದರಿಂದ ಬರುವ  ಬಡ್ಡಿ ಆದಾಯದಲ್ಲಿ  ಜೀವನದ ಬಂಡಿ ಓಡಿಸುವವರೇ  ಹೆಚ್ಚು.  ಗಾಯದ ಮೇಲೆ ಬರೆ ಎನ್ನುವಂತೆ  ಗಳಿಸಿದ ಬಡ್ಡಿ ಆದಾಯದ ಮೇಲೆ, ಅದು 40,000 ಮೀರಿದರೆ  ತೆರಿಗೆ ಹೊರೆ ಬೇರೆ. ಕಳೆದ ಹಣಕಾಸು  ವರ್ಷದ ವರೆಗೆ ಈ ಮಿತಿ  1,0000 ಇತ್ತು. ಕಳೆದ ಎರಡು ಮೂರು  ವರ್ಷಗಳಿಂದ ಪ್ರತಿಬಾರಿ ರಿಸರ್ವ ಬ್ಯಾಂಕ್‌ ದ್ವೆ„ಮಾಸಿಕ  ಹಣಕಾಸು  ನೀತಿಯನ್ನು ಪ್ರಕಟಿಸಿದಾಗ,  ಸಾಲ ಗ್ರಾಹಕರಿಗೆ ಅನಕುಕೂಲವಾಗುವ ರೆಪೋ ದರವನ್ನು ಇಳಿಸುತ್ತಿದ್ದು, ಅದೇ ಪ್ರಮಾಣದಲ್ಲಿ ಠೇವಣಿ ಮೇಲಿನ  ಬಡ್ಡಿದರ ಇಳಿಸಿ ಬ್ಯಾಂಕಗಳು  ತಮ್ಮ  interest margin ( ಸಾಲ ಮತ್ತು ಬಡ್ಡಿದರದ ಮೇಲಿನ ವ್ಯತ್ಯಾಸ) ದ ಸಮೀಕರಣವನ್ನು  ಕಾಪಾಡಿಕೊಳ್ಳುತ್ತಿದ್ದವು. ಠೇವಣಿ ದಾರರರ ಕಿಸೆಯಿಂದ ತೆಗೆದು ಸಾಲಗಾರರಿಗೆ  ಅನುಕೂಲ ಮಾಡಿಕೊಡುವ Rob Peter To Pay Paul ನಂತಿರುವ  ಸರ್ಕಾರ ಮತ್ತು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ಈ ಧೋರಣೆಗೆ ಬ್ಯಾಂಕ್‌ ಠೇವಣಿ ದಾರರು ಭಾರೀ ಅಕ್ರೋಶ ವ್ಯಕ್ತ ಮಾಡಿದ್ದರು.  ರಿಸರ್ವ್‌ ಬ್ಯಾಂಕ್‌  ಮತ್ತು ಸರ್ಕಾರ, ಸದಾ ಸಾಲದ ಮೇಲಿನ ಬಡ್ಡಿಯನ್ನು ಇಳಿಸುವ ಬಗೆಗೆ  ಚಿಂತನೆ ನಡೆಸುತ್ತಿದೆಯೇ ವಿನಃ  ಬ್ಯಾಂಕಿಂಗ್‌   ಉದ್ಯಮಕ್ಕೆ ಕಚ್ಚಾ ಮಾಲನ್ನು (ಠೇವಣಿ) ಪೂರೈಸುವ ಠೇವಣಿದಾರರ  ಬವಣೆಯನ್ನು ಕೇಳುವುದಿಲ್ಲ  ಎನ್ನುವ ಆರೋಪ ಕೇಳಿಬರುತ್ತಿತ್ತು. ಅಂತೆಯೇ, ಲಭ್ಯ ಇರುವ ಪ್ರತಿಯೊಂದು ವೇದಿಕೆಯಿಂದ  ಸರ್ಕಾರ ಮತ್ತು ರಿಸರ್ವ್‌ ಬ್ಯಾಂಕ್‌ ಮೇಲೆ  ಈ ಧೋರಣೆಯನ್ನು ಬದಲಾಯಿಸಲು  ಒತ್ತಡವಿತ್ತು.  ರಿಸರ್ವ್‌ ಬ್ಯಾಂಕ್‌  ಕೇವಲ  ಸಾಲಗಾರರ ಹಿತರಕ್ಷಣೆ ಮಾಡುತ್ತಿದೆ  ಮತ್ತು ಠೇವಣಿದಾರರ ಹಿತವನ್ನು  ಕಾಪಾಡುತ್ತಿಲ್ಲ  ಎನ್ನುವ ದೂರು  ಮತ್ತು ಕೂಗು  ಸ್ವಲ್ಪ ಮಟ್ಟಿಗೆ  ರಿಸರ್ವ್‌ ಬ್ಯಾಂಕ್‌ ಮೇಲೆ ಬಿದ್ದಿದೆಯಂತೆ.  

ಹಣ ಸಂಗ್ರಹ ಕಡಿಮೆಯಾಗುತ್ತಿದೆ
 ಬೀಳುತ್ತಿರುವ  ಠೇವಣಿ ಮೇಲಿನ ಬಡ್ಡಿದರ  ಬ್ಯಾಂಕರುಗಳ ಠೇವಣಿ ಸಂಗ್ರಹ ದ ಮೇಲೆ ಪರಿಣಾಮ ಬೀರಿದೆ ಎಂದು  ಬ್ಯಾಂಕರುಗಳು ಹೇಳುತ್ತಿದ್ದಾರೆ. ಪ್ರಸ್ತುತ ಠೇವಣಿ  ಸಂಗ್ರಹದ  ಪ್ರಮಾಣ  ತುಂಬಾ ಕಡಿಮೆಯಾಗಿದ್ದು, 6.70% ಗೆ ಇಳಿದಿದೆಯಂತೆ.  ಕಳೆದ 54 ವರ್ಷಗಳಲ್ಲಿ  ಮೊದಲ ಬಾರಿ ಈ ರೀತಿಯಾಗಿದೆ.  ಮಾರ್ಚ್‌ 2017 ರಲ್ಲಿ 107.58 ಲಕ್ಷ$  ಕೋಟಿ ಇದ್ದ  ಬ್ಯಾಂಕ್‌ ಠೇವಣಿ  ಮಾರ್ಚ್‌ 2018 ಕ್ಕೆ 114.75 ಲಕ್ಷ$ ಕೋಟಿಗೆ ಏರಿದೆ. ಆದರೂ ಕಳೆದ ಸಾಲಿಗೆಲ್ಲ ಹೋಲಿಸಿದರೆ ಕಡಿಮೆಯೇ. ಇದಕ್ಕೆಲ್ಲಾ ಕಾರಣ, ಠೇವಣಿ ಮೇಲೆ ನೀಡುವ  ಬಡ್ಡಿದರ ಕಡಿಮೆ ಆಗುತ್ತಿರುವುದು.  ಕೆಲವು ಅರ್ಥಿಕ ತಜ್ಞರ ಪ್ರಕಾರ  ಬ್ಯಾಂಕ್‌   ಠೇವಣಿ ಮೇಲಿನ ಬಡ್ಡಿದರ ಇಳಿಯುತ್ತಿರುವುದರಿಂದ ಠೇವಣಿಯನ್ನು  ಬ್ಯಾಂಕ್‌ ನಿಂದ ಮ್ಯೂಚುವಲ್ ಫ‌ಂಡಗೆ  ಬದಲಿಸುತ್ತಿದ್ದಾರೆ. ಹೀಗಾಗಿ, ಬ್ಯಾಂಕುಗಳಲ್ಲಿ ಠೇವಣಿ ಸಂಗ್ರಹದ ಪ್ರಮಾಣಕ್ಕಿಂತ, ಸಾಲ ವಿಲೇವಾರಿ ಹೆಚ್ಚಾಗಿರುವುದರಿಂದ, ಬ್ಯಾಂಕರುಗಳಿಗೆ  ಠೇವಣಿ ಮೇಲಿನ ಬಡ್ಡಿದರವನ್ನು ಆಕರ್ಷಕಗೊಳಿಸಿ  ಠೇವಣಿಯನ್ನು  ಹೆಚ್ಚಿಸುವ   ಅನಿವಾರ್ಯತೆ ಎದುರಾಗಿದೆ. ಕಳೆದ ವರ್ಷ 75.77 ಲಕ್ಷ ಕೋಟಿ ಇದ್ದ ಸಾಲ ಈ ವರ್ಷ 85.33 ಲಕ್ಷ ಕೋಟಿಗೆ ಏರಿದೆ.  ಹೆಚ್ಚಿದ ಸಾಲದ ಬೇಡಿಕೆಯನ್ನು ಪೂರ್ಣವಾಗಿ  ಸರ್ಕಾರದಿಂದ  ದೊರಕುವ ಕ್ಯಾಪಿಟಲ್ ಸೌಲಭ್ಯದ ಮೂಲಕ  ಪೂರೈಸುವುದು  ಕಷ್ಟ ಸಾಧ್ಯ.   ಸರ್ಕಾರ  ಬ್ಯಾಂಕುಗಳಿಗೆ  ಕ್ಯಾಪಿಟಲ…ಅನ್ನು  ಸರಾಗವಾಗಿ ನೀಡದೇ  ಹಲವಾರು  ಷರತ್ತುಗಳನ್ನು ವಿಧಿಸುತ್ತಿದೆ.  ಹಾಗೆಯೇ, ಬ್ಯಾಂಕುಗಳು  ಕೇಳಿದಷ್ಟು ಮತ್ತು ಬ್ಯಾಂಕುಗಳಿಗೆ ಅವಶ್ಯಕತೆ ಇರುವಷ್ಟು  ಕ್ಯಾಪಿಟಲ… ದೊರಕುತ್ತಿಲ್ಲ.  ಬ್ಯಾಂಕುಗಳು  loanable funds ಗಾಗಿ  ಹೆಚ್ಚಿನ  ಠೇವಣಿಯನ್ನು ಆಶ್ರಯಿಸುವ ಅನಿವಾರ್ಯ ಉಂಟಾಗಿದ್ದು,  ಈ ಉದ್ದೇಶಕ್ಕಾಗಿ ಠೇವಣಿ ಮೇಲಿನ  ಬಡ್ಡಿದರವನ್ನು  ಆಕರ್ಷಕಗೊಳಿಸುವ  ಅನಿವಾರ್ಯತೆಯಲ್ಲಿ   ಬ್ಯಾಂಕುಗಳಿವೆ.

Advertisement

 ಬ್ಯಾಂಕಿಂಗ್  ಅನುಭವಿಗಳು ಮತ್ತು  ಅರ್ಥಿಕ ತಜ್ಞರ ಪ್ರಕಾರ,  ಬ್ಯಾಂಕ್ ಠೇವಣಿ ಮೇಲಿನ ಬಡ್ಡಿದರ ತಳ ( peaked downword) ಕಂಡಿದೆ.  ಬ್ಯಾಂಕಿಂಗ್‌ ಉದ್ಯಮ ಠೇವಣಿ ಮೇಲಿನ ಬಡ್ಡಿದರದಲ್ಲಿ  ಇನ್ನೂ ಹೆಚ್ಚಿನ ಇಳಿತವನ್ನು  ಅದು ಸಹಿಸಿಕೊಳ್ಳಲಾಗದು.  ಇದೇ ರೀತಿ  ಇಳಿತ ಮುಂದುವರೆದರೆ ಖಾಸಗಿ ಹಣಕಾಸು ಸಂಸ್ಥೆಗಳು ಈ ಬೆಳವಣಿಗೆಯನ್ನು ದುರುಪಯೋಗ ಮಾಡಿಕೊಳ್ಳಬಹುದು. ಬ್ಯಾಂಕುಗಳು ಕೂಡಾ  ಠೇವಣಿ ಮೇಲಿನ ಬಡ್ಡಿದರ ಏರಿಸುವಂತೆ ಸರ್ಕಾರ ಮತ್ತು  ರಿಸರ್ವ್‌   ಬ್ಯಾಂಕ್  ಮೇಲೆ ಸತತವಾಗಿ ಒತ್ತಡ  ಹೇರುತ್ತಿದ್ದು,  ಈ ನಿಟ್ಟಿನಲ್ಲಿ ಸ್ವಲ್ಪ ಸ್ಪಂದನೆ ದೊರಕಿದಂತೆ ಕಾಣುತ್ತಿದೆ. 

 ಡಾಲರ್‌ ಬೆಲೆಗೂ ಬಡ್ಡಿಗೂ ಸಂಬಂಧ ಇದೆ
ಟರ್ಕಿ ಅರ್ಥಿಕ ಸಂಕಷ್ಟ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ  ಏರಿಕೆಯಿಂದಾಗಿ, ಡಾಲರ್‌ ಎದುರು ರೂಪಾಯಿಯ ಮೌಲ್ಯ ತೀವ್ರವಾಗಿ ಕುಸಿದಿದೆ.  ಡಾಲರ್‌ ಬೆಲೆ  70.40 ರೂಪಾಯಿಗೆ  ಏರಿದೆ. ತೈಲಬೆಲೆ ಮತ್ತು ವಿದೇಶಿ ವಿನಿಮಯ ವಿಶ್ಲೇಷಕರ ಪ್ರಕಾರ   ವರ್ಷಾಂತ್ಯಕ್ಕೆ    ಡಾಲರ್‌ 80 ರೂಪಾಯಿ ತಲುಪಬಹುದು. ತೈಲ ಹಾಗೂ ಡಾಲರ್‌  ಬೆಲೆ  ಹಣದುಬ್ಬರಕ್ಕೆ  ಪ್ರೇರಕವಾಗಿದ್ದು,  ಇದನ್ನು ನಿಯಂತ್ರಿಸಲು ಸರ್ಕಾರ ಸಾಮಾನ್ಯವಾಗಿ  ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿದರವನ್ನು  ಏರಿಸಿ, ಮಾರುಕಟ್ಟೆಯಲ್ಲಿ  ಹಣದ ಹರಿವನ್ನು ನಿಯಂತ್ರಿಸುತ್ತದೆ.  ಬಡ್ಡಿದರ ಏರಿಕೆ  ಹಣದುಬ್ಬರ  ತಡೆಯಲು ಪರಿಣಾಮಕಾರಿ ಅರ್ಥಿಕ ಅಸ್ತ್ರವೆಂದು ಹೇಳಲಾಗುತ್ತದೆ. ಈ ಎಲ್ಲಾ ಕಾರಣಗಳು ಬಹುಶಃ  ಠೇವಣಿ ಮೇಲಿನ ಬಡ್ಡಿದರ ಸ್ವಲ್ಪ  ಉತ್ತರ ಮುಖೀಯಾಗುವಂತೆ ಪ್ರರೇಪಿಸುತ್ತಿರುವಂತೆ ಕಾಣುತ್ತಿದೆ. 

ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next