Advertisement

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

12:08 AM Apr 24, 2024 | Team Udayavani |

ಕಾರ್ಕಳ: ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಆರಂಭದ ದಿನಗಳಲ್ಲಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಕಂಡುಬಂದಿದ್ದ ನಕ್ಸಲರ ಚಲನವಲನ ಮತದಾನ ದಿನ ಹತ್ತಿರವಾಗುತ್ತಿದ್ದಂತೆ ತಣ್ಣಗಾದಂತಿದೆ. ನಕ್ಸಲ್‌ ನಿಗ್ರಹ ಪಡೆ (ಎಎನ್‌ಎನ್‌ಎಫ್) ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದರಿಂದ ಪಶ್ಚಿಮ ಘಟ್ಟದ ಕರ್ನಾಟಕ ಭಾಗದಿಂದ ಶಂಕಿತ ನಕ್ಸಲರು ಕಾಲ್ಕಿತ್ತಿರುವ ಸಂದೇಹ ವ್ಯಕ್ತವಾಗಿದೆ. ಇದರಿಂದ ಅರಣ್ಯದಂಚಿನ ನಾಗರಿಕರು ತುಸು ನಿಟ್ಟುಸಿರು ಬಿಡುವಂತಾಗಿದೆ.

Advertisement

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗದ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ನಕ್ಸಲರ ಚಲನವಲನ ಕಾಣಿಸಿಕೊಂಡಿತ್ತು. ಸುಮಾರು ಆರರಿಂದ ಎಂಟು ಮಂದಿ ಇದ್ದ ಶಂಕಿತ ನಕ್ಸಲರ ತಂಡ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಮಧ್ಯೆ ಹಾಗೂ ಕೇರಳ ಗಡಿಭಾಗದ ದಟ್ಟ ಅರಣ್ಯದಲ್ಲಿ ಓಡಾಡುತ್ತಿರುವ ಅನುಮಾನ ವ್ಯಕ್ತಗೊಂಡಿತ್ತು.

ಮಡಿಕೇರಿ ತಾಲೂಕಿನ ಕಡಮಕಲ್ಲು ಬಳಿಯ ಕೂಜಿಮಲೆಯ ರಬ್ಬರ್‌ ಎಸ್ಟೇಟ್‌ ಸಮೀಪದ ಅಂಗಡಿ ಯೊಂದಕ್ಕೆ ನಕ್ಸಲರ ತಂಡ ಮೊದಲ ಬಾರಿಗೆ ಭೇಟಿ ನೀಡಿ ಆಹಾರ ಸಾಮಗ್ರಿ ಖರೀದಿಸಿ ಕೊಂಡೊಯ್ದಿತ್ತು. ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೇ ನಕ್ಸಲ್‌ ನಿಗ್ರಹ ಪಡೆ ಈ ಭಾಗದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಕಾರ್ಯಾಚರಣೆ ನಡೆಯುತ್ತಿದ್ದ ಹೊತ್ತಿನ ಲ್ಲಿಯೇ ಕೂಜುಮಲೆಗೆ ಭೇಟಿ ನೀಡಿದ ಒಂದೇ ವಾರದ ಅಂತರದಲ್ಲಿ ಇದೇ ಪ್ರದೇಶಕ್ಕೆ ಹೊಂದಿಕೊಂಡ ಸುಬ್ರಹ್ಮಣ್ಯ ಸಮೀಪದ ಐನಕಿದು ಗ್ರಾಮದ ಹೊಸಗದ್ದೆಯಲ್ಲಿಯ ಕೃಷಿಕರೊಬ್ಬರ ಮನೆಗೆ ನಕ್ಸಲರ ತಂಡ ಭೇಟಿ ನೀಡಿ ಅಲ್ಲಿಂದ ಅವರು ದಿನಸಿ ಕೊಂಡೊಯಿತ್ತು. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ, ಎ. 4ರಂದು ಸುಬ್ರಹ್ಮಣ್ಯ ಸಮೀಪ ಕಡಬ ತಾಲೂಕಿಗೆ ಒಳಪಟ್ಟ ಚೇರು ಎಂಬಲ್ಲಿಯ ಅರಣ್ಯದಂಚಿನ ಮನೆಗೆ ಶಂಕಿತರ ತಂಡ ಭೇಟಿ ನೀಡಿತ್ತು. ಇದೇ ಈ ಭಾಗದಲ್ಲಿ ನಕ್ಸಲರ ಕೊನೆಯ ಭೇಟಿಯಾಗಿದೆ. ಬಳಿಕ ಅವರ ಚಲನವಲನ ಕಾಣಿಸಿಕೊಂಡಿಲ್ಲ.

ಕರ್ನಾಟಕ‌ದಲ್ಲಿ ನಾಲ್ಕೈದು ವರ್ಷ ಗಳಿಂದ ನಾಪತ್ತೆಯಾಗಿದ್ದ ನಕ್ಸಲರು ಚುನಾವಣೆ ಸಂದರ್ಭ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿತ್ತು. ಅಲ್ಲದೆ ಪೊಲೀಸರಿಗೆ, ಚುನಾವಣೆ ಆಯೋಗಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಹೆಚ್ಚಿನ ಬಂದೋಬಸ್ತ್ ಕೂಡ ಮಾಡಿ ಕೊಳ್ಳಲಾಗಿತ್ತು. ಚುನಾವಣೆ ಸಂದರ್ಭ ಯಾವುದೇ ಅಹಿತಕರ ಘಟನೆ ಸಂಭವಿಸಬಾರದು ಎನ್ನುವ ಕಾರಣಕ್ಕೆ ನಕ್ಸಲ್‌ ಪೀಡಿತ ಗ್ರಾಮಗಳಲ್ಲಿ ಎಎನ್‌ಎಫ್ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದೆ. ಮತದಾನ ದಿನ ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಿಶೇಷ ಸಶಸ್ತ್ರ ಪಡೆಗಳನ್ನು ನಿಯೋಜಿಸಿ ಭದ್ರತೆಗೆ ಸಿದ್ಧತೆ ನಡೆಸಲಾಗುತ್ತಿದೆ.

ದಾಳಿಗೆ ಬೆದರಿದರೆ?
ಕೇರಳ, ಝಾರ್ಖಂಡ್‌ ಮತ್ತು ಛತ್ತೀಸ್‌ಗಢದಲ್ಲಿ ಅಲ್ಲಿನ ಸರಕಾರ ಗಳು ನಕ್ಸಲರನ್ನು ಮಟ್ಟ ಹಾಕಲು ಭಾರೀ ಕಾರ್ಯಾಚರಣೆಗೆ ಇಳಿದಿ ದ್ದವು. ಇದೇ ಹೊತ್ತಿನಲ್ಲಿ ಅಲ್ಲಿನ ದಾಳಿಗಳ ಕಾರಣದಿಂದ ನಕ್ಸಲರು ಕರ್ನಾಟಕದ ಪಶ್ಚಿಮ ಘಟ್ಟದೊಳಗೆ ನುಸುಳಿರಬಹುದೆನ್ನುವ ಸಂದೇಹ ವ್ಯಕ್ತವಾಗಿತ್ತು. ಅಲ್ಲಿನ ಸರಕಾರಗಳು ಕಾರ್ಯಾಚರಣೆಯನ್ನು ಮುಂದು ವರಿಸುತ್ತಿರುವುದು ಮತ್ತು ಪಶ್ಚಿಮಘಟ್ಟದ ತಪ್ಪಲಿನಲ್ಲಿಯೂ ಅಂಥ ಕಾರ್ಯಾಚರಣೆಯಿಂದ ತಪ್ಪಿಸಿ ಕೊಳ್ಳುವ ಸಲುವಾಗಿ ನಕ್ಸಲರು ಸುರಕ್ಷಿತ ಸ್ಥಳಗಳಿಗೆೆ ತೆರಳಿರಬಹುದು ಎನ್ನಲಾಗುತ್ತಿದೆ.

Advertisement

ಗ್ರಾಮಸ್ಥರಲ್ಲಿ ಆತಂಕ
ಕೊಂಚ ದೂರ
ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದಲ್ಲಿ ನಕ್ಸಲರ ಚಲನವಲನ ಕಂಡುಬಂದ ಬಳಿಕ ಈ ಪ್ರದೇಶಗಳ ಅರಣ್ಯದಂಚಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಒಂದೆಡೆ ಎನ್‌ಎನ್‌ಎಫ್ ವಿಚಾರಣೆಯ ಭಯ, ಇನ್ನೊಂದೆಡೆ ನಕ್ಸಲರು ಯಾವ ಹೊತ್ತಿಗೆ ಭೇಟಿ ನೀಡಬಹುದೋ ಎನ್ನುವ ಭೀತಿ. ಇದರ ನಡುವೆ ಜನ ಕಂಗಾಲಾಗಿದ್ದರು. ಗ್ರಾಮೀಣ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಆದರೆ ಒಂದೆರಡು ವಾರಗಳಿಂದ ನಕ್ಸಲರ ಚಲನವಲನ ಕಾಣಿಸಿಕೊಳ್ಳದೆ ಇರುವುದು ನಾಗರಿಕರು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.

ಪರಾರಿಯಾಗಿರಬಹುದೆ? ಅಡಗಿಕೊಂಡಿರಬಹುದೇ?
ಚುನಾವಣೆ ಸನಿಹದಲ್ಲಿ ಬಿಗಿ ಭದ್ರತೆ, ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದರಿಂದ ನಕ್ಸಲರು ಈ ಭಾಗದಿಂದ ಸುರಕ್ಷಿತ ಭಾಗಕ್ಕೆ ತೆರಳಿರಬಹುದು ಎನ್ನುವ ಅಂದಾಜು ಒಂದು ಕಡೆಯಾದರೆ, ನಕ್ಸಲರು ಇಲ್ಲೇ ಇದ್ದು ತಟಸ್ಥರಾಗಿ ಸುರಕ್ಷಿತ ಸ್ಥಳದಲ್ಲಿ ಅಡಗಿಕೊಂಡಿರಬಹುದು; ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳುತ್ತಿಲ್ಲ ಎನ್ನುವ ಅನುಮಾನವೂ ಈ ಭಾಗದ ಜನರಲ್ಲಿದೆ. ನಕ್ಸಲರು ಯಾವ ಕಡೆಗೆ ತೆರಳಿರಬಹುದು ಎನ್ನುವ ಬಗ್ಗೆ ಪೊಲೀಸರಿಗಾಗಲಿ, ಎನ್‌ಎನ್‌ಎಫ್ ಅಧಿಕಾರಿಗಳಿಗಾಗಲಿ ಸ್ಪಷ್ಟ ಮಾಹಿತಿ ಇಲ್ಲ. ಘಟ್ಟ ಪ್ರದೇಶಕ್ಕೆ ಅಥವಾ ಕೇರಳಕ್ಕೆ ತೆರಳಿರುವ ಸಾಧ್ಯತೆಯಿದೆ.

ಚುನಾವಣೆ ಸಂದರ್ಭ ನಕ್ಸಲರಿಂದ ಅಹಿತಕರ ಘಟನೆ ನಡೆಯದಂತೆ ಎಲ್ಲ ಪೂರ್ವ ಸಿದ್ದತೆ ಮಾಡಿಕೊಂಡಿದ್ದೇವೆ. ಪಶ್ಚಿಮ ಘಟ್ಟ ತಪ್ಪಲಿನ ನಕ್ಸಲ್‌ ಪೀಡಿತ ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಕ್ಸಲ್‌ ನಿಗ್ರಹ ಪಡೆ ಸಂಪೂರ್ಣ ಸುತ್ತುವರಿದು ಭದ್ರತೆ ಒದಗಿಸಿದೆ. ಎಲ್ಲೆಡೆ ಶೋಧ ಕಾರ್ಯ ನಿರಂತರವಾಗಿದೆ. ಮತದಾರರು ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಮತ ಚಲಾಯಿಸುವ ವಾತಾವರಣವಿದೆ.
– ಜಿತೇಂದ್ರ ಕುಮಾರ್‌ ದಯಾಮ, ಪೊಲೀಸ್‌ ಅಧೀಕ್ಷಕರು, ನಕ್ಸಲ್‌ ನಿಗ್ರಹ ಪಡೆ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next