Advertisement

ಬಂಗಾಲದ ಖೇಲ್‌ನಲ್ಲಿ ದೀದಿಗೆ ಕಿರೀಟ

11:49 PM May 02, 2021 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ “ಖೇಲಾ ಹೊಬೆ’ ಘೋಷಣೆ ಮೂಲಕ ಆಟ ಶುರು ಮಾಡಿದ್ದ ದೀದಿ, ಈಗ ಅಭೂತಪೂರ್ವ ಗೆಲುವಿನೊಂದಿಗೆ ಬಿಜೆಪಿ ಹಾಗೂ ಎಡಪಕ್ಷಗಳನ್ನು ಮಣಿಸಿದ್ದಾರೆ.

Advertisement

ಇಡೀ ದೇಶದ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಹ್ಯಾಟ್ರಿಕ್‌ ಜಯ ಗಳಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಕ್ಕಿಂತಲೂ ಹೆಚ್ಚು, ಅಂದರೆ 210ಕ್ಕೂ ಅಧಿಕ ಸೀಟುಗಳಲ್ಲಿ ಜಯ ಸಾಧಿಸುವ ಮೂಲಕ ಬಂಗಾಲದಲ್ಲಿ ನಡೆಯುವುದು ದೀದಿ ದರ್ಬಾರ್‌ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಸ್ವಕ್ಷೇತ್ರ ನಂದಿಗ್ರಾಮದಲ್ಲಿ ಮಾತ್ರ ಗೆಲ್ಲಲಾಗಲಿಲ್ಲ.

ಸತತ 2 ಬಾರಿ ಅಧಿಕಾರದಲ್ಲಿದ್ದ ಕಾರಣ ಸಹಜವಾಗಿಯೇ ಟಿಎಂಸಿ ವಿರುದ್ಧ ಆಡಳಿತವಿರೋಧಿ ಅಲೆ ಇತ್ತಾದರೂ, ಅದನ್ನು ದಾಟಿ ಬರುವಲ್ಲಿ ಮಮತಾ ಯಶಸ್ವಿಯಾಗಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷದ ಶಾಸಕರು, ಪ್ರಮುಖ ನಾಯಕರ ಸಾಲು ಸಾಲು ವಲಸೆ, ಪ್ರಧಾನಿ ಮೋದಿ, ಅಮಿತ್‌ ಶಾ, ಯೋಗಿ ಮತ್ತಿತರ ಬಿಜೆಪಿ ಘಟಾನುಘಟಿಗಳ ಸತತ ರ್ಯಾಲಿಯ ನಡುವೆಯೂ ಏಕಾಂಗಿಯಾಗಿ ಹೋರಾಡಿದ ದೀದಿ ತಮ್ಮ ಪಕ್ಷವನ್ನು ಮತ್ತೂಮ್ಮೆ ಗದ್ದುಗೆಗೆ ಏರಿಸಿದ್ದಾರೆ. ಬಂಗಾಲದ ಸಂಸ್ಕೃತಿ, ಹೊರಗಿನವರು-ಒಳಗಿವರು ಕಾರ್ಡ್‌ ಪ್ರಯೋಗಿಸಿ, ತಮ್ಮ ಕಾಲಿಗಾದ ಗಾಯವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಗಾಲಿ ಕುರ್ಚಿಯಲ್ಲಿಯೇ ಪ್ರಚಾರಗೈದು ತಮ್ಮ ಪಕ್ಷದ ಮತದಾರರನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದು ಮಾತ್ರವಲ್ಲದೇ, ಎಡಪಕ್ಷ+ಕಾಂಗ್ರೆಸ್‌ನ ಮತಗಳನ್ನೂ ಸೆಳೆದುಕೊಂಡಿದ್ದಾರೆ.

ರವಿವಾರ ಪ್ರಕಟವಾದ ಫ‌ಲಿತಾಂಶದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ 215 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 74ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಡಪಕ್ಷ ಹಾಗೂ ಕಾಂಗ್ರೆಸ್‌ ಮೈತ್ರಿಕೂಟ ಕೇವಲ 2 ಸೀಟುಗಳಿಗೆ ತೃಪ್ತಿಪಟ್ಟುಕೊಂಡರೆ, ಮತ್ತೂಂದು ಸೀಟು ಇತರರ ಪಾಲಾಗಿದೆ.

ಬಿಜೆಪಿ 3ರಿಂದ 74: ಹಾಗೆ ನೋಡಿದರೆ, 2016ರ ಚುನಾವಣೆಯಲ್ಲಿ ಬಂಗಾಲದಲ್ಲಿ ಕೇವಲ 3 ಸೀಟುಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಉತ್ತಮ ಸಾಧನೆ ಮಾಡಿದೆ. 3ರಲ್ಲಿದ್ದ ಬಿಜೆಪಿಯ ಸ್ಥಾನ ಈಗ 74ಕ್ಕೇರಿದ್ದು ಎರಡನೇ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಡಪಕ್ಷ+ಕಾಂಗ್ರೆಸ್‌ ಮೈತ್ರಿಕೂಟವು ಧೂಳೀಪಟವಾಗಿದ್ದು, ಆ ಪಕ್ಷದ ಮತದಾರರು ಬಿಜೆಪಿ ಹಾಗೂ ಟಿಎಂಸಿಯತ್ತ ವಾಲಿರುವುದು ಈ ಫ‌ಲಿತಾಂಶದಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಂಗಾಲದಲ್ಲಿ ಇನ್ನಷ್ಟು ಶ್ರಮ ಹಾಗೂ ಪಕ್ಷ ಸಂಘಟನೆ ಮಾಡಿದರೆ, ಬಿಜೆಪಿಗೆ ಉತ್ತಮ ಭವಿಷ್ಯವಿದೆ ಎಂದೇ ಹೇಳಬಹುದು.

Advertisement

ಫ‌ಲಿಸದ ಬಿಜೆಪಿ ಕಾರ್ಯತಂತ್ರ: 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಬಂಗಾಲದಲ್ಲಿ 18 ಸೀಟುಗಳನ್ನು ಗೆದ್ದು, ಶೇ.40.2ರಷ್ಟು ಮತಗಳನ್ನು ಪಡೆದಿತ್ತು. ಆಗಲೇ, 2021ರಲ್ಲಿ ಮಮತಾರನ್ನು ಸೋಲಿಸುವುದು ನಮಗೆ ಕಷ್ಟವಲ್ಲ ಎಂಬ ಅಭಿಪ್ರಾಯ ಪಕ್ಷದಲ್ಲಿ ಬಲವಾಗತೊಡಗಿತು. ದೀದಿಗೆ ಒಂದು ಕಾಲದಲ್ಲಿ ಅತ್ಯಂತ ಆಪ್ತರಾಗಿದ್ದ ಮುಕುಲ್‌ ರಾಯ್‌, ಸುವೇಂದು ಅಧಿಕಾರಿಯನ್ನು ತನ್ನತ್ತ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಇವರಿಬ್ಬರೂ ಬಿಜೆಪಿಗೆ ಬಂದಿದ್ದೇ ತಡ, ಟಿಎಂಸಿಯಿಂದ ಸಾಲು ಸಾಲು ಶಾಸಕರು, ನಾಯಕರ ವಲಸೆ ಆರಂಭವಾಯಿತು. ಅದರ ಜತೆಗೇ ಬಂಗಾಲದ ನಟಿ-ನಟಿಯರನ್ನು ಪಕ್ಷಕ್ಕೆ ಕರೆತಂದು ಬಿಜೆಪಿ ಟಿಕೆಟ್‌ ನೀಡಲಾಯಿತು. ಇನ್ನು, ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್‌ ಒವೈಸಿ, ಐಎಸ್‌ಎಫ್ ನಾಯಕ ಅಬ್ಟಾಸ್‌ ಸಿದ್ದಿಕಿ ಅವರು ಖಂಡಿತಾ ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಿ, ದೀದಿ ವೋಟ್‌ಬ್ಯಾಂಕ್‌ಗೆ ಹಾನಿ ಮಾಡುತ್ತಾರೆ ಎಂದು ಬಿಜೆಪಿ ನಂಬಿತ್ತು. ಆದರೆ ದೀದಿಯ ಏಕಾಂಗಿ ಹೋರಾಟದ ಮುಂದೆ ಬಿಜೆಪಿಯ ಯಾವ ಕಾರ್ಯತಂತ್ರವೂ ಫ‌ಲಿಸಲಿಲ್ಲ.

ನಂದಿಗ್ರಾಮದಲ್ಲಿ ಸೋತರೂ ದೀದಿ ಸಿಎಂ ಆಗ್ತಾರಾ? :

ತಮ್ಮ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದ ಮಮತಾ, ನಂದಿಗ್ರಾಮದಲ್ಲಿ ತಮ್ಮ ಒಂದು ಕಾಲದ ಆಪ್ತ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಸೋಲುಂಡಿದ್ದಾರೆ. ದೀದಿ ಸೋತಿರುವ ಕಾರಣ ಅವರು “ಸಿಎಂ’ ಹುದ್ದೆಗೆ ಏರಲು ಆಗುತ್ತದೆಯೇ ಎಂಬ ಪ್ರಶ್ನೆ ಹಲವರದ್ದು. ಅದಕ್ಕೆ ಉತ್ತರ ಇಲ್ಲಿದೆ: ದೀದಿ ಸಿಎಂ ಹುದ್ದೆಗೆ ಏರಲು ಸಾಧ್ಯವಿದೆ. ಇಲ್ಲಿ ಅವರಿಗೆ 2 ಆಯ್ಕೆಗಳಿವೆ: ಮೊದಲನೆಯದ್ದು, ಟಿಎಂಸಿಯ ನೂತನ ಶಾಸಕರು ಮಮತಾರನ್ನು ಶಾಸಕಾಂಗ ಪಕ್ಷದ ನಾಯಕಿ ಎಂದು ಘೋಷಿಸುವುದು. ಇದಾದ ಬಳಿಕ 6 ತಿಂಗಳ ಒಳಗಾಗಿ ವಿಧಾನಪರಿಷತ್‌ ಸದಸ್ಯೆ(ಎಂಎಲ್‌ಸಿ)ಯಾಗಿ ಆಯ್ಕೆಯಾಗಿ ಮಮತಾ ಸಿಎಂ ಹುದ್ದೆಗೆ ಏರಬಹುದು. ಎರಡನೆಯದ್ದು, ಖಾಲಿಯಿರುವ ಯಾವುದಾದರೂ ಕ್ಷೇತ್ರ(ಉದಾ: ಖರ್ದಾಹಾ)ದಲ್ಲಿ ನಾಮಪತ್ರ ಸಲ್ಲಿಸಿ, 6 ತಿಂಗಳೊಳಗೆ ಉಪಚುನಾವಣೆಯಲ್ಲಿ ಗೆದ್ದು ಬಂದು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಬಹುದು. ನಿತೀಶ್‌ ಕುಮಾರ್‌, ಯೋಗಿ ಆದಿತ್ಯನಾಥ್‌, ಉದ್ಧವ್‌ ಠಾಕ್ರೆ, ಮಾಯಾವತಿ, ಅಖೀಲೇಶ್‌, ಮನೋಹರ್‌ ಪರ್ರಿಕರ್‌ ಮತ್ತಿತರರು ಕೂಡ ಈ ರೀತಿಯ ಅವಕಾಶ ಬಳಸಿಕೊಂಡು ಸಿಎಂ ಹುದ್ದೆಗೆ ಏರಿದ್ದರು.

ಬಿಜೆಪಿ ಕಚೇರಿಗೆ ಬೆಂಕಿಹಚ್ಚಿದ ವೀಡಿಯೋ ವೈರಲ್‌ :

ಅರಾಮ್‌ಬಾಗ್‌ ಕ್ಷೇತ್ರದಲ್ಲಿ ಟಿಎಂಸಿ ಭಾರೀ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಇತ್ತ ಬಿಜೆಪಿ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ವೀಡಿಯೋ ವೈರಲ್‌ ಆಗಿದೆ. ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಸುಜಾತಾ ಮೊಂಡಲ್‌ ಖಾನ್‌ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ ಮುಂದಿನ 5 ವರ್ಷ ಬಂಗಾಲ ಇದೇ ರೀತಿಯ ಸಂಕಷ್ಟ ಎದುರಿಸಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಸಿಪಿಎಂ ಯುವಮುಖಗಳಿಗೆ ನಿರಾಸೆ :

ಇತ್ತೀಚಿನ ವರ್ಷಗಳಲ್ಲಿ ತನ್ನ ವೋಟರ್‌ ಬೇಸ್‌ ಅನ್ನು ಕಳೆದುಕೊಂಡಿರುವ ಸಿಪಿಎಂ ಈ ಬಾರಿ ಯುವ ಮುಖಗಳನ್ನು ಕಣಕ್ಕಿಳಿಸುವ ಮೂಲಕ ಅದೃಷ್ಟ ಪರೀಕ್ಷೆಗಿಳಿದಿತ್ತು. ನಂದಿಗ್ರಾಮದಲ್ಲಿ ಮೀನಾಕ್ಷಿ ಮುಖರ್ಜಿ, ಜಮುರಿಯಾದಲ್ಲಿ ಐಷ್‌ ಘೋಷ್‌, ಸಿಂಗೂರ್‌ನಲ್ಲಿ ಶ್ರೀಜನ್‌ ಭಟ್ಟಾಚಾರ್ಯ, ಬ್ಯಾಲ್ಲಿಯಲ್ಲಿ ದೀಪ್ಸಿತಾ ಧರ್‌ರಂಥ ಯುವಜನರಿಗೆ ಪಕ್ಷ ಟಿಕೆಟ್‌ ನೀಡಿತ್ತು. ಆದರೆ ಇವರೆಲ್ಲರೂ ಸೋಲುಂಡಿದ್ದು, ಎಡರಂಗಕ್ಕೆ ತೀವ್ರ ನಿರಾಸೆ ಉಂಟಾಗಿದೆ.

ವ್ಹೀಲ್ಚೇರ್ನಿಂದ ವಿಜಯದ ಮಾಲೆವರೆಗೆ

ಮತ ಸಂಗ್ರಾಮದ ಆರಂಭದ ದಿನದಿಂದ ಫ‌ಲಿತಾಂಶದ ಕಟ್ಟಕಡೆಯ ನಿಮಿಷದವರೆಗೂ ನಂದಿಗ್ರಾಮ ದೇಶದ ಜನರ ಗಮನ ಸೆಳೆದಿತ್ತು. ಒಂದು ಕಾಲದ ಆಪ್ತರು, ಇಲ್ಲಿ ಬದ್ಧವೈರಿಗಳಾಗಿ ಅಖಾಡವನ್ನು ರಂಗೇರಿಸಿದ್ದರು. ಬಿಜೆಪಿ ತೆಕ್ಕೆಗೆ ಸೇರಿ ಸುವೇಂದು ಅಧಿಕಾರಿ ನೀಡಿದ ಪಂಥಾಹ್ವಾನ ಸ್ವೀಕರಿಸಿದ್ದ ಮಮತಾ ಬ್ಯಾನರ್ಜಿ, ವ್ಹೀಲ್‌ಚೇರ್‌ನಲ್ಲಿ ಕ್ರಮಿಸಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. “ದೀದಿ ಹಿಂದೂ ವಿರೋಧಿ’ ಎಂದು ಸುವೇಂದು ಪಟ್ಟ ಕಟ್ಟಲು ಮುಂದಾದಾಗ, ಆರೋಪಗಳಿಂದ ಕಳಚಿಕೊಳ್ಳಲು ನಾನಾ ತಂತ್ರ ಗಳನ್ನೂ ಅನುಸರಿಸಿದರು. ದೇಗುಲ ಯಾತ್ರೆ, ಚಂಡಿಸ್ತೋತ್ರ ಪಠಣ, ಗೋತ್ರ ವಿಚಾರಗಳನ್ನು ಮಮತಾ ಪ್ರತ್ಯಸ್ತ್ರಗಳಂತೆ ಪ್ರಯೋಗಿಸಿದ್ದರು. ಈ ಎಲ್ಲ ವಿವಾದಗಳನ್ನು ದಾಟುತ್ತಾ, ಫ‌ಲಿತಾಂಶದ ದಿನಕ್ಕೆ ಬಂದಾಗಲೂ ನಂದಿಗ್ರಾಮ ಅಕ್ಷರಶಃ “ಹಾವು-ಏಣಿ’ ಆಟಕ್ಕೆ ಸಾಕ್ಷಿಯಾಗಿತ್ತು. ಅಂಚೆ ಮತದಲ್ಲಿ ಮಮತಾ ಮುನ್ನಡೆ ಕಂಡರೆ, ಅನಂತರ ಸುವೇಂದು ಸ್ಪರ್ಧೆಯಲ್ಲಿ ಮುಂದಿರುವಂತೆ ತೋರಿತ್ತು. ಕೂದಲೆಳೆ ಅಂತರದಲ್ಲಿ ಒಮ್ಮೆ ಅವರು, ಮತ್ತೂಮ್ಮೆ ಇವರು ಎಂಬ ಕುತೂಹಲ ಸಾಗುತ್ತಾ, ಅಂತಿಮವಾಗಿ ವಿಜಯದ ಮಾಲೆ ಬಿದ್ದಿದ್ದು ಮಾತ್ರ ಸುವೇಂದು ಕೊರಳಿಗೆ. ಆದರೆ ಇದಕ್ಕೂ ಕೆಲವೇ ನಿಮಿಷಗಳ ಮುನ್ನ ಮಾಧ್ಯಮಗಳು “ಮಮತಾಗೆ ಜಯ’ ಎಂದು ಘೋಷಿಸಿದ ಪ್ರಸಂಗವೂ ಕಂಡುಬಂತು.

ಬಂಗಾಲ ಇಂದು  ಭಾರತವನ್ನು ರಕ್ಷಿಸಿತು‘ :

“ಇದು ಬಂಗಾಲದ ಜನರಿಗೆ ಸಂದ ಜಯ, ಪ್ರಜಾಸತ್ತೆಗೆ ಸಿಕ್ಕ ಜಯ. ಬಂಗಾಲವು ಇಂದು ಭಾರತವನ್ನು ರಕ್ಷಿಸಿತು. ನಾವು ಆಡಿ ಗೆದ್ದೆವು…’ ಪಕ್ಷವು 3ನೇ ಅವಧಿಗೆ ಅಧಿಕಾರಕ್ಕೆ ಬರುವುದು ಖಚಿತವಾಗುತ್ತಿದ್ದಂತೆ ಮಮತಾ ಬ್ಯಾನರ್ಜಿ ಆಡಿದ ಮಾತುಗಳಿವು. ಗಾಲಿ ಕುರ್ಚಿಯಲ್ಲಿದ್ದ ದೀದಿ ಸುಮಾರು 2 ತಿಂಗಳ ಬಳಿಕ ಎದ್ದು ನಿಂತು ಮಾತನಾಡಿದ್ದು, “ಮೋದಿ,  ಡಬಲ್‌ ಎಂಜಿನ್‌ ಸರಕಾರದ ಬಗ್ಗೆ ಮಾತಾಡುತ್ತಿದ್ದರು. ಆದರೆ ಈಗ ನಮ್ಮ ಪಕ್ಷ ಡಬಲ್‌ ಸೆಂಚುರಿ ಬಾರಿಸಿದೆ. ನಂದಿಗ್ರಾಮದಲ್ಲಿ ಕಿಡಿಗೇಡಿತನದ ಕೆಲಸಗಳು ನಡೆದಿವೆ. ಅದರ ವಿರುದ್ಧ ಕೋರ್ಟ್‌ ಮೆಟ್ಟಿಲೇರುತ್ತೇನೆ. ಆದರೂ, ನಾನು ಅಲ್ಲಿನ ಜನಾದೇಶವನ್ನು ಸ್ವೀಕರಿಸುತ್ತೇನೆ’ ಎಂದಿದ್ದಾರೆ.

ಟಿಎಂಸಿ ಗೆಲುವಿಗೆ ಕಾರಣ :

ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ವರ್ಚಸ್ಸು ಹಾಗೂ ಜನಪ್ರಿಯತೆ. ಬಿಜೆಪಿ ಹಾಗೂ ಎಡಪಕ್ಷಗಳ ವಿರುದ್ಧ ಏಕಾಂಗಿ ಹೋರಾಟ.

ಮಹಿಳೆಯರ ಮತಗಳ ಬಲ. ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.49ರಷ್ಟು ಮಹಿಳಾ ಮತ ದಾರರಿದ್ದು, 50 ಮಹಿಳೆಯರಿಗೆ ಟಿಎಂಸಿ ಟಿಕೆಟ್‌ ನೀಡಿತ್ತು. ಇದು ಟಿಎಂಸಿಗೆ ನೆರವಾಯಿತು.

ಟಿಎಂಸಿಯು ಬಿಜೆಪಿ ವಿರುದ್ಧ ಬಳಸಿದ “ಒಳಗಿನವರು ವರ್ಸಸ್‌ ಹೊರಗಿನವರು’ ಅಸ್ತ್ರ

ಎಡಪಕ್ಷಗಳು ಹಾಗೂ ಕಾಂಗ್ರೆಸ್‌ಗೆ ಹೋಗುತ್ತಿದ್ದ ಅಲ್ಪಸಂಖ್ಯಾಕ ಮತಗಳೆಲ್ಲ ಏಕಾಏಕಿ ಮಮತಾ ಬ್ಯಾನರ್ಜಿ ಕಡೆಗೆ ತಿರುಗಿದ್ದು.

ನಂದಿಗ್ರಾಮದಲ್ಲಿ ದೀದಿಯ ಕಾಲಿಗೆ ಆದ ಗಾಯ, ವ್ಹೀಲ್‌ಚೇರ್‌ನಲ್ಲಿ ನಡೆಸಿದ ಪ್ರಚಾರ ಅನುಕಂಪದ ಮತಗಳನ್ನು ತಂದುಕೊಟ್ಟಿದ್ದು.

ಬಿಜೆಪಿ ಸೋಲಿಗೆ ಕಾರಣ :

ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದೇ ಇದ್ದಿದ್ದು. ಮಮತಾ ಬ್ಯಾನರ್ಜಿ ವರ್ಚಸ್ಸಿಗೆ ಮ್ಯಾಚ್‌ ಆಗುವಂತ ನಾಯಕನ ಕೊರತೆ

ಮಮತಾರನ್ನು ವ್ಯಂಗ್ಯವಾಡಲು ಮೋದಿ ಬಳಸಿದ “ದೀದಿ ಓ ದೀದಿ’ ಎಂಬ ಘೋಷಣೆಯು ಮಹಿಳಾ ಮತದಾರರನ್ನು ಕೆರಳಿಸಿದ್ದು.

ಚುನಾವಣೆ ಸಮಯದಲ್ಲೇ ಎಲ್‌ಪಿಜಿ ಸಿಲಿಂಡರ್‌ ದರ, ತೈಲ ದರ ಸೇರಿದಂತೆ ಅತೀ ಅವಶ್ಯಕ ವಸ್ತುಗಳ ದರದಲ್ಲಾದ ಏರಿಕೆ.

ಟಿಕೆಟ್‌ ಘೋಷಣೆ ಬಳಿಕ ಪಕ್ಷದೊಳಗೇ ಉಂಟಾದ ಭಿನ್ನಮತ. ಬಿಜೆಪಿಯತ್ತ ಟಿಎಂಸಿ ಶಾಸಕರ ವಲಸೆ ತಿರುಗುಬಾಣವಾಗಿದ್ದು

ದೀದಿ ವಿರುದ್ಧ ಆಡಳಿತ ವಿರೋಧಿ ಅಲೆ  ಕೆಲಸ ಮಾಡಲಿದೆ ಎಂಬ ಅತೀಯಾದ ಆತ್ಮವಿಶ್ವಾಸದಿಂದ ಮೈಮರೆತಿದ್ದು.

Advertisement

Udayavani is now on Telegram. Click here to join our channel and stay updated with the latest news.

Next