ಘಟನೆಗೆ ಟಿಎಂಸಿ ಸರಕಾರವೇ ಕಾರಣ: ನಡ್ಡಾ ಟೀಕೆ
12 ತಾಸು ಉತ್ತರ ದಿನಾಜ್ಪುರ ಬಂದ್ಗೆ ಬಿಜೆಪಿ ಕರೆ
ರಾಯ್ ಜೇಬಲ್ಲಿತ್ತು ಆತ್ಮಹತ್ಯಾ ನೋಟ್
ಕೋಲ್ಕತಾ: ಪಶ್ಚಿಮ ಬಂಗಾಲದ ಉತ್ತರ ದಿನಾಜ್ಪುರದ ಹೆಮ್ಜಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ದೇವೇಂದ್ರನಾಥ ರಾಯ್ (60) ಮೃತ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಕ್ಷೇತ್ರದ ಬಿಂದಾಲ್ ಎಂಬ ಗ್ರಾಮದ ಅಂಗಡಿಯೊಂದರ ಜಗಲಿಯಲ್ಲಿ ಮೃತದೇಹ ಸಿಕ್ಕಿದೆ. ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವಿನ ಜಗಳದ ನಡುವೆಯೇ ಈ ಘಟನೆ ನಡೆದಿರುವುದು ಎರಡೂ ಪಕ್ಷಗಳ ತಿಕ್ಕಾಟಕ್ಕೆ ಮತ್ತಷ್ಟು ಕಿಚ್ಚು ಹಚ್ಚುವ ಸಾಧ್ಯತೆ ಇದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಈ ಘಟನೆಯನ್ನು ಖಂಡಿಸಿದ್ದು, ಇದೊಂದು ಕೊಲೆ. ಟಿಎಂಸಿ ಸರಕಾರವೇ ಘಟನೆಗೆ ಕಾರಣ ಎಂದು ದೂರಿದ್ದಾರೆ.
“ರವಿವಾರ ಮಧ್ಯ ರಾತ್ರಿ ಕೆಲ ವ್ಯಕ್ತಿಗಳು ನಮ್ಮ ಮನೆಗೆ ಬಂದು ಶಾಸಕ ದೇವೇಂದ್ರನಾಥ್ ರಾಯ್ ಅವರನ್ನು ಕರೆದುಕೊಂಡು ಹೋದರು’ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ದೇವೇಂದ್ರ ನಾಥ ರಾಯ್ ಜೇಬಿನಲ್ಲಿ ಡೆತ್ನೋಟ್ ದೊರೆತಿದೆ. ಅವರ ಸಾವಿಗೆ ಇಬ್ಬರ ಹೆಸರನ್ನು ನಮೂದಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕ ರಾಯ್ ಕುಟುಂಬ ಪ್ರಕರಣದ ಬಗ್ಗೆ ಸಿಬಿಐನಿಂದಲೇ ತನಿಖೆಯಾಗಬೇಕು ಎಂದು ಒತ್ತಾ ಯಿಸಿದೆ. ರಾಜಕೀಯವಾಗಿಯೂ ಈ ಪ್ರಕರಣ ಕಾವು ಪಡೆಯಲಾರಂಭಿಸಿದೆ. “ಟಿಎಂಸಿ ಗೂಂಡಾ ಗಳಿಂದಲೇ ಈ ಹತ್ಯೆ ನಡೆದಿದೆ. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ 12 ಗಂಟೆಗಳ ಕಾಲ ಉತ್ತರ ದಿನಾಜ್ಪುರ ಬಂದ್ಗೆ ಕರೆ ನೀಡಿದ್ದೇವೆ’ ಎಂದು ಬಿಜೆಪಿ ಹೇಳಿದೆ.
ಹೆಮ್ಜಾಬಾದ್ ಮೀಸಲು ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ದೇವೇಂದ್ರನಾಥ್ ರಾಯ್ ಗೆಲುವು ಸಾಧಿಸಿದ್ದರು. 2016ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಇದೇ ಕ್ಷೇತ್ರದಿಂದ ಶಾಸಕರಾಗಿ ಮರು ಆಯ್ಕೆಯಾಗಿದ್ದರು. ಘಟನೆ ಕುರಿತು ಬಿಜೆಪಿ ಅಧ್ಯಕ್ಷ, ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಕ್ರಿ ಯಿ ಸಿದ್ದು, ಇದು ಕೊಲೆಯಾಗಿರುವ ಶಂಕೆಯಿದೆ. ಬಂಗಾಲ ಗೂಂಡಾ ರಾಜ್ಯವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ ವಾಗಿದೆ ಎಂದು ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಲ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಪ್ರತಿಕ್ರಿಯೆ ನೀಡಿ ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಬೇಕು. ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸಿ ಸತ್ಯಾಂಶ ಹೊರ ಬರ ಬೇಕೆಂದು ಒತ್ತಾಯಿಸಿದ್ದಾರೆ.