Advertisement

ಮಿಟಗಾನಹಳ್ಳಿಗೆ ಸ್ವಾಗತ!

07:43 AM Jul 29, 2019 | Team Udayavani |

ಮಾವಳ್ಳಿಪುರ, ಮಂಡೂರು, ಬಾಗಲೂರು, ಬಿಂಗೀಪುರ ಆಯ್ತು. ಬೆಳ್ಳಳ್ಳಿ ಕ್ವಾರಿ ಕೂಡ ಕಸದಿಂದ ಭರ್ತಿಯಾಗಿದ್ದಾಯ್ತು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ಮಿಟಗಾನಹಳ್ಳಿಯತ್ತ ಮುಖಮಾಡಿದೆ.

Advertisement

ಈ ಹಿಂದೆಯೂ ಮಿಟಗಾನಹಳ್ಳಿಯಲ್ಲಿ ಮಿಶ್ರ ತ್ಯಾಜ್ಯ ಸುರಿಯಲಾಗಿದೆ. ಈ ರೀತಿ ನಗರದ ಹೊರವಲಯದ ಒಂದೊಂದೇ ಪ್ರದೇಶಗಳಲ್ಲಿ ಮಿಶ್ರ ತ್ಯಾಜ್ಯ ಸುರಿಯುತ್ತಿರುವುದು ಆಯಾ ಪ್ರದೇಶಗಳಲ್ಲಿ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಬೆಂಗಳೂರಿನ ಮಿಶ್ರ ತ್ಯಾಜ್ಯಕ್ಕೆ ಸೊರಗಿರುವ ಪ್ರದೇಶಗಳಲ್ಲಿ ಬೆಳ್ಳಳ್ಳಿಯೂ ಒಂದು. ಇಷ್ಟು ದಿನ ಮಿಶ್ರ ತ್ಯಾಜ್ಯಕ್ಕೆ ತನ್ನ ಒಡಲು ನೀಡಿದ್ದ ಈ ಪ್ರದೇಶದಲ್ಲಿ ಈಗ ಬೆಟ್ಟದೆತ್ತರ ತ್ಯಾಜ್ಯ ತುಂಬಿಕೊಂಡಿದೆ. ಬೆಳ್ಳಳ್ಳಿಯ ಕ್ವಾರಿಯಲ್ಲಿ 2016ರ ಏಪ್ರಿಲ್ನಿಂದ ತ್ಯಾಜ್ಯ ಸುರಿಯುತ್ತಿದ್ದು, ಮಿಶ್ರ ತ್ಯಾಜ್ಯ ಸುರಿಯುವುದಕ್ಕೆ ಇಲ್ಲಿನ 22 ಎಕರೆ ಪ್ರದೇಶ ಬಳಸಿಕೊಳ್ಳಲಾಗಿದೆ. ಇಲ್ಲಿ ಪ್ರತಿ ದಿನ 300ಕ್ಕೂ ಹೆಚ್ಚು ಲಾರಿಗಳಲ್ಲಿ 2000-2500 ಟನ್‌ ಮಿಶ್ರ ತ್ಯಾಜ್ಯ ಸುರಿಯಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 17 ಲಕ್ಷ ಟನ್‌ ಕಸ ಇಲ್ಲಿ ಬಂದುಬಿದ್ದಿದೆ.

ಈ ಪ್ರಮಾಣದಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಬೇಕಾದ ವೈಜ್ಞಾನಿಕ ಕ್ರಮಗಳನ್ನು ಬಿಬಿಎಂಪಿ ಅಳವಡಿಸಿಕೊಂಡಿದೆ. ಬೆಳ್ಳಳ್ಳಿ ಕ್ವಾರಿಯಲ್ಲಿ 1.2 ಲಕ್ಷ ಲೀಟರ್‌ ಸಂಗ್ರಹ ಸಾಮಾರ್ಥ್ಯದ ಲಿಚೆಟ್ (ತ್ಯಾಜ್ಯದಿಂದ ಉತ್ಪತ್ತಿಯಾಗುವ ರಸ) ಸಂಸ್ಕರಣಾ ಘಟಕ ಸಹ ಇದೆ. ಆದರೂ ಮಳೆಯಿಂದ ಲಿಚೆಟ್ ಹೊರಗೆ ಹರಿಯುವುದು ಮತ್ತು ಅಂತರ್ಜಲ ಸೇರುವುದು ತಪ್ಪಿಲ್ಲ. ಈಗ ಮಿಟಗಾನಹಳ್ಳಿಯಲ್ಲಿ ಮಿಶ್ರತ್ಯಾಜ್ಯ ಹಾಕುವುದಕ್ಕೆ ಬಿಬಿಎಂಪಿ ಟೆಂಡರ್‌ ಕರೆದಿದೆ.

ವಿಲೇವಾರಿ ಕ್ರಮಗಳೇನು?

ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಿದ ಮೇಲೆ ಮತ್ತು ಮಾಡುವ ಮುನ್ನ ಹಲವು ರೀತಿಯ ವೈಜ್ಞಾನಿಕ ಕ್ರಮ ಅನುಸರಿಸಬೇಕಾಗುತ್ತಿದೆ. ವಿಲೇವಾರಿ ಮಾಡುವ ಪ್ರದೇಶದಲ್ಲಿ ಸಿಮೆಂಟ್ನಿಂದ ತೇಪೆ ಹಾಕಲಾಗುತ್ತದೆ ಮತ್ತು ಈ ಭಾಗದಲ್ಲಿ ಕೊಳೆತ ತ್ಯಾಜ್ಯದಿಂದ ಉತ್ಪತ್ತಿಯಾಗುವ ಲಿಚೆಟ್, ಅಂತರ್ಜಲ ಕಲುಷಿತ ಮಾಡುವುದನ್ನು ತಡೆಯುವುದಕ್ಕೆ ಪಾಲಿಥಿನ್‌ ಶೀಟ್ ಹಾಕಬೇಕಾಗುತ್ತದೆ. ತ್ಯಾಜ್ಯದ ಮೇಲೆ ಎರ್ನಾಕುಲಂ ಎಂಬ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತದೆ. ಜತೆಗೆ ಈ ಪ್ರದೇಶದಲ್ಲಿ ಲಿಚೆಟ್ ಟ್ರೀಟ್ಮೆಂಟ್ ಪ್ಲಾಂಟ್ ವ್ಯವಸ್ಥೆ ಹಾಗೂ ಮಿಥೇನ್‌ ಅನಿಲ ತೆಗೆಯುವುದಕ್ಕೂ ಕೊಳವೆ ಮಾರ್ಗ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಈ ವೆಜ್ಞಾನಿಕ ವಿಧಾನಗಳು ಹಲವು ಡಂಪಿಂಗ್‌ ಯಾರ್ಡ್‌ನಲ್ಲಿ ಪಾಲನೆಯಾಗಿಲ್ಲ. ವ್ಯವಸ್ಥೆ ಮಾಡಿಕೊಂಡ ಮೇಲೂ ಮಳೆ ಬಂದರೆ ಲಿಚೆಟ್ ನೀರು ಅಂತರ್ಜಲವನ್ನು ಸೇರುವುದು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಬೆಳ್ಳಳ್ಳಿ, ಮಿಟಗಾನಹಳ್ಳಿ ಮತ್ತು ಬಾಗಲೂರಿನಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ.

Advertisement

ಬಿಂಗೀಪುರ ಮತ್ತು ಮಂಡೂರು ಸೇರಿದಂತೆ ಹಲವು ಭಾಗಗಳಲ್ಲಿ ಲಿಚೆಟ್ ತೆಗೆಯುವ ಟ್ರೀಟ್ಮೆಂಟ್ ಪ್ಲಾಂಟ್‌ಗಳೇ ಇಲ್ಲ. ಬಿಂಗೀಪುರದ ಡಂಪಿಂಗ್‌ ಯಾರ್ಡ್‌ನ ಲಿಚೆಟ್ ಇಂದಿಗೂ ಕೆರೆಗಳನ್ನು ಸೇರುತ್ತಿದೆ.

ಆ ಬೆಟ್ಟದ ಸುದ್ದಿ ತೆಗೀಬೇಡಿ ಸರ್‌…

ಆ ಬೆಟ್ಟದ ಸುದ್ದಿ ತೆಗೀಬೇಡಿ ಸರ್‌. ನಮ್ಮ ಊರಿನ ನೆಮ್ಮದಿಯನ್ನೇ ಕದಡಿದ್ದ ಬೆಟ್ಟ ಅದು. ನಾನಂತೂ ಕೋಮಾಗೆ ಹೋಗಿ ವಾಪಸ್‌ ಬಂದಿದ್ದೇನೆ. ಅಲ್ಲಿಂದ ಹಾರಿಬರುವ ನೊಣಗಳು, ಮನೆಯಲ್ಲಿನ ದನಗಳ ಕಣ್ಣುಗಳನ್ನು ಮುತ್ತಿಕ್ಕಿದ್ದರಿಂದ ಕಣ್ಣುಗಳೆಲ್ಲಾ ಹುಳು ತುಂಬಿಕೊಂಡು ಒದ್ದಾಡಿದ್ದು ನೆನಪಿಸಿಕೊಂಡರೆ ಈಗಲೂ ಭಯ ಆಗುತ್ತದೆ…!

-ಗುಂಡೂರಿನ ವಿನೋದಮ್ಮ ಹೀಗೆ ಹೇಳುವಾಗ ಅವರ ಬೆನ್ನ ಹಿಂದೆ ಅದೇ ಬೆಟ್ಟ ನಿಂತಿತ್ತು.

ಗುಂಡೂರು ಈ ಹಿಂದೆ ದೇಶಾದ್ಯಂತ ಸುದ್ದಿಯಾಗಿದ್ದ ಮಂಡೂರಿನ ಪಕ್ಕದಲ್ಲೇ ಇದೆ. ಇವೆರಡೂ ಗ್ರಾಮಗಳ ನಡುವೆ ಬೆಟ್ಟವೊಂದು ಉದ್ಭವಿಸಿದೆ. ಅದೇ ಮಿಶ್ರ ಕಸ ವಿಲೇವಾರಿ ಘಟಕ. ಈಗ ಮಂಡೂರಿನಲ್ಲಿ ಕಸ ಸುರಿಯುವುದು ಸ್ಥಗಿತಗೊಂಡಿದೆ. ಆದರೆ, ಅದರ ಕುರುಹುಗಳು ಹಾಗೇ ಉಳಿದಿವೆ. ಇಲ್ಲಿಗೆ ಸಮೀಪದ ಮತ್ತೂಂದು ತ್ಯಾಜ್ಯ ವಿಲೇವಾರಿ ಘಟಕ ಬೆಳ್ಳಳ್ಳಿ ಕೂಡ ಕಸದಿಂದ ತುಂಬಿತುಳುಕುತ್ತಿದೆ. ಪರ್ಯಾಯ ಜಾಗಗಳ ಹುಡುಕಾಟ ನಡೆದಿದೆ. ಈ ಸಂದರ್ಭದಲ್ಲಿ ಮಂಡೂರಿನ ಈಗಿನ ಸ್ಥಿತಿಗತಿಯ ಒಂದು ಮೆಲುಕು ಇಲ್ಲಿದೆ.

ಸುಮಾರು ಎರಡು ವರ್ಷಗಳ ಹಿಂದಿನ ಮಾತು. ಇಡೀ ಬೆಂಗಳೂರಿನ ತ್ಯಾಜ್ಯ ಮಂಡೂರಿಗೆ ಬಂದು ಬೀಳುತ್ತಿತ್ತು. ಅದರ ಹಿಂದೆಯೇ ಊರಲ್ಲಿನ ನಾಯಿಗಳು, ಸೊಳ್ಳೆ-ನೊಣಗಳೆಲ್ಲಾ ಧಾವಿಸುತ್ತಿದ್ದವು. ಇದರಿಂದ ಅಲ್ಲಿ ಜನ ನೆಮ್ಮದಿಯಿಂದ ರಾತ್ರಿ ನಿದ್ದೆ ಮಾಡುವಂತಿರಲಿಲ್ಲ. ಹತ್ತಾರು ಹಸುಗಳು, ಕುರಿಗಳು ಬಲಿಯಾಗಿದ್ದವು. ಕಸದ ದುರ್ವಾಸನೆ ಮೂಗಿಗೆ ಅಡರುತ್ತಿತ್ತು. ಅದನ್ನು ಹೋಗಲಾಡಿಸಲು ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿತ್ತು. ಆದರೆ, ಅದರ ಘಾಟು ಸುತ್ತಲಿನ ಕೃಷಿ ಬೆಳೆಗಳ ಮೇಲೆ ಹಬುತ್ತಿತ್ತು. ಇದರಿಂದ ಬೆಳೆಗಳಿಗೂ ಇಲ್ಲದ ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಈಗ ಸ್ವಲ್ಪ ಚಿತ್ರಣ ಬದಲಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಸೊಳ್ಳೆ, ನೊಣಗಳು, ನಾಯಿಗಳ ಹಾವಳಿ ಕಡಿಮೆ ಆಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಈ ಮಧ್ಯೆ ರಿಯಲ್ ಎಸ್ಟೇಟ್ ವ್ಯವಹಾರ ಗೂಡ ಗರಿಗೆದರಿದೆ. ಇದೆಲ್ಲದರ ನಡುವೆ ಕಸದ ಸುದ್ದಿ ತೆಗೆದರೆ, ಈಗಲೂ ಅಲ್ಲಿನ ಜನ ಭಯ ಬೀಳುತ್ತಾರೆ. ಏಕೆಂದರೆ, ಕ್ವಾರಿಗಳನ್ನು ವೈಜ್ಞಾನಿಕವಾಗಿ ಮುಚ್ಚಿಲ್ಲ. ತ್ಯಾಜ್ಯದ ಬೃಹದಾಕಾರದ ಗುಡ್ಡೆಯ ಮೇಲೆ ಸುಮ್ಮನೇ ಮಣ್ಣು ಹಾಕಲಾಗಿದೆ. ಅದರ ಮೇಲೆ ಕಾಲಿಟ್ಟರೆ ಈಗಲೂ ಅಲ್ಲಲ್ಲಿ ಕಾಲು ಒಳಗಡೆ ಕುಸಿಯುತ್ತದೆ. ಒಂದು ವೇಳೆ ಅಲ್ಲಿ ಜೋರು ಮಳೆ ಸುರಿದರೆ, ಮಣ್ಣು ಕೊಚ್ಚಿಹೋಗಿ ಕಸ ಹೊರಬರಲಿದೆ. ಸೊಳ್ಳೆಗಳ ಉತ್ಪತ್ತಿ, ವಾಸನೆಗೆ ನಾಯಿಗಳು ಮತ್ತೆ ಆ ಗುಡ್ಡೆಯತ್ತ ಧಾವಿಸುವ ಸಾಧ್ಯತೆ ಇದೆ.

ಆತಂಕ ಇನ್ನೂ ಇದೆ:

‘ಮಿಶ್ರ ತ್ಯಾಜ್ಯವೆಲ್ಲಾ ಇಲ್ಲಿ ಬಂದು ಬೀಳುತ್ತಿದ್ದರಿಂದ ದುರ್ವಾಸನೆ ಸಿಕ್ಕಾಪಟ್ಟೆ ಇತ್ತು. ಅದರಿಂದ ನೊಣಗಳಂತೂ ವಿಪರೀತವಾಗಿತ್ತು. ಆ ನೊಣಗಳು ದನಗಳ ಕಣ್ಣುಗಳಲ್ಲಿ ಮುತ್ತಿಕ್ಕುತ್ತಿದ್ದವು. ಇದರಿಂದ ದನಗಳ ಕಣ್ಣುಗಳಲ್ಲಿ ಹುಳುಗಳು ತುಂಬಿಕೊಂಡು ನರಕಯಾತನೆ ಅನುಭವಿಸಿದ್ದವು. ಡೇಂಘೀಯಿಂದ ನಾನಂತೂ ಕೋಮಾ ಸ್ಥಿತಿ ತಲುಪಿದ್ದೆ. ಈಗ ಬದುಕು ಸ್ವಲ್ಪ ಸುಧಾರಿಸಿದೆ. ಆದರೆ ದೊಡ್ಡ ಮಳೆಯಾದರೆ, ಮಣ್ಣು ಕೊಚ್ಚಿಹೋಗಿ ಮತ್ತೆ ಸಮಸ್ಯೆ ಎದುರಾಗುವ ಭೀತಿ ಇನ್ನೂ ಇದೆ’ ಎಂದು ವಿನೋದಮ್ಮ ಆತಂಕ ವ್ಯಕ್ತಪಡಿಸಿದರು. ಈ ಮೊದಲು ಕಸ ಸುರಿಯುತ್ತಿದ್ದಾಗ, ಅದರ ಮೇಲೆ ರಾಸಾಯನಿಕ ಸಿಂಪಡಣೆ ಕೂಡ ಮಾಡಲಾಗುತ್ತಿತ್ತು. ಅದು ಸುತ್ತಲಿನ ಜಮೀನುಗಳಿಗೆ ಹಬ್ಬುತ್ತಿತ್ತು. ಇದರಿಂದ ಇಲ್ಲಿ ಬೆಳೆಯುತ್ತಿದ್ದ ರಾಗಿ, ಸೀಬೆಕಾಯಿ, ಹೂವು, ಮಾವು ಮತ್ತಿತರ ಬೆಳೆಗಳಲ್ಲಿ ರೋಗ ಕಾಣಿಸಿಕೊಳ್ಳುತ್ತಿತ್ತು. ಎಕರೆಗೆ ಹತ್ತು ಪಲಾ ಬರುತ್ತಿದ್ದ ಭತ್ತ, 5ರಿಂದ 7 ಪಲಾ ಬರುತ್ತಿತ್ತು. ಈಗ ಮತ್ತೆ ಮೊದಲಿನಂತೆ ಹತ್ತು ಪಲಾ ಬರುತ್ತಿದೆ ಎಂದು ಥಮ್ಮಸಂದ್ರದ ಕೃಷಿಕ ಮುನೇಗೌಡ ತಿಳಿಸುತ್ತಾರೆ.

ರೋಗಗಳ ಹಾವಳಿ:

ಮಿಶ್ರ ತ್ಯಾಜ್ಯವನ್ನು ಒಂದೆಡೆ ಸುರಿಯುವ ಸುಲಭ ಮಾರ್ಗವನ್ನು ಪಾಲಿಕೆ ಕಂಡುಕೊಂಡಿದೆ. ಆದರೆ, ಆ ಪ್ರದೇಶದ ಜನ ಹಲವು ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಳ್ಳಳ್ಳಿ ನಿವಾಸಿಗಳು ತಿಂಗಳಿಗೆ ಒಮ್ಮೆಯಾದರೂ, ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲ ಕಲುಷಿತವಾಗುತ್ತಿದೆ. ಇಲ್ಲಿನ ಹತ್ತರಲ್ಲಿ ನಾಲ್ಕು ಜನ ಗಂಟಲು ನೋವಿಗೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದಾರೆ. ಜ್ವರ, ಮೈ-ಕೈ ನೋವು ಹಾಗೂ ಚರ್ಮ ರೋಗದಂತಹ ಸಮಸ್ಯೆಗಳು ಮಾಮೂಲಿ ಎನ್ನುವಂತಾಗಿದೆ ಎಂದು ಸ್ಥಳೀಯರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಎನ್‌ಜಿಟಿ ದಂಡ ವಿಧಿಸಿತ್ತು:

ಬೆಂಗಳೂರು ಉತ್ತರ ತಾಲೂಕಿನ ಕ್ವಾರಿಗಳಲ್ಲಿ ಸುರಿದ ತ್ಯಾಜ್ಯದ ಸುರಕ್ಷಿತ ವಿಲೇವಾರಿಗೆ ಬಯೊ-ಮೈನಿಂಗ್‌ ವ್ಯವಸ್ಥೆ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಈ ಹಿಂದೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಆದರೆ, ಪಾಲಿಕೆ ಈ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. ಈ ಧೋರಣೆಯನ್ನು ನ್ಯಾಯಮಂಡಳಿ ತರಾಟೆಗೆ ತೆಗೆದುಕೊಂಡಿತ್ತು ಮತ್ತು ಕಳೆದ ವರ್ಷ ಬಿಬಿಎಂಪಿಗೆ ಕಳೆದ 5 ಕೋಟಿ ರೂ. ದಂಡ ವಿಧಿಸಿತ್ತು. ಅಲ್ಲದೆ, ನಗರದ ಮಿಶ್ರ ತ್ಯಾಜ್ಯ ಸುರಿಯುವ ಪ್ರದೇಶಗಳ ಸುತ್ತ ಬಿಸಿಲಿನ ತಾಪ ಹೆಚ್ಚಾಗಿ ಮಿಥೇನ್‌ ಅನಿಲ ಹೊರಬಂದು, ಬೆಂಕಿ ಕಾಣಿಸಿಕೊಂಡ ಉದಾಹರಣೆಗಳೂ ಇವೆ. ಈ ಹಿಂದೆ ಬಿಂಗೀಪುರ ತ್ಯಾಜ್ಯ ಭೂಭರ್ತಿಯಲ್ಲೂ ಬೆಂಕಿ ಕಾಣಿಸಿಕೊಂಡಿತ್ತು. ಮಾರ್ಚ್‌ನಲ್ಲಿ ಬೆಳ್ಳಳ್ಳಿ ಭೂ ಭರ್ತಿ ಕ್ವಾರಿಯಲ್ಲೂ ಮಿಥೇನ್‌ ಅನಿಲ ಹೊರಬಂದಿದ್ದರಿಂದ ಭಾರತೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ನಿಂಯಂತ್ರಿಸುವಲ್ಲಿ ಇಲ್ಲಿನ ಸಿಬ್ಬಂದಿ ಹೈರಾಣಾಗಿದ್ದರು. ಇದರಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ತಲೆದೋರಿತ್ತು. ಇನ್ನು ಮಂಡೂರಿನ ಡಂಪಿಂಗ್‌ಯಾರ್ಡ್‌ಗೆ ಅಲ್ಲಿನ ಜನರೇ ಬೆಂಕಿಹಾಕಿ, ತ್ಯಾಜ್ಯದಿಂದ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳ ಗಮನಸೆಳೆಯುವುದಕ್ಕೆ ಪ್ರಯತ್ನಿಸಿದ್ದರು.

ಇರುವುದೆಲ್ಲ ಬಿಟ್ಟು!:

ನಗರದಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ವೈಜ್ಞನಿಕವಾಗಿ ಸಂಸ್ಕರಣೆ ಮಾಡುವ ಉದ್ದೇಶದಿಂದ 2015-2016ರಲ್ಲಿ ಕನ್ನಹಳ್ಳಿ, ಸೀಗೇಹಳ್ಳಿ, ಚಿಕ್ಕನಾಗಮಂಗಲ, ಸುಬ್ಬರಾಯನಪಾಳ್ಯ, ಲಿಂಗಧೀರನಹಳ್ಳಿ, ದೊಡ್ಡಬಿದರಕಲ್ಲು ಹಾಗೂ ದೊಡ್ಡಬಳ್ಳಾಪುರದಲ್ಲಿ ಏಳು ಕಡೆ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿತ್ತು ಹಾಗೂ ಕೆಲ ವರ್ಷಗಳ ಹಿಂದೆ ಹಸಿ ತ್ಯಾಜ್ಯ ಸಂಸ್ಕರಣೆಯಿಂದ ವಿದ್ಯುತ್‌ ಉತ್ಪಾದಿಸಿ, ನಗರದ ಬೀದಿದೀಪಗಳಿಗೆ ಬಳಸುವ ಉದ್ದೇಶದಿಂದ 13 ಕಡೆ ಬಯೋ-ಮಿಥನೈಸೇಷನ್‌ ಘಟಕಗಳನ್ನು ಸ್ಥಾಪಿಸಲಾಗಿತ್ತು. ಇದನ್ನು ಪಾಲಿಕೆ ಸರ್ಮಪಕವಾಗಿ ನಿರ್ವಹಿಸಿದಲ್ಲಿ, ಮಿಶ್ರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಎಲ್ಲ ಸಮಸ್ಯೆಗಳ ಮೂಲ ಅಸರ್ಮಪಕ ತ್ಯಾಜ್ಯ ವಿಂಗಡಣೆಯಾಗಿದೆ.
● ವಿಜಯಕುಮಾರ ಚಂದರಗಿ/ ಹಿತೇಶ್‌ ವೈ
Advertisement

Udayavani is now on Telegram. Click here to join our channel and stay updated with the latest news.

Next