Advertisement

BJP ಉಚ್ಚಾಟನೆ ಮಾಡಿರುವುದು ಸ್ವಾಗತಾರ್ಹ: ಮಹೇಶ್ ಠಾಕೂರ್

07:37 PM May 30, 2024 | Team Udayavani |

ಉಡುಪಿ: ‘ಬಿಜೆಪಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಸ್ವೀಕಾರಾರ್ಹ ಮತ್ತು ಸ್ವಾಗತಾರ್ಹ’ ಎಂದು ಮಹೇಶ್ ಠಾಕೂರ್ ಗುರುವಾರ ಪತ್ರಿಕಾ ಹೇಳಿಕೆ ನೀಡಿದ್ದಾರೆ.

Advertisement

‘ಕಳೆದ 23 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯನಾಗಿ ಕೆ. ರಘುಪತಿ ಭಟ್ ಆವರ ಮೂಲಕವೇ ರಾಜಕೀಯ ಪ್ರವೇಶಿಸಿದವನು. ಈ ತನಕವೂ ಮೇರು ಧುರೀಣರೂ, ಪ್ರಾತಃ ಸ್ಮರಣೀಯರೂ ಆದ ಡಾ. ವಿ.ಎಸ್. ಆಚಾರ್ಯರೂ ಸೇರಿದಂತೆ ಪಕ್ಷದ ಅನೇಕ ನಾಯಕರ ಮಾರ್ಗದರ್ಶನ,ಪ್ರೋತ್ಸಾಹದಿಂದ ಮೂರು ಬಾರಿ ನಗರಸಭಾ ಸದಸ್ಯ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ನಗರಾಧ್ಯಕ್ಷ ಹಾಗೂ ಪ್ರಸ್ತುತ ಜಿಲ್ಲಾ ಉಪಾಧ್ಯಕ್ಷ ಸ್ಥಾನದ ವರೆಗೆ ವಿವಿಧ ಜವಾಬ್ದಾರಿಗಳನ್ನು ನೀಡಿದ್ದಕ್ಕೆ ಅತ್ಯಂತ ಅಭಾರಿಯಾಗಿದ್ದೇನೆ. ನನಗೆ ಪಕ್ಷ ಮತ್ತು ಮುಖಂಡರ ಶಿಫಾರಸ್ಸಿನಂತೆ ನೀಡಿದ ಎಲ್ಲ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಶಿರಸಾ ವಹಿಸಿ ನಿರ್ವಹಿಸಿರುವ ಬಗ್ಗೆ ನನಗೆ ಅತೀವ ಸಂತೃಪ್ತಿ ಇದೆ. ಇದೀಗ ಪಕ್ಷ ತೆಗೆದುಕೊಂಡು ನಿರ್ಣಯದಂತೆ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ, ಜಿಲ್ಲಾ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಿರುವುದನ್ನೂ ಅಷ್ಟೇ ವಿನಯವಾಗಿ ಸ್ವಾಗತಿಸುತ್ತೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Udupi: ಬಿಜೆಪಿಯಿಂದ ನಾಲ್ವರು ಪದಾಧಿಕಾರಿಗಳ ಉಚ್ಛಾಟನೆ 

‘ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಸಂದರ್ಭ ಪಕ್ಷದ ರಾಜ್ಯಮಟ್ಟದ ನಾಯಕರು ಕರಾವಳಿಯ ಪ್ರಬುದ್ಧ ಮತದಾರರ ಆಶಯಕ್ಕೆ ವಿರುದ್ಧ ವಾಗಿ ಕೈಗೊಂಡಿರುವ ತೀರ್ಮಾನ ಮತ್ತು ಮಾಜಿ ಶಾಸಕರೂ, ನಮ್ಮ ಮಾರ್ಗದರ್ಶಕರೂ, ಮೂರು ಬಾರಿ ಶಾಸಕರಾಗಿ ‘ನವ ಉಡುಪಿಯ ಅಭಿವೃದ್ಧಿಯ ಹರಿಕಾರ’ರೆಂದೇ ಜನಮನ್ನಣೆ ಪಡೆದ ಮಗುವಿನಂತಹ ಮನಸ್ಸುಳ್ಳ ಸದಾ ಅಭಿವೃದ್ಧಿಯ ಮಂತ್ರವನ್ನೇ ಜಪಿಸುವ ಕೆ. ರಘುಪತಿ ಭಟ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡದೇ ವಂಚಿಸಿರುವುದು ಅರಗಿಸಿಕೊಳ್ಳಲು ಕಷ್ಟಸಾಧ್ಯವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಭಟ್ ಅವರಿಗೆ ವಂಚನೆಯಾದಾಗ ಪಕ್ಷದ ಹಿತದೃಷ್ಟಿಯಿಂದ ಬಂಡಾಯ ಏಳದೇ ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸಿದ್ದೇವೆ. ಆದರೆ ಎರಡನೇ ಬಾರಿ ಪಕ್ಷದ ನಾಯಕರಿಂದ ಆಗಿರುವ ತೀವ್ರ ತಪ್ಪು ಅತ್ಯಂತ ವಿಷಾದನೀಯ’ ಎಂದು ಹೇಳಿದ್ದಾರೆ.

‘ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ತೀರಾ ಆಘಾತಕಾರಿಯಾಗಿದೆ. ಇದಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳದೇ ಇದ್ದರೆ ಪಕ್ಷಕ್ಕೆೆ ದೊಡ್ಡ ಮಟ್ಟದ ಹಾನಿ ತಪ್ಪಿದ್ದಲ್ಲ. ಆದ್ದರಿಂದ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳೇ ಪಕ್ಷದ ಒಳಿತಿಗಾಗಿ ಭಟ್ ಅವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿರುವ ಹಿನ್ನೆೆಲೆಯಲ್ಲಿ ಒತ್ತಡ, ಒತ್ತಾಯಕ್ಕೆ ಮಣಿದು ರಘುಪತಿ ಭಟ್ ಅವರು ಸ್ಪರ್ಧಿಸುತ್ತಿದ್ದಾರೆ. ಖಂಡಿತವಾಗಿಯೂ ಇದು ಪಕ್ಷದ ವಿರುದ್ಧವಲ್ಲ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಆದರೆ ಈ ಸಂದರ್ಭದಲ್ಲಿ ಭಟ್ ಅವರೊಡನೆ ನಿಂತು ಅವರನ್ನು ಗೆಲ್ಲಿಸಲೇ ಬೇಕಾದ ಅನಿವಾರ್ಯತೆ ನನ್ನಂತಹ ಅದೆಷ್ಟೋ ಕಾರ್ಯಕರ್ತರಿಗಿದೆ. ಈಗಲೂ ಹಾಗೂ ಚುನಾವಣೆಯಲ್ಲಿ ಗೆದ್ದ ಅನಂತರವೂ ಭಟ್ಟರೊಂದಿಗೆ ನಾವು ಮತ್ತೆ ಪಕ್ಷದವರೇ ಆಗಿದ್ದೇವೆ, ಆಗಿರುತ್ತೇವೆ’ ಎಂದು ಹೇಳಿದ್ದಾರೆ.

Advertisement

‘ಸದ್ಯದ ಪರಿಸ್ಥಿತಿಯಲ್ಲಿ ಕಠೋರ ವಾಸ್ತವವನ್ನು ಜಿಲ್ಲೆಯ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿ ಇರುವುದರಿಂದ ಅವರ ತೀರ್ಮಾನವನ್ನು ಖಂಡಿತವಾಗಿಯೂ ಪ್ರಶ್ನಿಸುವುದಿಲ್ಲ. ಇದು ತಾತ್ಕಾಲಿಕವೂ ಆಗಿದೆ. ರಘುಪತಿ ಭಟ್ ಅವರ ವಿಜಯದೊಂದಿಗೆ ಕರಾವಳಿಯ ಸುಶಿಕ್ಷಿತರಿಗೆ ನ್ಯಾಯ ಒದಗಿಸಿದ ಬಳಿಕ ನಾಯಕರಿಗೆ ಜ್ಞಾನೋದಯವಾಗುವುದು ನಿಶ್ಚಿತ. ಆದ್ದರಿಂದ ಎಲ್ಲವೂ ಸುಖಾಂತ್ಯವಾಗಿ ಪಕ್ಷಕ್ಕೆ ರಾಜ್ಯದಲ್ಲಿ ಭವಿಷ್ಯವನ್ನು ಸುದೃಢಗೊಳಿಸುವ ನಿಟ್ಟಿನಿಲ್ಲಿ ಭಟ್ ಅವರು ಕೈಗೊಂಡ ತೀರ್ಮಾನವನ್ನು ಸಮ್ಮತಿಸಿ ಅವರೊಂದಿಗೆ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಪಕ್ಷ ನನ್ನ ಮೇಲೆ ಕೈಗೊಂಡ ತೀರ್ಮಾನವನ್ನು ಯಾವುದೇ ಮುನಿಸಿಲ್ಲದೆ ಮನಸಾರೆ ಒಪ್ಪಿ ಸ್ವೀಕರಿಸುತ್ತೇನೆ’ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next