Advertisement

ವಾರ ಭವಿಷ್ಯ: ಈ ವಾರ ಈ ಎರಡು ರಾಶಿಯವರಿಗಿದೆ ಆರ್ಥಿಕ ಅದೃಷ್ಟ

10:13 AM Feb 24, 2020 | keerthan |

23-2-2020 ರಿಂದ 29-2-2020ರ ವರೆಗೆ 
ಮೇಷ : ದೈವಾನುಗ್ರಹದಿಂದ ಕಾರ್ಯಕ್ಷೇತ್ರದಲ್ಲಿ ಹಲವಾರು ತರಹದ ಕೆಲಸ ಕಾರ್ಯಗಳು ನಿಮ್ಮ ಪಾಲಿಗೆ ಒದಗಿಬಂದು ಅವುಗಳಿಂದ ಉಲ್ಲಸಿತರಾಗುವಿರಿ. ಹಾಗೆಯೇ ಆರ್ಥಿಕವಾಗಿ ಅದೃಷ್ಟವು ನಿಮ್ಮ ಪಾಲಿಗಿದ್ದು ಸದ್ಯದಲ್ಲೇ ಇದರ ಸದುಪಯೋಗ ನಿಮ್ಮನ್ನು ಸಂತೃಪ್ತಿಗೊಳಿಸಲಿದೆ. ವ್ಯಾಪಾರ, ಉದ್ಯೋಗ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸು. ಹೊಸ ಉದ್ಯಮಿಗಳಿಗೆ ಅವಕಾಶಗಳು ತೋರಿಬರುತ್ತವೆ. ತಿಂಗಳ ಮಧ್ಯಭಾಗದಲ್ಲಿ ಕೌಟುಂಬಿಕವಾಗಿ ಹಠಾತ್‌ ಏರಿಳಿತಗಳಿಂದ ಅಸಮಾಧಾನವಾಗಲಿದೆ.
ಶುಭವಾರ: ಬುಧ, ಗುರು, ಶುಕ್ರವಾರ

Advertisement

ವೃಷಭ: ವೃತ್ತಿರಂಗದಲ್ಲಿ ಯಾ ಕಾರ್ಯ ಕ್ಷೇತ್ರದಲ್ಲಿ ಕೆಲವೊಂದು ಕೊರತೆಗಳನ್ನು ಸರಿಪಡಿಸಿಕೊಂಡು ಮುಂದುವರಿಯಬೇಕಾದೀತು. ಇದು ನಿಮಗೆ ಸಾಧ್ಯವಾಗಲಿದೆ. ನಿಮ್ಮ ವ್ಯವಹಾರ ಕುಶಲತೆಗೆ ತುಂಬಾ ಬೆಲೆ ಸಿಗಲಿದೆ. ಹಾಗೇ ಸಾಮಾಜಿಕವಾಗಿ ಗೌರವ ಸಂಪಾದಿಸಲಿದ್ದೀರಿ. ಕೌಟುಂಬಿಕವಾಗಿ ಹಿಂದಿನದನ್ನು ಮರೆತು ರಾಜಿ ಮಾಡಿಕೊಳ್ಳಬೇಕಾದೀತು. ವ್ಯಾಪಾರದಲ್ಲಿ ಧಾರಾಳ ಅವಕಾಶದಿಂದ ಆರ್ಥಿಕವಾಗಿ ಉನ್ನತಿ ಬರುವುದು. ದೂರ ಪ್ರಯಾಣದ ಅವಕಾಶಗಳು ಎದುರಾದಾಗ ಅವುಗಳ ಸದುಪಯೋಗ ಮಾಡಿಕೊಂಡಲ್ಲಿ ಉತ್ತಮ.
ಶುಭವಾರ: ಸೋಮ, ಗುರು, ಶನಿವಾರ

ಮಿಥುನ: ಜೀವನರಂಗದಲ್ಲಿ ಹಲವಾರು ವಾಸ್ತವ ಅವಕಾಶಗಳು ಪ್ರಾಪ್ತವಾಗಲಿವೆ. ಹಣಕಾಸಿನ ವಿಚಾರದಲ್ಲಿ ಹಂತ ಹಂತವಾಗಿ ಆದರೆ, ಸ್ಥಿರ ರೂಪದಲ್ಲಿ ಪ್ರಗತಿಗೊಂಡು ಉನ್ನತ ಸ್ಥಿತಿಗೇರುವುದು. ಇತರರು ನಿಮ್ಮ ವಿಶ್ವಾಸವನ್ನು ದುರುಪಯೋಗಿಸದಂತೆ ಗಮನ ಹರಿಸಿರಿ. ಹಾಗೇ ಸ್ವಯಂಕೃತ ಅಪರಾಧಗಳ ಬಗ್ಗೆ ಕಾಳಜಿ ಇರಲಿ. ಜೊತೆಗೆ ಖರ್ಚುವೆಚ್ಚಗಳ ಬಗ್ಗೆ ಹಿಡಿತ ಬಲವಾಗಿರಲಿ. ಇದು ಅನಿವಾರ್ಯ ಕೂಡ. ಮನೆಯಲ್ಲಿ ಮಕ್ಕಳಿಂದ ಸಂತಸ, ನೆಮ್ಮದಿ ದೊರಕಲಿದೆ. ಕ್ರಯ-ವಿಕ್ರಯದಲ್ಲಿ ಉತ್ತಮ ಆದಾಯವಿದ್ದು, ನಿರೀಕ್ಷಿತ ಉದ್ಯೋಗ ಪ್ರಾಪ್ತಿ ಇರುತ್ತದೆ.
ಶುಭವಾರ: ಗುರು, ಶುಕ್ರ, ಭಾನುವಾರ

ಕರ್ಕಾ: ಕಾರ್ಯಕ್ಷೇತ್ರದಲ್ಲಿ ವಿವಿಧ ರೀತಿಯ ಬೆಳವಣಿಗೆಗಳು ಕಂಡು ಬಂದರೂ ಕೊಂಚ ಗೊಂದಲಕ್ಕೆ ಕಾರಣವಾಗುವ ಸಮಸ್ಯೆಗಳಿಂದಾಗಿ ಯಾರನ್ನೂ ನಂಬದಂತಹ ಪರಿಸ್ಥಿತಿಯು ತೋರಿಬರುತ್ತದೆ. ನಿಮಗೆ ದ್ರೋಹ ಬಗೆಯುವ, ಇಲ್ಲವೇ ನಿಮ್ಮಿಂದ ಅನಾವಶ್ಯಕ ತುಂಬಾ ಖರ್ಚು ಮಾಡಿಸುವ ಚಂಚಲ ವ್ಯಕ್ತಿಗಳ ಸಂಪರ್ಕಗಳ ಬಗ್ಗೆ ನಿಗಾ ಇರಲಿ. ಅಂತೂ ನಿಮಗೆ ಹೆಚ್ಚಿನ ಬಿಡುವು ದೊರೆಯದು. ಕೌಟುಂಬಿಕ ವಿಚಾರದಲ್ಲಿ ಸಮಾಧಾನದ ವಾತಾವರಣ. ಪರಿಸ್ಥಿತಿಯಲ್ಲಿ ತುಸು ಚೇತರಿಕೆ ತೋರಿದರೂ ಸಣ್ಣಪುಟ್ಟ ತಪ್ಪು ತಿಳುವಳಿಕೆ ತಲೆದೋರಬಹುದು.
ಶುಭವಾರ: ಬುಧ, ಶುಕ್ರ, ಭಾನುವಾರ

ಸಿಂಹ: ದೈವಾನುಗ್ರಹವು ಉತ್ತಮವಿದ್ದು ಶುಭಕಾಲವು ಆರಂಭವಾಗಲಿದೆ. ತುಸು ಉತ್ಸಾಹ ಹಾಗೂ ಚಟುವಟಿಕೆಯ ಕಾಲ. ವ್ಯವಹಾರ, ಉದ್ಯೋಗ, ವ್ಯಾಪಾರ ರಂಗದಲ್ಲಿ ಅದೃಷ್ಟದ ಆಸರೆ ಸದಾ ಇರುವುದು. ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಪರಿಹರಿಸಿಕೊಳ್ಳುವ ಆತ್ಮವಿಶ್ವಾಸ, ಪ್ರಯತ್ನಶೀಲತೆಯ ಶಕ್ತಿ ಪಡೆಯಲಿದ್ದೀರಿ. ಹಾಗೇ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳ ನಿವಾರಣೆ, ಅನ್ಯೋನ್ಯಭಾವ, ಸಹಕಾರ, ಸುಖ, ಸಂತೋಷ, ಸಮಾಧಾನಗಳು ಬೆಳೆಯಲಿವೆ. ಕೆಲವೊಮ್ಮೆ ಕಠಿಣ ಸನ್ನಿವೇಶಗಳು ಎದುರಾಗುವ ಸಾಧ್ಯತೆ ಇರುತ್ತದೆ.
ಶುಭವಾರ: ಸೋಮ, ಗುರು, ಶನಿವಾರ

Advertisement

ಕನ್ಯಾ: ಕಾರ್ಯರಂಗದಲ್ಲಿ ಹೊಣೆ ನಿರ್ವಹಣೆ, ಜೀವನಗತಿಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವುದು ಅಗತ್ಯವಿದೆ. ಆತುರಪಟ್ಟು ಖಚಿತ ನಿರ್ಧಾರ ಕೈಗೊಳ್ಳದಿರಿ. ಹಿತಶತ್ರುಗಳು ನಿಮ್ಮ ನಡವಳಿಕೆಯನ್ನು ಗಮನಿಸಲಿದ್ದಾರೆ. ಎಚ್ಚರ ಇರಲಿ. ವ್ಯಾಪಾರ, ವ್ಯವಹಾರಗಳಲ್ಲಿ ಕೊಂಚ ಹಿನ್ನಡೆ. ಆರ್ಥಿಕವಾಗಿ ಸಮಸ್ಯೆಗಳು ತೋರಿಬಂದರೂ ಅನಿರೀಕ್ಷಿತ ಧನಾ ಗಮನದಿಂದ ಪರಿಸ್ಥಿತಿ ಸುಧಾರಿಸುವುದು. ಮಿಶ್ರಫ‌ಲಗಳು ಅನುಭವಕ್ಕೆ ಬರಲಿವೆ. ಆರೋಗ್ಯದಲ್ಲಿ ಜಾಗ್ರತೆ ವಹಿಸುವುದು.
ಶುಭವಾರ: ಬುಧ, ಶುಕ್ರ, ಶನಿವಾರ

ತುಲಾ: ನೀವು ಕೈಗೊಳ್ಳುವ ನಿರ್ಧಾರದ ಪ್ರಭಾವವು ಇಡೀ ವರ್ಷದ ಮೇಲೆ ಇರುವುದು. ಸಾಮಾಜಿಕವಾಗಿ ಸ್ಥಾನಮಾನ, ಗೌರವವು ಹೆಚ್ಚಲಿದೆ. ಆಗಾಗ ಧನವ್ಯಯ ತೋರಿಬಂದರೂ ವಿವಿಧ ಮೂಲಗಳಿಂದ ಧನಾಗಮನವು ಇರುತ್ತದೆ. ಬದಲಾವಣೆಯನ್ನು ನೀವು ಅಪೇಕ್ಷಿಸುತ್ತಿರಾದಲ್ಲಿ ಇದು ಸರಿಯಾದ ಸಮಯ. ದೈವಾನುಗ್ರಹವು ಇಲ್ಲದಿದ್ದರೂ ಕೆಲಸಕಾರ್ಯಗಳು ಸರಾಗವಾಗಿ ನಡೆಯಲಿವೆ. ಕಾರ್ಯಕ್ಷೇತ್ರದಲ್ಲಿನ ಹೆಚ್ಚಿನ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿಕೊಳ್ಳಿರಿ. ಆರೋಗ್ಯದಲ್ಲಿ ಜಾಗ್ರತೆ ಇರಲಿ.
ಶುಭವಾರ: ಸೋಮ, ಗುರು, ಭಾನುವಾರ

ವೃಶ್ಚಿಕ: ಕಾರ್ಯಕ್ಷೇತ್ರದಲ್ಲಿ ಒಂದಿಲ್ಲೊಂದು ರೀತಿಯ ಬೇಡಿಕೆಗಳನ್ನು ಈಡೇರಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿದೆ. ಇಲ್ಲಿ ಕೌಶಲ್ಯಕ್ಕಿಂತ ಪ್ರಾಮಾಣಿಕತೆಗೆ ಹೆಚ್ಚಿನ ಬೆಲೆಯು ದೊರೆಯುತ್ತದೆ. ಒಟ್ಟಿನಲ್ಲಿ ಜೀವನಗತಿಯಲ್ಲಿ ಬದಲಾವಣೆ ತೋರಿಬಂದು ಅನಿರೀಕ್ಷಿತ ಘಟನೆಗಳು ಅನುಭವಕ್ಕೆ ಬರುತ್ತವೆ. ಕೌಟುಂಬಿಕ ವ್ಯವಹಾರದಲ್ಲಿ ಚೇತರಿಕೆ ಇದ್ದರೂ ನೆಮ್ಮದಿ ಕಾಣಿಸದು. ಅನಾವಶ್ಯಕವಾಗಿ ವಿವಾದಗಳಿಗೆ ಆಸ್ಪದ ನೀಡದಿರಿ. ಹಾಗೂ ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇರಲಿ. ವಿದ್ಯಾರ್ಥಿ ವರ್ಗಕ್ಕೆ ಯಶಸ್ಸು.
ಶುಭವಾರ: ಗುರು, ಶುಕ್ರ, ಶನಿವಾರ

ಧನು: ಗುರುವಿನ ಅನುಗ್ರಹ ಇರುವುದರಿಂದ ಕಾರ್ಯಕ್ಷೇತ್ರದಲ್ಲಿ ದೃಢ ನಿರ್ಧಾರದಿಂದ ಮುಂದುವರಿಯಿರಿ. ಪ್ರಯತ್ನಬಲಕ್ಕೆ ತಕ್ಕುದಾದ ಫ‌ಲ ಸಿಗಲಿದೆ. ಸಾಮಾಜಿಕವಾಗಿ ಮುಂದಾಳುತ್ವ, ಸ್ಥಾನಮಾನ, ಗೌರವ ಸಂಪಾದಿಸಲಿದ್ದೀರಿ. ಕೆಲವೊಮ್ಮೆ ಕುಟುಂಬದಲ್ಲಿ ಅನಾರೋಗ್ಯದ ಸಂಭವ ಇರುವುದರಿಂದ ಆದಷ್ಟು ಎಚ್ಚರಿಕೆ ಅಗತ್ಯ. ದೂರಪ್ರವಾಸದ ಸಾಧ್ಯತೆ ಇದ್ದು, ಕಾರ್ಯಾನುಕೂಲವಾದೀತು. ವೃತ್ತಿರಂಗದಲ್ಲಿ ಆತುರತೆ ಸಲ್ಲದು. ಕೆಲವೊಮ್ಮೆ ಮಹತ್ವದ ಬದಲಾವಣೆಗಳು ತೋರಿಬರಲಿವೆ. ಅವಸರದ ನಿರ್ಧಾರ ಬೇಡ.
ಶುಭವಾರ: ಗುರು, ಶನಿ, ಭಾನುವಾರ

ಮಕರ: ಜೀವನಗತಿಯಲ್ಲಿ ಇದು ಉದ್ವೇಗದ ಕಾಲ. ಸಮಾಧಾನ ಚಿತ್ತದಿಂದ ಮುಂದುವರಿಯಬೇಕಾದೀತು. ಹಾಗೂ ವೃತ್ತಿರಂಗದಲ್ಲಿ ತುಂಬಾ ವೆಚ್ಚ ಹಾಗೂ ಅನಗತ್ಯ ಕೆಲಸಗಳು ನಡೆದು, ನಿಮ್ಮ ಸಮಯ ಮಿತಿಮೀರಿ ವ್ಯಯವಾಗಲಿದೆ. ಮನೆಯಲ್ಲಿ ಶುಭಕಾರ್ಯ, ಮಂಗಲ ಕಾರ್ಯ ಗಳು ನಡೆದಾವು. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಲಾಭವಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಕೆಯ ಅಗತ್ಯವಿದೆ. ಸಾಮಾಜಿಕ ರಂಗದಲ್ಲಿ ಹೊಸಬರೊಂದಿಗೆ ಸಂಪರ್ಕ, ಸಹಾಯಹಸ್ತ ದೊರೆಯುವುದು.
ಶುಭವಾರ: ಬುಧ, ಶುಕ್ರ, ಭಾನುವಾರ

ಕುಂಭ: ಕಾರ್ಯಕ್ಷೇತ್ರದಲ್ಲಿ ಇದು ಅತ್ಯಂತ ಮಹತ್ವಪೂರ್ಣ ಹಾಗೂ ಸಂತಸದ ಕಾಲವೆನ್ನಬಹುದು. ವಾಪ್ಯಾರ, ವ್ಯವಹಾರಗಳು ವಾಸ್ತವ ರೂಪ ತಳೆದು ಅನಿರೀಕ್ಷಿತವಾಗಿ ಸಂತೋಷದ ಸುದ್ದಿ ಬರಲಿದ್ದು ಇದಕ್ಕೆ ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸ ಕಾರಣವಾಗಲಿದೆ. ನಿಮ್ಮ ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ, ನಿಶ್ಚಿತ ಫ‌ಲವು ಅನುಭವಕ್ಕೆ ಬರಲಿದೆ. ಆರ್ಥಿಕವಾಗಿ ಹಿನ್ನಡೆ ಕಂಡು ಬಂದರೂ ಉದ್ಯೋಗರಂಗದಲ್ಲಿ ಮುನ್ನಡೆ ಸಾಧಿಸಲಿದ್ದೀರಿ.
ಶುಭವಾರ: ಸೋಮ, ಶುಕ್ರ, ಶನಿವಾರ.

ಮೀನ: ಕಾರ್ಯಕ್ಷೇತ್ರದಲ್ಲಿ ಸಮಾಧಾನದಿಂದ ಮುಂದುವರಿಯಿರಿ. ಅನಾವಶ್ಯಕ ಅವಮಾನ, ಕಿರಿಕಿರಿಯನ್ನು ಅನುಭವಿಸಬೇಕಾದೀತು. ವ್ಯವಹಾರ, ಉದ್ಯೋಗ, ವ್ಯಾಪಾರಗಳಲ್ಲೂ ಸರಿಯಾದ ನಿರ್ಧಾರಕ್ಕೆ ಬಂದು ಲಾಭದಾಯಕ ಆದಾಯ, ಗೌರವ ಎರಡನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ಅನಿರೀಕ್ಷಿತ ಘಟನೆಗಳು ಸಂಭವಿಸಿ, ಗೊಂದಲ ತೋರಿಬಂದರೂ ತಾಳ್ಮೆ, ಸಮಾಧಾನ ನಿಮ್ಮನ್ನು ಕಾಪಾಡಲಿದೆ. ನಿರೀಕ್ಷಿತ ಮಂಗಲಕಾರ್ಯಗಳು ಸಾಂಗವಾಗಿ ನಡೆಯಲಿವೆ. ಉದ್ಯೋಗ ಲಾಭವಿದ್ದು, ವಿದ್ಯಾರ್ಥಿಗಳಿಗೆ ಯಶಸ್ಸು ತಂದೀತು.
ಶುಭವಾರ: ಸೋಮ, ಗುರು, ಭಾನುವಾರ

Advertisement

Udayavani is now on Telegram. Click here to join our channel and stay updated with the latest news.

Next